Browsed by
Category: ತಿಂಗಳು ಪತ್ರಿಕೆ ಲೇಖನಗಳು

ಜ್ಯಾಕ್ ಲೆಕಾಂ

ಜ್ಯಾಕ್ ಲೆಕಾಂ

ತಿಂಗಳು – ಏಪ್ರಿಲ್ ೨೦೧೦

೧೯೭೦ರ ದಶಕದಿಂದ ಸ್ತ್ರೀವಾದವು  ಅನೇಕ ಮಜಲುಗಳನ್ನು ದಾಟಿ ಒಂದು ವಿಶಾಲ ಸಾಂಸ್ಕೃತಿಕ-ಮನೋವೈಜ್ಞಾನಿಕ ವಿಶ್ಲೇಷಣೆಯ ತಳಹದಿಯ ಮೇಲೆ ರೂಪಿತಗೊಳ್ಳುತ್ತಿವೆ . ಅಲ್ಲಿಯ ತನಕ ಸ್ತ್ರೀವಾದವು ಬೇರೆ ಬೇರೆ ಆಯಾಮಗಳಲ್ಲಿ ತನ್ನ ಬರುವಿಕೆಯನ್ನು ಗೊತ್ತುಪಡಿಸಿತ್ತು.

ಉದಾರವಾದಿ ಮತ್ತು  ಸಮಾಜವಾದಿ ಸ್ತ್ರೀವಾದವು ಗಂಡು –ಹೆಣ್ಣಿನ ಸಾಮಾಜಿಕ , ಆರ್ಥಿಕ , ಸಾಂಸ್ಕೃತಿಕ ತಾರತಮ್ಯ ದೃಷ್ಟಿಕೋನವನ್ನು ಮುಂಚೂಣಿಗೆ ತಂದಿತು. ಇಲ್ಲಿ ಗಂಡಿನಂತಯೇ ಹೆಣ್ಣಿಗೂ ಎಲ್ಲಾ ರಂಗಗಳಲ್ಲೂ ಅವಕಾಶ ಸಿಗಬೇಕು. ಸಮಾನತೆಯನ್ನು ಕಾನೂನಿನ ಮೂಲಕ ತರಬೇಕು.  ಆರ್ಥಿಕವಾಗಿ ಗಂಡಿಗೆ ಸರಿಸಮಾನನಾಗಿ ನಿಲ್ಲಬೇಕು. ವರ್ಗ ಮತ್ತು ಲಿಂಗಾಧಾರಿತ ತಾರತಮ್ಯಗಳು ಹೋಗಬೇಕೆಂದು ಹೋರಾಡಿತು. ಗಂಡು – ಹೆಣ್ಣಿನ ಅಸಾಮಾನತೆಗೆ ಬಂಡವಾಳಶಾಹಿಯೇ ಕಾರಣವಾದ್ದರಿಂದ ಅದನ್ನು ನಿರ್ನಾಮ ಮಾಡಬೇಕೆಂದು ನಂಬಿತ್ತು.

ಎರಡನೇ ರೀತಿಯ ಸ್ತ್ರೀವಾದವು ಹೆಣ್ಣು ಒಂದು ಶಕ್ತಿ. ಹೆಣ್ಣಿನ ಮೌಲ್ಯ ದೊಡ್ಡದು. ಪುರುಷ ಪ್ರಧಾನತೆ ಹೆಣ್ಣನ್ನು ಕೀಳಾಗಿ ನೋಡುತ್ತದೆ. ಗಂಡು ಯಾವಾಗಲು ತಾನು ಮೇಲು ಎಂದು ನೋಡುತ್ತಿರುತ್ತದೆ. ಇದರಿಂದ ಹೆಣ್ಣು ತುಳಿತಕ್ಕೊಳಗಾಗಿದ್ದಾಳೆ ಎಂಬುದು ಈ ವಾದದ ತಿಳಿವು. ಆದರೆ ಈ ವಾದವನ್ನು ಬರಿಯ ಸ್ತ್ರೀವಾದಿಗಳು, ಅಭಿವೃದ್ಧಿಶೀಲ ದೇಶದ ಸ್ತ್ರೀವಾದಿಗಳು , ವಾಸಾಹತುಶಾಹಿ ಸ್ತ್ರೀವಾದಿಗಳು ವಿರೋಧಿಸುತ್ತಿದ್ದಾರೆ.

ಬಿಳಿಯ ಸ್ತ್ರೀವಾದಗಳ ಸಿದ್ದಾಂತವನ್ನು ಕರಿಯ ಸ್ತ್ರೀವಾದಿಗಳು (black feminist) ಒಪ್ಪುವುದಿಲ್ಲ. ಇವರು ಕರಿಯ ಸ್ತ್ರೀವಾದಿಗಳಿಗೂ ಬಿಳಿಯ ಸ್ತ್ರೀವಾದಿಗಳಿಗೂ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸಿದ್ದಾರೆ. ಕರಿಯ ಸ್ತ್ರೀಯರ ಅನುಭವ, ಸಾಂಸ್ಕೃತಿಕ ಪ್ರಾತಿನಿಧ್ಯ ಮತ್ತು ಸಾಮಾಜಿಕ – ಆರ್ಥಿಕ ಆಸಕ್ಥಿಗಳಲ್ಲಿರುವ ವ್ಯತ್ಯಾಸವನ್ನು ತೋರಿಸಿಕೊಡುತ್ತಿದ್ದಾರೆ . ಅಂತೆಯೇ ವಸಾಹತುಶಾಹಿಯ ಸಂಧರ್ಭದಲ್ಲಿ ಹೆಣ್ಣು ಹೇಗೆ ಎರಡು ಪಟ್ಟು ದಮನಕ್ಕೊಳಗಾಗಿದ್ದಾಳೆ ಎಂದು ವಿಶ್ಲೇಷಿಸುತ್ತಾರೆ. ಇದಕ್ಕೆ ಕಾರಣ ವಸಾಹತುಶಾಹಿಗಳ ದಬ್ಬಾಳಿಕೆ ಒಂದೆಡೆಯಾದರೆ, ತಮ್ಮ ದೇಶದ ಗಂಡಸರ ಪುರುಷ ಪ್ರಧಾನತೆ ಮತ್ತೊಂದು ಕಾರಣವಾಗಿರುತ್ತದೆ.

ರಚನೋತ್ತರ ಸ್ತ್ರೀವಾದಿಗಳು ಲೈಂಗಿಕತೆ(sexuality) ಮತ್ತು ಲಿಂಗಾಧಾರಿತ(gender based) ಸಮಾಜವೂ ಆಯಾ ಸಮಾಜದ ಮತ್ತು ಸಂಸ್ಕೃತಿಯ ನಿರ್ಮಿತಿಗಳೆಂದು ನಂಬುತ್ತಾರೆ .  ಇದನ್ನು ಶರೀರಶಾಸ್ತ್ರ(biological)ದನ್ವಯ ವಿಶ್ಲೆಷಿಸಲಾಗುವುದಿಲ್ಲ ಎಂದು ಹೇಳುತ್ತಾರೆ. ಹೆಣ್ತನ – ಗಂಡುತನಗಳು ಸಾರ್ವರ್ತಿಕ ವರ್ಗಗಳಾಗಿ ವಿಂಗಡಿಸಲು ಸಾಧ್ಯವಿಲ್ಲ. ಗಂಡುತನ-ಹೆಣ್ಣುತನ ಹೇಗೆ ಭಾಷೆಯಲ್ಲಿ ಪ್ರತಿನಿಧಿಸಲ್ಪಟ್ಟಿದೆ ಎಂಬುದರ ಆಧಾರದ ಮೇಲೆ ನಿಗಧಿಪಡಿಸಲಾಗುವುದು. ಇಲ್ಲಿ ಸಂಸ್ಕೃತಿ ಪ್ರತಿನಿಧೀಕರಣ , ಭಾಷೆ, ಅಧಿಕಾರ, ತಾತ್ವಿಕ ತೊಳಲಾಟ, ಮಾನಸಿಕ ಸ್ಥಿತಿಯ ರೂಪ ಇವುಗಳ ಆಧಾರದ ಮೇಲೆ ಸ್ತ್ರೀವಾದ ನಿಂತಿದೆ. ಲಿಂಗಾಧಾರಿತ ನಿರ್ಮಿತಿಯು ಮನಸ್ಸಿನ ಒಳಗೂ-ಹೊರಗಿನ (ಸುಪ್ತ-ಜಾಗೃತ ಪ್ರಜ್ಞೆಗಳ) ಜೊತೆ ಹೇಗೆ ಸಂಧಿಸುತ್ತದೆ ಎಂಬುದನ್ನು ವಿಶ್ಲೇಷಿಸುವ ಮೂಲಕ ಸ್ತ್ರೀವಾದವನ್ನು ಪ್ರತಿನಿಧಿಸುತ್ತಾರೆ .

ಈ ವಾದದ ಪ್ರಮುಖ ರೂವಾರಿ ಫ್ರಾನ್ಸ್ನ ಜ್ಯಾಕ್ ಲೆಕಾಂ (೧೯೧೦-೧೯೮೪)

ಲೆಕಾಂ ಫ್ರಾಯ್ಡ್ ನ ಪ್ರಮುಖ ಪರಿಕಲ್ಪನೆಗಳಾದ ಸಾಂಸಾರಿಕ ಮತ್ತು ಲೈಂಗಿಕ ಅನುಭವಗಳನ್ನು ಸಾಂಸ್ಕೃತಿಕ ಅನುಭವವನ್ನಾಗಿ ಪರಿವರ್ತಿಸಿಬಿಡುತ್ತಾನೆ. ಪ್ರತಿಯೊಬ್ಬನ ಅನನ್ಯತೆಯೂ ಭಾಷಾ ಪ್ರಯೋಗದಲ್ಲಿ ವ್ಯಕ್ತವಾಗುತ್ತದೆ. ಪ್ರತಿಯೊಬ್ಬನಲ್ಲೂ ಲೈಂಗಿಕ ಪ್ರಜ್ಞೆ ಅದುಮಿಕೊಂಡು ಬಿಡುತ್ತದೆ. ಅದು ಸುಪ್ತಪ್ರಜ್ಞೆಯ ಒಳಗೆ ಸೇರಿಕೊಳ್ಳುತ್ತದೆ. ಈ ಅದುಮಿಟ್ಟ ಸುಪ್ತಪ್ರಜ್ಞೆಯ ಭಾಷೆಯ ರೂಪವನ್ನು ತಳೆದು ನಂತರ ಬದುಕಿನ ಆಕಾಂಕ್ಷೆಯಾಗಿ ಪರಿವರ್ತಿತವಾಗುತ್ತದೆ. ಅದು ಹೊರ ಹೊಮ್ಮುವುದು ಭಾಷೆಯ ಮುಖಾಂತರ. ಭಾಷೆಯಲ್ಲಿ ನಿರಂತರವಾದ ಹುಡುಕಾಟವಾಗುತ್ತದೆ. ಭಾಷೆ ಸಾಂಕೇತಿಕವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ತಂದೆಯ ರೂಪಕವಾದ ‘ಶಿಶ್ನ’. ಶಿಶ್ನವು ಅಧಿಕಾರದ, ನಿಯಂತ್ರಣದ ಸಂಕೇತ . ಇದನ್ನು ಹೊಂದಿರುವ- ಹೊಂದಿಲ್ಲದ (ಗಂಡುಮಗು-ಹೆಣ್ಣುಮಗು) ಶಿಶ್ನ ಸಂಕೇತದ ಭಾಷೆಯನ್ನೇ ಬಳಸಲು ಕಲಿಯುತ್ತವೆ. ಆದ್ದರಿಂದ ಇಡೀ ಭಾಷೆ ಲೆಕಾಂ ಪ್ರಕಾರ ಗಂಡಿನ ಭಾಷೆಯೇ ಆಗಿರುತ್ತದೆ. ಭಾಷೆಯ ಉಳಿದೆಲ್ಲ ಸಾಧ್ಯತೆಗಳೂ ಈ ಶಿಶ್ನ ಭಾಷೆಯನ್ನೂ ಅವಲಂಬಿಸಿರುತ್ತದೆ.ಆದ್ದರಿಂದ ಮನೋ-ವೈಜ್ಞಾನಿಕ ವಿಶ್ಲೇಷಣೆ ಸಂಪೂರ್ಣವಾಗಿ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಲೆಕಾಂ ಸುಪ್ತಪ್ರಜ್ಞೆಯು ಭಾಷಾ ಮಾದರಿಯಲ್ಲೇ ಕೆಲಸ ಮಾಡುತ್ತಿರುತ್ತದೆ. ಅದರಂತೆಯೇ ರೂಪುಗೊಂಡಿರುತ್ತದೆ ಎಂದು ವಿಶ್ಲೇಷಿಸಿದ್ದಾನೆ . ಸುಪ್ತಪ್ರಜ್ಞೆಯು ನಮ್ಮ ಅರಿವಿಗೆ ಬರುವು ಮಾತು ಮಾತು ಕ್ರಿಯಾಶೀಲ ಬರವಣಿಗೆಗಳ ಮೂಲಕ. ಈ ಕ್ರಿಯಾತ್ಮಕ ಭಾಷೆಯಲ್ಲಿ ಸುಪ್ತಪ್ರಜ್ಞೆ , ಜಾಗೃತ ಪ್ರಜ್ಞೆಯೊಡನೆ ನಿರಂತರವಾಗಿ ಆಟವಾಡುತ್ತಿರುತ್ತದೆ.

ಕನಸುಗಳು ಮತ್ತು ಹಾಸ್ಯವನ್ನು ವಿಶ್ಲೇಷಿಸುವಾಗ ಫ್ರಾಯ್ದನು ಭಾಷೆಯ ಬಗ್ಗೆ ಒತ್ತಿ ಹೇಳಿದ್ದನು. ಸುಪ್ತಪ್ರಜ್ಞೆಯನ್ನು ಹೊರಹಾಕುವ ಏಕೈಕ ಮಾಧ್ಯಮ ಭಾಷೆ. ಇದರ ಆಧಾರದ ಮೇಲೆ ಲೆಕಾಂ ಹೇಳುವುದೇನೆಂದರೆ ಭಾಷೆ ಇಲ್ಲದಿದ್ದರೆ ಪ್ರಪಂಚದಲ್ಲಿ ಏನನ್ನು ಅರಿಯಲು ಸಾಧ್ಯವಿರಲಿಲ್ಲ . ಒಂದು ವಸ್ತುವಿಗಿಂತ ಇನ್ನೊಂದು ಭಿನ್ನ ಎಂದು ತಿಳಿಯುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ . ಆಗ ರಚನೆಗಳೇ ಇರಲಿಲ್ಲ. ಸುಪ್ತಪ್ರಜ್ಞೆಯನ್ನು ಭಾಷೆಯ ಮೂಲವಾಗಿಯೇ ಪುನರಚಿಸಬೇಕೆಂದು ವಿಶ್ಲೇಷಿಸಿದ್ದಾನೆ. ಭಾಷೆಗಿಂತ ಮೊದಲು

ಮಗುವಿನ ಮನಸ್ಸು, ಪ್ರವೃತ್ತಿ(instinct) ಮಟ್ಟದಲ್ಲಿ ಮಾತ್ರ ಇರುತ್ತದೆ. ಬಾಷೆ ಕಲಿಕೆಯ ಶಕ್ತಿಯಿಂದ ಮನುಷ್ಯ ಮನುಷ್ಯನಾಗಿದ್ದಾನೆ. ನಮ್ಮ ಲೈಂಗಿಗಕಾತ್ಮಕತೆ(sexuality) ಮತ್ತು ಲಿಂಗಭೇದ (gender distinction) ರೂಪಿಸಿದೆ. ಈ ಕಾರಣದಿಂದಾಗಿ ಲೆಕಾಮ್ನ ಭಾಷಾಧಾರಿತ ಮನೋವಿಜ್ಞಾನ ಎಪ್ಪತ್ತರ ದಶಕದಿಂದೀಚೆಗೆ ಪಿತೃಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಅರಿಯುವ ಪ್ರಮುಖ ಸಾಧನವಾಗಿದೆ.ಸ್ಥ್ರೀವಾದಕ್ಕೆ ಆಳ ಮತ್ತು ವಿಸ್ತಾರವನ್ನು ಒದಗಿಸಿದೆ. ಹಾಗೆ ನೋಡಿದರೆ ಫ್ರಾಯ್ಡ್ನ ಮನೋವಿಶ್ಲೇಷಣೆ ಸ್ತ್ರೀವಾದಿಗಳಿಗೆ ಪ್ರತಿಕೂಲವಾಗಿಯೇ ಇದೆ. ಏಕೆಂದರೆ ಹೆಣ್ಣಿನ ದಮನವನ್ನೇ ಅದು ಹೇಳುತ್ತದೆ. ಹೆಣ್ಣು ಕ್ರಿಯಾಶೀಲಳಲ್ಲ, ಅವಳಿಗೆ ಸಮಾಜದಲ್ಲಿ ಅಧಿಕಾರವಿಲ್ಲ, ಲೈಂಗಿಕವಾಗಿ ಅರಳಿಕೊಳ್ಳುವುದಿಲ್ಲ ಎಂಬೆಲ್ಲ ಮಾಮೂಲಿ ಗುಣಗಳನ್ನು ತೋರಿಸಿಕೊಡುತ್ತದೆ. ಈ ಹೆಣ್ಣುತನ ಸಾಂಸಾರಿಕ ಸಂದರ್ಭದಲ್ಲಿ ಸುಪ್ತಪ್ರಜ್ಞೆ ತನ್ನ ತಾಣವನ್ನು ಹೇಗೆ ಸೃಷ್ಟಿಸಿಕೊಂಡಿದೆ, ವಿಧೇಯತೆಯನ್ನು ಅಂತರ್ಗತ ಮಾಡಿಕೊಂಡಿದೆ ಎಂಬುದನ್ನು ನೇತ್ಯಾತ್ಮಕವಾಗಿ ತಿಳಿಸಿಕೊಡುತ್ತದೆ.

ಅದು ಒಂದು ರೀತಿಯಲ್ಲಿ ಹೌದು ಕೂಡ. ಆದರೆ ಲೆಕಾಂ ಪ್ರಕಾರ ಅದು ಅಷ್ಟಕ್ಕೇ ನಿಲ್ಲುವುದಿಲ್ಲ. ಫ್ರಾಯ್ಡ್ನ ಈ ಸೀಮಿತ ನೇತ್ಯಾತ್ಮಕ

ಅರಿವಿಗೆ ಭಾಷೆಯ ಪರಿಕಲ್ಪನೆಯನ್ನು ಜೋಡಿಸಿ ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ . ಹೊಸ ಹೊಳವುಗಳನ್ನು ಕೊಡುತ್ತಾನೆ. ಮಕ್ಕಳು ಹುಟ್ಟಿದಾರಭ್ಯ ಭಾಷೆಯ ಸಾಕೇಂತಿಕತೆಯಲ್ಲಿ ಹೇಗೆ ಸ್ಥಾನ ಪಡೆಯುತ್ತಾರೆ ಎಂಬುದನ್ನು ವಿಶ್ಲೇಷಿಸುತ್ತಾನೆ . ಲೆಕಾಂ ಪ್ರಕಾರ ಮಕ್ಕಳು ಈ ಭಾಷೆಯನ್ನಾಡುವ ಮಟ್ಟಕ್ಕೆ ಬರಬೇಕಾದರೆ ಅನೇಕ ಕವಲುಗಳಾಗಿ ಸೀಳಿಕೊಳ್ಳುತ್ತಾರೆ. ಮೊದಲು ಮಗುವು ತಾನು ತನ್ನ ತಾಯಿಯ ದೇಹಕ್ಕಿಂತ ಭಿನ್ನ ಎಂದು ಅರಿತುಕೊಳ್ಳುತ್ತದೆ. ಮುಂದಿನ ಘಟ್ಟ ಮಗು ತನ್ನ ಪ್ರತಿಫಲನವನ್ನು ಕನ್ನಡಿಯಲ್ಲಿ ಕಂಡಂತೆ ತನ್ನನ್ನೇ ಕಾಣುವ ಘಟ್ಟ (mirror reflexion stage). ಮೂರನೆಯ ಘಟ್ಟದಲ್ಲಿ ‘ನಾನತ್ವ’ ವನ್ನು ಭಾಷೆಯ ಮೂಲಕ ಕಂಡುಹಿಡಿದುಕೊಳ್ಳುವ ಘಟ್ಟ. ಈ ‘ನಾನು’ ಬೇರೆಯವರಿಗಿಂತ ಭಿನ್ನ ಎಂಬುದನ್ನು ಅರಿಯುವುದು. ಈ ‘ನಾನು’ ಅವನು/ಳು ಎಂಬುದನ್ನು ಭಾಷೆಯಲ್ಲಿ ತಿಳಿಯುವ ಘಟ್ಟ. ಭಾಷೆ ಇಲ್ಲದೆ ಈ ಘಟ್ಟದಲ್ಲಿ ಮಗು ಸೀಳಿಕೊಳ್ಳಲಾಗುವುದಿಲ್ಲ. ಭಾಷೆ ಕಲಿಯುವುದರೆಂದರೆ ಸಮಾಜದ ಜೊತೆ ಒಡನಾಟ ನಡೆಸುವುದು  (socialization) ನಂತರ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು.

ಲೆಕಾಂ ಪ್ರಕಾರ ಗಂಡು ಮತ್ತು ಹೆಣ್ಣು ಮಕ್ಕಳು ಈ ಸಾಂಕೇತಿಕ ಕ್ರಮವನ್ನು ಬೇರೆ ಬೇರೆಯಾಗಿ ಪ್ರವೇಶಿಸುತ್ತಾರೆ. ಅವರ ಭಾಷೆಯಲ್ಲೂ ಸೀಳು ಅಥವಾ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ‘ಶಿಶ್ನ’(phallus)ದ ಪ್ರಾಮುಖ್ಯತೆ. ಇಲ್ಲಿ  phallus  ಎಂದರೆ ಒಂದು ಸಾಂಕೇತಿಕತೆ ಪ್ರತೀಕ ಎಂದು ತಿಳಿಯಬೇಕು. ಮನುಷ್ಯ ಜನನೆಂದ್ರಿಯ ಎಂದು ತಿಳಿಯಬಾರದು. ಸುಪ್ತಪ್ರಜ್ಞೆಯಲ್ಲಿ ಮೂಡಿ ನಂತರ ಬೆಳೆಯುವ ಒಂದು ಭಾವನೆ. ಫ್ರಾಯ್ಡ್ನ ಪ್ರಕಾರ ಮಕ್ಕಳ ‘ಉಭಯ ಲಿಂಗಿಗಳು’(bisexual). ಆದರೆ ನಮ್ಮ ನಾಗರಿಕತೆಯ ಬೇಡಿಕೆಗೆ ಅನುಗುಣವಾಗಿ ಮುಂದೆ ವಂಶೋದ್ದಾರಕ್ಕೆ ಮಕ್ಕಳನ್ನು ಪಡೆಯಲು ಗಂಡ – ಹೆಣ್ಣು ಎಂದು

ಗುರುತಿಸಕೊಳ್ಳಬೇಕಾಗುತ್ತದೆ. ಹೆಣ್ಣು-ಗಂಡು ಒಂದನ್ನೊಂದು ಬಯಸಿ ಮುಂದೆ ಮಕ್ಕಳನ್ನು ಪಡೆಯಲು ಅನುವಾಗುವಂತೆ ನಾಗರೀಕತೆ ಮಾಡುತ್ತದೆ. ಈ ಹಂತವನ್ನು ಫ್ರಾಯ್ಡ್ ಈಡಿಪಸ್ ಕಾಂಪ್ಲೆಕ್ಸ್ ಎಂದು ಕರೆಯುತ್ತಾನೆ. ಈ ಹಂತದಲ್ಲಿ ಮಗು ತಾಯಿಯನ್ನು ಬೇಡುತ್ತದೆ. ತಂದೆಯ ಬಗ್ಗೆ ‘ಹೊಟ್ಟೆಕಿಚ್ಚ’ನ್ನು (male envy) ಬೆಳೆಸಿಕೊಳ್ಳುತ್ತದೆ. ಏಕೆಂದರೆ ತಂದೆಯು ಮಗುವಿನ ಮತ್ತು ತಾಯಿಯ ಪ್ರೀತಿಗೆ ಅಡ್ಡ ಬರುವವನಾಗಿರುತ್ತಾನೆ. ಮುಂದಿನ ಹಂತವೆಂದರೆ ಸಾಕೇಂತಿಕವಾಗಿ ಅಂದರೆ castration, ಲೈಂಗಿಕತೆಯನ್ನು ಅದುಮಿಟ್ಟುಕೊಳ್ಳುವ ಹಂತ. ಗಂಡು ಮಗು ತಾಯಿಯ ಬಗ್ಗೆ ಇರುವ ಪ್ರೀತಿಯನ್ನು ತಂದೆಯ ಅಧಿಕಾರದ ‘ಹೆದರಿಕೆಯಿಂದ’ ಮುಚ್ಚಿಟ್ಟುಕೊಳ್ಳುತ್ತದೆ. ತಂದೆಯ ಜೊತೆ ತಾನು ತಾನು ಗುರುತಿಸಿಕೊಳ್ಳುತ್ತದೆ. ದೈಹಿಕವಾಗಿ ಗಂಡು ಮಗು ತಂದೆಯಂತೆಯೇ ಇರುವುದು ಇದಕ್ಕೆ ಕಾರಣ. ಹೆಣ್ಣು ಮಕ್ಕಳು ತಮ್ಮಲ್ಲಿ ‘ಶಿಶ್ನ’ವಿಲ್ಲದಿರುವುದರಿಂದ ತಾಯಿಯ ಜೊತೆಯಲ್ಲಿ ಗುರುತಿಸಿಕೊಳ್ಳುತ್ತಾರೆ. phallic ಅನ್ನುವುದರ ಮತ್ತೊಂದು ಅರ್ಥ ಪುರುಷ ಪ್ರಧಾನತೆ, ಇದು ಸಾಮಾಜಿಕ ಕ್ರಮ. ಲೈಂಗಿಕ ನಿಷೇಧ(incest ) ಈ ಹಂತದಲ್ಲಿ ತಾಯಿ-ಮಗುವೆಂಬ ದ್ವಿವಾದವೃತ್ತಿ ಅರಿವಿಗೆ ಬಂದಾಗ ಭಾಷೆ ಪ್ರವೇಶಿಸುತ್ತದೆ. ಸಾಕೇಂತಿಕತೆ /ಭಾಷೆ  ರೂಪ ಪಡೆಯುತ್ತದೆ. ಈ ಮಟ್ಟದಲ್ಲಿ ಗಂಡು – ಹೆಣ್ಣು ಮಗುವಿನ ಜನನಾಂಗಗಳ ವ್ಯತ್ಯಾಸದ ಅರಿವು ಮೂಡುತ್ತದೆ ಎಂದು ಲೆಕಾಂ ಗುರುತಿಸುತ್ತಾನೆ.

ಈ ಭಾಷೆಯ ಸಾಂಕೇತಿಕ ಕ್ರಮ ಸಾಮಾಜಿಕ, ಸಾಂಸ್ಕೃತಿಕ ಕೇಂದ್ರಿತವಾಗಿರುವುದರಿಂದ ಅದು ಪುರುಷ ಪ್ರಧಾನವಾಗಿ ಮಾರ್ಪಟ್ಟಿದೆ ಎಂಬುದು ಲೆಕಾಂ ವಾದ . ಅನೇಕ ಸ್ತ್ರೀವಾದಿಗಳು ಲೆಕಾಂನ ಈ ಸಿದ್ಧಾಂತವನ್ನು ಹೆಣ್ಣು ಹೇಗೆ ಭಾಷೆಯ ಮೂಲಕ ತುಳಿತಕ್ಕೊಳಗಾಗಿದ್ದಾಳೆ ಎಂದು ತೋರಿಸಲು ತೊಡಗುತ್ತಾರೆ. ಭಾಷಾ ಸಂಜ್ಞೆ. ಗಂಡಿನ ಕ್ಷೇತ್ರವಾಗಿರುತ್ತದೆ . ಇದರಿಂದಾಗಿ ಅವರು ಭಾಷೆಯ ಸಾಂಕೇತಿಕತೆಯಿಂದ ಅನ್ಯರಾಗಿ, ಅಂಚಿಗೆ ದೂಡಲ್ಪಟ್ಟಿರುತ್ತಾರೆ ಎಂದು ವಾದಿಸುತ್ತಾರೆ.

ಆದರೆ ಲೆಕಾಂ ಇದನ್ನು ಒಪ್ಪುವುದಿಲ್ಲ. ಇವನ ವಾದವನ್ನು ಮುಂದುವರಿಸುತ್ತಾ ಜೂಲಿಯಾ ಕ್ರಿಸ್ತೆವಾ ಲೆಕಾಂನ ನಿಲುವನ್ನು ಸ್ಪಷ್ಟ ಪಡಿಸುತ್ತಾಳೆ.

ಒಬ್ಬಳು ‘ಸಂಪೂರ್ಣ ಹೆಣ್ಣೆಂದು, ಒಬ್ಬ ‘ಸಂಪೂರ್ಣ ಗಂಡೆಂದು’ ನಂಬುವುದು ಈ ಪ್ರಪಂಚದಲ್ಲಿ ಸಾಧ್ಯವಿಲ್ಲ. ರಾಜಕೀಯ ಕಾರಣಕ್ಕಾಗಿ ಗಂಡು-ಹೆಣ್ಣು ಎಂಬ ಭೇದ ಇರಬಹುದೇ ವಿನಃ ನೈಜತೆಯಲ್ಲಿ ಇದು ಸಾಧ್ಯವಿಲ್ಲ. ಲೈಂಗಿಕ ವ್ಯತ್ಯಾಸವನ್ನು ಗುರುತಿಸುವುದು ಸಂತಾನೋತ್ಪತ್ತಿಗೆ. ಆದರೆ ಪ್ರತಿ ನಲ್ಲಿ ಗಂಡು, ಪ್ರತಿ ಗಂಡಿನಲ್ಲಿ ಹೆಣ್ಣೂ ಅಡಗಿರುತ್ತದೆ. ಅದು ಭಾಷೆಯ ಮೂಲಕವೇ ವ್ಯಕ್ತವಾಗುತ್ತಿರುತ್ತದೆ. ಇದನ್ನು ಕಲೆಗಾರರಲ್ಲಿ, ಕವಿಗಳಲ್ಲಿ ,ಕ್ರಿಯಾತ್ಮಕ ಆಲೋಚನಾಕಾರರಲ್ಲಿ ಚೆನ್ನಾಗಿ ವ್ಯಕ್ತವಾಗುವುದನ್ನು ಕಾಣಬಹುದು. ಗಂಡಸು/ಹೆಂಗಸು ಎಂಬ ದ್ವಿವಾದವ್ರುತ್ತಿಯನ್ನು ಒಂದು ರೀತಿಯಲ್ಲಿ ಅನುಭವದ ನೆಲೆಯಲ್ಲಿ ನೋಡಬೇಕಾಗುತದೆ. ಮೊಲೆ ಮೂಡಿ ಬಂದರೆ ಹೆಣ್ಣೆಂಬರು/ ಮೀಸೆ ಮೂಡಿ ಬಂದರೆ ಗಂಡೆಂಬರು.ಆತ್ಮ ಯಾವ ಲಿಂಗ? ಎಂಬ ಅರಿವು ಲೆಕ್ಸಾಂ / ಕ್ರಿಸ್ಸೆವಾ ಇವರಿಗಾಗಿದೆ. ಹೀಗೆ ಗಂಡಿನಲ್ಲಿ ಹೆಣ್ಣು, ಹೆಣ್ಣಿನಲ್ಲಿ ಗಂಡು ಕೆಲಸ ಮಾಡುತ್ತಿರುತ್ತದೆ.

ಫ್ಲಾಯ್ದ್ನ ಸಿದ್ದಾಂತವನ್ನು ಮುಂದಿಟ್ಟುಕೊಂಡು ಲೆಕ್ಕಾಂ ಸಂಸ್ಕೃತಿ ಮತ್ತು ಲಿಂಗಗಳು ಭಾಷೆಯಲ್ಲಿ ಹೇಗೆ  ವ್ಯಕ್ತವಾಗುತ್ತದೆ ಎಂಬುದನ್ನು ವಿಶ್ಲೇಷಿಸುತ್ತಾನೆ/ ನಮ್ಮ ಅನನ್ಯತೆ ಉಳಿದಿರುವುದೇ, ನಾವು ಗುರುತಿಸಲ್ಪಡುವುದೇ ಭಾಷೆಯಿಂದ. ನಮ್ಮ ಆಲೋಚನಾ ಪ್ರಕ್ರಿಯೆ ನಡೆಯುವುದು ನಮ್ಮ ಮಾತಿನ/ಭಾಷೆಯ ಮೂಲಕ.

ಆದರೆ ಈಗಿರುವ ಸಂಸ್ಕೃತಿ ಅಭಿವ್ಯಕ್ತವಾಗುವುದು ಸುಪ್ತಪ್ರಜ್ಞೆಯ ಆಕಾಂಕ್ಷೆ (desire)ಯಿಂದ. ಇದು  ಪುರುಷನ ಆಕಾಂಕ್ಷೆಯಭಾಷೆಯಾಗಿರುತ್ತದೆ. ಮ್ಮಲ್ಲಿ ಹುದುಗಿರುವ ಈ ಗಂಡಸುತನ, (ಅಂದರೆ ಪ್ರಜ್ಞಾಪೂರ್ವಕ ವ್ಯಕ್ತಿಗತ ಆಲೋಚನೆ) ಹೆಣ್ಣುತನ ಸುಪ್ತಪ್ರಜ್ಞೆಯ ವ್ಯಕ್ತಿಗತವಲ್ಲದ ಸಂಜ್ಞೆಗಳು ಭಾಷೆಯಲ್ಲಿ ಹೊಮ್ಮುತಿರುತ್ತದೆ. ಭಾಷೆಯಲ್ಲಿರುವ ವೈರುಧ್ಯದ (ಹಣದು – ಹೆಣ್ಣು, ಹಗಲು-ರಾತ್ರಿ, ಒಳ್ಳೆಯ-ಕೆಟ್ಟ ಇತ್ಯಾದಿ) ಅರ್ಥಗಳು  ‘ಶಿಶ್ನ’ವನು ಹೊಂದಿರುವ – ಹೊಂದಿರದ ಭೇದದ ಮೇಲೆ ನಿಂತಿರುತ್ತದೆ. ಹೆಣ್ಣುತನ ‘ಶಿಶ್ನ’ ಅಭಾವವನ್ನು ಪ್ರತಿನಿಧಿಸುವುದರಿಂದ ಭಾಷೆಯ ಅರ್ಥ ಹೆಣ್ಣಿನಲ್ಲಿ ಅಸ್ಪಷ್ಟವಾಗಿರುತ್ತದೆ. ಅಂದರೆ ಭಾಷೆಯಲ್ಲಿ ಗಂಡುತನ – ಹೆಣ್ಣುತನ ಒಟ್ಟೊಟ್ಟಿಗೆ ಪ್ರಕಟವಾಗುತ್ತಿರುತ್ತದೆ. ಇವೆರಡೂ ಬೆರೆತು ಸಾಂಸ್ಕೃತಿಕ ಕಥಾನಕಗಳು ಒಂದು ಸಮಾಜದಲ್ಲಿ ರೂಪು ತಾಳುತ್ತವೆ.  ಆದ್ದರಿಂದ ಇಲ್ಲಿ ‘ಗಂಡುತನ’ – ‘ಹೆಣ್ಣತನ’ ಮುಖ್ಯವಾಗುತ್ತದೆಯೇ ವಿನಃ ಗಂಡಸು – ಹೆಂಗಸು’ ಎಂಬ ದೈಹಿಕ ವಿಭಾಗ ಅಥವಾ ವೈರುಧ್ಯ ಮುಖ್ಯವಾಗುವುದಿಲ್ಲ. ಗಂಡು-ಹೆಣ್ಣಿನ ಭಾಷೆ ಸಾಂಕೇತಿಕವಾಗುತ್ತದೆ. ‘ಗಂಡಸುತನ’ವೆಂದರೆ ಜಾಗೃತ ಪ್ರಜ್ಞೆಯ ತರ್ಕಬದ್ಧ ಭಾಷೆ, ಹೆಣ್ಣುತನವೆಂದರೆ ಸುಪ್ತಪ್ರಜ್ಞೆಯ (desire) ಆಕಾಂಕ್ಷೆ. ಅದು ಅದುಮಿಟ್ಟ ಆಸೆಗಳು.ಈ ಸುಪ್ತಪ್ರಜ್ಞೆಯ ಆಕಾಂಕ್ಷೆಯು  ಅಭಿವ್ಯಕ್ತಿಯ ಪ್ರಕ್ರಿಯೆ ಕಲಾವಿದರಲ್ಲಿ ಸಾಹಿತಿಗಳ ಬರಹದಲ್ಲಿ ಮೇಲ್ಮೈ ಮಟ್ಟಕ್ಕೆ ತೇಲಿಬರುತ್ತದೆ. ‘ಮಜ್ಜಿಗೆಯೊಳಗಿನ ಬೆಣ್ಣೆಯಂತೆ, ಇವು ವ್ಯಕ್ತವಾಗುವುದು ಕಥಾನಕಗಳಲ್ಲಿ ಇದನ್ನು ಕನ್ನಡ ಜಾನಪದ ಮನಸ್ಸು ಹೇಗೆ ವಿಶ್ಲೇಷಿಸಿ ಮೇಲ್ಮೈಮುಟ್ಟಕ್ಕೆ ಬಂದು ತೇಲುವಂತೆ ಮಾಡಿದೆ ಎಂಬುದನ್ನು ಪಿ.ಕೆ.ರಾಜಶೇಖರ್ ಅವರು ಸಂಗ್ರಹಿಸಿಕೊಟ್ಟಿರುವ ಮಲೆಮಾದೇಶ್ವರ’ ಮಹಾಕಾವ್ಯದ ‘ಆದಿ ಪರಾಶಕ್ತಿಯ ಕವಟ್ಲು’ ಎಂಬ ಸೃಷ್ಟಿ ಪುರಾಣದಿಂದ ಅರಿತುಕೊಳ್ಳಬಹುದು.

. ಆದಿಶಕ್ತಿ ಕವಟ್ಲು

ಆದಿಪರಾಸಕ್ತಿ ಭೂಮಿ ಸೊರ್ಗ ಪಾತಾಳ  ಹುಟ್ಟದಕ್ಕುಂಚೆ ಇಸ್ಣು ಬ್ರಮ್ಮ ಮಾದೇಶ್ವರ ಹುಟ್ಟದಕ್ಕಂಜೆ ಹುಟ್ಟಿದ್ದಾಳೆ, ಬೆಳಿತಾ ಬೆಳೀತಾ ಯೌವನ ಬಂದ್ದಡು ಆಹ್ವಾನನ್ನ ಯೌವ್ವನವನ್ನು ತಪ್ಪುವಂತ ಪುರುಸರು ನನಗಿಲ್ವಲ್ಲ, ನನ್ನ ಗುದ್ದ ನಾನೇ ಪಡಿಬೇಕು ಅ೦ತ ಬ್ರಮ್ಮನನ್ನ ತಾಯಿ ಪಡೆದವಳೆ.. “ಅಪ್ಪಾ, ಮಗುವೆ ನಿನ್ನನ್ನ ನಾನು ಯಾತುಕೋಸ್ಕರ ಪಡೆದಿದ್ದೀನಿ ಅಂದ್ರೆ ನನಗೆ ಪರಾಯದ ಕಾಲ. ನಿಂಬೆ ಹಣ್ಣಿನಂಗೆ ಯೌವ್ವನ. ಯೌವ್ವನಕ್ಕೆ ಸಲ್ಲವಂತ ನಿನ್ನ ಪಡ್ಡಿದೀನಿ ನನಗೆ ಪುರುಸನಾಗು ನನ್ನ ಇದ್ಯೆನೆಲ್ಲ· ನಿನ್ಗೆ ತೋರ್ಕೊಡ್ತ್ಹಿದ್ದಿನಿ. ಪ್ರಪಂಚವೆಲ್ಲ ನಿನ್ನ ವಸವಾಯ್ತದೆ, ಅಂತ ಹೇಳಾಳೆ, ಆಗ ಬ್ರಮ್ಮ “ತಾಯಿ ! ನೀನು ನಾನಾ ಪಡುದ್ಬುಟ್ಟು ನನಗೆ ಪುರಸನಾಗು ಪತಿಯಾಗು ಅಂತ ಹೇಳ್ತಿಯಲ್ಲ, ನೀನು ಹೆತ್ತ ತಾಯಲ್ಲವಾ? ಪಡುದ ಮೇಲೆ ತಾಯಲ್ಲವಾ? ಈ ಮಾತು ನಿನಗೆ ತರವಲ್ಲ” ಅಂತಾನೆ. ಆದಿಸಕ್ತೀಗೆ ಅದ್ದೂರಿ ಕ್ವಾಪ ಬಂದು “ ನನ್ನ ಮತ ಮೀರಿದ್ಕೆ ನೀನು ಭಸ್ಮ ಆಗು” ಅಂತ ಹೇಳಿ ತನ್ನ ಹಸ್ತವನ್ನು ಅವನ ತಲೆ ಮೇಲೆ ಮಡುಗುದ್ಲು . ಆ ಹಸ್ತದಲ್ಲಿ ಉರಿಗನ್ನಿತ್ತು, ಆ ಉರಿಗಣ್ಣಲ್ಲಿ ಬ್ರಮ್ಮ ಸುಟ್ಟಿ ಭಸ್ಮ ಆದ.

“ಈ ಮಾನುಭಾವ ನನ್ನ ಯೌವನವನ್ನು  ಮುಚ್ಚುಸ್ನಿಲ್ಲ” ಎಂಬುದಾಗಿ ಎರಡನೇ ಜೀವ್ಸದಲ್ಲಿ ತನ್ನ ಸಕ್ತಿಯಿಂದ ತನ್ನ ಗುದ್ದುನಿಂದ ಮಾಯಿಸ್ನುವನ್ನು ಪಡೆದಳು. ಮಾಯಿಸ್ನು ತಾಯಿ ಅನ್ನುವ ಭಾವ ತಿಳಿದುಕೊಂಡು ಸರನು ಮಾಡ್ತಾನೆ . ಆಗ ಅವಳು “ನನ್ನ ಕಣ್ಣೆತ್ತಿ ನೋಡಿ ನಾನಾ ಪುರುಸ್ನಾಗಿ ನನ್ನ ಯೌವ್ವನ ತೀರ್ಸು”, ಅಂದವಳೇ ಮಾತಾಯಿ. ಆಗ ಮಾಯಿಸ್ನು “ತಾಯಿ ಏನಿಂತ ಹೊಸ ಮಾತಾಡ್ತಿಯಲ್ಲ! ಇದು ನಿನಗೆ ಧರುಮ್ವಾ ? ಹುಡುಸ್ವಾಗ ಹುಡುಸ್ಬಿಟ್ಟು ಪಡಿಯಾಗ ಪಡೆದ್ಬುಟ್ಟು ಕಣ್ಣೆತ್ತಿ ನೋಡಿ ನನಗೆ ಪುರುಸನಾಗು ಅಂತೀಯಲ್ಲ.ಮುಂದೆ ಬರುವಂತಾ ಪ್ರಪಂಚದಲ್ಲಿ ಆಗುವತ ಆಡಳಿತದಲ್ಲಿ ಜನಗಳು ಮಕ್ಕಳಿ ಹೆರ್ತಾರೇ. ಆ ಹೆತ್ತ ಮಕ್ಳು ಬೆಳೆದು ತಕ್ಸ್ನಕೆ ತಾಯಿಯ ತಾವ್ಕೆ ಹೋಯ್ತಾರೆ ? ಇದು ನಿನಗೆ ಧರುಮ್ವಾ? ನಿನ್ನ ಕಣ್ಣೆತ್ತಿ ನೋಡಲ್ಲ ಅಂದವ್ನೆ. ಇಂಬಿ ಹಣ್ಣಿನಂಗೆ ತುಂಬಿ ಬಂದ ಯೌವ್ವನ ತಡೀನಾರ್ದೆ ಆ ಆದಿಪರಾಸಕ್ತಿ ತನ್ನ ಮಾಯಾ ತನ್ನ ಸಕ್ತಿ ತನ್ನ ಗುದ್ನಿಂದ ತನ್ನ ಉರುಗಣ್ಣನ್ನು ತಗುದು ಇಸ್ಣು ನೆತ್ತಿ ಮೇಲೆ ಮಡುಗುದ್ಲು . ಸುಟ್ಟಿ ಭಸ್ಮ ಆಗವ್ನೆ ಮಾಯಿಸ್ನು.

ಮೂರ್ನೆ ಜಿವ್ಸುಕ್ಕೆ ಮುಕ್ಕಣ್ಣನ ಪಡೆದವ್ಲೇ ನಿನ್ನನ್ನು ನಾನು ಯಾತಕ್ಕೆ ಪಡುದ್ದಿದ್ದಿನಿ ಅಂದರೆ ನನ್ನ ಯೌವ್ವನ ತಪ್ಪಿಸೋದಕ್ಕೊಸ್ಕರ , ನಿನ ವಸನಾನಾಯ್ತ್ಹೀನಿ ನಾನ ವಾಸ ನೀನಾಗಪ್ಪ” ಅಂತಾಳೆ. ಅದಕ್ಕೆ ಮಾದೇಶ್ವರ ಹೇಳ್ತಿದ್ದಾರೆ ಹೆತ್ತತಾಯಿ ಹುಟ್ಟಿದ ಮಕ್ಳು ಎಲ್ಲಾರೂ ಒಂದಾಯ್ತ್ಹಾರ? ತರವಲ್ಲ ಮಾತಾಯಿ ಅಂತಾರೆ.

ಆಗ ಆದಿಪರಾಸಕ್ತಿ ಹೇಳ್ತಿದ್ದಾಳೆ “ ಛೀ ಮಾನುಭಾವ್ನೆ , ನಾನು ನೀನು ಗಂಡಹೆಡ್ತಿರಾಗಿ ಬಾಲಾಟ ನಡುಸ್ದೆ ಹೋದರೆ ಪ್ರಪಂಚಕ್ಕೆ ಸುಳೀನೆ ಇಲ್ಲ ಅಂತಾಳೆ. ಆಗ ಮಾದೇಶ್ವರ ಕವಿದಿರುವಂತ ಕತ್ಲು ಕಲಿಯಾಕಿಲ್ಲ, ಪ್ರಪಂಚ ಬೆಳಕಾಗೊದೆಂಗೆ , ಕಾಮಜೇನು ಕರಿಯೋದಿಲ್ಲ, ಭೂಮ್ತಾಯಿ ಬೆಳೆಯೋದಿಲ್ಲ, ಮೊದಕಟ್ಟಿ ಮಳೆಯಾಗೋದಿಲ್ಲ , ಅಗ್ಗಿ ದೇವರೇ ಅರುಗಾಯ್ತಾಳೆ , ಗಂಗಮ್ಮ ಮರೆಯಾಯ್ತ್ಹಾಳೆ . ಲಿಂಗವಿಲ್ಲ ಭಾವಿಗಳು ಪ್ರಪಂಚವನ್ನು ಆಳುವಂತಾ ರೀತಿ ಬತ್ತದೆ, ಧರ್ಮ ಹಾಳಾಗೊಯ್ತದೆ , ಕರ್ಮ ಹೆಚಾಯ್ತದೆ” ಅಂದವ್ನೆ ಮಾದೇವ.

ಸಾಬಾಸ್ ನನಕಂದ ಚಿಕ್ಕವನದ್ರೂ ಚೊಕ್ಕವಾಗಿ ಮಾತಾಡ್ತೀಯೇ, ಇಕ್ತಿವಂತ ನಾನೇ ಆದಿಸಕ್ತಿ ಅಲ್ಲುವಪ್ಪ ಅರಿ ಅರಾ ಬ್ರಮ್ಮಾಂಡರೆಲ್ಲ ನನ್ನ ಕರದಲ್ಲಿದ್ದಾರೆ ಅಗ್ಗಿ ದೇವ್ತಿ , ಗಂಗೆ ದೇವ ದೇವಮಾನವರೆಲ್ಲ ನನ್ನ ಕರದಲ್ಲಿ ಕೂತಿದ್ದಾರೆ. ನನ್ನ ರುದೆಯಲ್ಲಿ ಈ ಪ್ರಪಂಚವೇ ತುಮ್ಬ್ಕೊಂಡದೆ .ಪ್ರಪಂಚ ತಿಕ್ಷ್ನೆ ಮಾಡೋದು ನನ್ನ ಕೈನಲ್ಲೈತೆ ನನ್ನ ಕಣ್ಣೆತ್ತಿ ನೋಡಿ ನನ್ನ ಯೌವ್ವನ ತೀರ್ಸಪ್ಪ ಅಂತಾಳೆ. “ತಾಯಿ ನಿನಗೆ ನಾನು ಪುರುಸ್ನಾಗ್ದೆ ಹೋದ್ರೆ?” ನೀನು ಸುಟ್ಟು ಭಸ್ಮ ಮಾಡ್ತೀನಿ.. ಅದಕ್ಕೆ ಮಾದೇವ “ನನಗೆ ನೀನು ಪುರುಸ್ನಾಗು ಅಂತ್ಹೇಳಿ ನನ್ನ ಪುಡುದೆತ್ತಾನೆ? ನೀನು ನನ್ನ ಸಾಕಿ ದೊಡ್ಡೋನ ಮಾಡ್ಬೇಕು. ಸತೀಗಿಂತ ಪತಿ ದೊಡ್ದೊನಾಗಿರ ಬೇಡ್ವಾ” ಅನಂತರ “ಮಗುವೆ ನಿನ್ನನ್ನು ನಾನು ಸಾಲಾಗಿ ಚಿಕ್ಕವನನ್ನು ದೊಡ್ಡವನು ಮಾಡಿದೆ. ನನ್ನ ಯೌವ್ವನ ತೀರಸಪ್ಪ” ಅಂದಳು. “ಅಮ್ಮ ತಾಯೆ ನಾನು ನಿನ್ನ ಪುರುಸಾಗಬೇಕಾದರೆ ಹೆಂಡತಿಗಿಂತ ಗಂಡ ಸಕ್ತಿವಂತನಾಗಿರಬೇಕು ತಾನೆ. ನನ್ಗೆ ನಿನ್ನ ಇದ್ಯೆನೆಲ್ಲ ಕಲುಸವ್ವ” ಅಂದರು ಮಾದೇವ ಮಾತೆ ಬೆರಗಾಗಿ ನನ್ನ ಇದ್ಯೆನೆಲ್ಲ ನಿನ್ಗೆ ತೋರುಸ್ಕೊಟ್ಟ ನಿನ್ನ ಸಕ್ತಿವಂತನಾಗಿ ಮಾಡ್ತಿನಪ್ಪ ನನಗೆ ಪಡೆಯೋ ವಿದ್ಯೆ ಸೃಷ್ಟಿಮಾಡೋ ವಿದ್ಯೆ ಎಲ್ಲ ಗೊತ್ತು ಅಂತ ಪರಾಶಕ್ತಿ ಹೇಳಾಳೆ,”ನಿನ್ನ ವಿದ್ಯಕ್ಕೆ ಒಂದು ಗರಿ ಹೆಚ್ಚಗಿ ನಿನ್ನ ಪುರುಸನಾದ ಮೇಲೆ ನಾನು ಪಡೀಬೇಕು” ಅಂತಾನೆ ಮಾದೇವ. : “ಅಪ್ಪಾ ನಿನಗೆ ಈ ವಿದ್ಯೆಯೆಲ್ಲ ಏಕೆ ಬೇಕಪ್ಪ ಅಂದಿದ್ದಕ್ಕೆ ಅಮ್ಮ ತಾಯಿ ನಿನಗೆ ಪುರುಷನಾಗ ಬೇಕಾದರೆ ನಿನ್ನಲ್ಲಿರುವಂತ ಸಕ್ತಿ ಸಾಸುವೆಲ್ಲ ಗ್ರಿ ನನಗೆ ತುಂಬಬೇಕು’ ಅಂತಾನೆ ಆದಿಪರಾಶಕ್ತಿ ತನ್ನ ವಿದ್ಯೆ ಎಲ್ಲ : ಕಲಿಸಿಕೊಡಾಳೆ, ಆಗ ಮಾದೇವ ಕೇಳಾನೆ ಈಗ ನಾನೆಚ್ಚೂ ನೀನೆಚ್ಚೂ ಅಂತ. ಆಗ ನಾನೇ ಹೆಚ್ಚು ಅಂದಾಗ “ನಿನ್ನ ವಿದ್ಯೆ ಎಲ್ಲ ನನ್ನ ಕೈಲಿದೆ. ನೀನು ಹೇಗೆ ಹೆಚ್ಚು ಅಂತಾನೆ ಮಾದೇವ, ಹಾಗಾದರೆ ಪರೀಕ್ಷೆ ಮಾಡೋಣ. ಅದಕ್ಕೆ ನಾಟ್ಟ ಮಾಡೋಣ ಅಂತ ಹೇಳಾನೆ, ನಾಟ್ಟ ಮಾಡಾ ಮಾಡಾ ತನ್ನ ಕೈಯನ್ನು ತಲೆ ಮೇಲೆ ಇಟ್ಟೊತಾನೆ. ಆಕೆಯಾ ಹಾಗೆ ಮಾಡಲು ತನ್ನ ಅಂಗೈಯ್ಯಲ್ಲಿದ್ದ ಉರಿಯೋ ಕಣ್ಣಿಂದ ತಾನೇ ಭಸ್ಮವಾಗ್ದಾಳೆ. ಆಗ ಆ ಉರಿಗಣ್ಣಿತ್ತಲ್ಲ ಅದು ನಮ್ಮಪ್ಪಾಜಿ ಪಾದ್ಕೆ ಸರಣು ಮಾಡಿ “ಸ್ವಾಮಿ ನಿಮ್ಮ ಪಾದ ನನ್ನ ಸಿರದ ಮ್ಯಾಲಿರಲಿ” ಅಂತು. ಹೀಗೆ ಗೆದ್ದ ಮಾದೇವ ನಂತರ ಆಕಾಶ ಭೂಮಿ, ನೀರು, ಪಶು ಪಕ್ಷಿ, ನರಪ್ರಾಣಿ, ಮರ-ಗಿಡ ಎಲ್ಲವನ್ನು ಸೃಷ್ಟಿ ಮಾಡ್ತಾನೆ.

ಲೆಕಾಂ ಹೇಳಿದಂತೆ ಹೆಣ್ಣು – ಗಂಡುಗಳು ಸುಪ್ತಪ್ರಜ್ಞೆಯಲ್ಲಿ ಹೇಗೆ ರೂಪು ತಾಳಿದ್ದಾರೆಂದು ತಿಳಿಯಲು ಪಿ.ಕೆ.ರಾಜಶೇಖರ್ ಅವರು ಸಂಗ್ರಹಿಸಿರುವ ‘ಮಲೆಮಾದೇಶ್ವರ’ ಮಹಾಕಾವ್ಯದಲ್ಲಿ ಬರುವ ‘ಆದಿಪರಾಸಕ್ತಿ ಕವಟ್ಲು’ ಒಂದು ಶಕ್ತಿಯುತವಾದ ಕಥಾನಕ. ಇಲ್ಲಿ ಆದಿಸಕ್ತಿಯು ಇಡೀ ಬ್ರಹ್ಮಾಂಡವನ್ನು ಸೃಷ್ಟಿಸುವ ಶಕ್ತಿ ಮತ್ತು ಜ್ಞಾನವನ್ನು ಹೊಂದಿರುವವಳು. ತನ್ನ ಯೌವ್ವನವನು (ಲೈಂಗಿಕಾತ್ಮಕತೆ) ತೀರಿಸಿಕೊಳ್ಳಲು ಪುರುಷನನ್ನು ಸೃಷ್ಟಿಸುತ್ತಾಳೆ. ಅದಕ್ಕೆ ಮುಂಚೆ ಇರುವುದು ಕತ್ತಲೆ ಅಷ್ಟೇ. ಆ ಎರಡು ಮಕ್ಕಳು (ಬ್ರಹ್ಮ- ವಿಷ್ಣು) ತಾಯಿಯ ಬೇಡಿಕೆಯನ್ನು ತೀರಿಸಲಾಗದ್ದರಿಂದ ಸುಟ್ಟು ಬೂದಿಯಾಗುತ್ತಾರೆ. ಅಧಿಕಾರ, ಶಕ್ತಿ(power, authority)ಯನ್ನು ತಿರಸ್ಕರಿಸಿದರೆ ‘ಸಾವೇಕಟ್ಟಿಟ್ಟಿದ್ದು”. ಇದು ಸಾಂಕೆತಿಕವಾದದ್ದೆಂದು ನೋಡಿದಾಗ ಈಗಲೂ ನಡೆಯುವ ಕ್ರಿಯೆಯೇ . ಇಲ್ಲಿ ಮತ್ತೊಂದು ವಿಷಯ ಪ್ರಕಟವಾಗುತ್ತದೆ. ಅದೆಂದರೆ ಲೈಂಗಿಕ ನಿಷೇಧದ ಪರಿಕಲ್ಪನೆ(incest taboo). ತಾಯಿಯಿಂದ ಮಗ ಬೇರ್ಪಡುವ ಮತ್ತು ಅದು ವ್ಯಕ್ತವಾಗುವ ಕ್ರಮ. ಈಡಿಪಸ್ ಕಾಂಪ್ಲೆಕ್ಸ್ ನ ಪರಿಕಲ್ಪನೆ ಅನ್ವಯವಾಗುವುದು ಮಗು ‘ನಾನತ್ವ’ವನ್ನು ಪಡೆಯುವ ಘಟ್ಟ ಮತ್ತು (ಲೈಂಗಿಕ ಪ್ರವೃತ್ತಿಯನ್ನು ಅದುಮಿಡುವ ಘಟ್ಟ. ಅಂತರ್ ಪ್ರಜ್ಞೆಗೆ ಲೈಂಗಿಕತೆಯನ್ನು ದೂಡುವ(castration) ಘಟ್ಟ ಎಂದು ಲೆಕಾಂನ ವಿಶ್ಲೇಷಣೆಯನ್ನು ಇಲ್ಲಿ ಅನ್ವಯಿಸಬಹುದು ಮತ್ತು ಧರ್ಮ (ethics) ಎನ್ನುವ ಅರ್ಥದಲ್ಲಿ ಸ್ಥಾಪಿಸಲು ಹೊರಟಿರುವುದ ಕಾಣುತ್ತದೆ.

ಆದರೆ ಮಾದೇವನ ಸೃಷ್ಟಿಯಾದ ನಂತರ ಆತ ಆದಿಪರಾಶಕ್ತಿಯ ಲೈಂಗಿಕ ತಹತಹವನ್ನು ತಹಬಂದಿಗೆ ತಂದಿದ್ದೇ ಅಲ್ಲದೆ ಅವಳ ಶಕ್ತಿಯನ್ನು (power) ಜ್ಞಾನವನ್ನು (knowledge) ತಾನು ಪಡೆದು ಮುಂದೆ ಆಕಾಶ-ಭೂಮಿ, ಸೂರ್ಯ-ಚಂದ್ರ, ಹೆಣ್ಣು –ಗಂಡು(ಮನುಷ್ಯ) , ಪ್ರಾಣಿ – ಪಕ್ಷಿ ಇತ್ಯಾದಿಗಳ ಸೃಷ್ಟಿ ಎಲ್ಲವನ್ನು ಮಾಡುತ್ತಾನೆ. ಇಡೀ ಸೃಷ್ಟಿ ಗಂಡಿನ ಸೃಸ್ತಿಯಾಗುತ್ತದೆ. ಗಂಡಿನ ಸ್ವಾಧೀನಕ್ಕೆ ಎಲ್ಲವೂ ಒಳಾಗುತ್ತದೆ. ಗಂಡು ಹೆಣ್ಣನ್ನು ಆಳುವ ‘ಶಕ್ತಿ’ಯಾಗುತ್ತಾನೆ. ಪುರುಷ ಪ್ರಧಾನ ಸಮಾಜದ ಸೃಷ್ಟಿಯಾಗುತ್ತದೆ.

ಭಾರತ ದೇಶದ ಅನನ್ಯ ಸಂಸ್ಕೃತಿಯೆಂದರೆ ಇಂದಿಗೂ ಅಸಂಖ್ಯಾತ ಗ್ರಾಮ ದೇವತೆಗಳಿಂದ ಹಿಡಿದು ಅಮೂರ್ತವಾದ, ಸಂಸ್ಕ್ರುತೀಕರಣಗೊಂಡ ಸರಸ್ವತಿ, ಲಕ್ಷ್ಮಿ, ಪಾರ್ವತಿಯವರಗೆ ಅನೇಕ ದೇವತೆಗಳನ್ನು ಪೂಜಿಸುತ್ತಿರುವುದು . ಕಾಳೀ , ದುರ್ಗಿಯರು ಪಾರ್ವತಿಯಾಗಿ ಪರಿವರ್ತನೆಗೊಂಡಿದ್ದಾರೆ. ಶಕ್ತಿಯಾಗಿ ಮಾರ್ಪಟ್ಟಿದ್ದಾರೆ. ಆದರೆ ಈ ಎಲ್ಲಾ ಶಕ್ತಿ ದೇವತೆಗಳು ಮೂಲತಃ ಸ್ತ್ರೀವಾದಿಗಳೇ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಮೂಲಕ್ಕೆ ಹೋಗಿ ನೋಡಿದಾಗ ಈ ಎಲ್ಲಾ ದೇವತೆಗಳು ಗಂಡಿನ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಹೆಣ್ಣು ದೇವತೆಗಳಾಗಿರುತ್ತಾರೆ. ಚಾಮುಂಡಿಯಾಗಲೀ , ದುರ್ಗೆಯಾಗಲಿ ಇವರು ಗಂಡು ದೇವತೆಗಳಿಗೆ ಕಷ್ಟ ಬಂದಾಗ ನಿವಾರಿಸುವ ಮಾಧ್ಯಮಗಳಾಗಿದ್ದಾರೆ. ಆದರೆ ಇವರ್ಯಾರೂ ಹೆಣ್ಣಿನ ಬಿಡುಗಡೆಗಾಗಿ ಹೋರಾಡದೆ ‘ಗಂಡುಹೆಂಗಸಾಗಿ’ ಬಿಟ್ಟಿರುವುದು ಕಂಡುಬರುತ್ತದೆ. ಅಂದರೆ ಈ ಹೆಣ್ಣು ದೇವತೆಗಳು ಪುರುಷರಿಗಾಗಿ ಪುರುಷರಿಂದ ಸೃಷ್ಟಿಸಲ್ಪಟ್ಟವರು.

ಈ ಹೆಣ್ಣು ದೇವತೆಗಳಲ್ಲಿ ಪ್ರಮುಖವಾದ ದೇವತೆ ಎಂದರೆ ತಾಂತ್ರಿಕರು ಸೃಷ್ಟಿಸಿದ ‘ಶಕ್ತಿ’ ದೇವತೆ. ಶಕ್ತಿ ದೇವತೆಗೆ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸುವ ಶಕ್ತಿ ಇದೆ. ಈ ಬ್ರಹ್ಮಾಂಡದಲ್ಲೇ ಅತೀ ಹೆಚ್ಚು ಅಧಿಕಾರವನ್ನು ಹೊಂದಿದ ದೇವತೆ. ಈಕೆ ದಿವ್ಯ ರೂಪಿಣಿ. ಗಂಡು ರೂಪಿಯಾದ ಶಿವನೊಡನೆ ಈಕೆಯ ಸಹವಾಸ. ಮಾರ್ಕಂಡೇಯ ಪುರಾಣದಲ್ಲಿ ಈಕೆ ಮೊದಲು ಕಾಣಿಸಿಕೊಳ್ಳುತ್ತಾಳೆ. ದೇವೀ ಮಹಾತ್ಮೆಯಲ್ಲಿ ಇವಳನ್ನು ಪ್ರಕೃತಿ, ಮಾಯಾ ಮತ್ತು ಶಕ್ತಿ ಎಂದು ಕರೆಯಲಾಗಿದೆ. ರೂಪಿಲ್ಲದ ಆದರೆ ಎಲ್ಲಾ ರೂಪಗಳ ಮೂಲ ಮಾತ್ರುಕೆಯಾಗಿದ್ದಾಳೆ. ತಾಂತ್ರಿಕರಲ್ಲಿ ಈಕೆ ಶಿವ – ಶಕ್ತಿ ಸಮರಸವಾಗಿ ಕಂಡು ಬರುತ್ತಾಳೆ. ಇಚ್ಚೆ, ಜ್ಞಾನ ಮತ್ತು ಕ್ರಿಯೆಯು ಪ್ರತೀಕವಾಗಿ ಆದಿಪರಾಶಕ್ತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಚಿತ್ತಶಕ್ತಿ , ಪ್ರಕೃತಿಶಕ್ತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಇಲ್ಲಿ ಶಕ್ತಿ ಪರಮ ಸತ್ಯ. ಶಿವ ಅವಳನ್ನು ಧರಿಸುವ ಆಧಾರ ಮಾತ್ರ. ಆದರೆ ದೇವೀ ಭಾಗವತದಲ್ಲಿ ಇದೇ ದೇವತೆ ಮಾನವ ಹೆಣ್ಣು ಮತ್ತಿ ಶೂದ್ರರು ಕೇಳಬಾರದು, ಉಚ್ಚರಿಸಬಾರದು ಎಂದು ಹೇಳುವುದು ಚೋದ್ಯವೇ ಸರಿ. ಇಲ್ಲೂ ಸಹ ಪುರುಷ ಪ್ರಜ್ಞಾವಂತನೆಂದು ಪ್ರಕೃತಿ ಅಚಿತ್ (unconcious) ಮತ್ತು ಜಡ ಎಂದು ತಿಳಿಯಲಾಗಿದೆ. ಈ ಪರಿಕಲ್ಪನೆಯನ್ನು ಫ್ರಾಯ್ಡ್ ನ ಪರಿಕಲ್ಪನೆಯೊಡನೆ (ಮೊದಲೇ ತಿಳಿಸಿದಂತೆ) ಹೋಲಿಸಿ ನೋಡಬಹುದು. ಈ ರೂಪಕ ಇಂದೂ ಸಹ ಮೂಲಭೂತವಾದಿಗಳಲ್ಲಿ ಮೊಳಗುತ್ತಿದೆ. ಹೆಣ್ಣನ್ನು ಗಂಡಿನ ಇಚ್ಚೆಯಂತೆಯೇ ನಡಿಸಿಕೊಳ್ಳಬೇಕೆಂಬ ಸಂಹಿತೆಯನ್ನು ಅವರು ಸಾರುತಿದ್ದಾರೆ. ಇವರು ಹೆಣ್ಣು ಎಲ್ಲಿ ಪೂಜಿಸಲ್ಪಡುತ್ತಾಳೋ… ಎಂದು ಹೇಳುವುದು ಸಹ ಗಂಡಿನ ಸ್ವಾರ್ಥ ಸಾಧನೆಗೆ ಆಗಿದೆ.

ಲಕ್ಹ್ಮಿ – ಸರಸ್ವತಿಯವರು ಸಂಪತ್ತಾಗಿ , ವಿದ್ಯೆಯಾಗಿ, ಜ್ಞಾನವಾಗಿ ಪುರುಷರಿಗೆ ಒಲಿಯುವವರಾಗಿದ್ದಾರೆ ಅಷ್ಟೇ. ಪಾಶ್ಚಿಮಾತ್ಯದಲ್ಲಿ ಹೆಣ್ಣು ದೇವತೆಗಳು ಸಂಖ್ಯೆಯಲ್ಲಿ ಭಾರತದ ದೇವತೆಗಳಷ್ಟೇ ಇಲ್ಲದಿದ್ದರೂ ಸುಮಾರು ಎರಡು ಸಹಸ್ರಮಾನದ ಹಿಂದೆಯೇ ತೆರೆಯ ಮರೆಗೆ ಸರಿದುಬಿಟ್ಟಿದ್ದಾರೆ.

ಆದರೆ ಲೆಕಾಂ ಪ್ರತಿಪಾದಿಸುವ ‘ಗಂಡುತನ’, ‘ಹೆಣ್ಣುತನ’ದ ಪರಿಕಲ್ಪನೆ. “ಪಿರಿಯಾಪಟ್ಟಣದ ಕಾಳಿಗ” ಎಂಬ ಜನಪದ ಮಹಾಕಾವ್ಯದಲ್ಲಿ ಸ್ಪಷ್ಟವಾಗಿ ಒಡ ಮೂಡಿದೆ. ಇಲ್ಲಿ ಪಿರಿಯಾಪಟ್ಟಣದ ರಾಜ “ಗಂಡು ದೊರೆ” ಮೈಸೂರಿನ ದಳವಾಯಿ “ಹೆಣ್ಣು ರಾಜ” ವೀರಾಜ ಎಷ್ಟು ಪರಾಕ್ರಮಿ ಎಂದರೆ ದಳವಾಯಿ ಆ ರಾಜ್ಯದ ದಿಕ್ಕಿಗೆ ತಲೆಹಾಕಿಯೂ ಮಲಗುವುದಿಲ್ಲ.  ಯಾವುದೂ ಕಾರಣಕ್ಕೆ ವೀರಾಜ ಯುದ್ಧವನ್ನು ಸಾರಿದಾಗ ದಳವಾಯಿ ಹೆದರಿ ಅಂತಃಪುರ ಸೇರಿ, ಮಕಾಡೆನಾಗೆ ಮಲಗಿ ಅಳಲು ಶುರು ಮಾಡುತ್ತಾನೆ. ವೀರಾಜ ಅವನನ್ನು “ಹೆಣ್ಣಿಗ” ಎಂದು ಜರಿಯುತ್ತಾನೆ. ದಳವಾಯಿ ಮೈಸೂರಿನ ಚಾಮುಂಡಿಯನ್ನು ಪ್ರಾರ್ಥಿಸುತ್ತಾನೆ. ಆಗ ಚಾಮುಂಡಿ ಯುದ್ದಕ್ಕೆ ಸಿದ್ದಳಾಗುತ್ತಾಳೆ.  ತಾನು ಹೆಣ್ಣಾಗಿ ಒಬ್ಬಳೇ ಹೋಗುವುದಕ್ಕೆ ಸಮಾಜದ/ಸಂಸ್ಕೃತಿಯ ಒಪ್ಪಿಗೆ ಇರದ ಕಾರಣ ನಂಜನಗೂಡಿನ ನಂಜುಂಡನನ್ನು ಬರಮಾಡಿಕೊಳ್ಳುತ್ತಾಳೆ. ಯುದ್ದದ ಹೆಸರನ್ನು ಕೇಳಿದ ತಕ್ಷಣ ನಂಜುಂಡ ನಡಗುತ್ತಾನೆ. ಏಕೆಂದರೆ ಈಗ ಆತ ಹಾರುವವರ ದೇವರಾಗಿ ಸಸ್ಯಹಾರಿಯಾಗಿ ಬಿಟ್ಟಿರುತ್ತಾನೆ. ರಕ್ತ ಕಂಡರೆ ಆತನಿಗೆ ಹೆದರಿಕೆ. ಆಗ ನಂಜುಂಡನನ್ನು ಮಗುವನ್ನಾಗಿ ಮಾಡಿಕೊಂಡು ತನ್ನ ಬೆನ್ನಿಗೆ ಕಟ್ಟಿಕೊಂಡು ಯುದ್ದ ಮಾಡಿ ಗಂಡು ರಾಜನಾದ ವೀರಾಜನನ್ನು ಸೋಲಿಸುತ್ತಾಳೆ. ಇಲ್ಲಿ ಪ್ರಮುಖವಾಗಿ ಕಂಡುಬರುವುದು ‘ಗಂಡಿನಲ್ಲಿ ಹೆಣ್ಣುತನ, ಹೆಣ್ಣಿನಲ್ಲಿ ಗಂಡುತನ”.

ಹೀಗೆ ಒಂದು ಸಮಾಜದಲ್ಲಿ ಗಂಡುತನ ಹೆಣ್ಣುತನ ಇರುತ್ತದೆಯೇ ವಿನಃ – “ಗಂಡು –ಹೆಣ್ಣು”ಗಳಿರುವುದಿಲ್ಲ. ಆದ್ದರಿಂದ ಒಂದು ಸಂಸ್ಕೃತಿಯ ಕಥಾನಕಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿಕೊಳ್ಳುವುದರ ಮೂಲಕ ಸ್ತ್ರೀವಾದಿಗಳು ಪರೋಕ್ಷವಾಗಿ (discursive) ಸಮಾಜದ ತರ-ತಮಗಳನ್ನು ಕಂಡುಕೊಳ್ಳಬಹುದೆಂದು ಲೆಕಾಂ ವಿಶ್ಲೇಷಿಸುತ್ತಾನೆ. ರಚನೋತ್ತರ ವಾದಿಗಳು , ಆಧುನಿಕೋತ್ತರ ವಾದಿಗಳು ಸ್ತ್ರೀವಾದ ಪರಿಕಲ್ಪನೆಯನ್ನು ಹಿಗ್ಗಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಇಂದೂ ನಮ್ಮ ಸಮಾಜದ ರಾಜಕೀಯ, ಸಾಂಸ್ಕೃತಿಕ, ಲೈಂಗಿಕ ಆಯಾಮಗಳನ್ನುವಿಶ್ಲೇಷಿಸಿಕೊಂಡು “ಹೆಣ್ಣುತನ-ಗಂಡುತನ”ಗಳ ಅರಿವು ಪಡೆದರೆ ಬಿಡುಗಡೆಯ ಹಾದಿಯಲ್ಲಿ ನಡೆಯಬೇಕಿದೆ.

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ತಿಂಗಳು –ನವೆಂಬರ್ ೨೦೦೯

21ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ ಈಚಿನದೆಂದು ಕಂಡು ಬರುತ್ತದೆ. ಅಲ್ಲದೆ ಪ್ರಪಂಚದ ಬೇರೆ ಬೇರೆ ಖಂಡಗಳಲ್ಲಿ ಬದುಕಿರುವ ಅನೇಕ ಸಮಾಜದಲ್ಲಿ ಇನ್ನು ತಮ್ಮ ಭಾಷೆಯನ್ನೂ ಬರವಣಿಗೆಗೆ ಅಳವಡಿಸಿಕೊಂಡಿಲ್ಲ . ಅಂದರೆ ನಮ್ಮ ಇತಿಹಾಸ ರಚನೆ ಕೇವಲ ಪಾರ್ಶ್ವಿಕವಾದದ್ದು.

ಮೇಲೆ ಹೇಳಿದ ಎಲ್ಲಾ ರೀತಿಯ ಚರಿತ್ರೆಗಳನ್ನೂ ಬದಿಗಿರಿಸಿ ಇಡೀ ನಮ್ಮ ಜಗತ್ತನ್ನು ಒಂದು ಘಾತಕವೆಂದು ಪರಿಗಣಿಸಿ ವಿವಿಧ ಜ್ಞಾನ ಶಾಖೆಗಳಾದ ಪುರಾತತ್ವಶಾಸ್ತ್ರ , ಮಾನವಶಾಸ್ತ್ರ, ಭಾಷಾಶಾಸ್ತ್ರ, ಪ್ರಾಣಿಶಾಸ್ತ್ರ , ವಿಕಸನ ಜೀವಶಾಸ್ತ್ರ , ಭೂಗರ್ಭಶಾಸ್ತ್ರ ಇವೆಲ್ಲದರ ಹದವಾದ ಪಾಕದಿಂದ ಜೇರ್ಡ್ ಡೈಮಂಡ್ ಗನ್ಸ್, ಜರ್ನ್ಸ್, ಸ್ಟೀವ್, ದೇ ಫೇಟ್ಸ್ ಆಫ್ ಹ್ಯೂಮನ್ ಸೊಸೈಟಿ ಎಂಬ ಪುಸ್ತಕವನ್ನು ೧೯೯೭ರಲ್ಲಿ ರಚಿಸಿಕೊಟ್ಟಿದ್ದಾನೆ. ಐದು ನೂರು ಪುಟಗಳ ಈ ಪುಸ್ತಕದ ಹರವು ಅಪಾರವಾದದ್ದು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಚರಿತ್ರೆಯನ್ನು ಇನ್ನೂ ವಿಜ್ಞಾನವೆಂದು ಪರಿಗಣಿಸಿಲ್ಲ. ಅದನ್ನು ಸಾಮಾಜಿಕ ಅಧ್ಯಯನದ ಒಂದು ಭಾಗವೆಂದೇ ಪರಿಗಣಿಸಲಾಗಿದೆ. ಅಲ್ಲದೆ ಚರಿತ್ರೆಕಾರರೆ ಅದನ್ನು ವಿಜ್ಞಾನವೆಂದು ಪರಿಗಣಿಸಿಲ್ಲ. ಚರಿತ್ರೆಯೆಂದರೆ ಕೆಲವು ವಿಷಯಗಳ ವಿಸ್ತಾರವಾದ ಮಂಡನೆ ಎಂದೂ ಒಂದಾದನಂತರ ಮತ್ತೊಂದು ಸಂಗತಿಯನ್ನು ಪೇರಿಸಿಡುವುದು ಎಂದು ಭಾವಿಸಿದ್ದಾರೆ ಎಂಬುದು ಜೇರ್ಡ್ ನ ಕೊರಗು, ಇದಕ್ಕಾಗಿಯೇ ಈತ ಚರಿತ್ರೆಗೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಅಧ್ಯಯನಗಳನ್ನು ತನ್ನ ಸಾಧನವಾಗಿ ಬಳಸಿಕೊಂಡಿದ್ದಾನೆ.

ಈ ಜೇರ್ಡ್ ಡೈಮಂಡ್ ಮೂಲತಃ ಚರಿತ್ರೆಕಾರನಲ್ಲ. ತನ್ನ ತಂದೆಯಂತೆ ತಾನೂ ಡಾಕ್ಟರ್ ಆಗ ಬಯಸಿದವನು . ಅದಕ್ಕಾಗಿ ಎಳವೆಯಿಂದಲೇ ತಯಾರಿ ನಡೆಸಿದ್ದ. ಇವನ ಇನ್ನೊಂದು ಹವ್ಯಾಸವೆಂದರೆ ಹಕ್ಕಿಗಳ ವೀಕ್ಷಣೆ. ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ಔಷಧಶಾಸ್ತ್ರದ ಓದನ್ನು ಬಿಟ್ಟು ತನ್ನ ಕಾಲೇಜಿನ ವಿಧ್ಯಾಭ್ಯಾಸಕ್ಕೆ ಪ್ರಾಣಿಶಾಸ್ತ್ರವನ್ನು ಆರಿಸಿಕೊಂಡ. ಅತ್ಯಂತ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿದ್ದ ಈತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದ. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರಿ ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ(೧೯೨೧). ನಂತರ ಜೀವವಿಕಾಸವಾದ ಮತ್ತು ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಆಶಿಸಿದ. ಅದೇ ಸಮಯಕ್ಕೆ ಸರಿಯಾಗಿ ಆಸ್ಟ್ರೇಲಿಯಾ ಖಂಡ ಮೇಲ್ಭಾಗದಲ್ಲಿರುವ ಪಾಪುವಾ ನ್ಯುಗಿನಿಯಾ ದ್ವೀಪದಲ್ಲಿ ಅತ್ಯಂತ ಹಳೆಯ ಹಕ್ಕಿಯ ಪಳೆಯುಳಿಕೆ ಕಂಡು ಬಂದಿದೆ ಎಂಬ ಸುದ್ದಿ ಇವನನ್ನು ತಲುಪಿತು. ಈತ ಆ ದ್ವೀಪಕ್ಕೆ ಅತ್ಯಂತ ಉತ್ಶಾಹದಿಂದ ಹೋದ. ಆ ದ್ವೀಪದಲ್ಲಿರುವವರು ಮೂಲನಿವಾಸಿಗಳು ಬುಡಕಟ್ಟು ಸಂಸ್ಕೃತಿಗೆ ಸೇರಿದವರು. ಹೋದ ಮಾರನೆ ದಿನವೇ ಸಮುದ್ರ ದಂಡೆಯಲ್ಲಿ ವಾಕ್ ಮಾಡುತ್ತಿದ್ದಾಗ ಬುಡಕಟ್ಟು ಜನಾಂಗದ ಯಾಲಿ ಎಂಬುವವನ ಭೇಟಿಯಾಯಿತು. ಆತ ಕುತೂಹಲದಿಂದ ಜೇರ್ಡ್ ನನ್ನು ಪರಿಚಯ ಮಾಡಿಕೊಂಡು ಆತ ಅಲ್ಲಿಗೆ ಬಂದ ಕಾರಣ ಕೇಳಿದ. ಅದಕ್ಕೆ ಜೇರ್ಡ್ ‘ಒಂದು ಕಾಲದಲ್ಲಿ ಬದುಕ್ಕಿದ್ದು ಈಗ ಇಲ್ಲವಾಗಿರುವ ಪಕ್ಷಿಯ ಪಳೆಯುಳಿಕೆಯ ಬಗ್ಗೆ ಅಧ್ಯಯನ ಮಾಡಲು ಬಂದಿದ್ದೇನೆ’ ಎಂದ. ಆಶ್ಚರ್ಯಚಕಿತನಾದ ಯಾಲಿ, ‘ಅಲ್ಲಾ ಸ್ವಾಮಿ, ಯಾವುದೋ ಒಂದು ಕಾಲದಲ್ಲಿದ್ದ ಹಕ್ಕಿಯ ಬಗ್ಗೆ ಸಂಶೋಧನೆಗೆ ಬಂದಿದ್ದೀರಲ್ಲ, ಅದೂ ಅಮೆರಿಕಾದಿಂದ, ಇಲ್ಲಿ ಇನ್ನು ನಾವು ಬದುಕಿದ್ದೆವಲ್ಲ, ನಾವು ಯಾವ ಕಾಲದಿಂದ ಇಲ್ಲಿ ಇದ್ದೇವೆ(ಬಿಳಿಯರು ಏಕೆ ನಮ್ಮನ್ನು ಆಳುತ್ತಿದ್ದಾರೆ?) ಹೇಳಿ’ ಎಂದು ಕೇಳಿದ. ಈ ಪ್ರಶ್ನೆ ಜೇರ್ಡ್ ನನ್ನು ಅಚ್ಚರಿಗೊಳಿಸಿದ್ದೆ ಅಲ್ಲದೆ ತಲ್ಲಣಕ್ಕೂ ಈಡುಮಾಡಿತು. ಹೌದಲ್ಲ ಸತ್ತ ಹಕ್ಕಿಯ ಚರಿತ್ರೆಯನ್ನು ಹುಡುಕಿಕೊಂಡು ಬಂದವ ನಾನು. ಆದರೆ ಮಾನವನ ಚರಿತ್ರೆಯನ್ನೇ ತಿಳಿದಿಲ್ಲವಲ್ಲ ನಾನು’ ಎಂಬ ಅರಿವು ಜೇರ್ಡ್ ನಿಗಾಯಿತು.

22ಯಾಲಿ ಹಾಕಿದ ಈ ಪ್ರಶ್ನೆಗೆ ಉತ್ತರ ಕಂಡುಹಿಡಿದುಕೊಳ್ಳಲು ಹತ್ತು ವರ್ಷಗಳ ನಂತರ ಮಾನವ ಜನಾಂಗದ ಇತಿಹಾಸವನ್ನು ಕಂಡುಹಿಡಿಯಲು ಸರ್ವಸಿದ್ದತೆಗಳನ್ನು ಮಾಡಿಕೊಂಡು ೧೯೭೨ ರಲ್ಲಿ ಮತ್ತೆ ಪಾಪುವಾ ನ್ಯುಗಿನಿಯಾಗೆ ಬಂದ. ಆ ದ್ವೀಪದೇಶ ಆಸ್ಟ್ರೇಲಿಯಾದ ಬಿಳಿಯರ ವಸಾಹತುವಿನಿಂದ ಬಿಡುಗಡೆ ಪಡೆಯುವ ಸಿದ್ದತೆ ನಡೆಸಿತ್ತು. ಅಷ್ಟು ಹೊತ್ತಿಗಾಗಲೇ ಯಾಲಿ ಬುಡಕಟ್ಟು ಜನಾಂಗದ ನಾಯಕನಾಗಿ ಹೊರಹೊಮ್ಮಿದ್ದ.

ಜೇರ್ಡ್ ನ ಚರಿತ್ರೆಯ ದಾರಿ ಭಿನ್ನವಾಗಿತ್ತು. ಚರಿತ್ರೆಯ ಪುನಾಃರಚನೆ ಎಂದರೆ ವಿವಿಧ ವಿಜ್ಞಾನ ಶಾಖೆಗಳ ಜ್ಞಾನದ ಅನಿರ್ವಾರ್ಯತೆ ಇದೆಯೆಂದು ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರಗಳ ಆಧಾರ ಒಂದು ಕಡೆಯಾದರೆ ಇನ್ನೊಂದು ಕಡೆ ಜೀವವಿಕಾಸವಾದ, ಪರ್ಯಾವರಣ ಅಧ್ಯಯನ, ಭೂಗರ್ಭಶಾಸ್ತ್ರದ ಅರಿವು ಇವೆಲ್ಲದರ ಜ್ಞಾನವನ್ನು ಹೊತ್ತು ನಡೆಸಿದ್ದ. ಆದರೆ ಜೇರ್ಡ್ ನ ಇತಿಹಾಸ ರಚನೆ ಪ್ರಾರಂಭವಾಗುವುದು ಇಂದಿನಿಂದ ಹದಿಮೂರು ಸಾವಿರ ವರ್ಷಗಳಿಂದ ಮಾತ್ರ. ಏಕೆಂದರೆ ಭೂಗರ್ಭಶಾಸ್ತ್ರದ ಪ್ರಕಾರ ಈ ಕಾಲದಲ್ಲಿ ಹಿಮಯುಗವು ಸರಿದು ‘ಇತ್ತೀಚಿನ’ ಯುಗ ಪ್ರಾರಂಭವಾಯಿತು. ಅಂದರೆ ಆಹಾರಕ್ಕಾಗಿ ಬೇಟೆಯಾಡಿ ಮತ್ತು ಅದರ ಜೊತೆ ತಿನ್ನಬಹುದಾದ ಸಸ್ಯಗಳ ಅನ್ವೇಷಣೆ ಮಾಡುತ್ತಿದ್ದ ಮನುಷ್ಯ ಒಂದು ಕಡೆ ತಳ ಊರಲು ಅಭ್ಯಾಸ ಮಾಡಿಕೊಳ್ಳುತ್ತಿದ್ದ ಕಾಲ. ಯಾವ ಬೆಳೆಗಳನ್ನು ಬಿತ್ತಿ ಬೆಳೆಯಬಹುದು, ಅದಕ್ಕಾಗಿ ಭೂಮಿಯನ್ನು ಹೇಗೆ ಉಪಯೋಗಿಸಬಹುದು, ಒಂದು ಕಡೆ ತಳ ಊರಿದರೆ ಆಹಾರಕ್ಕೆ ಯಾವ ಪ್ರಾಣಿಗಳನ್ನು ಪಳಗಿಸಿ ಸಾಕಬಹುದು ಅದರಿಂದ ಬೇಸಾಯಕ್ಕೆ ಏನಾದರು ನೆರವಾದೀತೇ ಎಂಬುದನ್ನು ಪರೀಶೀಲಿಸುತ್ತಿದ್ದ ಕಾಲ. ಒಂದು ರೀತಿಯಲ್ಲಿ ‘ಹೊಸ ತಾಂತ್ರಿಕತೆ’ಗೆ ಮನುಷ್ಯ ಸಿದ್ಧನಾಗುತ್ತಿದ್ದ ಕಾಲ. ಇದಕ್ಕೆ ಮುಂಚೆ ಏಳು ಮಿಲಯನ್ ವರ್ಷಗಳ  ಹಿಂದೆ ಮೂಲ ಮಾನವನ ನೆಲೆ ಆಫ್ರಿಕ ಖಂಡ ಎಂದು ಗುರುತಿಸಲಾಗಿದೆ. ಅಲ್ಲಿಂದ ಹಿಮಯುಗ ಮುಗಿಯುವವರೆಗೆ ಆತ ಭೂಮಿಯ ಬೇರೆ ಬೇರೆ ಕಡೆಗೆ ಪಸರಿಸಿದ ಎಂಬ ಸಿದ್ದಾಂತ ಪುರಾತತ್ವ ಮತ್ತು ಮಾನವಶಾಸ್ತ್ರಗಳಿಂದ ರೂಪುಗೊಂಡಿದೆ. ಅಂದರೆ ಕಳೆದ ಹದಿಮ್ಮೊರು ಸಾವಿರ ವರ್ಷಗಳಿಂದ ಆತ ಅಲೆಮಾರಿಯೇ ಆಗಿದ್ದ.

ಮಾನವ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಬೇಸಾಯ ಸಂಸ್ಕೃತಿ ಪ್ರಾರಂಭವಾದದ್ದು ಪಶ್ಚಿಮ ಏಷ್ಯಾದಲ್ಲಿ. ಇಲ್ಲಿ ಕ್ರಿ.ಪೂ.ಏಳು ಸಾವಿರ ವರ್ಷಗಳ ಹಿಂದೆ ಆಹಾರ ಉತ್ಪಾದನೆ ಪ್ರಾರಂಭವಾಯಿತು. ಈಗಿನ ಜೋರ್ಡಾನ್ , ಸಿರಿಯಾ,ಇರಾಕ್, ಟರ್ಕಿ ಈ ಭಾಗದಲ್ಲಿ. (ಇಲ್ಲಿಯೇ ಮೊದಲ ಬಾರಿಗೆ ಪಟ್ಟಣಗಳು, ಬರವಣಿಗೆ, ರಾಜ್ಯ, ನಾಗರೀಕತೆ ಪ್ರಾರಂಭವಾದದ್ದು) ಇಲ್ಲಿಂದ ಭೂಮಿಯ ಪಶ್ಚಿಮ ಮತ್ತು ಪೂರ್ವಾಭಿಮುಖವಾಗಿ ಈ ಬೆಳೆಗಳು , ಪ್ರಯಾಣ ಮಾಡಿದವು. ಜೇರ್ಡ್ ನ ಪ್ರಕಾರ ಈ ಭೂಭಾಗದಲ್ಲಿ ಆಹಾರ ಉತ್ಪಾದನೆ ಪ್ರಾರಂಭವಾದರೂ ಅದು ಸಮೃದ್ಧವಾಗಿ  ಬೆಳೆದದ್ದು ಯುರೋಪಿನಲ್ಲಿ. ಜೇರ್ಡ್ ನ ಪ್ರಮುಖವಾದ ವಾದವೆಂದರೆ ಮನುಷ್ಯನ ಅಭಿವೃದ್ಧಿಗೆ ಮುಖ್ಯಕಾರಣ ಆತ ಬದುಕುವ ಭೂಪ್ರದೇಶ; ಅಲ್ಲಿಯ ಪರ್ಯಾವರಣ; ಅದರಿಂದ ಆತ ಅಭಿವೃದ್ಧಿ ಹೊಂದುತ್ತಾನೆ ಎಂಬುದು.

23ಯಾವಾಗ ಮನುಷ್ಯ ಬೇಸಾಯ ಪ್ರಾರಂಭಿಸಿದನೋ ಆಗಿನಿಂದ ಆತನ ಬದುಕು ಬದಲಾಗಲು ಪ್ರಾರಂಭಿಸಿತು. ಬೇಸಾಯ ಯೋಗ್ಯ ಸಸ್ಯಗಳನ್ನು ಬೇಸಾಯಕ್ಕೆ ಒಗ್ಗಿಸಿಕೊಂಡ. ತಳ ಊರಿ ಬದುಕಲಾರಂಭಿಸಿದ . ಈ ಆಹಾರ ಉತ್ಪಾದನಾ ಸಂಸ್ಕೃತಿ ಬುಡಕಟ್ಟು ಜನಾಂಗದಲ್ಲಿ ಇಲ್ಲದ ಅನೇಕ ಖಾಯಿಲೆಗಳನ್ನು ಹುಟ್ಟು ಹಾಕಿತು. ಮನುಷ್ಯನ ಬಹುಪಾಲು ಖಾಯಿಲೆಗಳು ಸಾಕು ಪ್ರಾಣಿಜನ್ಯ ಎಂದು ಜೇರ್ಡ್ ಹೇಳುತ್ತಾನೆ. ಪ್ರಮುಖ ಖಾಯಿಲೆಗಳಾದ ಸಿಡುಬು,ಇನ್ಫುಎನ್ಜ , ಟಿಬಿ, ಮಲೇರಿಯ,ಪ್ಲೇಗ್, ದಡಾರ, ಕಾಲರಾ ಈ ಎಲ್ಲಾ ಖಾಯಿಲೆಗಳು ಮನುಷ್ಯನ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪ್ರಾತ್ರವನ್ನೇ ವಹಿಸಿವೆ. ಎರಡನೇ ವಿಶ್ವ ಸಮರದ ತನಕ ಜನರು ಯುದ್ಧಗಳಲ್ಲಿ ಸತ್ತದ್ದಕ್ಕಿಂತ ಮಾರ್ಕ್ ರೋಗಗಳಿಗೆ ತುತ್ತಾದವರ ಸಂಖ್ಯೆ ಜಾಸ್ತಿ. ಹಿಂದಿನ ಅನೇಕ ಯುದ್ದಗಳನ್ನು ಗೆದ್ದವರು ಸೈನಿಕರಲ್ಲ. ಸೈನ್ಕರು ಹೊತ್ತು ತಂದ ಖಾಯಿಲೆಯ. ಯುರೋಪಿಯನ್ನರು ಮೊದಲು ಅಮೆರಿಕಾವನ್ನು ಗೆದ್ದಾಗ ಸ್ತಳೀಯ ಅಮೇರಿಕನ್ ಬುಡಕಟ್ಟು ಜನಾಂಗದವರು ಸತ್ತಿದ್ದು ಈ ಫಿರಂಗಿಯವರ ಖಾಯಿಲೆಯಿಂದ. ಆಫ್ರಿಕಾ ಮತ್ತು ಏಷ್ಯಾದಲ್ಲೂ ಇದೇ ರೀತಿಯಾಯಿತು. ತಲೆತಲಾಂತರದಿಂದ ಬಂದ ಖಾಯಿಲೆಯನ್ನು ತಡೆಯುವ ದೇಹಶಕ್ತಿ ಇಲ್ಲದ ಇತರರಿಗೆ ಇವರು ಸುಲಭವಾಗಿ ಬಳುವಳಿಕೊಟ್ಟರು. ಅಲಾಸ್ಕಾದ ಒಂದು ಇಡೀ ಬುಡಕಟ್ಟು ಜನಾಂಗ ಇದರಿಂದ ನಿರ್ನಾಮವಾಯಿತಂತೆ.

ಬೇಸಾಯ ಸಂಸ್ಕೃತಿ ಜನಸಂಖ್ಯೆ ವೃದ್ಧಿಯಲ್ಲಿ ಪಾತ್ರವಹಿಸಿತು. ಪಟ್ಟಣಗಳು ಹುಟ್ಟಿಕೊಂಡವು . ಪಟ್ಟಣಗಳಲ್ಲಿ ಒಟ್ಟೊಟ್ಟಿಗೆ ವಾಸಮಾಡುವ ಮನುಷ್ಯ ತಾನೇ ಈ ಖಾಯಿಲೆಗಳನ್ನು ಹರಡುವ ಮಾಧ್ಯಮವಾದ. ರೋಮನ್ನರ ವ್ಯಾಪಾರ ಮಾರ್ಗದಲೆಲ್ಲ ಈ ಖಾಯಿಲೆಗಳು ಹಬ್ಬಿದವು. ಕ್ರಿ.ಶ.೧೬೫ ರಲ್ಲಿ ಮಿಲಿಯಾಂತರ ರೋಮನ್ ಪ್ರಜೆಗಳು ಸಿಡುನಿಂದ ಸತ್ತರು. ಇದೆಲ್ಲ ಆದದ್ದು ಯೂರೋಪಿನ ಕೊಡುಗೆ ಎಂದು ಜೇರ್ಡ್ ನ ಸಂಶೋಧನೆ ತಿಳಿಸುತ್ತದೆ.

ಬೇಸಾಯ ಸಂಸ್ಕೃತಿಯ ಮತ್ತೊಂದು ಕೊಡುಗೆಯೆಂದರೆ ಬರಹ ಕಂಡುಹಿಡಿದಿದ್ದು. ಬರಹ ಚಾರಿತ್ರಿಕ ಕಾಲದ ಸಮಾಜದಲ್ಲಿ ಶಕ್ತಿಯುತವಾದ ಆಯುಧವಾಗಿ ಉಪಯೋಗಿಸಿಕೊಳ್ಳಲ್ಪಟ್ಟಿತು. ಶಾಸ್ತ್ರಗಳ ಜೊತೆ ಖಾಯಿಲೆ ತರುವ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬರಹವೂ ತನ್ನ ಕೊಡುಗೆಯನ್ನು ಕೊಟ್ಟಿದೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕಂಡು ಹಿಡಿದ ಬರಹ ಮಾಧ್ಯಮ ಇತ್ತೀಚಿನವರೆಗೂ ಚಕ್ರವರ್ತಿಗಳು ಮತ್ತು ವ್ಯಾಪಾರಿಗಳು ತಮ್ಮ ಜ್ಞಾನಕ್ಕೆ ಬೇಕಾದಾದ್ದನ್ನೆಲ್ಲ ಬರಹದಲ್ಲಿ ಮೂಡಿಸುತ್ತಿದ್ದರು. ಇದು ಕೆಲವೇ ವರ್ಗದ ಕೆಲವೇ ಜನರಲ್ಲಿ ಕೇಂದ್ರಿಕೃತವಾಗಿತ್ತು. ಬರಹ ಮಾಧ್ಯಮ ಇದ್ದದ್ದೇ ಗುಲಾಮರನ್ನು ಸೃಷ್ಟಿಸುವುದಕ್ಕಾಗಿ ಎಂಬ ಲೆವಿಸ್ತ್ರಾಸ್ ನ ವಾದವನ್ನು ಜೇರ್ಡ್ ಸಮರ್ಥಿಸುತ್ತಾನೆ.ಇತ್ತೀಚಿನವರೆಗೂ ಬರವಣಿಗೆ ಬುಡಕಟ್ಟು ಜನಾಂಗಕ್ಕೆ ಬೇಕಾಗಿರಲಿಲ್ಲ. ಏಕೆಂದರೆ ಅಲ್ಲಿ ಕೇಂದ್ರಿಕೃತ ಆಡಳಿತವಿರಲಿಲ್ಲ. ಆಯಾ ದಿನದ ಬದುಕು ಅಂದೇ ಚುಕ್ತವಾಗುತ್ತಿತ್ತು . ಆದರೆ ಬೇಸಾಯ ಸಂಸ್ಕೃತಿ ಸ್ತರೀಕೃತ ಸಮಾಜವನ್ನು ಸೃಷ್ಟಿಸಿತು . ವರ್ಷಪೂರ್ತ ದುಡಿಯ ಬೇಕಾಗಿರಲಿಲ್ಲ. ಆಹಾರ ಶೇಖರಣೆ ಬಿಡುವನ್ನು ಕೊಟ್ಟಿತು. ಅಲ್ಲದೆ ಸಂಕೀರ್ಣ ರಾಜಕೀಯ ಕೇಂದ್ರಗಳನ್ನು ಸೃಷ್ಟಿಸಿತು . ತಮ್ಮ ತಮ್ಮ ಭೂಮಿಯನ್ನು ತಾವು ಕಾಪಾಡಿಕೊಳ್ಳಲು ಯುಧ, ಯುದ್ಧಕ್ಕೆ ಆಯುಧಗಳು ಇತ್ಯಾದಿ ತಾಂತ್ರಿಕತೆ ಈ ಸ್ತರೀಕೃತ ಸಮಾಜದ ಮೂಲ ವೃತ್ತಿಗಳಾದವು. ಇವುಗಳ ಲೆಕ್ಕವನ್ನಿಡಲು ಬರಹ ಬೇಕಾಯಿತು.

ಈ ರೀತಿಯ ಆಯುಧಗಳೆಲ್ಲ ಯುರೋಪಿನಲ್ಲೇ ಏಕೆ ಬಂತು ? ಯುರೋಪ್ ಏಕೆ ಪ್ರಪಂಚದ ಇತರ ದೇಶಗಳನ್ನು ಗೆಲ್ಲಲು ಹೊರಟಿತು? ತಾಂತ್ರಿಕತೆ ಏಕೆ ಇಲ್ಲಿ ಅಭಿವೃದ್ಧಿ ಹೊಂದಿತು? ಆಫ್ರಿಕಾ, ಏಷ್ಯಾ ಖಂಡಗಳೇಕೆ ಯೂರೋಪನ್ನು ಗೆಲ್ಲಲಿಲ್ಲ? ಇವಕ್ಕೆಲ್ಲ ಆಯಾ ದೇಶಗಳ ರಾಜಕೀಯ ನಿಲುವುಗಳೇ  ಕಾರಣ ಎಂಬುದು ಜೇರ್ಡ್ ನ ವಾದ. ಯೂರೋಪಿಗೆ ಸೆಡ್ಡು ಹೊಡೆಯಬಹುದಾಗಿದ್ದ ರಾಷ್ಟ್ರ ಚರಿತ್ರೆಯಲ್ಲಿ ಚೀನಾ, ೧೪ನೆ ಶತಮಾನದಲ್ಲೇ ಸಮುದ್ರಯಾನದಲ್ಲಿ , ಸಿಡಿಮದ್ದಿನ ತಯಾರಿಕೆಯಲ್ಲಿ , ಯುದ್ಧ ಕಲೆಯಲ್ಲಿ ಯುರೋಪಿಗಿಂತ ಎಷ್ಟೋ ಶತಮಾನಗಳ ಹಿಂದೆಯೇ ಈ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡಿತ್ತು. ಚೀನಾದ ಯುದ್ಧದ ಹಡಗು ಒಮ್ಮೆ ಆಫ್ರಿಕ ದೇಶವನ್ನು ತಲುಪಿತ್ತು. ಆದರೆ ಚೀನಾದ ರಾಜಕೀಯ ನಿಲುವು ಯುದ್ಧವನ್ನು ನಿಯಂತ್ರಿಸುವುದಾಗಿತ್ತು ಮತ್ತು ಬೇರೆ ಬೇರೆ ದೇಶಗಳನ್ನು ಗೆಲ್ಲುವುದು ಆಗಿನ ಚೀನಾದ ರಾಜಕೀಯ ನಿಲುವಾಗಿರಲಿಲ್ಲ. ಅವರೇನಾದರೂ ತಮ್ಮ ನಿರ್ಧಾರವನ್ನು ವಿರುದ್ದ ರೀತಿಯಲ್ಲಿ ನಿರ್ಣಯಿಸಿದ್ದಾರೆ ಪ್ರಾಯಶಃ ಪ್ರಪಂಚದ ಇತಿಹಾಸ ಬೇರೆಯೇ ತರಹದ್ದಾಗಿರುತ್ತಿತ್ತು ಎಂಬುದು ಜೇರ್ಡ್ ನ ವಾದ.

ಅಂತೆಯೇ ಮಧ್ಯಯುಗದಲ್ಲಿ ಪ್ರಭಾವಶಾಲಿಯಾಗಿದುದ್ದು  ಅರಬ್ ದೇಶಗಳು. ಯುದ್ದ ಸಾಮಗ್ರಿಗಳ ತಾಂತ್ರಿಕತೆ ಇಲ್ಲೂ ಬೆಳೆದಿತ್ತು. ಆದರೆ ಧರ್ಮದ ಕೈ ಮೇಲಾದಾಗ ತಾಂತ್ರಿಕತೆ ಜ್ಞಾನ ಹಿಂದೆ ಬಿಟ್ಟು. ಅತ್ಯಂತ ಹೆಚ್ಚಿನ ಸಾಕ್ಷರತೆ ಇದ್ದ ಅರಬ್ ದೇಶಗಳು ಹಿಮ್ಮುಖ ಚಲನೆ ಪಡೆದವು ಎಂಬುದನ್ನು ಜೇರ್ಡ್ ವಿಶ್ಲೇಷಿಸುತ್ತಾನೆ.

ಆದ್ದರಿಂದ ಜೇರ್ಡ್ ನ ಪ್ರಾಕಾರ ಯುರೋ ಕೇಂದ್ರಿತ ರಾಜ್ಯಗಳ ರಾಜಕೀಯ ನಿಲುವು ಅಲ್ಲಿಯ ವಿಜ್ಞಾನ, ತಾಂತ್ರಿಕತೆ ಮತ್ತು ಸಮಾಜವನ್ನು ನಿಯಂತ್ರಿಸುತ್ತದೆ. ಮತ್ತೆ ಇದರ ಮೂಲ ಸ್ತಂಭ ಆಹಾರ ಉತ್ಪಾದನೆ.

ಜೇರ್ಡ್ ಪ್ರಪಂಚದ ಯಾವುದೇ ಜನಾಂಗವು ಬುದ್ದಿ ಮಾತ್ತೆಯಲ್ಲಿ ಹಿಂದೂ-ಮುಂದು ಎಂಬುದಿಲ್ಲ. ಬುದ್ದಿವಂತಿಕೆ ಎಲ್ಲಾ ಮಾನವರಲ್ಲೂ ಒಂದೇ ಸಮನಾಗಿರುತ್ತದೆ. ಇದು ವರ್ಗ, ವರ್ಣ, ಇದನ್ನು ಅವಲಂಬಿಸಿಲ್ಲ. ವೈವಿಧ್ಯ ಬದುಕು ಬುದ್ದಿವಂತಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿರುತ್ತದೆ . ಅದು ಅಮೆರಿಕಾದವರಿರಬಹುದು ಅಥವಾ ಬುಡಕಟ್ಟು ಜನಾಂಗದವರಿರಬಹುದು, ಎಲ್ಲರಲ್ಲೂ ಬುದ್ದಿಮತ್ತೆ ಅಷ್ಟೇ ತೀಕ್ಷ್ಣವಾಗಿರುತ್ತದೆ ಎಂಬುದನ್ನು ವಿವರಿಸಿ ಹೇಳುವುದು ಬಹಳ ಮುಖ್ಯವಾದ ಅಂಶ.

ಮಾನವನ ಇತಿಹಾಸದಲ್ಲಿ ಅತ್ಯಂತ ವೇಗದ ಬದಲಾವಣೆ ಕಂಡು ಬಂದದ್ದು ಕ್ರಿ.ಶ.೧೫ನೆ ಶತಮಾನದಿಂದ ಈಚೆಗೆ. ಅಲ್ಲಿಯವರೆಗೆ ಆತನ ಸಾಧನಗಳು ಮತ್ತು ಅವುಗಳ ಬದಲಾವಣೆ ನಡೆದದ್ದು. ಬಹಳ ನಿಧಾವಾಗಿ ಕಲ್ಲಿನ ಆಯುಧದಿಂದ ಆಧುನಿಕ ಅಣು ಬಾಂಬ್ ಗೆ ಬೆಳೆದು ಬಂದ ತಾಂತ್ರಿಕತೆಯ ಕಾರಿತ್ರೆ ಇವನ್ನು ಸ್ಪಷ್ಟಪಡಿಸುತ್ತದೆ. ಆಫ್ರಿಕ, ಆಸ್ಟ್ರೇಲಿಯಾ ಖಂಡಗಳಲ್ಲಿ ಖನಿಜಗಳಿಗೆ ಕೊರತೆ ಇಲ್ಲದಿದ್ದರೂ ಸುಮಾರು ಹದಿನೆಂಟನೆಯ ಶತಮಾನದವರೆಗೆ ಅದರ ಬಳಕೆ ನಲವತ್ತಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿಗೆ ಗೊತ್ತೇ ಇರಲಿಲ್ಲ. ಅದೆಲ್ಲ ಬಿಳಿಯರ ಪಾಲಾಯಿತು, ನಂತರದಲ್ಲಿ.

ಜೇರ್ಡ್ ಡೈಮಂಡ್ ನ ವಾದವೆಂದರೆ ಮನುಷ್ಯನ ಅಸಮಾನತೆಗೆ ಭೂಗುಣ, ಆಹಾರ ಉತ್ಪಾದನಾ , ಹವಾಮಾನ ಮೂಲ ಸೂತ್ರ. ಇದರ ಫಲಿತಾಂಶವೇ ಬಂದೂಕುಗಳು, ಖಾಯಿಲೆಯ ಸೂಕ್ಷ್ಮಾಣು ಜೀವಿಗಳೂ ಮತ್ತು ಉಕ್ಕು. ಈ ಮೂರು ಯೂರೋಪಿಯನ್ನರ ಪ್ರಮುಖ ಅಸ್ತ್ರಗಳಾದವು.

ಈ ರೀತಿಯ ನಿಲುವಿಗೆ ಆತ ಬರಲು ಪ್ರಮುಖ ಕಾರಣ ಪಾಪುವಾ ನೂಗಿನಿಯಾದ ಬುಡಕಟ್ಟು ಜನಾಂಗದ ಯಾಲಿ. ಈ ಪುಸ್ತಕ ರಚನೆಗೆ ಜೇರ್ಡ್ ಮೂವತ್ತು24 ಮೂರು ವರ್ಷಗಳನ್ನು ಮುಡುಪಾಗಿಡಬೇಕಾಯಿತು. ಅಲ್ಲದೆ ಇಡೀ ಪ್ರಪಂಚವನ್ನು ಸುತ್ತಿ ವಿವಿಧ ಜನಾಂಗಗಳ ಅಧ್ಯಯನವನ್ನು ವಿವಿಧಶಾಸ್ತ್ರಗಳ ಅಂತರಶಾಸ್ತ್ರೀಯ ಜ್ಞಾನದಿಂದ ಪುರಾವೆ ಸಮೇತ ಮುಂದಿಟ್ಟ. ಈ ಕೃತಿಗೆ ಅನೇಕ ಬಹುಮಾನಗಳನ್ನು ಪಡೆದ ಜೇರ್ಡ್ ಡೈಮಂಡ್ ಈಗ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೂಗೊಳಶಾಸ್ತ್ರದ ಪ್ರಾಧ್ಯಾಪಕನಾಗಿದ್ದಾನೆ. ಈ ಕೃತಿಗೆ ಬಂದ ಪ್ರುಮುಖ ಬಹುಮಾನವೆಂದರೆ ಪ್ರತಿಷ್ಟಿತವಾದ ಪುಲ್ತ್ಜರ್ ಅವಾರ್ಡ್. ಈತನ ಇನ್ನೊಂದು ಪ್ರಮುಖ ಕೃತಿ ಎಂದರೆ ದಿ ಥರ್ಡ್ ಚಿಂಪಾಂಜಿ(೨೦೦೪). ಇದಕ್ಕೆ ಮೆಕಾರ್ಥರ್ ಬಹುಮಾನ ಬಂದಿದೆ. ಈ  ಕೃತಿಗಳನ್ನು ಈತ ಅತ್ಯಂತ ಕಳಕಳಿಯಿಂದ ರೇಸಿಸ್ಟ್ ಚರಿತ್ರೆಯನ್ನು ತಿರಸ್ಕರಿಸಿ ಸಾಮಾನ್ಯ ಮನುಷ್ಯನ ಚರಿತ್ರೆಯನ್ನೂ ಕೇಂದ್ರ ಮಾಡಿಕೊಂಡು ರಚಿಸಿದ್ದಾನೆ . ಚರಿತ್ರೆಗ್ ಒಂದು ವೈಜ್ಞಾನಿಕ ತಿರುವನ್ನು ನೀಡಿದ್ದಾನೆ.

ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ

ಅಸಲಿ ವಿದ್ವಾಂಸನ ಅಕ್ಷರವಿಲ್ಲದ ಚರಿತ್ರೆ

Tingalu – August 2009

೧೯೮೩ ರ ಡಿಸೆಂಬರ್ ತಿಂಗಳ ಚುಮುಚುಮು ಚಳಿಗಾಲ. ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ನಾಲ್ಕು ವಾರಗಳ ಕಾಲ’ ಸಂಜ್ಞಾಶಾಸ್ತ್ರ ಮತ್ತು ಸಂರಚನವಾದ ‘ದ ಅಂತರ್ರಾಷ್ಷ್ಟ್ರೀಯ ಶಿಬಿರ ಏರ್ಪಟಿಸಿತ್ತು . ವಿಶ್ವದ ದಿಗ್ಗಜ ಭಾಷಾಶಾಸ್ತ್ರಜ್ಞರು ಬಂದಿಳಿದ್ದಿದ್ದರು . ಅಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಯಾಗಿತ್ತು . ನಮ್ಮಂಥ ಕಿರಿಯರಿಗೆ ಬೌದ್ಧಿಕ ಹಬ್ಬ . ೮೦ ವರ್ಷದ ಋಷಿ ಸದೃಶ ಅಮೇರಿಕಾದ ಡೇವಿಡ್ ಸಾವನ್ , ಜರ್ಮನಿಯ ರೋಲಾನ್ಡ್ ಪೋಸ್ನರ್ . ಕೆನಡಾದ ಟೊರೊಂಟೋ ವಿಶ್ವವಿದ್ಯಾಲಯದ ಪಾಲ್  ಬ್ಯುಸ್ಸಾಕ್ , ಫ್ರಾನ್ಸಿನ ಕ್ರಾಮವೆಲ್, ಭಾರತದ ಅಶೋಕ ಕೇಲ್ಕರ್ , ಆರ್ .ಏನ್ .ಶ್ರೀವಾಸ್ತವ ಮುಂತಾದ ವಿದ್ವಾಂಸರ ಸಂಗಮವಾಗಿತ್ತು . ಇವರೆಲ್ಲರ ಜೊತೆಯಲ್ಲಿ ನಾವು ಬಹುನಿರೀಕ್ಷೆಯಲ್ಲಿದ್ದ ಮತ್ತೊಬ್ಬ ವಿದಾಂಸ ಫ್ರಾನ್ಸಿನ ಮಿಶೆಲ್ ಫುಕೋ ಬರಬೇಕಿತ್ತು. ಅವರು ಬುದ್ದಿಜೀವಿಗಳಲ್ಲೆಲ್ಲ ಅಗ್ರಗಣ್ಯರೆಂದು ಮಾನ್ಯರಾದವರು. ಅಮೇರಿಕಾದಲ್ಲಿ ಅವರ ಉಪನ್ಯಾಸಕ್ಕಾಗಿ ಅಕ್ಷರಶಃ ಸಾವಿರಾರು ಮಂದಿ ನೆರೆಯುತ್ತಿದ್ದರಂತೆ. ಅವರ ಬರುವಿಗಾಗಿ ಕಾಯುತ್ತಿದ್ದ ನಮಗೊಂದು ಆಘಾತಕರ ಸುದ್ದಿ ತಲುಪಿತು .

f1ಫುಕೋ ಬರುವುದಿಲ್ಲವಂತೆ, ಅವರಿಗೆ ಏಡ್ಸ್ ಸಂಬಂಧಿ ರೋಗ ತಗುಲಿದೆ ಅಂಬಾ ಸುದ್ದಿ, ಇದಾದ ಕೇವಲ ಆರು ತಿಂಗಳಿಗೆ ಅವರು ತೀರಿಕೊಂಡರೆಂಬ ಸುದ್ದಿ ತಲುಪಿತು. ಕೊನೆಗೂ  ನಮಗೇ ಅವರನ್ನು ನೋಡುವ, ಕೇಳುವ ಭಾಗ್ಯ ಸಿಗಲೇ ಇಲ್ಲ. ಈ ಮಿಶೆಲ್ ಫುಕೋ ಕೊನೆಯ ಉಸಿರೆಳೆದದ್ದು ೨೫ ಜೂನ್ ೧೯೮೪. ಒಂದು ಸಾಹಿತ್ಯಕೃತಿ ಎಂದರೆ ಅದು ತನ್ನೊಳಗೆ ಅರ್ಥವನ್ನು ಸೃಷ್ಟಿಸುವ ಪುಸ್ತಕವಲ್ಲ. ಅದು ಶುದ್ಧವಾದ ಪ್ರಜ್ಞೆಯನ್ನು ಮುಗ್ದವಾಗಿ ಹುದುಗಿಸಿಕೊಂಡಿರುವ ಪ್ರಪಂಚವಲ್ಲ. ಅದೊಂದು ಸಂಕೀರ್ಣ ಸಂಸ್ಕೃತಿಯ ಸಂದರ್ಭದಲ್ಲಿ ಹುಟ್ಟುವ ನೈಜಕ್ರಿಯೆ. ಅದನ್ನು ಹೇಗೆ ಸರಿಯಾಗಿ, ತಪ್ಪಾಗಿ ಓದುತ್ತೇವೆ ಅಥವಾ ಓದುವುದಿಲ್ಲ ಎಂಬುದು ಆ ಕ್ರಿಯೆಯ ಭಾಗ. ಯಾವ ಪಠ್ಯವೂ  ಅ-ರ್ರಾಜಕೀಯವಾಗಿರುವುದಿಲ್ಲ ಎಂದು ವಿಶ್ಲೇಷಿಸಿ ತೋರಿಸಿದವನು ಫುಕೋ . ಮಾನಸಿಕ ಅಸ್ವಸ್ಥತೆ ಭಾಷೆಯಲ್ಲಿ ಘಟಿಸುವ ಒಂದು ಅನುಭವ. ಮನುಷ್ಯನ ಸ್ವಭಾವಕ್ಕೆ ನಿಯಮಕ್ಕೆ ಮುಖಾಮುಖಿಯಾಗುವ ಕ್ರಿಯೆ. ಆದರೆ ಈ ಭಾಷೆಯನ್ನೂ ನಾವು ಕೇಳಿಸಿಕೊಂಡೆ ಇಲ್ಲ. ‘ಪ್ರತಿಯೊಬ್ಬ ಮನುಷ್ಯನೂ ಒಂದು ರೀತಿಯಲ್ಲಿ ಮಾನಸಿಕವಾಗಿ ಅಸ್ವಸ್ತನೆ. ನೂರಕ್ಕೆ ನೂರರಷ್ಟು ಸಹಜ ಸ್ಥಿತಿಯನ್ನು ಪಡೆಯುವ ಯತ್ನವೇ ಹುಚ್ಚುತನದ್ದು ಎಂದು ತನ್ನ ಮೊದಲ ಮೇರು ಕೃತಿ ‘ಡಿ ಹಿಸ್ಟರಿ ಆ ಮ್ಯಾಡ್ನೆಸ್ಸ್’ (೧೯೬೧)ನಲ್ಲಿ ವಿಶ್ಲೇಷಿಸಿದ್ದಾನೆ . ಇದು ‘ಜಾಣಹುಚ್ಚಾ’ಜಿ ಪರಿವರ್ತಿತವಾಗಿರುವದು ಕಲೆಯಲ್ಲಿ. ಭಾಷೆ ಅ -ಕಾರಣ ಬಡಬಡಿಕೆ ಎಂದು ತಿಳಿದರೆ ಅದು ಸಕಾರಣವಾಗಿದ್ದರೆ – ಸ್ವಾಭಾವಿಕ ಭಾಷೆ ಎಂದು ತಿಳಿಯುತ್ತೇವೆ.

ಚರಿತ್ರೆಯಲ್ಲಿ ‘ಹುಚ್ಚುದೊರೆ’ ಎಂದು ಕರೆಸಿಕೊಂಡಿದ್ದ ತುಘಲಕ್ ನಾಟಕದಲ್ಲಿ ಅತ್ಯಂತ ಕ್ರಿಯಾಶೀಲನಾದ, ಮಾದರಿ ರಾಜ್ಯವನ್ನು ಕಟ್ಟುವು ಹಂಬಲವುಳ್ಳ -ಆದರೆ ಅದರಲ್ಲಿ ಸೋಲುವ ಆತನ ಘನತೆ ಹೆಚ್ಚುವಂತೆ ಗಿರೀಶ್ ಕಾರ್ನಾಡ್ ಮಾಡಿದ್ದಾರೆ. ಇದು ಸಾಧ್ಯವಾಗಿರುವುದು ಕಾರ್ನಾಡರು ತುಘಲಕ್ನ ‘ಹುಚ್ಚು ಆಲೋಚನೆ’ಗೆ ಸಕಾರಣ ಸಂದರ್ಭವನ್ನು ಒದಗಿಸುವುದರಿಂದ .

ಇದೇ ರೀತಿ ಕಂಬಾರರು ಸಿರಿಸಂಪಿಗೆಯಲ್ಲ ದೇಹ ಮತ್ತು ಆತ್ಮದ ವಿಘಟನೆಯಿಂದಾಗುವ ಸಂವಾದವನ್ನು ಬೆಳೆಸಿದ್ದಾರೆ. ಆತ್ಮದ ಭಾಷೆ ಹುಚ್ಚನ ಭಾಷೆಯಂತೆ ಕಂಡುಬರುತ್ತದೆ. ತನ್ನ ತಾಯಿಯಿಂದ ಹಿಡಿದು ಎಲ್ಲರಿಗೂ ಅರ್ಥವಾಗದ ಕ್ರಿಯೆಯಾಗಿ ಭಾಷೆ ಅಭಿವ್ಯಕ್ತಗೊಂಡಿದೆ. ನಾಟಕದ ಕೊನೆಯಲ್ಲಿ ಈ ವಿಘಟನಾ ಭಾಷೆಗೆ ಅರ್ಥ ಸಿಕ್ಕಿ , ಅದುವರೆವಿಗೂ ಕಗ್ಗಂಟಾಗುವ ಭಾಷೆ ಸಾಮಾನ್ಯ ಭಾಷೆಯಾಗಿ ಕಾಣುತ್ತದೆ. ಅ -ಕಾರಣವಾದ ಭಾಷೆ ಸಕಾರಣ ಭಾಷೆಯಾಗಿ ಪರಿವರ್ತಿತವಾಗುತ್ತದೆ. ಇದೇ ರೀತಿ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯಲ್ಲಿ ‘ಮೂಕಜ್ಜಿಯ ಭಾಷೆ’ ಸಕಾರಣ ಭಾಷೆಯಾಗುತ್ತದೆ. ಆದ್ದರಿಂದ ‘ಹುಚ್ಚು ‘ ಎನ್ನುವುದು ಭಾಷೆಯಲ್ಲೇ ಆಗುವ ಅನುಭವವೆಂದು ಫುಕೋ ವಿಶ್ಲೇಷಿಸುತ್ತಾನೆ. ಮನುಷ್ಯ ತನ್ನ ಸ್ವಭಾವದ ನಿಯಮವನ್ನು ಯಾವಾಗಲಿ ಎದುರಿಸುತ್ತಿರುತ್ತಾನೆ. ಈ ನಿಯಮಾವಳಿಯಲ್ಲಿ ನಡೆಯುವ ತುಮುಲದಲ್ಲಿ ಹುಚ್ಚುತನ ತನ್ನ ಬಿಲ್ಲು ಬಾಣಗಳನ್ನು ಬತ್ತಳಿಕೆಯೊಳಗೆ ಇಟ್ಟುಕೊಂಡು ಬಿಟ್ಟಿತ್ತು . ‘ಹುಚ್ಚುತನ’ ಎಂಬುದು ಆಯಾ ಸಮಾಜದ, ಸಂಸ್ಕೃತಿಯ ವ್ಯಾಖ್ಯಾನವಾಗಿರುತ್ತದೆ. ೧೯ನೆ ಶತಮಾನದ ಆರಂಭದ ತನಕ ಮನುಷ್ಯ ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ನೋಡುತ್ತಿರಲಿಲ್ಲ. ಆದ್ದರಿಂದ ಫ್ರಾನ್ಸಿನಲ್ಲಿ ಹುಚ್ಚರನ್ನು ಹಿಡಿದು ಹಡಗನ್ನು ಹತ್ತಿಸಿ ಹತ್ತಿರದ ದ್ವೀಪಗಳಲ್ಲಿ ಬಿಟ್ಟು ಬರುತ್ತಿದ್ದರಂತೆ. ಮನುಷ್ಯ ನಾಗರೀಕನಾಗಿ ಅಭಿವೃದ್ದಿ ಹೊಂದುತ್ತಾಹೊಂದುತ್ತಾ ಪ್ರಕ್ರುತ್ಯಿಂದ ದೂರವಾಗಿದ್ದೆ ಇದಕ್ಕೆ ಕಾರಣ ಎನ್ನುತ್ತಾನೆ. ಫುಕೋ ಅಲ್ಲದೆ ಧರ್ಮ ಎನ್ನುವುದು(ಅದರಲ್ಲೂ ಕ್ರಿಶ್ಚಿಯನ್ ಧರ್ಮ) ಮನುಷ್ಯನನ್ನು ತಪ್ಪೊಪ್ಪಿಗೆ ಒಯ್ಯುವ ಪ್ರಾಣಿಯನ್ನಾಗಿಸಿತು ಎಂದು ವಿಶ್ಲೇಷಿಸಿದ್ದಾನೆ.

ಸಾಹಿತ್ಯವು ವ್ಯಾಕರಣದ ನಿಯಮದಿಂದ ಭಾಷೆಯನ್ನೂ ನಗ್ನ ಸತ್ಯದ ಕಡೆಗೆ ಕೊಂಡೊಯ್ಯಲು ತುಡಿಯುತ್ತಿರುವ ಶಕ್ತಿ. ಅದು ಇನ್ನೂ ಪಳಗಿಸದ ಅನುಭವದೊಡನೆ ಗುದ್ದಾಡುತ್ತಿರುತ್ತದೆ. ಪ್ರತಿ ಪಟ್ಯ ರಚನೆಯಾಗುವಾಗಲು ಈ ಗುದ್ದಾಟ ಗೋಚರಿಸುತ್ತರಿತ್ತದೆ ಎಂದು ಬಾಲ್ಜಾಕ್, ಟಾಲ್ಸ್ಟಾಯ್ ಇವರ ಕೃತಿಗಳ ವಿಶ್ಲೇಷಣೆಯಿಂದ ತೋರಿಸಿಕೊಟ್ಟಿದ್ದಾನೆ ಫುಕೋ.

ಜ್ಞಾನದ ಉತ್ಖನನ ಹೊಸ ಚಾರಿತ್ರಿಕತೆ:

ಫುಕೋ ಮೂರನೇ ತರಗತಿಯಲ್ಲಿದ್ದಾಗ ತನ್ನ ಟೀಚರನ್ನು ‘ಗುಟ್ಟಾದ ಜ್ಞಾನ’ ಅಂದರೇನು ಎಂದು ಪ್ರಶ್ನಿಸಿದ್ದ. ಅದಕ್ಕೆ ‘ಈಗ ನಿನಗೆ ಅದು ಅರ್ಥವಾಗುವುದಿಲ್ಲ. ಹೈಸ್ಕ್ಕೂಲಿಗೆ ಹೋದಾಗ ಗೊತ್ತಾಗುತ್ತದೆ’ ಎಂಬ ಉತ್ತರ ಬಂದಿತ್ತು. ಹೈಸ್ಕ್ಕೂಲಿನಲ್ಲಿ ಕೇಳಿದಾಗ ಕೊನೆ ವರ್ಷದಲ್ಲಿ ಗೊತ್ತಾಗುತ್ತದೆ ಎಂಬ ಉತ್ತರ ಬಂತು. ಅಲ್ಲೂ ಅವನಿಗೆ ಗೊತ್ತಾಗಲಿಲ್ಲ. ಕಾಲೇಜಿನಲ್ಲಿ ಕೇಳಿದಾಗ ‘ದರ್ಶನ ಶಾಸ್ತ್ರ’ ಓದು ಆಗ ಗೊತ್ತಾಗುತ್ತದೆ ಎಂದರು . ಹೀಎಗೆ ಜ್ಞಾನದ ಮೂಲ ಏನು ಎಂಬ ಪ್ರಶ್ನೆ ಅವನನ್ನು ಜೀವಮಾನವಿಡೀ ಕಾಡಿತು. ಅದಕ್ಕಾಗಿ ಆಟ ಹುಡುಕಾಡತೊಡಗಿದ. ಇದರ ಪರಿಣಾಮವೇ ಆಟ ನಡೆಸಿದ್ದು ‘ಜ್ಞಾನದ ಉತ್ಖನನ’ವನ್ನು ಮನುಷ್ಯ ನಡೆಸಿಕೊಂಡು ಬಂದ ಜ್ಞಾನದ ಬೆಳವಣಿಗೆಯ ದಾರಿಯನ್ನು ಹುಡುಕಾಡತೊಡಗಿದ. ಇದರ ಪರಿಣಾಮವಾಗಿ ಆತ ರಚಿಸಿದ ಪುಸ್ತಕ ‘’.

f2ಚರಿತ್ರೆಯ ಸೃಷ್ಟಿಯಲ್ಲಿ ಮನುಷ್ಯನ ಪಾತ್ರವೇನು ಎಮ್ಬ ಪ್ರಶ್ನೆಯನ್ನು ಫುಕೋ ಹಾಕಿಕೊಂಡ. ಮಾಮೂಲಿ ‘ಚರಿತ್ರೆ’ಯಾ ಪರಿಕಲ್ಪನೆಯು ಕೆಲವು ಸಮಸ್ಯೆಗಳನ್ನು ಒಡ್ಡಿದವು. ಮೊದಲನೆಯದು ಕಾಲಕ್ರಮನಿಕೆಯಲ್ಲಿ ಬಿಡಿಬಿಡಿಯಾಗಿ ಘಟನೆಗಳ ಸರಮಾಲೆ ಎಂದು ವಿಂಗಡಿಸುವುದು. ಅದರಲ್ಲಿ ಒಂದಕ್ಕೊಂದು ಸಂಬಧವನ್ನು ಕಾಣದಿರುವುದು. ಈ ಚರಿತ್ರೆಕಾರನು ಅಸಂಬದ್ಧ ಘಟನೆಗಳನ್ನು ಸುಸಂಬದ್ದ ಮಾಡುವ ಕ್ರಿಯೆಯಲ್ಲಿ ತೊಡಗುತ್ತಾನೆ. ಅಂದರೆ ಕಾರ್ಯಕಾರಣೀ ಸಂಬಂಧವನ್ನು ಕಲ್ಪಿಸಲು ಪ್ರಯತ್ನಿಸುತ್ತ್ತಾನೆ. ಅದು ಯಾವ ವಿನ್ಯಾಸದಲ್ಲಿ ವಿಶ್ಲೇಷಿಸಲ್ಪಡಬೇಕೆಂದು ಹುಡುಕಾಟ ನಡೆಸುತ್ತಾನೆ. ಅಂದರೆ ನಿರಂತರತೆಯನ್ನು ಗುರುತಿಸುವ ಪರಿಪಾಟಲಲ್ಲಿ ತೊಡಗುತ್ತಾನೆ.

ಫುಕೋ ಕಾಲಕ್ರಮನಿಕ ಚರಿತ್ರೆಯು ಚಾರಿತ್ರಿಕ ಅರ್ಥ, ಲೋಕದೃಷ್ಟಿ , ನಾಗರೀಕತೆ ಇವುಗಳನ್ನು ಏಕಕೇಂದ್ರದಲ್ಲಿ ಬಂಧಿಸಲು ಪ್ರಯತ್ನಿಸುತ್ತದೆ. ಇದನ್ನು ಮಹಾಯುಗಗಳಾಗಿ ವಿಭಾಗಿಸಿ ನೋಡಲು ಪ್ರಯತ್ನಿಸುತ್ತದೆ.ಆರ್ಥಿಕ , ರಾಜಕೀಯ, ಸಾಂಸ್ಕೃತಿಕ ಮುಂತಾದ ಚರಿತ್ರೆಗಳನ್ನೆಲ್ಲ ಒಂದೇ ಚೀಲದಲ್ಲಿ ತುರುಕಲು ಪ್ರಯತ್ನಿಸುತ್ತದೆ ಎಂದು ವಿಶ್ಲೇಷಿಸಿದ. ಆದ್ದರಿಂದ ಚರಿತ್ರೆ ಘಟನಾವಳಿಗಳ ಚರಿತ್ರೆಯಾಗಬಾರದು. ಚರಿತ್ರೆಯು ಮಾನವನ ಮನಸ್ಸಿನ ಚರಿತ್ರೆಯಾಗಬೇಕು. ಆ ಚರಿತ್ರೆ ಕಾಲಾನುಕ್ರಮದ ಬೆಳವಣಿಗೆಯಲ್ಲಿ ಸಿಗುವುದಿಲ್ಲ. ನಾವೆಲ್ಲಾ ಈಗ ಬರೆದಿರುವುದು ಅಕ್ಷರ ಬಲ್ಲವರ ಚರಿತ್ರೆ, ಅಕ್ಷರದಲ್ಲಿ ಹಿಡಿದಿಟ್ಟಿಲ್ಲದ ಚರಿತ್ರೆ ಅಕ್ಷರ ಚರಿತ್ರೆಗಿಂತ ಎಷ್ಟೋ ಪಟ್ಟು ದೊಡ್ಡದು. ಇದನ್ನು ಅರಿಯಬೇಕಾದರೆ ಮತ್ತೆ ನಾವು ಕಥಾನಕಗಳಿಗೆ ಮರಳಬೇಕು. ವಿವಿಧ ಕೇಂದ್ರಗಳಲ್ಲಿ ನಿಂತು ನೋಡಿದಾಗ ಒಂದೇ ಘಟನೆಗೆ ವಿವಿಧ ಅರ್ಥ , ಲೋಕದೃಷ್ಟಿ , ಸ್ಥಾನ ಇರುತ್ತವೆ ಎಂದು ವಿಶ್ಲೇಷಿಸಿದ . ಅದಕ್ಕಾಗಿ ಅವನು ‘ಜ್ಞಾನದ ಉತ್ಖನನ’ ಎಂದು ಕರೆದ. ಇದರ ಪರಿಣಾಮವೇ ಎಡ್ವರ್ಡ್ ಸೈದನ ‘ಒರಿಯಂಟಲಿಸಂ’ ಭಾರತದಲ್ಲಿ ದಮನಿತರ (ಸಬಾಲ್ಟ್ರನ್) ಅಧ್ಯಯನ ಪ್ರಾರಂಭವಾಯಿತು . ಪ್ರಪಂಚದಲ್ಲಿರುವ ಅನಂತ ಪಟ್ಯಗಳ ವಿವಿಧ ಧ್ವನಿಗಳು ಕೇಳಿಸಲು ಪ್ರಾರಂಭವಾಯಿತು. ಈತ ಸಾವರ್ತಿಕತೆಯನ್ನು ತಿರಸ್ಕರಿಸಿ ಸ್ಥಳೀಯತೆಯನ್ನು ಅರಿವಿನ ಮುಂಚೂಣಿಗೆ ತಂದುಕೊಟ್ಟನು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಒಂದು ಉತ್ತಮ ಉದಾಹರಣೆ. ಇಲ್ಲಿ ಮರುಳು ಮೂಕಜ್ಜಿ ಕೊಡುವ ಚರಿತ್ರೆ ದಿನಾಂಕಗಳುಳ್ಳ, ಬೆಳವಣಿಗೆಯ ಇತಿಹಾಸವಲ್ಲ. ಇಲ್ಲಿ ಸಾಮಾಜಿಕ , ಆರ್ಥಿಕ, ಸಾಂಸ್ಕೃತಿಕ, ಲೈಂಗಿಕ ನಡಾವಳಿಯ ಚರಿತ್ರೆ ಬಿಚ್ಚಿಕೊಳ್ಳುತ್ತದೆ. ಹೆಚ್ಚು ಕಡಿಮೆ ಹೆಣ್ಣಿನ ಲೈಂಗಿಕಾತ್ಮತೆಯ ಚರಿತ್ರೆಯಂತೂ ಒಂದು ರೀತಿಯಲ್ಲಿ ರೂಪಕಾತ್ಮಕವಾಗಿ ಮರಳಿ ಮರಳಿ ಬರುವ ಸಾಂಕೇತಿಕವಾಗಿದೆ. ಆದಿಮಾನವ ಇನ್ನೊಂದು ಬಳಿಯಿಂದ ಹೊತ್ತುತಂದ ಹೆಣ್ಣಿನ ಲೈಂಗಿಕಾತ್ಮತೆಗೂ , ಸುಬ್ಬರಾಯನ ಸ್ನೇಹಿತನ ಜನ್ನನ ಲೈಂಗಿಕಾತ್ಮತೆಗೂ ವ್ಯತ್ಯಾಸವೇನಿಲ್ಲ. ಅಂದಿನ ಹೆಣ್ಣಿಗೆ ಅಲಂಕಾರಕ್ಕೆ ಇದ್ದ ಒಡವೆಯ ಆಸೆ ಇಂದಿನ ಹೆಣ್ಣಿನಲ್ಲೂ ಹುದುಗಿರುವುದು ಕಾಲದಿಂದಲೂ ಬಂದಿದ್ದೆ. ರಾಜಕೀಯ ಶಕ್ತಿಯಿಂದ, ಬಲಪ್ರಯೋಗದಿಂದ ಬದಲಾಗುತಿದ್ದ ಒಂದನ್ನು ಮೆಟ್ಟಿ ಇನ್ನೊಂದನ್ನು ಸ್ಥಾಪಿಸುವುದು. ನಾಗಿ ಲೈಂಗಿಕ ದೌರ್ಜನ್ಯ ಒಳಗಾಗುವುದು. ಆದರೂ ಅವಳ ಗಂಡ ರಾಮಣ್ಣ ಅವಳನ್ನು ಪ್ರೀತಿಸುವುದು, ಲೈಂಗಿಕತೆಯ ಅನುಭವದಿಂದ ವಂಚಿತಳಾಗೆ ಉಳಿಯುವ ಮೂಕಜ್ಜಿ. ಈ ಎಲ್ಲ ಚರಿತೆಯೂ ಮನುಷ್ಯನ ಇತಿಹಾಸದ ಚರಿತ್ರೆಯಾಗಿ ರೂಪುಗೊಳ್ಳುವುದು .ಮತ್ತು ಮೂಕಜ್ಜಿ ಮೂಲಕ ಇತಿಹಾಸದ ಒಡಪು ಬಿಚ್ಚಿಕೊಳ್ಳುವುದು. ಇವೆಲ್ಲ ದಿನಾಂಕ ಕಾರ್ಯಾ-ಕಾರಣಿ ಸರ್ಪಲಿಯುಲ್ಲ ಚರಿತ್ರ್ಯಲ್ಲ. ಇಲ್ಲಿ ಕಾರಂತರು ನಡೆಸುತ್ತಿರುವದು ಮನಸ್ಸಿನ ಚರಿತ್ರೆ. ಇದನ್ನೇ ಫುಕೋ ‘ಜ್ಞಾನದ ಉತ್ಖನನ’ ಎಂದು ಕರೆಯುವುದು.

ಇಲ್ಲಿ ಮತ್ತೊಂದು ಮಹತ್ವ ಪೂರ್ಣ ಅಂಶವೆಂದರೆ ಮೂಕಜ್ಜಿಯನ್ನು ‘ಮರುಳು’ ಎಂದು ಊರಿನ ಜನರೆಲ್ಲಾ ಭಾವಿಸುವುದು . ಆದರೆ ಆ ‘ಮರುಳಿ’ಗೆ ಅರ್ಥ ಸಿಗುವುದು ಮೂಕಜಿ ಮತ್ತು ಅವಳ ಮೊಮ್ಮಗ ಸುಬ್ಬರಾಯ ಇಬ್ಬರೀ ಸೇರಿ ನಾಲ್ಕೈದು ಸಾವಿರ ವರ್ಷಗಳಿಂದ ಹರಿದು ಬಂದ ‘ಸೃಷ್ಟಿ ಸಮಸ್ಯೆ’ಯೊಂದನ್ನು ಮಥಿಸಳು ಇಲ್ಲಿ ಯತ್ನಿಸುವುದು. ಅವಾಸ್ತವಿಕವೆನಿಸುವ ಅಜ್ಜಿ, ಅನೇಕ ವಾಸ್ತವಿಕ ಇತಿಹಾಸಾಮ್ಶಗಳನ್ನು ತನ್ನ ಒಳದಿಳಿವಿನಿಂದ ನಮ್ಮ ಮುಂದಕ್ಕೆ ಇರಿಸುವುದು.

ತಂತಮ್ಮ , ಅಪಕ್ವ ನಂಬುಗೆಗಳನ್ನು ಪರರ ಮೇಲೆ ಹೊರಿಸಿದ ಜನ ಕಥೆಯೂ ಇಲ್ಲಿದೆ. ಆದ್ದರಿಂದಾಗಿ ಇಂದಿನ

ನಮಗೆ ಕೇಳಿಸದೆ ಹೋದ ಕೆಲವು ಯಾತನೆಯ ಧ್ವನಿಗಳನ್ನು ಕೇಳುವಂತೆ ಮಾಡುತ್ತವೆ. ಈ ಮಾತುಗಳು ಫುಕೋನ ಹೊಸ ಚಾರಿತ್ರಿಕತೆಗೆ ಸಂವಾದಿಯಾದ ಮಾತುಗಳು. ಅಲ್ಲದೆ ಸತ್ಯಕ್ಕೆ ಒಂದು ಮುಖದಲ್ಲಿರಿವುದಿಲ್ಲ. ನಾನ ಮುಖಗಳಿರುತ್ತವೆ ಎಂಬ ಪ್ರಮುಖ ಅರಿವನ್ನು ತಂದುಕೊಡುತ್ತದೆ.

ಸಂವಾದ ಅಧಿಕಾರ ಮತ್ತು ಜ್ಞಾನ                                                                                                    

ನಾವು ಈ ಕಾಲದಲ್ಲಿ ನಿಂತು ನಡೆಸುವ ಅನುಸಂಧಾನವೆಲ್ಲ ಒಂದರ್ಥದಲ್ಲಿ ಭೂತಕಾಲದೊಡನೆ ನಡೆಸುವ ಸಂವಾದವೇ ಆಗಿರುತ್ತದೆ. ಆದ್ದರಿಂದ ಇಲ್ಲಿ ಸಂವಾದ ಎಂದರೆ ಪರಂಪರೆ ಎಂದೇ ತಿಳಿಯಬಹುದು.

ಅಧಿಕಾರ ಅಥವಾ ಪ್ರಭುತ್ವ ಎಂಬುದು ಅರಮನೆಯಲ್ಲೋ, ವಿಧಾನ ಸೌಧದಲ್ಲೋ , ಲೋಕಸಭೆಯಲ್ಲೋ ಕೇಂದ್ರೀಕೃತವಾಗಿರುವುದಿಲ್ಲ. ಅದು ಒಂದು ರೀತಿಯಲ್ಲಿ ಸರ್ವಾಂತರ್ಯಾಮಿ ಎಂದು ಫುಕೊಗೆ ವಿಶ್ಲೇಷಿಸುತ್ತಾನೆ. ಅಧಿಕಾರ ಗದ್ದುಗೆ ಏರುವುದರಲ್ಲಿ ಇಲ್ಲ. ಅದನ್ನು ನಿಭಾಯಿಸುವುದರಲ್ಲಿ ಮೇಲೆ ನಿಂತಿರುತ್ತದೆ. ಎಲ್ಲಾ ಜ್ಞಾನ ಶಾಖೆಗಳು ತಾರತಮ್ಯಗಳ ಮೇಲೆ ನಿಂತಿರುತ್ತದೆ. ಅಧಿಕಾರ ಯಾವಾಗಲೂ ಈ ತಾರತಮ್ಯಗಳನ್ನು ಬಳಸಿಕೊಂಡು ಸಮಾಜವನ್ನು ನಿರ್ಮಿಸುತ್ತವೆ. ಅದಕ್ಕೆ ತಕ್ಕ ಜ್ಞಾನವನ್ನು ಸೃಷ್ಟಿಸಿಕೊಳ್ಳುತ್ತದೆ.

ಅಧಿಕಾರ ನ್ನುವುದು ರಾಜಕೀಯ , ಧಾರ್ಮಿಕ, ಆರ್ಥಿಕ, ಸಾಮಾಜಿಕ ನೆಲೆಗಳೆಲ್ಲಾ ಸೂಕ್ಷ್ಮ ಶಕ್ತಿಯಾಗಿ ಕೆಲಸ ಮಾಡುತ್ತಿರುತ್ತದೆ. ಅಧಿಕಾರ, ಜ್ಞಾನ, ಲೈಂಗಿಕತೆಯ ಚಲಾವಣೆಯ ಬಗ್ಗೆ ಫುಕೋನ ಅರ್ಥದಲ್ಲಿ ಅರಿಯಬೇಕಾದರೆ ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು.

‘ಸಂಸ್ಕಾರ’ ಪರಂಪರಾಗತ ಮೌಲ್ಯವಾಗಿ ನಡೆದುಕೊಂಡು ಬಂದ, ಧಾರ್ಮಿಕ, ಆರ್ಥಿಕ, ಲೈಂಗಿಕ ವಿಷಯದ ಮೇಲಿನ ಸಂವಾದ, ಪ್ರತಿಕ್ರಿಯೆ ಮತ್ತು ವ್ಯಾಖ್ಯಾನ. ಇವೆಲ್ಲಕ್ಕೂ ಕೇಂದ್ರವೆಂದರೆ ಧರ್ಮ ಕೇಂದ್ರಿತ ಅಧಿಕಾರ. ಅದು ಸೃಷ್ಟಿಸಿದ ಜ್ಞಾನ ಮತ್ತು ನಿರೂಪಿಸಿದ ಸಾಮಾಜಿಕ, ಸಾಂಸ್ಕೃತಿಕ ನಿಯಮಗಳು ಮತ್ತು ಅವುಗಳ ಉಲ್ಲಂಘನೆ. ಪ್ರಾಣೆಶಾಚಾರ್ಯ ಕಾಶಿಗೆ ಹೋಗಿ ವೇದಾಧ್ಯಯನ ಮಾಡಿ ಧಾರ್ಮಿಕ ಚರ್ಚೆಯಲ್ಲಿ ಅನೇಕ ವಿದ್ವಾಂಸರನ್ನು ಸೋಲಿಸಿ ಪ್ರಶಸ್ತಿಗಳಿಸಿಕೊಂಡು ಬಂದಿರುವ ಜ್ಞಾನಿ. ಧಾರ್ಮಿಕ ನಿಯಮಗಳನ್ನು ಪಾಲಿಸಿ ಮುಂದಿನ ಪೀಳಿಗೆಗೆ ಅದನ್ನು ಅನುಸರಿಸಿಕೊಂಡು ಹೋಗುವಂತೆ ಪರಂಪರೆಯನ್ನು ರೂಢಿಸುತ್ತಿರುವವರು. ಧಾರ್ಮಿಕ ಸಂಸ್ಥೆ ಕೇವಲ ಜ್ಞಾನದ ವಾಹಿನಿಯಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಇಂದ್ರಿಯ ಮತ್ತು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದನ್ನೂ ಕಲಿಸುತ್ತದೆ.  ಇದನ್ನೇ ಫುಕೊದ ಸೂಕ್ಷ್ಮ ಅಧಿಕಾರ ಎಂದು ಕರೆಯುತ್ತಾನೆ. ಆತನ ಪ್ರಕಾರ ಅಧಿಕಾರ ಎಂಬುದು ಎಲ್ಲೆಲ್ಲೂ ಇರುತ್ತದೆ. ಇದರ ಪರಿಣಾಮವಾಗಿ ಆಚಾರ್ಯರು ತಮ್ಮ ದೇಹವನ್ನು ಲೈಂಗಿಕದಂಡನೆಗೆ ಒಪ್ಪಿಸಿಕೊಳ್ಳುವುದು ಒಂದು. ಅವರ ನಾನ, ತಿಳುವಲಿಕೀ ಅವರಿಗೆ ಅಗ್ರಹಾರದಲ್ಲಿ ಉನ್ನತ ಸ್ಥಾನಕೊಟ್ಟು ಮನ್ನಣೆ ಮಾಡಿರುತ್ತದೆ. ಆಚಾರ್ಯರು ಹಣವಂತರಲ್ಲದಿದ್ದರೂ ಧಾರ್ಮಿಕ ಅಧಿಕಾರ ಪದೆದವಾರು. ಇದಕ್ಕೆ ತದ್ವಿರುದ್ದವಾಗಿರುವವನು ನಾರಣಪ್ಪ. ಕುಡುಕ, ವಿಷಯಲಂಪಟ , ಸೂಳೆ ಚಂದ್ರಿಯನ್ನು ಅಗ್ರಹಾರದ ತನ್ನ ಮನೆಯಲ್ಲೇ ತಂದು ಇಟ್ಟುಕೊಂಡಿರುವವನು. ಆ ಸಮಾಜದ ಕಟ್ಟುಕಟ್ಟಳೆಯನ್ನು ಮೀರಿದವನು, ರಸಿಕ ಇತ್ಯಾದಿ. ಯಾವುದೇ ಧರ್ಮವೂ ತಾನು ವಿಧಿಸಿದ ನಿಯಮವನ್ನು ಮೀರಿದರೆ ಅಂಥವರನ್ನು ಶಿಕ್ಷಿಸುವ ಅಧಿಕಾರವನ್ನು ಹೊಂದಿರುತ್ತದೆ. ಆದರೆ ಇಲ್ಲಿಯ ಸಂದಿಗ್ಧತೆ ಎಂದರೆ ಹಾಗೇನಾದರೂ ಮಾಡಿದರೆ ತಾನು ಮುಸಲ್ಮಾನನಾಗುವೆ ಎಂದು ನಾರಣಪ್ಪ ಹೆದುರುವುದು. ಇದರಿಂದ ಅವನನ್ನು ಆತಿಯಿಂದ ಹೊರಗಿಡಲು ಸಾಧ್ಯವಾಗುವುದಿಲ್ಲ. ಅವನು ಸತ್ತಾಗ ಸಂಸ್ಕಾರದ ಸಮಸ್ಯೆ ಉಧ್ಬವವಾಗುವುದು ಈ ಕಾರಣದಿಂದ, ಲೈಂಗಿಕಾತ್ಮಕತೆಯಿಂದ.ಅಗ್ರಹಾರದ ಬ್ರಾಹ್ಮಣರು ಯಾರೂ ಅವನ ಸಂಸ್ಕಾರ ಮಾಡಲು ಮುಂದಾಗುವುದಿಲ್ಲ. ಇಂಥಹ ಸ್ಥಿತಿಯಲ್ಲಿ ಧರ್ಮಶಾಸ್ತ್ರ ಏನು ಹೇಳುತ್ತದೆಯೆಂದು ಎಲ್ಲಾ ಸಮಸ್ಯೆ. ಇದರ ಸುತ್ತಲೇ ನಡೆಯುತ್ತಿದ್ದ ಸಂವಾದ ಚಂದ್ರಿಯು ತನ್ನ ಮೈಮೇಲೆ ಇದ್ದ ಒಡವೆಯೆನ್ನೆಲ್ಲಾ ಕಳಚಿ ಆಚಾರ್ಯರ ಮುಂದಿಟ್ಟಾಗ  ಇಲ್ಲಿ ಚಂದ್ರಿಗೂ , ಅಗ್ರಹಾರದ ಬ್ರಾಹ್ಮಣರಿಗೂ ಯಾವುದೇ ಸಂವಾದ ನಡೆಯುವುದಿಲ್ಲ. ಆದರೆ ಈ ಮೌನ ಪ್ರತಿಕ್ರಿಯೆ ಅಗ್ರಹಾರದ ಬ್ರಾಹ್ಮಣರ ಸಂವಾದವನ್ನೇ ತಿರುವು ಮುರುವು ಮಾಡುತ್ತದೆ. ಆಚಾರ್ಯರು ಧರ್ಮಶಾಸ್ತ್ರಾದ ಮೊರೆ ಹೋಗುತ್ತಾರೆ. ಉತ್ತರ ಸಿಗುವುದಿಲ್ಲ. ಆಚಾರ್ಯರ ಜ್ಞಾನ ಸಂಪತ್ತಿಗೆ ಇದೊಂದು ದೊಡ್ಡ ಸವಾಲಾಗುತ್ತದೆ.

ಚಂದ್ರಿಯ ಜೊತೆ ಅಚಾನಕ್ಕಾಗಿ ಆದ ಲೈಂಗಿಕ ಸಂಬಂಧದಿಂದ ಆಚಾರ್ಯರ ಇಡೀ ಜೀವನದೃಷ್ಟಿ , ತಪಸ್ಸು , ಲೈಂಗಿಕ ಹಿಡಿತ, ಜ್ಞಾನಾರ್ಜನೆ ಎಲ್ಲವೂಉ ಮುರಿದುಬಿದ್ದು ಇವರೂ ನಾರಣಪ್ಪನೇ ಆಗಿಬಿಡುತ್ತಾರೆ. ಅಗ್ರಹಾರದ ಯಾರಿಗೂ ಇವರು ಉತ್ತರ ಕೊಡುವ ಶಕ್ತಿಯನ್ನೇ ಕಳೆದುಕೊಂಡುಬಿಡುತ್ತಾರೆ . ಇಲ್ಲಿ ಅವರ ಮಾತು / ಭಾಷೆ ಸೋಲುತ್ತದೆ. ಹೆಂಡತಿ ಸಾಯುತ್ತಾಳೆ. ಕೊನೆಗೆ ನಾರಣಪ್ಪನ ಹೆಣದ ಸಂಸ್ಕಾರವಿರಲಿ, ತಮ್ಮ ಧರ್ಮದಂತೆ ಯಾವ ಸಂಸ್ಕಾರವನ್ನೂ ಪಾಲಿಸಲಾಗದೆ ಇವರೇ ನಾರಣಪ್ಪನಾಗಿ ಬಿಡುತ್ತಾರೆ.

ಇಷ್ಟೇ ಅಲ್ಲ. ಇಲ್ಲಿ ಮುಂದಿನ ಸಂವಾದ ನಡೆಯುವುದೇ ಇಲ್ಲ. ಭಾಷೆ ಮೂಕವಾಗುತ್ತದೆ. ಆಲೋಚನೆಗೆ ಅಂತ್ಯ ಒದಗುತ್ತದೆ. ಒಂದು ವ್ವ್ಯವಸ್ಥೆ ನಾಶವಾಗಿ ಇನ್ನೊಂದು ವ್ಯವಸ್ಥೆ ಹುಟ್ಟುವಾಗಿನ ಸಂದಿಗ್ದ ಹಾಗೆಯೇ ಉಳಿಯುತ್ತದೆ , ಮೌನವಾಗುತ್ತದೆ.  ಹೀಗೆ ಮೌಲ್ಯ, ಪಲ್ಲಟವಾಗುವಾಗ ಹೊಸ ಭಾಷೆಯ ಹೊಸ ಸಂವಾದದ ಶೂನ್ಯ ಆವರಿಸುತ್ತದೆ.

ಮಠ ಮಾತ್ರ ನಾರಣಪ್ಪನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ – ಬ್ರಾಹಮನರ ಅಹವಾಲನ್ನು ಕೇಳದೆ ಇಲ್ಲಿ ಉಳಿದ ಬ್ರಾಹ್ಮಣರ ಮಾತು ಮಠದ ಶಕ್ತಿಗೆ ಹೋಲುತ್ತದೆ. ಹೀಗೆ ಒಂದೊಂದು ಸಂವಾದದ ಸೋಲಾಗಿ ಕೊನೆಗೊಳ್ಳುತ್ತದೆ. ಮಾತನ್ನು ಮೌನವಾಗಿಸುತ್ತದೆ. ಕಾದಂಬರಿಯಲ್ಲಿ ಆಚಾರ್ಯರು ಅಧಿಕಾರ ಚಲಾಯಿಸಲು ಸಾಧ್ಯವಾಗುವುದೇ ಇಲ.

f3ಫುಕೋ ಪ್ರಕಾರ ಎಲ್ಲಾ ಅಧಿಕಾರ ಸಂಸ್ಥೆಗಳೂ ಅಧಿಕಾರ, ಜ್ಞಾನ ಮಾತು ಲೈಂಗಿಕತೆಯ ಸಂವಾದದ ಮೇಲೆ ನಿಂತಿರುತ್ತವೆ. ಅದು ರಾಜಕೀಯ, ಧಾರ್ಮಿಕ, ಶೈಕ್ಷಣಿಕ , ಸಾಮಾಜಿಕ, ಲೈಂಗಿಕ (ಮದುವೆ, ಮನೆ, ಯಜಮಾನ ಇತ್ಯಾದಿ) ಈ ಎಲ್ಲಾ ಸಂಸ್ಥೆಗಳಲ್ಲೂ  ಕೆಲಸ ಮಾಡುತ್ತಿರುತ್ತದೆ ಎಂದು ಹೇಳುವುದು ಇಂಥ ಸಂಧರ್ಭದಲ್ಲೇ. ದಮನಕ್ಕೊಳಗಾದವರು ದಮನಿಸುವವರಿಗೆ ಅವರ ಅಧಿಕಾರಕ್ಕೆ ತಿರುಗೇಟು ಕೊಡುತ್ತಿರುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ದೇವನೂರರ ಒಡಲಾಳ, ಶೈಶೂಕ ವರ್ಗದ ಎತ್ತಪ್ಪನ ಅಧಿಕಾರ/ ಬಲ ಮತ್ತು ಪ್ರಭುತ್ವದ ಪೋಲಿಸ್ ಬಲ ಎರಡೂ ಒಟ್ಟಿಗೆ ಪ್ರಯೋಗವಾದರೂ ಕಡೆಗೆ ಅವೆರಡನ್ನೂ ಎದುರಿಸಿ ಇಬ್ಬರಿಗೂ ಕೈಕೊಡುವು ರೀತಿ ಯಾವುದೇ ಅಧಿಕಾರ/ಬಲವನ್ನು ಮಾಡುವ ರೀತಿ ಉತ್ತಮ ಉದಾಹರಣೆ. ಅಂತೆಯೇ ಕುಸುಮಬಾಲೆಯಲ್ಲಿ ಗಾರೆ ಸಿದ್ದ ಮಾವ ತನ್ನನ್ನು ಥಳಿಸಿ ದಂಡ ಹಾಕಿವರಿಂದಲೇ ದಂಡ ವಸೂಲಿ ಮಾಡಿಕೊಳ್ಳುವ ಕ್ರಮ ಒಂದು ಅಧಿಕಾರವನ್ನು ವ್ಯಂಗ ಮಾಡುವ ಕ್ರಮ. ಹೀಗೆ ದಮನಿತರ ಅಧಿಕಾರ ಧಿಕ್ಕಾರ ಪ್ರತಿಭಟನೆಯಾಗಿ ಸಮಾಜದಲ್ಲಿ ಹೊಮ್ಮುತ್ತದೆ.

ಫುಕೋನ ಲೈಂಗಿಕಾತ್ಮಕತೆಯ ಮೇಲೆ ಬರೆದ ‘ಹಿಸ್ಟರಿ ಆಫ್ ಸೆಕ್ಶುವಾಲಿಟಿ’ ಹೆಣ್ಣಿನ ಬಿಡುಗಡೆಯ ಹಾದಿಯೆಡೆಗೆ ಹೊಸ ದಿಕ್ಕಿನಲ್ಲೂ ಕೊಂಡೊಯ್ಯುತ್ತದೆ . ಮನುಷ್ಯನು  ಬಂಧನದಿಂದ ಬಿಡುಗಡೆಯ ಕಡೆಗೆ ಕೊಂಡೊಯ್ಯುವ ಮಾರ್ಗದರ್ಶಕನಾಗಿ  ಹೊಸ ಮನುಷ್ಯನನ್ನು ಸೃಷ್ಟಿಸುವ ಕಡೆಗೆ ತುಡಿಯುವಂತೆ ಮಾಡುವ ದಾರ್ಶಿಕನಾಗಿ ಫುಕೋ ಮಾಡಿದ್ದಾನೆ.

ಈ ಮಿಷೆಲ್ ಫುಕೋ ಹುಟ್ಟಿದ್ದು ೧೫ ನೇ ಅಕ್ಟೋಬರ್ ೧೯೨೬ರಂದು. ಫ್ರಾನ್ಸಿನ ಪಾಯಿಟಲ್ಸ್ ಎಂಬ ಊರಲ್ಲಿ. ಈತನ ತಂದೆ ಹೆಸರಾಂತ ಡಾಕ್ಟರ್ . ತನ್ನ ಮಗನೂ ತನ್ನಂತೆ ಡಾಕ್ಟರ್ ಆಗಬೇಕೆಂದು ಅಪೇಕ್ಷಿಸುತ್ತಾನೆ . ಅವನ ವಿದ್ಯಾರ್ಥಿ ಜೀವನ ಅಷ್ಟು ಫಲಪ್ರದವಾಗಿರಲಿಲ್ಲ. ತುಂಬಾ ಬುದ್ದಿವಂತನಾದರೂ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ , ಮನೋ ವಿಜ್ಞಾನಿಯ ಹತ್ತಿರ ಹೋದಾಗ ಅವನಿ ಮನೋವಿಜ್ಞಾನದ ಮೇಲೆ ಆಸಕ್ತಿ ಹುಟ್ಟಿತು. ಆಗ ೧೯೫೨ ರಲ್ಲಿ ಮನೋ ವಿಜ್ಞಾನದಲ್ಲಿ ಬಿ.ಎ ಪದವಿ ಪಡೆದ. ೧೯೫೦ ರಿಂದ ೧೯೫೩ ರ ವರೆಗೆ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿದ್ದ. ಆದರೆ ಭ್ರಮಾನಿರಸನಗೊಂಡ. ೧೯೫೩ -೫೪ ರಲ್ಲಿ ಶಾಲೆಯ ಹುಡುಗರಿಗೆ ಮನೋ ವಿಜ್ಞಾನವನ್ನು ಪಾಠ ಮಾಡಿದ. ನಂತರ ದರ್ಶನ ಶಾಸ್ತ್ರದಲ್ಲಿ ಮಾಸ್ಟರ್ ಪದವಿಯನ್ನು ಪಡೆದ. ಆದರೆ ಅವನು ಯಾವ ವಿಷಯದಲ್ಲಿ ಪರಿಣತನೆಂದು ಕೇಳಿದರೆ ‘ದರ್ಶನ್ ಶಾಸ್ತ್ರ’ ದಲ್ಲಂತೂ ಅಲ್ಲ ಎಂಬ ಉತ್ತರ ಬರುತ್ತದೆ. ಮನಃಶಾಸ್ತ್ರಜ್ಞ ಅಂದರೆ ಮಾಮೂಲಿ ಮನಃಶಾಸ್ತ್ರಗ್ನನೂ ಅಲ್ಲ. ಚರಿತ್ರೆಕಾರನ ಅಂದರೆ ಅದೂ ಅಲ್ಲ. ಆದರೆ ಆಟ ಸಾಮಾಜಿಕ ಸಂಸ್ತೆಗಳ , ಮನಃಶಾಸ್ತ್ರ, ಮಾನಸಿಕ ವಿಜ್ಞಾನ , ಕಾರಾಗೃಹ ವ್ಯವಸ್ಥೆ ಮತ್ತು ಮಾನವನ ಲೈಂಗಿಕಾತ್ಮಕತೆಯ ವಿಶ್ಲೆಶಕನಾಗಿ ಕಂಡು ಬರುತ್ತಾನೆ. ಈತ ಸಂರಚನಾವಾದಕ್ಕೆ ಸಿಕ್ಕಿ ಬಿದ್ದಿದ್ದ ವಿದ್ವಾಂಸರನ್ನು ಬಿಡುಗಡೆಗೊಳಿಸಿ ರಚನೋತ್ತರವಾದವನ್ನು ಹುಟ್ಟು ಹಾಕಿದವರಲ್ಲಿ ಪ್ರಮುಖ. ಅಧಿಕಾರ, ಜ್ಞಾನ ಮತ್ತು ಭಾಷೆಗೂ ಇರುವ ಸಂಬಂಧವನ್ನು ಈಗ – ಅದರಲ್ಲೂ ಅಭಿವೃದ್ದಿ ಹೊಂದುತ್ತಿರುವ, ದಮನಕ್ಕೊಳಗಾದವರ ಚರಿತ್ರೆಯನ್ನು ಪುನಃರಚಿಸುವಲ್ಲಿ ಕ್ರಿಯಾಶೀಲವಾಗಿ ವಿಶ್ಲೇಷಿಸಲಾಗುತ್ತಿದೆ.

ಇದಕ್ಕೂ ಮುಖ್ಯವಾಗಿ ಲೈಂಗಿಕಾತ್ಮಕತೆ ಮತ್ತು ಸ್ತ್ರೀ ವಿಮೊಚನ್ನ ಚಳುವಳಿಗಳಲ್ಲಿ ಇವನ ಆಲೋಚನಾ ಕ್ರಮ ಮುಂಚೂಣಿಯಲ್ಲಿದೆ. ಲೈಂಗಿಕಾತ್ಮಕತೆಯ ಬಗ್ಗೆ ಆರು ಸಂಪುಟಗಳಲ್ಲಿ ಬರಬೇಕಾದ ಪುಸ್ತಕಗಳಲ್ಲಿ ಎರಡನ್ನೂ ಮಾತ್ರ ಪೂರ್ಣಗೊಳಿಸಿದ್ದ. ಸಂದರ್ಶಕರೊಬ್ಬರು ಈತನ ಜೀವನದ ಬಗ್ಗೆ ಕೇಳಿದಾಗ ಆಟ ಹೇಳಿದ್ದು “ನನ್ನ ವ್ಯಯಕ್ತಿಕ ವಿಷಯವನ್ನು ಪೋಲಿಸಿನವರ ದಾಖಲೆಯಲ್ಲಿ ನೋಡಬಹುದು. ನನ್ನ ಚಟುವಟಿಕೆಗಳನ್ನು ಅಧಿಕಾರಶಾಹಿಗಳ ದಫ್ತಿರನಲ್ಲಿ ನೋಡಬಹುದು. ಫುಕೋ ನ ಭಾಷಣಗಳ ಆಡಿಯೋಗಳು ಈಗ ಲಭ್ಯವಿದೆ. ಆಟ ನಡೆದದ್ದೇ ದ್ದರಿ. ಅಸಲಿ ವಿದ್ವಾಂಸನೊಬ್ಬನ ಅಂತ್ಯ ಅನಿರೀಕ್ಷಿತವಾಯಿತು.

ಶ್ರುತಿ-ಕೃತಿ ಸಹಯೋಗ ಕನ್ನಡ ನೆಲದಲ್ಲಿ ಡೆರಿಡಾ

ಶ್ರುತಿ-ಕೃತಿ ಸಹಯೋಗ ಕನ್ನಡ ನೆಲದಲ್ಲಿ ಡೆರಿಡಾ

Tingalu – Febraury 2010

2“ಕತೆ ಹಿರಿದಾದರೂ ಆ ಕತೆಯ ಮೈಗೆಡಲೀಯದೆ – ಈ ಹಿಂದೆ “ಸಮಸ್ತ। ಭಾರತ’ವನ್ನು (ಹೀಗೆ) ಅಪರೂರ್ವವಾಗಿ ಸಲ್ಲುವಂತೆ (ಸ್ವಾಗತರ್ಹವಾಗುವಂತೆ) ಹೇಳಿದ ಕವೀಶ್ವರರಿಲ್ಲ. “ವರ್ಣಕ”ವು ಕತೆಯಲ್ಲಿ ಔಚಿತ್ಯ ಪಡೆಯುವಂತೆ ಹೇಳುವುದಾದರೆ – ಪಂಪನೇ ಹೇಳುವ(ಅಂಥವ)ನು ಎಂದು ಪಂಡಿತರೆ ಬಿಡದೆ ಪ್ರಶಂಸೆ ಮಾಡಲು ಈ ಆಗ ನಾನು ಈ ಪ್ರಬಂಧವನ್ನು ಹೇಳಲು ಪ್ರಾರಂಭಿಸಿದೆ (೧.೧೧)ಲಲಿತಪದ, ಪ್ರಸನ್ನ ಕವಿತಾಗುಣ – ಇವು ಎರಡೂ ಇಲ್ಲದೆ ಬರೆಯುವನೆಂದು ಕಾವ್ಯವನ್ನು ಹೇಳಿದ ಬೆಪ್ಪರ ಕೃತಿಬ೦ದವಾದರೋ ಬರೆಯುವರ (ಅಂದರೆ ಪ್ರತಿ ಎತ್ತುವರ) ಕೈಗಳ ಹಾಳು, ನುಣ್ಣನೆಯ ತಾಳೆಯ ಗರಿಗಳ ಹಾಳು, ಹೇಳಿಸಿದರೆ ಅರ್ಥದ  ಹಾಳು – ಎಂಬಂತೆ (ಕಾವ್ಯವನ್ನು) ಹೇಳಿ ಬೀಗಿ ಬಿರಿದು, ಕೀರ್ತಿಗೆ ಆಶೆ ಪಡುವ ದುಷ್ಕಮಿಯೂ ಒಬ್ಬ ಕವಿ ಎಂಬ  ಲೆಕ್ಕವೇ? (೧.೧೨)

‘ಪಂಪನ ಸಮಸ್ತ ಭಾರತ ಕಥಾಮೃತ’ (ಛಾಯಾನುವಾದ ಎಲ್.ಬಸವರಾಜು) ಕವಿಯ ಪೀಠಿಕೆ ವಿಭಾಗದಲ್ಲಿ ಬರುವ ಈ ಸಾಲುಗಳು ಭಾರತದ ಕಥೆಗೆ ಸಂಬಂಧ ಪಟ್ಟಿದ್ದಲ್ಲವಾದರೂ ಇದು ಒಂದು ಪರಂಪರೆಯ ಸಾವಿರ ವರ್ಷದ ಹಿಂದೆ ಮೈದಾಳುವ ರೀತಿಯನ್ನು ಚಿತ್ರಿಸುತ್ತದೆ. ಕನ್ನಡ ಕಾವ್ಯ ರಚನೆ ಸೃಷ್ಟಿಯಾಗುವ ಕ್ರಿಯೆಇಲ್ಲಿ ವ್ಯಕ್ತವಾಗಿದೆ. ನಮ್ಮ ಬರಹ ಪರಂಪರೆಗೂ ಮೌಖಿಕ ಪರಂಪರೆಗೂ,  ಕೃತಿಗೂ ಇರುವ ಸಂಬಂಧ ಇಲ್ಲಿ ವ್ಯಕ್ತವಾಗುತ್ತದೆ. ಪಾಯಶಃ ಕನ್ನಡ ಸಾಹಿತ್ಯ ಪರಂಪರೆಯಲ್ಲಿ / ಭಾರತದ ಸಾಹಿತ್ಯ ರಚನಾ ಸಂದರ್ಭಕ್ಕೆ ಸಾಲಗಳು ಕನ್ನಡಿ ಹಿಡಿಯುತ್ತವೆ. ಇಡೀ ವಿಶ್ವದ ಚರಿತ್ರೆಯನ್ನು ಗಮನಿಸಿದಾಗ ಅತ್ಯಂತ ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ ಐದು ಸಂಸ್ಕೃತಿಗಳಲ್ಲಿ ಭಾರತವೂ ಒಂದು. ಆದರೆ ಇಲ್ಲಿ ಬರಹ ಸಂಸ್ಕೃತಿ ಕಾಲಿಟ್ಟಿದ್ದ ಉಳಿದ ಪ್ರಾಚೀನ ಸಂಸ್ಕೃತಿಗಳಿಗೆ ಹೋಲಿಸಿದರೆ ಬಹಳ ಇತ್ತೀಚಿನದು. ಇಲ್ಲಿ ಎಲ್ಲಾ ಕಲಿಕೆಯೂ ಮೌಖಿಕ ಸಂಪ್ರದಾಯವನ್ನು ಹೊಂದಿತ್ತು ಆ ರೀತಿಯಲ್ಲಿ ಕಲಿಸಲು/ಕಲಿಯಲು ಪಠ್ಯಗಳನ್ನು ಸಿದ್ಧಪಡಿಸಲಾಗುತ್ತಿತ್ತು. ‘ಉಪನಿಷತ್ತು ಎಂಬ ಪರಿಕಲ್ಪನೆಯೇ ಇಂಥದ್ದು. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಹೇಳುವುದಾದರೆ ಮೇಲಿನ ಪಂಪನ ಸಾಲುಗಳು ಮೌಖಿಕ ಮತ್ತು ಬರಹ ಸಾಹಿತ್ಯದ ಪಲ್ಲಟ ಸ್ಥಿತಿಯನ್ನು ಹೇಳುತ್ತದೆ. ಸುಮಾರು ಒಂದೂವರೆ ಶತಮಾನದಿಂದ ನಮ್ಮಲ್ಲಿ ಬರಹದ ಸಾಹಿತ್ಯ ಮತ್ತು ಮೌಖಿಕ ಸಾಹಿತ್ಯ ಎಂಬ ಎರಡು ವೈರುಧ್ಯ ಸಾಹಿತ್ಯದ ಪರಿಕಲ್ಪನೆ ಮೂಡಿತು. ಆದರೆ ಅದಕ್ಕೆ ಮುಂಚೆ ಬರೆವಣಿಗೆಗೂ ಮೌಖಿಕತೆಗೂ ಹೆಚ್ಚು ವ್ಯತ್ಯಾಸವಿರಲಿಲ್ಲ .ಎಂದು ಕಾಣುತ್ತದೆ. ಇವೆರಡೂ ಒಂದಕ್ಕೊಂದು ಷೂರಕವಾಗಿದ್ದಿರಬೇಕು. “ಅಪರೂರ್ವವಾಗಿ ಸಲ್ಲವಂತೆ ಹೇಳಿದ ಕವೀಶ್ವರರಿಲ್ಲ.” “ಹೇಳುವುದಾದರೆ ಪಂಪನೇ ಹೇಳುವಂಥವನು.” “ಈ ಪ್ರಬಂಧವನ್ನು ಹೇಳಲು ಪ್ರಾರ೦ಭಿಸಿದೆ.” ಬರೆಯುವೆನೆಂದು ಕಾವ್ಯವನ್ನು ಹೇಳಿದೆ”, ಬರೆಯುವ (ಪ್ರತಿ ಎತ್ತುವವರ) ಈ ಉಕ್ತಿಗಳನ್ನು ನೋಡಿದಾಗ ಬರಹ ಸಂಸ್ಕೃತಿಗಳು ಕನ್ನಡಕ್ಕೆ ಮೊದಲು ಬಂದಾಗಲೂ ಅದು ಹೇಳುವ / ಶೃತಿಯ ಸಂಸ್ಕೃತಿಯ ವಿಸ್ತರಣೆಯಾಗೆ ಕಂಡು ಬರುತ್ತದೆ. ಅಂದರೆ ಬರಹ ಸಂಸ್ಕೃತಿ ಮೌಖಿಕ ಸಂಸ್ಕೃತಿಗೆ ವೈರುಧ್ಯವಲ್ಲದ ಪೂರಕ ಸಂಸ್ಕೃತಿಯಾಗಿ ಕಂಡುಬರುತ್ತದೆ.

ಮೇಲಿನ ರೀತಿ ಮೌಖಿಕ ಮತ್ತು ಬರಹ  ಸಂಸ್ಕೃತಿಯ ತಾಕಲಾಟ ಬರೀ ಕನ್ನಡ / ಭಾರತದ ಸಂಸ್ಕೃತಿಯ ತಾಕಲಾಟವಲ್ಲ. ಇದು ಪಾಶ್ಚಾತ್ಯ ಪ್ರಾಚೀನ ಸಂಸ್ಕೃತಿಯ ತಾಕಲಾಟವೂ ಆಗಿತ್ತು.

ಜಾಕ್ ಡೆರಿಡಾ ಈ ವಿಷಯವನ್ನೇ ತನ್ನ ಮೊದಲ ಪುಸ್ತಕ Of Grammatologyಯಲ್ಲಿ ಎತ್ತಿಕೊಂಡು ಏತಕ್ಕಾಗಿ ಪ್ಲೇಟೋ ಬರವಣಿಗೆಯ ವಿರುದ್ಧ ತನ್ನ ತರ್ಕವನ್ನು ಮಂಡಿಸುತ್ತಿದ್ದ ಎಂದು ವಿಶ್ಲೇಷಿಸುತ್ತ್ತಾನೆ. ಪ್ಲಾಟೋಗೆ ಬರವಣಿಗೆ ಎನ್ನುವುದು “ಕಪೋಲಕಲ್ಪಿತ’ವಾದದ್ದು. ಬರವಣಿಗೆ ಸಮಾಜದಲ್ಲಿ ‘ನೈತಿಕತೆ’ ಮತ್ತು ‘ಸತ್ಯವನ್ನು ನಾಶಮಾಡುವ ಸಾಧನ ಎಂದು ಪ್ಲಾಟೋನ ನಿಲುವು. ಅಲ್ಲದೆ ಬರೆವಣಿಗೆ ಒಂದು ಮಿಥ್ಯಾಲೋಕವನ್ನು ಸೃಷ್ಟಿಸುತ್ತದೆ. ಇದನ್ನು ಪ್ರತಿಪಾದಿಸುವ ಈಜಿಪ್ಟಿನಲ್ಲಿ ಒಂದು ಕಥೆ ಇದೆ. ಅದೇನೆಂದರೆ ಈಜಿಪ್ಪಿನ ದೊರೆ ಥಮುಸ್ ಎಂಬುವವನ ಆಸ್ಥಾನಕ್ಕೆ ಥೋಥ್ ಎಂಬ ದೇವರು ಬರುತ್ತಾನೆ.

ಆಟ ಜ್ಯಾಮಿತಿ.ಲೆಕ್ಕ. ಖಗೋಳವಿಜ್ಞಾನ  ಮತ್ತು ಬರವಣಿಗೆಯ ದೇವತೆ. ಈ ಎಲ್ಲದರ ಜ್ಞಾನವನ್ನು ಆತ ದೊರೆಗೆ ಥಮುಸ್ ಗೆ ಕೊಡುತ್ತಾನೆ. ಆದರೆ ಬರವಣಿಗೆಯನ್ನು ಮಾತ್ರ ನಿರಾಕರಿಸುತ್ತಾನೆ. ಕಾರಣ ಮನುಷ್ಯನಿಗೆ ಬರವಣಿಗೆ ಕೊಟ್ಟರೆ ಆಟ ಬಹಳ ಅಪಾಯಕಾರಿಯಾಗುತಾನೆ, ಏಕೆಂದರೆ ಬರವಣಿಗೆಯನ್ನು ಮನುಷ್ಯ ಅಸ್ತ್ರವನ್ನಾಗಿಸಿಕೊಂಡು ಸಮಾಜದಲ್ಲಿ ದೇವರಂತೆ ಆಗಿ ಬಿಡುತ್ತಾನೆ. ಅದು ಸಜೀವವಾದ ಮಾತನ್ನು ನಿರ್ಜೀವವನ್ನಾಗಿಸಿ ಬಿಡುತ್ತದೆ, ಅಥೆಂಟಿಕ್ ಪ್ರಪಂಚವನ್ನು ನಾಶಮಾಡುತ್ತದೆ, ಮೌಖಿಕ ಸಂಪ್ರದಾಯವನ್ನು ನಾಶಪಡಿಸುತ್ತಾರೆ. ತಾರತಮ್ಯವನ್ನು ಸೃಷ್ಟಿಸುತ್ತದೆ ಎಂದು ಹೇಳಿ ಬರವಣಿಗೆಯನ್ನು ತನ್ನಲ್ಲೇ ಇಟ್ಟುಕೊಳ್ಳುತ್ತಾನೆ.

ಪ್ಲಾಟೋನ ಪ್ರಕಾರ ಭಾಷೆ ಮೌಖಿಕವಾಗಿದ್ದಷ್ಟು ಅಲ್ಲಿ ಮಾತನಾಡುವವನ / ಕೇಳುವವನ ಹಾಜರಿ ಅತ್ಯವಶ್ಯಕವಾಗಿರುತ್ತದೆ. ಜೀವಂತವಾಗಿ ರೂಪತಾಳುತ್ತಿರುತ್ತದೆ ಮತ್ತು ಭಾಷೆಯೂ ಹಾಜರಿರುತ್ತದೆ. ಜ್ಞಾಪಕಶಕ್ತಿ ಇಲ್ಲಿ ಮುಖ್ಯವಾಗಿರುತ್ತದೆ. ಬರವಣಿಗೆ ಜ್ಞಾಪಕಶಕ್ತಿಯನ್ನು ಕುಂದಿಸುತ್ತದೆ. ಮಾತು ಆಡುವವನ ಆತ್ಮವನ್ನು ತೆರೆದಿಡುತ್ತದೆ. ಬರವಣಿಗೆ ಭಾಷೆಯ ಅರ್ಥದ ಸಂದಿಗ್ನತೆಗೆ ಎಡೆಮಾಡಿಕೊಡುತ್ತದೆ. ಅದನ್ನು ಓದುವವನು ತನಗೆ ಬೇಕಾದ ಅರ್ಥವನ್ನು ಕೊಟ್ಟುಕೊಳ್ಳುತ್ತಾನೆ. ಬರಹ ನಿಜವಾದ ಜ್ಞಾನವನ್ನು ಪರೀಕ್ಷಿಸುವುದಿಲ್ಲ ಏಕೆಂದರೆ ಬರೆದದ್ದನ್ನು ಉರುಹೊಡೆದು ಗಿಳಿ ಪಾಠ ಒಪ್ಪಿಸಬಹುದು. ಆದರೆ ಆ ಜ್ಞಾನ ಅವನಲ್ಲಿದೆ ಎಂದು ಸಾದರಪಡಿಸಲಿಕ್ಕಾಗುವುದಿಲ್ಲ.

3ಇಷ್ಟೇ ಅಲ್ಲ ಪಾಶ್ಚಾತ್ಯ ಸಮಾಜ ತನ್ನ ಆಲೋಚನೆಯಲ್ಲಿ ಮಾತನ್ನೇ ಮುಖ್ಯವಾಗಿರಿಸಿಕೊಂಡು ದರ್ಶನಶಾಸ್ತ್ರ ಮತ್ತು ಭಾಷಾಶಾಸ್ತ್ರಗಳು ಇವತ್ತಿನವರೆವಿಗೂ ತನ್ನ ಸೈದಾಂತಿಕ ಧಾರೆಯನ್ನು ಹರಿಯಬಿಡುತ್ತಿದೆ ಎಂದು ವಿಶ್ಲೇಷಿಸುತ್ತಾನೆ. ಭಾಷಾಶಾಸ್ತ್ರವೂ ಆಡುಮಾತಿನ ಶ್ರೇಷ್ಠತೆಯ ಮೇಲೆ ನಿಂತಿದೆ ಎಂದು ತೋರಿಸಿಕೊಟ್ಟಿದ್ದಾನೆ. ಆದರೆ ನಿಜವಾಗಿ ಭಾಷೆ ಆಡುಮಾತಿನ ಮೇಲೂ ನಿಂತಿಲ್ಲ ಬರಹದ ಮೇಲೂ ನಿಂತಿಲ್ಲ, ಇವೆರಡರ ಪೂರಕ ಸಂಬಂಧದಲ್ಲಿ ನಿಂತಿದೆ. ಇದು ಕನ್ನಡದ ಪಂಪನ ತಿಳಿವಿನ ಸಂಸ್ಕೃತಿ. ಮಾತು – ಬರಹ ವೈರುಧ್ಯದಲ್ಲಿ ಇಲ್ಲ. ವೈರುಧ್ಯದಲ್ಲಿದ್ದರೆ ಅದು ಒಂದು ರಚನೆಯನ್ನು ಸೃಷ್ಟಿಸುತ್ತದೆ. ಮನುಷ್ಯನ ಗ್ರಹಿಕೆ ವೈರುಧ್ಯದಿಂದ ಮಾತ್ರ ಸಾಧ್ಯ ಆದರೆ ಅದು ಅಲ್ಲಿಯೇ ನಿಲ್ಲುವುದಿಲ್ಲ. ವೈರುಧ್ಯಗಳು ಒಂದರೆ ಮೇಲೆ ಒಂದು ಆಡುತ್ತಿರುತ್ತದೆ. ಆದ್ದರಿಂದ ಭಾಷೆಯಲ್ಲಿ ಅರ್ಥ ಸದಾ ಚಲನೆಯಲ್ಲಿರುತ್ತದೆ, ನಿಘಂಟಿನಲ್ಲಿ ಮಾತ್ರ ಅರ್ಥ ಸ್ಥಗಿತವಾಗಿ ನಿಂತು ಬಿಡುತ್ತದೆ. ಆದ್ದರಿಂದ ಮಾತು ಮತ್ತು ಬರಹ ಒಂದಕ್ಕೊಂದು ವಿರೋಧದಲ್ಲಿ ನಿಲ್ಲವುದಿಲ್ಲ, ಒಂದರ ಮೇಲೊಂದು ಆಡುತ್ತಿರುತ್ತದೆ, ಪಂಪನ ‘ಹೇಳುವ ಮತ್ತು ‘ಬರೆ’ಯುವ ಕ್ರಿಯೆ ಪೂರಕ ಎಂದು ತೋರಿಸಿರುವುದಕ್ಕೂ ಡೆರಿಡಾ ಹೇಳುವ ಭಾಷಾ – ಬರಹ ವಿಶ್ಲೇಷಣೆಯೂ ಹೊಂದಿಕೊಳ್ಳುವುದು. ಪಂಪ ಹೇಳಿ ಬರೆದರೂ ಆ ಕೃತಿ ಇರುವುದು ಓದಲು ಗೊತ್ತಿದ್ದವನು ಓದುಗೊತ್ತಿಲ್ಲದವನಿಗೂ ಹೇಳುವ ಸಾಧನ (ಗಮಕ ಇತ್ಯಾದಿ ರೀತಿಯಲ್ಲಿ)ವಾಗಿ ಬರಹವಿದೆ. ಆದ್ದರಿಂದಲೇ ಅಂಥ ಒಂದು ತಂತ್ರವನ್ನು ಪಂಪ ಬಳಸಿದ್ದಾನೆ. ಈ ತಂತ್ರ ಬರಹವೂ ಮೌಖಿಕವಾಗಿ ಓದುವವನ ಮೂಲಕ ಧ್ವನಿಯಾಗಿ ಪರಿವರ್ತಿತವಾಗಿ ಕೇಳುಗ ಇರುತ್ತಾನೆ. ಪಂಪನು ಕೃತಿಯ ಬಗ್ಗೆ – ಓದುಗನ ಬಗ್ಗೆ ಈ ರೀತಿಯಲ್ಲಿ ತನ್ನ ಸಿದ್ಧಾಂತವನ್ನು ಮುಂದಿಡುತ್ತಾನೆ.

ಪರಮ ಜಿನೇಂದ್ರ ವಾಣಿಯೆ ಸರಸ್ವತಿ ಬೇಜ* ಅದು ಪೆಣ್ಣು ರೂಪಮಂ’ ಧರಿಯಿಸಿ ನಿಂದುದು ಆಲ್ತು-ಅದುವೆ ಭಾವಿಸುವ ಓದುವ ಕೇಲ್ವಪೂಜಿಪ ಆದರಿಸುವ ಭವ್ಯ ಕೋಟಿಗೆ ನಿರಂತರ ಸೌಖ್ಯಮನ್ ಈವುದು, ಆನ್ ಅದ ಕೆ ಎರೆದಪೆನ್

ಮೃದು ಪದಗತಿಯಂ.

ರಸ-ಭಾವದ ಪರ್ಚಿ೦ ಪಣ್ಯ ವನಿತೆಯೋಲ್ ಕೃತಿ ಸೌಂದರ್ಯದ ಚಾತುರ್ಯದ ಕಣಿ ಏನೇ’ –

ವಿದಗ್ದ ಬುಧಜನದ ಮನಮನ್ ಅಲೆಯಲೇ ವೇಡಾ ?

ಕವಿತಾ ರಹಸ್ಯಮಂ ಸತ್ಕವಿ ಆಚೆಗುಮ್ – ಅನೆಡಮೂಕನ್ ಇಡೊ ಜಡನ್ ಎಂಬವನಾಗುಮೆ?

ವಿತನ ಆಚೆಗಮ್ ಕುವಿತಂ ಸ್ಥ್ರೀರತ ರಹಸ್ಯದ ಒಳಗ(ನ್)ಆದಪನೆ?

ಭಾಶಾವಿದರ್ ಕವಿತ್ವ ವಿಶೇಷಗ್ನರ್ ನಿಕಶಂ ಅಪ್ಪೋದೆ ಅಪ್ಪುದು ಸಭೆಯೋಳ್ .

ಡೆರಿಡಾನಿಗೆ ಬರವಣಿಗೆ ಎಂದರೆ ‘ಅಕ್ಷರ’ ಮಾತ್ರವಲ್ಲ, ಅಕ್ಷರವಿಲ್ಲದೆಯೂ ಮನುಷ್ಯ ಬರವಣಿಗೆಯನ್ನು ಮಾಡುತ್ತಿರುತ್ತಾನೆ. ಯಾವುದಾದರೂ ವಿಷಯವನ್ನು ಮೌಖಿಕವಾಗಿಯೇ ತನ್ನ ವ್ಯಾಖ್ಯಾನದ ಮೂಲಕ ಹಿಂದಿನ ಪರಿಕಲ್ಪನೆಗೆ ತನ್ನ ಅನಿಸಿಕೆಯನ್ನು ಸೇರಿಸಿ ಅನುಭವವನ್ನು ಬದಲಾಯಿಸುತ್ತಿರುತ್ತಾನೆ. ಒಬ್ಬ ಕ್ರಿಯಾಶೀಲ ಬರಹಗಾರನೂ ಇದೇ ಕೆಲಸವನ್ನು ತನ ಕೃತಿಯ ಮೂಲಕ ಮಾಡುತ್ತಿರುತ್ತಾನೆ.

ಆದ್ದರಿಂದ ಡೆರಿಡಾನ ಪ್ರಕಾರ ಬರವಣಿಗೆ ಎಂದರೆ ಮನುಷ್ಯನ ಗ್ರಹಿಕೆಯ ಬಗೆಗಿನ ವ್ಯಾಖ್ಯಾನದ ಮೇಲಿನ ವ್ಯಾಖ್ಯಾನ. ಓದುಗ ಈ ಬರಹಗಾರನ ವ್ಯಾಖ್ಯಾನದ ವ್ಯಾಖ್ಯಾನಕಾರನಾಗುತ್ತಾನೆ. ಒಂದು ಸಂಸ್ಕೃತಿಯ ಬೆಳವಣಿಗೆ ಎಂದರೆ ಇದೇ. ಅದ್ದರಿಂದ ಒಂದು ಸಾಂಸ್ಕೃತಿಕ ಪತ್ಯವೆಂದರೆ ಅದು ಬರವಣಿಗೆಯಲ್ಲೂ ಮೌಖಿಕ ಸಂಪ್ರದಾಯದಲ್ಲೂ ಇರಬಹುದು. ಅವೆರಡೂ ಒಂದೇ ರೀತಿಯ ಪರಿವರ್ತನೆಗೆ ಒಳಗಾಗುತ್ತಿರುತ್ತವೆ. ಪ್ರಾಯಶಃ ನಮ್ಮಲ್ಲಿದ್ದ ಪತ್ಯಗಳಿಗೆ ಟೀಕು-ಟಿಪ್ಪಣಿ ಬರೆಯುವ ಸಂಪ್ರದಾಯ ಪಠ್ಯವನ್ನು ಬದಲಿಸದೆ ಓದುಗ ಆ ಪತ್ಯಕ್ಕೆ ಪ್ರಕ್ರಿಯಿಸುವ ರೀತಿ ಇದೇ ತೆರನಾಗಿದ್ದರಬಹುದು.

ಆದರಿಂದ ಕುಮಾರವ್ಯಾಸ ತನ್ನ ಕರ್ನಾಟಕ ಭಾರತ ಕಥಾಮಂಜರಿದಲ್ಲಿ ಹೇಳುವ ಪದ್ಯ ನಮಗೆ ವಿಶೇಷ ರೀತಿಯಲ್ಲಿ ಕಾಣುತ್ತದೆ.

ಕೃತಿಯನವಧರಿಸುವುದು ಸುಕವಿಯ

ಮಾತಿಗೆ ಮಂಗಳವೀವುದಧಿಕರು

ಮಧಿಸುವುದು ತಿದ್ದುವುದು ಮೆರೆವುದು ಲೆಸ ಸಂಚಿಪುದು

ನತಗುಣರು ಭಾವುಕರು ವರಪಂ

ಡಿತರು ಸುಜನರು ಸೂಕ್ತಿಕಾರರು

ಮತಿಯನೀವುದು ವೀರನಾರಾಯಣನ ಕಿಂಕರಗೆ

ಡೆರಿಡಾನ ಪ್ರಕಾರ ಪಠ್ಯಕ್ಕೆ ಜೀವ ಬರುವುದು ಓದುಗ/ಕೇಳುಗ ಅದನ್ನು ಓದಲು ಪ್ರಾರಂಭಿಸಿದಾಗ ಮಾತ್ರ. ಅಲ್ಲಿ ಅದು ಜೀವತಾಳುತ್ತದೆ. ಇಲ್ಲದಿದ್ದರೆ ಅದೊಂದು ಮುದ್ರಣವಾದ ಹಾಳೆಗಳ ಕಟ್ಟು, ಕಪಾಟಿನಲ್ಲಿ ಜಾಗಪಡೆಯುವ ವಸ್ತು, ಜೀವತಳೆಯುವುದು ಯಾವಾಗ ಎಂದರೆ ಅಧಿಕರು ಆ ಪಠ್ಯವನ್ನು ಮಥಿಸುವುದರಿಂದ, ತಿದ್ದುವುದರಿಂದ ಇಲ್ಲಿ ಕೃತಿಯ ಕರ್ತೃವಿನ ಅರ್ಥವೇ ಓದುಗನ ಅಧಿಕವಾಗಿರಬೇಕಾಗಿಲ್ಲ. ಓದುಗ/ಕೇಳುಗ ಅರ್ಥವನ್ನು ಹೆಚ್ಚಿಸುತ್ತಿರುತ್ತಾನೆ. ಇಲ್ಲಿ ಭಾವುಕರು – ಪಂಡಿತರು – ಸುಜನರು- ಸೂಕ್ತಿಕಾರರು ಇವರೆಲ್ಲರೂ ಕ್ರಿಯಾಶೀಲವಾಗಿ ಆ ಪಠ್ಯದ ಓದಿನಲ್ಲಿ / ಬರಹದಲ್ಲಿ ಭಾಗವಹಿಸಿದಾಗ ಮಾತ್ರ ಪಠ್ಯ ಜೀವತಳೆಯುತ್ತದೆ. ಆದ್ದರಿಂದ ವಿವಿಧ ರೀತಿಯ ಓದುಗರು ಪಠ್ಯವನ್ನು ತಮ್ಮ ಮನಸ್ಸಿನಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಹೀಗೆ ಪಠ್ಯದ ಅರ್ಥ ಯಾವಾಗಲೂ ಹರಿಯುತ್ತಲೇ ಇರುತ್ತದೆ. ಹೀಗೆ ಪ್ರತೀ ಬಾರಿ ಓದಿದಾಗಲೂ ಪಠ್ಯ ಅವತರಿಸುತ್ತಿರುತ್ತದೆ

. ಡೆರಿಡಾನ ಪ್ರಕಾರ ಪಠ್ಯಕ್ಕೆ ಒಂದು ಕೇಂದ್ರ ಅಥವಾ ಒಂದು ಧ್ವನಿ ಇರುವುದಿಲ್ಲ. ಪಠ್ಯವು ಬಹು ಕೇಂದ್ರಿತವಾಗಿರಬಹುದು. ಬಹುಕೇಂದ್ರತೆ ಹುಟ್ಟುವುದು ಓದುಗನ ಹಿನ್ನೆಲೆಯಿಂದ, ಆತನ ದೃಷ್ಟಿಕೋನ ಪಠ್ಯವನ್ನು ಬೇರೆ ಬೇರೆ ಕೋನಗಳಲ್ಲಿ ಗಮನಿಸಿದಾಗ ಅದು ಬೇರೆ ಬೇರೆ ಧ್ವನಿಯನ್ನೇ ಹೊರಡಿಸಬಹುದು. ಮಹಾಭಾರತ-ರಾಮಾಯಣದಂಥ ಕೃತಿಗಳು ವಿಫುಲ ಸಂಖ್ಯೆಯಲ್ಲಿ ಇರುವುದೇ ಇದಕ್ಕೆ ಉದಾಹರಣೆ. ಒಂದು ವ್ಯಾಸಭಾರತವಿದ್ದಂತೆ ಪಂಪಭಾರತವಿರಬೇಕಾಗಿಲ್ಲ. ಪಂಪನ ದೃಷ್ಟಿಕೋನದಲ್ಲಿ ಕೇಂದ್ರ ದೃಷ್ಟಿ ಅರ್ಜುನ/ಅರಿಕೆಸರಿಗೆ ಸ್ಥಳಾಂತರಗೊಳ್ಳಬಹುದು. ಇದೊಂದು ರೀತಿಯ  ಕುಮಾರವ್ಯಾಸನ ಭಾರತದ ‘ವ್ಯಾಖ್ಯಾನ’ ಮತ್ತೊಂದು ರೀತಿಯದಾಗಿರಬಹುದು. ಅಲ್ಲದೆ ಒಂದೇ ಪಠ್ಯ ಓದುಗನಿಗೆ ನಾನಾ ರೀತಿಯಲ್ಲಿ ಕಾಣಬಹುದು. ಕುವೆಂಪುರವರಿಗೆ ಮಂಥರೆ ಮತ್ತೊಂದು ದೃಷ್ಟಿಯಿಂದ ಕಂಡಿರಬಹುದು. ಇವಕ್ಕೆಲ್ಲ ಮುಖ್ಯ ಕಾರಣ ಡೆರಿಡಾ ಹೇಳುವಂತೆ ಭಾಷೆಯಲ್ಲಿ / ಕಥಾನಕಗಳಲ್ಲಿ “ಕುರುಡುದಾಣ” (Blind spots) ಇರುವುದೇ, ಮತ್ತೊಬ್ಬನ ರಚನೆ / ಓದು ಈ ಕುರುಡುದಾಣಗಳನ್ನು ಪತ್ತೆ ಹಚ್ಚಿ ಅದನ್ನು ಹೊಸ ಕಾಣುವಿಕೆಯಿಂದ ತುಂಬುವುದಾಗಿರುತ್ತದೆ. ಆದ್ದರಿಂದ ಕುಮಾರವ್ಯಾಸ ಹೇಳುವುದು,

ಅರಸುಗಳಿಗಿದು ವೀರ ದ್ವಿಜರಿಗೆ

ಪರಮವೇದದ ಸಾರ ಯೋಗೀ

ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ದಿಗುಣವಿರಹಿಗಳ ಶೃಂಗಾರ ವಿದ್ಯಾ

ಪರಿಣತರಲಂಕಾರ……

ಇಲ್ಲಿ ಒಬ್ಬೊಬ್ಬ ಓದುಗನೂ ಒ೦ದೊ೦ದು ವಿಷಯವನ್ನು ಕೇಂದ್ರವಾಗಿರಿಸಿಕೊಂಡು ಆತನ ಕಥೆಯನ್ನು ಓದಬಹುದು / ಅಥವಾ ಒಬ್ಬನೇ ಎಲ್ಲ ಕೇಂದ್ರಗಳಲ್ಲಿ ನಿಂತು ವಿವಿಧ ರೀತಿಯಲ್ಲಿ ಸಂಯೋಜಿಸಿಕೊಂಡು ಪಠ್ಯವನ್ನು ಕಾಣಬಹುದು. ಪಠ್ಯದ ಬಗ್ಗೆ ಕುಮಾರವ್ಯಾಸನ ಸಿದ್ದಾಂತ ಇಲ್ಲಿ ನಮಗೆ ಸ್ಪಷ್ಟವಾಗುತ್ತದೆ. ಆದ್ದರಿಂದ ಪಠ್ಯ ಎನ್ನುವುದು ನಿರಂತರವಾಗಿ ಚಲನಶೀಲತೆಯನ್ನು ಪಡೆದಿರುತ್ತದೆ. ಇಲ್ಲಿಯವರೆಗೆ ಈ ಲೇಖನ ಓದಿದ ನಂತರ ಓದುಗರಿಗೆ ಒಂದು ವಿಷಯ ಸ್ಪಷ್ಟವಾಗಿರಬಹುದು.

ಕನ್ನಡದಲ್ಲಿ ಸಾಹಿತ್ಯಕ/ಸಾಂಸ್ಕೃತಿಕ ಸಿದ್ಧಾಂತಗಳು ಇಲ್ಲ ಎಂದುಕೊಂಡವರು ಮನವರಿಕೆ ಮಾಡಿಕೊಳ್ಳಬಹುದಾದ ವಿಷಯವೆಂದರೆ ಸಿದ್ದಾಂತಗಳು ಪ್ರತ್ಯೇಕ ಸಿದ್ದಾಂತಿಗಳಿಂದ ಬಂದದ್ದಲ್ಲ. ನಮ್ಮ ಕವಿಗಳೇ ನಮಗೆ ಸಿದ್ದಾಂತವನ್ನು ಕೊಟ್ಟಿದ್ದಾರೆ. ಅದನ್ನು ನಾವು ಕಾಣಬೇಕಾಗುತ್ತದೆ. ಇವೆಲ್ಲ ಇರುವುದು ಮುಖ್ಯಪಠ್ಯದಲ್ಲಿಲ್ಲ. ಪಠ್ಯದ ಅಂಚಿನಲ್ಲಿ ಇದನ್ನು ನಾವು ಓದಿಕೊಳ್ಳಬೇಕಾಗುತ್ತದೆ/ ಬರೆದುಕೊಳ್ಳಬೇಕಾಗುತ್ತದೆ.

ಪ್ರತಿಯೊಂದು ಕೃತಿಯೂ ಮೈದಾಳುವುದು ಭಾಷೆಯಲ್ಲಾದುದರಿಂದ ಭಾಷೆಯ ಶಕ್ತಿ ಬರಹಗಾರರನ್ನು ಅಣಕಿಸುತ್ತಿರುತ್ತದೆ. ಅವನಿಗೆ ಸವಾಲನ್ನು ಎಸೆಯುತ್ತಿರುತ್ತದೆ. ಒಬ್ಬ ಶಕ್ತಿಯುತ ಬರಹಗಾರ ಈ ಭಾಷೆಯ ಶಕ್ತಿಯನ್ನು ಪ್ರತಿಬಾರಿಯೂ ಎದುರಿಸುತ್ತಿರುತ್ತಾನೆ. ಕೆಲವು ಬಾರಿ ಭಾಷೆ ಬರಹಗಾರನ ಎದುರು ಹೆಡೆ ಬಿಚ್ಚಿದ ನಾಗನಂತೆ ನಿಲ್ಲಬಹುದು.

ಹೀಗೆ ಪಠ್ಯವನ್ನು ಬರಹಗಾರ / ಓದುಗ (ವೈರುಧ್ಯಗಳಿಲ್ಲ – ಡೆರಿಡಾನ ಪ್ರಕಾರ) ಎದುರಿಸುತ್ತಲೇ ಇರುತ್ತಾನೆ. ಈ ಕ್ರಿಯೆಯನ್ನೇ ಡೆರಿಡಾ ನಿರ್ವಚನ (detruction)cons ಎಂದು ಕರೆಯುತ್ತಾನೆ. ನಿರ್ವಚನವೆಂದರೆ ಪಠ್ಯವನ್ನು ಎದುರಿಸುವ ಲೀಲೆ (Play) ಪಠ್ಯವನ್ನು ಬಿಚ್ಚಿ – ಸೇರಿಸಿ – ಕಟ್ಟಿ ಆಡುವ ಕ್ರಿಯೆ, ಈ ಲೀಲೆಯಲ್ಲಿ ಪ್ರತೀಬಾರಿಯೂ ಪಠ್ಯದ – ಪ್ರಸ್ತುತದಲ್ಲಿ ಹಾಜರಿಯಾಗುವ ಕ್ರಿಯೆ. ನಿರಂತರವಾಗಿ ಗ್ರಹಿಕೆಯು ಒಂದನನ್ನು ಅಳಿಸಿ ಮತ್ತೊಂದನು ಹಾಜರಿಗೊಳಿಸುವ ಕ್ರಿಯೆ.

ಇಲ್ಲಿ ಪಠ್ಯಕ್ಕೆ ಒಂದು ಅರ್ಥ ಇರುವುದಿಲ್ಲ. ಇದೇ ಅರ್ಥ ಎಂದು ಹೇಳಿ ವಿರಮಿಸಲು ಸಾಧ್ಯವಾಗುವುದಿಲ್ಲ. ಈ ಪಠ್ಯಕ್ಕೆ ಇದೇ ಅರ್ಥ ಎಂದು ಹೇಳುವವರು ಮೂಲಭೂತವಾದಿಗಳಾಗಿರುತ್ತಾರೆ. ರಾಮ ಬಾಬರಿ ಮಸೀದಿಯಲ್ಲಿ ಮಾತ್ರ ಹುಟ್ಟಲು ಸಾಧ್ಯ. ಆದರೆ ಡೆರಿಡಾನ ಪ್ರಕಾರ ಪ್ರತಿ ಪಠ್ಯ ಸೃಷ್ಟಿಯೂ ಬಹುಮುಖಿ ಅರ್ಥಗಳನ್ನು ಸೃಷ್ಟಿಸುವ ಡೆಮಾಕ್ರಟಿಕ್ ಪ್ರಕ್ರಿಯೆ. ಡೆರಿಡಾನ ಇನ್ನೊಂದು ಪ್ರಮುಖ ಪರಿಕಲ್ಪನೆ ‘ಅಂತರ್ ಪಠ್ಯ’. ಈ ಪರಿಕಲ್ಪನೆ ನಮ್ಮ ಸಾಮಾನ್ಯ ಆಡುನುಡಿಯಲ್ಲಿ ನಮಗೆ ಗೊತ್ತಾಗದಂತೆ ಅವಿತುಕೊಂಡಿರುತ್ತದೆ. ಉದಾಹರಣೆಗೆ ಮಾತಿನ ಬಾಣ ಬಿಟ್ಟ ಮಾತಿನಲ್ಲಿ ಚುಚ್ಚಿದ ಮೊನಚಾದ ಮಾತು ಮಾತಿನಲ್ಲಿ ಗೆದ್ದ/ ಸೋತ ವ್ಯಂಗ್ಯದಿಂದ ಇರಿದ ವಾಗ್ಯುದ್ದ ನಡೆಸಿದ ಮಾತಿನ ಚಾಟ ಬೀಸಿದ ಇಲ್ಲಿ ಮಾತು/ಭಾಷೆ ಯುದ್ಧದ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಸೋಲು, ಗೆಲುವು, ಚುಚ್ಚು ಇರಿ, ಯುದ್ಧ ಇತ್ಯಾದಿ ಪದಗಳೆಲ್ಲ ಮಾತಿನ ಗುಣಕ್ಕೆ ‘ತಗುಳ್ಳಿ’ ಕೊಂಡಿವೆ. ಇದೇ ರೀತಿ ಸಾಹಿತ್ಯ

ಮಿಖೈಲ್ ಬಖ್ತಿನ್

ಮಿಖೈಲ್ ಬಖ್ತಿನ್

1tingalu – may 2009

ಇತ್ತೀಚಿನ ಕನ್ನಡಸಾಹಿತ್ಯವನ್ನು ಅರ್ಥೈಸುವ ವಿಧಾನಗಳಲ್ಲಿ ರೂಪವಾದ, ಸಂರಚನವಾದ, ರಚನೋತ್ತರವಾದ, ಓದುಗ-ಪ್ರತಿಕ್ರಿಯಾಸಿದ್ಧಾಂತ , ಮಾರ್ಕ್ಸ್ವಾದ, ಮನೋವೈಜ್ಞಾನಿಕ ಸಿದ್ಧಾಂತ, ದೇಸೀವಾದ, ಕಥಾನಕ ಮುಂತಾದ ಪರಿಕಲ್ಪನೆಗಳು  ಹೇರಳವಾಗಿ ಪ್ರಯೋಗವಾಗುತ್ತಿದೆ. ಈ ಪರಿಕಲ್ಪನೆಗಳು ಅನೇಕ ವಾಡ-ವಿವಾದಗಳನ್ನು ಸೃಷ್ಟಿಸಿದೆ. ಆದರೂ ಪ್ರತ್ಯಕ್ಷವಾಗಿಯೋ , ಪರೋಕ್ಷವಾಗಿಯೋ ಸಾಂಸ್ಕೃತಿಕ ಪಟ್ಯಗಳ ವಿಶ್ಲೇಷಣೆಯಿಂದ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಈ ಸಿದ್ಧಾಂತಗಳು ಪಶ್ಚಿಮದಿಂದ ಬಂದಿದ್ದರಿಂದ ನಮ್ಮ ಭಾರತೀಯ ಸಾಹಿತ್ಯ ಸಿದ್ಧಾಂತದ ಹಿನ್ನೆಲೆಯಲ್ಲಿ ನಮ್ಮದೇ ಪರಿಕಲ್ಪನೆಗಳನ್ನು ಸೃಷ್ಟಿಸಿಕೊಳ್ಳುವ ಸಾಧ್ಯತೆಯೂ ಇಲ್ಲದೆ ಇಲ್ಲ .

ಪಾಶ್ಚಿಮಾತ್ಯ ದೇಶಗಳಲ್ಲಿ ೨೦ನೆ ಶತಮಾನದ ಆದಿಯಲ್ಲಿ ಸಾಹಿತ್ಯ ಕೃತಿಗಳನ್ನು ನೋಡುವ ಮತ್ತು ವಿಶ್ಲೇಷಿಸುವ ದಿಕ್ಕಿನಲ್ಲಿ ಅರಿವಿನ ಸ್ಫೋಟ ಕಂಡುಬಂದಿತು. ಮುಖ್ಯವಾಗಿ ಭಾಷಾಶಾಸ್ತ್ರಜ್ಞ ಫ್ಹರ್ಡಿನಾಂದ್ ದಿ ಸೇಸ್ಯುರ್ ಭಾಷಾಸ್ತ್ರದ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಇಡೀ ಮಾನವಶಾಸ್ತ್ರವನ್ನೇ ಹೊಸ ದಿಕ್ಕಿನೆಡೆಯಿಂದ ನೋಡುವಂತೆ ಮಾಡಿದ. ಈತನ ಕಾಣ್ಕೆ ಮುಖ್ಯವಾಗಿ ಪ್ರಪಂಚದಲ್ಲಿ ಜನರು ಸಾವಿರಾರು ಭಾಷೆಗಳನ್ನು ಮಾತನಾಡುತ್ತಾರೆ. ಭಾಷಾಶಾಸ್ತ್ರಜ್ಞ ಈ ಎಲ್ಲಾ ಭಾಷೆಗಳನ್ನು ಒಂದೊಂದಾಗಿ ವಿಶ್ಲೇಷಿಸುವುದು ಕಷ್ಟಸಾಧ್ಯವಾಗುತ್ತದೆ. ಅದಕ್ಕಾಗಿ ಎಲ್ಲಾ ಭಾಷೆಗಳನ್ನು ಒಳಗೊಂಡಂತಹ ಸಾರ್ವರ್ತಿಕ ನಿಯಮಗಳನ್ನು ಗಮನಿಸಿ ಹಿಂದೆ ಇದ್ದ ಭಾಷೆಗಳು ಈಗ ಆಡುವ ಭಾಷೆಗಳು ಮತ್ತೆ ಮುಂದೆಯೂ ಆಡುವ ಭಾಷೆಗಳ ಲಕ್ಷಣಗಳನ್ನು ಗಮನಿಸಿ ಅವುಗಳ ನಿಯಮಗಳನ್ನು ಕಂಡುಹಿಡಿದುಕೊಂದರೆ ಭಾಷಾ ವಿಶ್ಲೇಷಣೆ ವೈಜ್ಞಾನಿಕತೆಯನ್ನು ಪಡೆಯುತ್ತದೆ ಎಂದು ಖಚಿತಪಡಿಸಿದರು. ಭಾಷೆ ಎನ್ನುವುದು ಎರಡು ಮುಖಗಳನ್ನು ಹೊಂದಿರುತ್ತದೆ. ಒಂದು, ಅಮೂರ್ತವಾದದ್ದು , ಇದು ಎಲ್ಲಾ ಮನುಷ್ಯರಲ್ಲೂ ಸುಪ್ತವಾಗಿ ಇರುವ ಶಕ್ತಿ. ಈ ಶಕ್ತಿ ಮೈದಾಳುವುದು ಅಂದರೆ ಮಾತಾಗಿ ಮೂರ್ತಗೊಳ್ಳುವುದು ವ್ಯಕ್ತಿಯು ಮಾತನಾಡಲು ಪ್ರಾರಂಭ ಮಾಡಿದಾಗ. ಈ ಮಾತು ಪ್ರಪಂಚದಲ್ಲಿರುವ ಎಲ್ಲಾ ಭಾಷೆಗಳಲ್ಲೂ ಮೈದಾಳುತ್ತದೆ ಎಂದು ಸೇಸ್ಯುರ್ ಸಾದರಪಡಿಸಿದ. ಇವಲ್ಲದೆ ಭಾಷೆಯ ಅನೇಕ ಸಾರ್ವರ್ತಿಕ ಗುಣಗಳನ್ನು ಸಹ ವಿಶ್ಲೇಷಿಸಿದ. ಯಾವುದೇ ;ಮಾತು’ ರೂಪ ಮತ್ತು ಅರ್ಥಗಳನ್ನು ಒಳಗೊಂಡಿರುತ್ತದೆ. ರೂಪವನ್ನು ವಿಶ್ಲೇಷಿಸಿದರೆ ‘ಅರ್ಥ’ ತನಗೆ ತಾನೆ ವ್ಯಕ್ತಗೊಳ್ಳುತ್ತದೆ ಎಂದು ತಿಳಿಸಿದ. ಈ ಮೂಲಭೂತ ವಿಚಾರಗಳು ಸಾಂಸ್ಕೃತಿಕ ಪಠ್ಯಗಳನ್ನು ವಿಶ್ಲೆಷಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು.

ಈ ಭಾಷಾಶಾಸ್ತ್ರದ ಹಿನ್ನೆಲೆಯಲ್ಲಿ ರಷ್ಯಾ, ಫ್ರಾನ್ಸ್ , ಜರ್ಮನಿ ಮುಂತಾದ ಐರೋಪ್ಯ ರಾಷ್ಟ್ರಗಳಲ್ಲಿ ಸಾಂಸ್ಕೃತಿಕ ಪಠ್ಯಗಳನ್ನು ನೋಡುವ ದಿಕ್ಕೇ ಬದಲಾಯಿತು. ಮುಖ್ಯವಾಗಿ ಸಾಹಿತ್ಯ ಪಠ್ಯಗಳನ್ನು ನೋಡುವ ದೃಷ್ಟಿ ಅತ್ಯಂತ ಕ್ರಾಂತಿಕಾರಕ ಬದಲಾವಣೆಯನ್ನು ಕಂಡಿತು. ಭಾಷಾಶಾಸ್ತ್ರಗ್ನರಂತೆ ಸಾಹಿತ್ಯಕ ಪಠ್ಯಗಳಲ್ಲಿ ಇರುವ ಸಾರ್ವರ್ತಿಕ ನಿಯಮಗಳನ್ನು ವಿಶ್ಲೇಷಿಸುವುದೇ ಸಾಹಿತ್ಯ ಚಿಂತಕನ ಗುರಿಯಾಗಬೇಕು.ಏಕೆಂದರೆ ಸಾಹಿತ್ಯಕೃತಿ ರಚನೆಯಾಗುವುದು ಭಾಷೆಯ ಮೂಲಕವೇ ಆದ್ದರಿಂದ ಭಾಷೆಯ ಪ್ರತಿರೂಪವೇ ಸಾಹಿತ್ಯ ಎಂದು ಪರಿಗಣಿಸತೊಡಗಿದರು.

ಈ ಮೇಲಿನ ಭಾಷಾಗುಣಗಳನ್ನು ಸಾಹಿತ್ಯಕ್ಕೆ, ಅದರಲ್ಲೂ  ಕಾದಂಬರಿಗಳಲ್ಲಿ ಈ ಭಾಷಾ ನಿಯಮ ಹೇಗೆ ಕೆಲಸ ಮಾಡುತ್ತದೆ ಮತ್ತು ಆ ನಿಯಮವನ್ನು ಕ್ರಿಯಾತ್ಮಕತೆ ಹೇಗೆ ಮುರಿಯುತ್ತದೆ ಎಂಬುದ್ದನ್ನು ಪರೀಕ್ಷಿಸಿದ ಮೊದಲಿಗನು ರಷ್ಯಾ ದೇಶ ಮಿಖೈಲ್ ಮಿಖೈಲೋವಿಚ್ ಬಖ್ಥಿನ್ ಎಂಬ ಭಾಷಾಜ್ಞಾನಿ  (೧೮೯೫-೧೯೭೫). ಈತ ಹುಟ್ಟಿದ್ದು ರಷ್ಯಾದ ಮಾಸ್ಕೋ ಪಟ್ಟಣದ ಪಕ್ಕದ ಹಳ್ಳಿ ಒರೆಲ್ ನಲ್ಲಿ . ೧೯೧೩ರಲ್ಲಿ ಚಾರಿತ್ರಿಕ ಮತ್ತು ಭಾಷಾಶಾಸ್ತ್ರದ ವಿಭಾಗದ ವಿದ್ಯಾರ್ಥಿಯಾಗಿ ಸ್ಥಳೀಯ ವಿಶ್ವವಿದ್ಯಾನಿಲಯಕ್ಕೆ ದಾಖಲಾದ. ೧೯೧೮ರಲ್ಲಿ ತನ್ನ ಡಿಗ್ರಿಯನ್ನು ಪಡೆದುಕೊಂಡು ನೆವೆಲ್ ಎಂಬ ಹಳ್ಳಿಯಲ್ಲಿ ಶಾಲಾ ಅಧಾಪಕನಾಗಿ ಸೇರಿದ. ಅಲ್ಲಿ ಎರಡು ವರ್ಷ ಕೆಲಸಮಾಡುತ್ತಿದ್ದಾಗ ‘ಬಖ್ತಿನ್ ಸರ್ಕಲ್’ ಎಂಬ ಸಾಂಸ್ಕೃತಿಕ ವೇದಿಕೆಯನ್ನು ಪ್ರಾರಂಭಿಸಿದ. ಈ ಭಾಷಾವಿಜ್ಞಾನಿಯಿಂದಲೇ ನಂತರ ಬಂದು ರೂಪವಾದ, ಸಂರಚನಾವಾದ, ರಚನೋತ್ತರವಾದ ಮುಂತಾದ ವಾದಗಳು ಸೃಷ್ಟಿಗೊಂಡವು. ಆದರೆ ಈತನ ಸಾಹಿತ್ಯಕ ಸಿದ್ದಾಂತ ೧೯೧೦ರ ದಶಕದಲ್ಲಿ ರಷ್ಯಾ ದೇಶವು ಜಾಗತಿಕ ಯುದ್ದದಲ್ಲಿ ಸೋತದ್ದು, ದೇಶದೊಳಗಿನ ಕ್ರಾಂತಿ, ಪೌರಯುದ್ಧಗಳು ಮತ್ತು ಬರ ಇವುಗಳಿಂದ ತತ್ತರಿಸಿದ ಪರಿಣಾಮವಾಗಿ ಬೇರೆಯದೇ ರೀತಿಯಾದ ಸಂಕಷ್ಟಕ್ಕೆ ಒಳಗಾಯಿತು.

ಮುಂದಿನ ದಶಕಗಳಲ್ಲಿ ಸ್ವಾಲಿನ್ ಯುಗ ಪ್ರಾರಂಭವಾದ ನಂತರ. ಬಖ್ತಿನ್ ಫ್ರಾಯ್ಡ್, ಮಾರ್ಕ್ಸ್ ಮತ್ತು ಭಾಷಾಸಿದಾಂತಗಳ ಮೇಲೆ ದಾಸ್ತೋವೆಸ್ಕಿ  ಕಾದಂಬರಿಗಳ ಮೇಲೆ ಬರೆದ ಒಂಭತ್ತು ಬೃಹತ್ ಪುಸ್ತಕಗಳು ಸ್ಪ್ಯಾಲಿನ್ನ ಕೆಂಗಣ್ಣಿಗೆ ಗುರಿಯಾದವು, ಯಾವ ಕಾರಣವನ್ನೂ ಒಡ್ಡದೆ ಸ್ಪ್ಯಾಲಿನ್ ಸರ್ಕಾರ ಇವನನ್ನ ಮೊದಲು ಸೈಬೀರಿಯಾ, ನಂತರ ಕಜಕಿಸ್ತಾನ್ ಜೈಲಿಗೆ ತಳ್ಳಿತು. ಹೀಗೆ ಅವನನ್ನ ಜೈಲಿಗೆ ತಳ್ಳವ ಹೊತ್ತಿಗೆ ಕಾಲಿನ ಮೂಳೆ ಕರಗುವ  ರೋಗಕ್ಕೆ ತುತ್ತಾಗಿ ಒಂದು ಕಾಲನ್ನೇ ಮಂಡಿಯವರೆಗೆ  ಕತ್ತರಿಸಲಾಗಿತ್ತು.  ಈತ ಜೈಲಿನಲ್ಲಿದ್ದಾಗ ಸಹಿಸಿದ ಕಪ್ಪಗಳು ಅಪಾರ. ಕೊರೆಯುವ ಚಳಿಯಲ್ಲಿ ಯಾವ ಪುಸ್ತಕಗಳ ಸಂಗಾತಿಯೂ ಇಲ್ಲದೆ ಕಾಲದೂಡಬೇಕಾಗಿ ಬಂದಿತು. ಆಗ ಸಹಾಯಕ್ಕೆ ಬಂದಿದ್ದ ಅವನ ಅಪಾರವಾದ ಜ್ಞಾಪಕಶಕ್ತಿ. ಅದನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ತನ್ನ ನೋವನ್ನು ಮರೆಯಲು ಬರವಣಿಗೆಯೇ ಮದ್ದು ಎಂದು ಭಾವಿಸಿದ. ಆದರೆ ಆತನಿಗೆ ಬರೆಯಲು ಆ ಜೈಲಿನಲ್ಲಿ ಕಾಗದವೇ ಸಿಗುತ್ತಿರಲಿಲ್ಲ. ಅದಕ್ಕಾಗಿ ಅವನು ಟಾಯ್ಲೆಟ್ ಪೇಪರ್ ಮೇಲೆ ತನ್ನ ಲೇಖನಗಳನ್ನು ಬರೆದಿಡುತ್ತಿದ್ದ. ಈತನ ಬರವಣಿಗೆ ಯಾರ ಕಣ್ಣಿಗೂ ಬೀಳದಂತೆ ನಡೆಯಬೇಕಿತ್ತು. ಒಬ್ಬಂಟಿಯಾಗಿಯೇ ಕಾಲದೂಡಲು  ಇಷ್ಟಪಡುತ್ತಿದ್ದ.ಇವನ ಮೇಲೆ ಜೈಲು ಅಧಿಕಾರಿಗಳ ಕಾವಲು ಕಣ್ಣು ಅವನನ್ನ ಹಿ೦ಬಾಲಿಸುತ್ತಲೇ ಇದ್ದವು. ಇದರಿಂದ ಈತ ಮಾನಸಿಕ ಕೈಕೋಭೆಗೆ ಒಳಪಡಬೇಕಾಯಿತು. ಪ್ರಾಯಶಃ ಈತ ಈ ಕಾಲದಲ್ಲಿ ನಮ್ಮ ಕನ್ನಡದ ಸಂಸನಂತೆ ಜೀವನ ನಡೆಸುತ್ತಿದ್ದಿರಬಹುದು ಎಂದು ಅನ್ನಿಸುತ್ತದೆ.

ಸುಮಾರು ಎರಡು ಪುಸ್ತಕಗಳನ್ನು ಬೇರೆ ಬೇರೆ ಹೆಸರುಗಳಲ್ಲಿ: ಬರೆದಿಟ್ಟಿದ್ದ, ಆದರೆ ಅವನನ್ನು ಒಂದು ಕಾರಾಗೃಹದಿಂದ ಮತ್ತೊಂದು ಕಾರಾಗೃಹಕ್ಕೆ ಬಲವಂತವಾಗಿ ಬದಲಾಯಿಸುವಾಗ ಕೆಲವು ಹಸ್ತಪ್ರತಿಗಳು ಕಣ್ಮರೆಯಾದವು, ಅಲ್ಲದೆ ಜರ್ಮನಿಯ ನಾಜಿಗಳು ಪ್ರಮುಖ ಪ್ರಕಾಶನವೊಂದನ್ನು ಸುಟ್ಟುಹಾಕಿದಾಗ ಅವನ ಉಳಿದ ಹಸ್ತಪ್ರತಿಗಳ ಕೆಲವು ಭಾಗ ಅಲ್ಲಿ ಸುಟ್ಟುಹೋದವು. ಅದರಲ್ಲಿ ಕೆಲವು ಅಳಿದುಳಿದ ಭಾಗಗಳನ್ನು ಸೇರಿಸಿ ಇದಾದ ೪೧ ವರ್ಷಗಳ ನಂತರ ಈ ಪುಸ್ತಕ ಪ್ರಕಟಗೊಂಡಿತು. ಮತ್ತೆ ಕೆಲವು ಪುಸ್ತಕಗಳನ್ನು ಅವನು ಕಾವ್ಯನಾಮದಿಂದ ಬರೆದಿದ್ದರು, ಅದರ ಶೈಲಿಯನ್ನು ಅನುಸರಿಸಿ ಅದನ್ನು ಬರೆದವನು ಬಖ್ತಿನ್ ನೆ ಎಂದು ಅವುಗಳನ್ನು ನಾಶಪಡಿಸಲಾಯಿತು. ಈ ಕಾರಾಗೃಹ ವಾಸದಲ್ಲಿದ್ದಾಗಲೇ ೧೯೩೦ರಲ್ಲಿ ‘ಡಿಸ್ಕೋರ್ಸ್ ಇನ್ ದಿ ನಾವೆಲ್’ ಎಂಬ ಪ್ರಮುಖ ಲೇಖನಗಳ ಮಾಲೆಯನ್ನೂ ಪ್ರಕಟಿಸಿದ. ೧೯೩೭ರಲ್ಲಿ ಬಖ್ತಿನ್ ಕಿಮ್ರಿ ಎಂಬ ಸಣ್ಣ ಪಟ್ಟಣಕ್ಕೆ ಹೋಗಿ ನೆಲೆಸಿ ೧೯ ನೆ ಶತಮಾನದ ಜರ್ಮನ್ ಕಾದಂಬರಿಗಳ ಬಗ್ಗೆ ಒಂದು ಪುಸ್ತಕವಾನು ಬರೆದ. ಆ ಪುಸ್ತಕ ಹಸ್ತ್ರಪ್ರತಿಯು ಜರ್ಮನ್ ರ ಮುತ್ತಿಗೆಯ ಕಾಲದಲ್ಲಿ ಕಣ್ಮರೆಯಾಯಿತು.

ತಾನು ಬರೆದಿದ್ದನ್ನು ತನ್ನ ಮರಗಾಲಿನ ಕಾಲುಚೀಲದ ಒಳಗೆ  ಸೇರಿಸಿಕೊಂಡು ಓಡಾಡುತಿದ್ದ . ಒಮ್ಮೆ ಈತನ ಕಷ್ಟವನ್ನು ಕಂಡ ಜೈಲರ್ ತನ್ನ ಅನಾರೋಗ್ಯದ ನಿಮಿತ್ತ ತನ್ನ ಕಾರಾಗೃಹ ವಾಸವನ್ನು ಕಡಿಮೆ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸುವಂತೆ ಸಲಹೆ ನೀಡಿದ. ಕನಿಕರಿಸಿದ ಜೈಲರ್ ಇವನನ್ನು ಕಜಕಿಸ್ತಾನಕ್ಕೆ ವರ್ಗಮಾಡಿ ಅಲ್ಲಿ ಖೈದಿಗಳಿಗೆ ಸಾಕ್ಷರತೆಯನ್ನು ಕಲಿಸಲು ಕಳುಹಿಸಿದನು. ಅಲ್ಲಿ ಈತನನ್ನ ಗ್ರಂಥಭಂಡಾರದಿಂದ ಖೈದಿಗಳಿಗೆ ಬೇಕಾದ  ಪುಸ್ತಕಗಳನ್ನ ವಿತರಿಸುವ ಕೆಲಸವನ್ನು ಹಚ್ಚಿದರು. ಗ್ರಂಥಭಂಡಾರ ಇವನಿಗೊಂದು ನಿಧಿಯೇ ಸಿಕ್ಕಂತಾಯಿತು. ದಾಸ್ತೊವೆಸ್ಕಿಯ ಕಾದಂಬರಿಗಳ ಅಧ್ಯಯನ ಮತ್ತು ಬರಹಗಳು ಅಲ್ಲಿ

ಸಾಧ್ಯವಾಯಿತು.

೧೯೪೦ರಿಂದ ೨ನೇ ವಿಶ್ವಯುದ್ಧದ ಕೊನೆಯವರೆಗೂ ಬಖ್ತಿನ್  ಮಾಸ್ಕೋದಲ್ಲಿ ನೆಲೆಸಿದ.  ಈ ಕಾಲದಲ್ಲಿ ರೆಬಿಲಿಯಾಸ್ ಮೇಲೆ ತನ್ನ ಮಹಾಪ್ರಬ೦ಧವನ್ನು ಗಾರ್ಕಿ ಇನ್ಸ್ಟಿಟ್ಯೂಟ್ ಗೆ ಸಲ್ಲಿಸಿದ. ಈ ಮಹಾಪ್ರಬಂಧ ಮಾಸ್ಕೋದ ವಿದ್ವಾಂಸರನ್ನು ಇಬ್ಭಾಗ ಮಾಡಿತು. ಕೆಲವರು ಇವನ ಬರಹವನ್ನು ಕಾರಣಸಹಿತ ಒಪ್ಪಿಕೊಂಡರೆ ಇವನ ವಿರೋಧಿಗಳು ಈ ಮಹಾಪ್ರಬಂಧವನ್ನು ತಿರಸ್ಕರಿಸಿದರು. ಇದು ಹುಟ್ಟುಹಾಕಿದ ವಾದ-ವಿವಾದ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕೊನೆಗೊಳ್ಳಬೇಕಾಯಿತು. ಕೊನೆಗೂ ಬಖ್ತಿನ್ ಗೆ ಡಾಕ್ಟರೇಟ್ ಸಿಗಲೇಯಿಲ್ಲ.

index೧೯೬೧ರ ನಂತರ ಬಖ್ತಿನ್ ನ ಆರೋಗ್ಯ ಹೆಚ್ಚು ಹೆಚ್ಚು ಆತಂಕಕಾರಿ ಸ್ಥಿತಿಗೆ ತಲುಪಿತು. ಅವನಿಗೆ ಮೂಳೆ ಕರಗುವ ರೋಗ ಉಲ್ಬಣಗೊಂಡಿದ್ದರಿಂದ ಔಷಧಿಗೂ ಹಣವಿಲ್ಲದೆ ತತ್ತರಿಸಿ ಹೋದ. ೧೯೬೯ರಲ್ಲಿ ಯಾರ ಕಣ್ಣಿಗೂ ಬೀಳದೆ ಅನಾಮಧೇಯನಾಗಿ ಸುತ್ತಾಡತೊಡಗಿದ. ಇವನ ಇರುವಿಕೆಯ ಬಗ್ಗೆಯೇ ಬಲ್ಲವರೆಲ್ಲರಿಗೂ ಅನುಮಾನ ಹುಟ್ಟಿತು. ೧೯೭೫ರ ತನಕ ಈತ ಮಾಸ್ಕೋದಲ್ಲಿ ಕಂಡಿದ್ದೇವೆಂದು ಜನಗಳು ಹೇಳುತ್ತಿದ್ದರು. ಪ್ರಾಯಶಃ ಈತ ೧೯೭೫ರಲ್ಲಿ ಸತ್ತಿರಬಹುದೆಂದು ತಿಳಿದುಬರುತ್ತದೆ. ಆದರೆ ಸ್ಪಷ್ಟವಾದ ಚಿತ್ರಣ ಯಾರಿಗೂ ಗೊತ್ತಿಲ್ಲದೇ ಗೋಪ್ಯವಾಗಿಯೇ ಚರಿತ್ರೆಯನ್ನು ಸೇರಿಬಿಟ್ಟಿದೆ. ಆದರೆ ಇವನ ಸಿದ್ದಾಂತಗಳು ಪ್ರಕಾಶಮಾನವಾಗಿ ಬದುಕಿ ವೈಶಾಲ್ಯತೆಯನ್ನು ಪಡೆಯುತ್ತಿದೆ.

ಬಖ್ತಿನ್ನ ಕೃತಿಗಳು ಜನಪ್ರಿಯವಾದದ್ದು ಅವನು ಸತ್ತನಂತರವೇ, ತನ್ನ ಜೀವಮಾನವಿಡೀ ಆತ ಕಷ್ಟ ಮತ್ತು ದಾರುಣವಾದ ಸ್ಥಿತಿಯಲ್ಲೇ ಕಳೆಯಬೇಕಾಯಿತು. ಅವನ ಮರಣಾನಂತರ ರಷ್ಯದ ಆರ್ಕೈವಲ್ ಮೂಲಕ ಅವನ ಜೀವನದ ಮಾಹಿತಿಗಳು ದೊರೆಯಲಾರ೦ಭಿಸಿತು.

ಅವನ ಮರಣಾನಂತರ ೧೯೭೫ರಲ್ಲಿ ರಚನೋತ್ತರವಾದಿಗಳಾದ ಜ್ಯೂಲಿಯಾ ಕ್ರಿಸ್ಸೆವಾ, ತೊದರೋವ್, ರೋಲಾಂ ಬಾರ್ಥ್, ಇವರು ಫ್ರೆಂಚ್ ಸಾಹಿತ್ಯ ಸಿದ್ದಾಂತಕ್ಕೆ ಇವನ ಸಿದ್ದಾಂತಗಳನ್ನು ಪರಿಚಯ ಮಾಡಿಕೊಟ್ಟ ಮೇಲೆ ಅಮೇರಿಕಾ, ಯೂರೋಪ್ ಮತ್ತಿತರ ದೇಶಗಳಲ್ಲಿ ಸುಪ್ರಸ್ಸಿದ್ದವಾಗಿ ಬೆಳೆಯಿತು. ೧೯೮೯ರ ದಶಕದಿಂದೀಚೆಗೆ ಪಾಶ್ಚಮಾತ್ಯ ದೇಶಗಳಲ್ಲಿ ಅತ್ಯಂತ ಪ್ರಮುಖ ಸಾಹಿತ್ಯ ಮತ್ತು ಸಂಸ್ಕೃತಿಯು ಸಿದ್ದಾಂತಿ ಎಂದು ಪ್ರಖ್ಯಾತನಾಗಿದ್ದಾನೆ.

ಬಖ್ತಿನ್ ಪ್ರಮುಖ ಕೃತಿಗಳೆಂದರೆ ಟುವರ್ಡ್ಸ್ ಎ ಫಿಲಾಸಫಿ ಆಫ್ ದಿ ಆಕ್ಸ್ (ಸಂಪೂರ್ಣವಾಗಿ ಮುಗಿಯದ ಕೃತಿ)  ಪ್ರಾಬ್ಲಂ ಆಫ್ ದಾಸ್ತೋವೆಸ್ಕೀಸ್ ಪೋಯಟಿಕ್ಸ್, ದ ಡೈಲಾಜಿಕ್ ಇಮ್ರಾಜಿನೇಷನ್.

ಬಖ್ತಿನ್ ದಾಸ್ಕೋವಸ್ಸ್ಕೀಯ ಕಾದಂಬರಿಗಳಲ್ಲಿ ಬಹುಮುಖಿ ಧ್ವನಿಗಳನ್ನು ಮೊದಲ ಬಾರಿಗೆ ಗುರ್ತಿಸಿದ್ದಾನೆ. ಆ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ವಿಶಿಷ್ಟವಾದ ಧ್ವನಿಯನ್ನು ಹೊರಡಿಸುತ್ತವೆ ಎಂದು ಪ್ರತಿಪಾದಿಸಿದ ಇದನ್ನು polyphony ಎಂದು ಕರೆದ. ಅಂದರೆ ಯಾವ ಪರಿಕಲ್ಪನೆಯೂ ಪ್ರತಿಯೊಬ್ಬ ವ್ಯಕ್ತಿಯಲ್ಲೂ ತನ್ನ ಬಗ್ಗೆ ಮತ್ತು ಇತರರ ಬಗ್ಗೆ ಪರಿಪೂರ್ಣವಾಗಿರುವುದಿಲ್ಲ, ಇದು ಯಾವಾಗಲೂ ತೆರೆದ ಧ್ವನಿಯಾಗಿರುತ್ತದೆ. ‘ಸತ್ಯವೂ ಕೂಡ ಪರಿಪೂರ್ಣವಲ್ಲ, ಸತ್ಯ ಎನ್ನುವುದು ಒಂದು ಉಲ್ಲೇಖವಲ್ಲ (statement) ಅಥವಾ ವಾಕ್ಯದಲ್ಲಿರುವುದಿಲ್ಲ. ಸತ್ಯವೂ ವೈದೃಶ್ಯದಿಂದಲೂ ಮತ್ತು ತಾರ್ಕಿಕವಾಗಿ ಅಸಂಬದ್ಧವಾದ ಹೇಳಿಕೆಯಂತೆಯೂ ಇರುತ್ತದೆ. ಸತ್ಯಕ್ಕೆ ಬಹುಮುಖ ಧ್ವನಿ ಇದ್ದೇ ಇರುತ್ತದೆ. ಸತ್ಯಕ್ಕೆ ನಾನಾ ಮುಖಗಳು.

ಈತ ಪ್ರಮುಖವಾಗಿ ಕಾದಂಬರಿಗಳು (ಯಾವುದೇ ಕ್ರಿಯಾತ್ಮಕ ಬರಹಗಳ) ಪರಿಣಾಮಕಾರಿಯಾಗಿರುವುದು ತನ್ನ ‘ಬಹುಮುಖ ಧ್ವನಿ’ ಗಳಿಂದ. ಈ ಬಹುಮುಖ ಧ್ವನಿ ಇದಾಗ ಕಾದಂಬರಿಯು ವಿಶಿಷ್ಟವಾಗಿರುತ್ತದೆ. ಉದಾಹರಣೆಗೆ ಕನ್ನಡದಲ್ಲಿ ಕುಸುಮಬಾಲೆ, ಮಲೆಗಳಲ್ಲಿ ಮದುಮಗಳು ಮುಂತಾದ ಕಾದಂಬರಿಗಳನ್ನು ಹೆಸರಿಸಬಹುದು. ಕುಸುಮಬಾಲೆಯಲ್ಲಿ ಈ ಗುಣ ಎದ್ದು ಕಾಣುತ್ತದೆ. ಈ ಕಾದಂಬರಿಯಲ್ಲಿ ಅರೆದೇವತೆಗಳಾದ ಜೋತಮ್ಮದಿರ ಧ್ವನಿ, ಮಂಚ ಮಾತನಾಡುವುದರ ಮೂಲಕ ಹೊರಡುವ ಚಾರಿತ್ರಿಕ ಧ್ವನಿ, ಕಳ್ಳನ ಧ್ವನಿ, ಕ್ರಿಯಾವಿಧಿಯ ಧ್ವನಿ, ಜಾನಪದ ಕಥಾನಕ ಶೈಲಿಯ ಧ್ವನಿ, ಮಾರ್ಕ್ಸಿಸ್ತರ, ವಿಚಾರವಾದಿಗಳ, ದಲಿತರ, ಪುರಾಣ

ಕಟ್ಟುವ ಮತ್ತು ಪುರಾಣವನ್ನು ಮುರಿಯುವ ಮೈದುಂಬಿ ಬರುವ ಕುರಿಯಯ್ಯನಿಂದ ಹೊರಡುವ ಧ್ವನಿ ಇತ್ಯಾದಿಗಳೆಲ್ಲ ಸೇರಿ ಬಹುಮುಖಿ ಧ್ವನಿ ಕನ್ನಡ ಕಾದಂಬರಿಗೆ ವಿಶೇಷವಾಗಿ ನೀಡಿರುವ ಕೊಡುಗೆ ಎಂದು ಭಾವಿಸಬಹುದು. ಸಾಹಿತ್ಯ ಪ್ರಕಾರ ಬೆಳೆದಂತೆಲ್ಲ ಅದು ತನ್ನ ಸಂಸ್ಕೃತಿಯ ಚರಿತ್ರೆಯನ್ನು ಹೆಚ್ಚ ಹೆಚ್ಚು ಬೆಳೆಸುತ್ತದೆ ಮತ್ತು ಹೆಚ್ಚ್ಹು ಹೆಚ್ಚ್ಹು ಜ್ನಾಪಿಸುತ್ತಿರುತ್ತದೆ. ಇಂತಹ ಭಾಷೆಗೆ ಚರಿತ್ರೆಯನ್ನು ಹೊಸದಾಗಿ ಕಟ್ಟಿಕೊಡುವ ಹೊಸ ನೋಟಕ್ಕೆ ಅಳವಡಿಸುವ ಶಕ್ತಿ ಇರುತ್ತದೆ (ಹೆಚ್ಚಿನ ವಿವರಿಗಳಿಗಾಗಿ ನೋಡಿ ಡೈಲಾಜಿಸಂ ಆಫ್ ದಿ ಮ್ಯೂಟ್, ಕಿಕ್ಕೇರಿ ನಾರಾಯಣ ೧೯೮೬).