Browsed by
Month: December 2016

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ಸಮಗ್ರ ಚರಿತ್ರೆಗೆ ಕೈಚಾಚಿದ ಜೇರ್ಡ್ ಡೈಮಂಡ್

ತಿಂಗಳು –ನವೆಂಬರ್ ೨೦೦೯

21ನಾವಾಗಲೇ ಮಾನವ ಜನಾಂಗದ ಚರಿತ್ರೆಯನ್ನು ಅರಿಯಲು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ರಾಜ-ಮಹಾರಾಜರ ಚರಿತ್ರೆ ಕಾರಣ- ಕದನ-ಫಲಿತಾಂಶವನ್ನು ಮುಂದಿಟ್ಟುಕೊಂಡು ಬರೆದ ಚರಿತ್ರೆ, ಡಾರ್ವಿನ್ನಿನ ವಿಕಾಸವಾದವನ್ನು ಆಧರಿಸಿ ಬರೆದ ಚರಿತ್ರೆ ಮಾರ್ಕ್ಸ್ ವಾದವನ್ನು ಆಧರಿಸಿದ ಚರಿತ್ರೆ ಇತ್ಯಾದಿ. ಅಲ್ಲದೆ ಇವುಗಳ ಒಳಪದರಗಳಿಂದ ಮೂಡಿಬಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಚರಿತ್ರೆಗಳನ್ನು ಕಂಡಿದ್ದೇನೆ. ಜನಾಂಗೀಯ, ವರ್ಣನೀತಿಯಿಂದ ರಚಿತವಾದ ಚರಿತ್ರೆಗಳನ್ನ ನಾವು ಕಂಡಿದ್ದೇವೆ. ಈ ನಮ್ಮ ಬಹುಪಾಲು ಚರಿತ್ರೆಗಳು ಲಿಖಿತ ಆಧಾರಗಳ ಮೇಲೆ ನಿಂತಿವೆ. ಅಂದರೆ ಸುಮಾರು ಮೂರು ಸಾವಿರ ವರ್ಷಗಳ ಚರಿತ್ರೆ ಮಾತ್ರ ದಕ್ಕಿದೆ. ಮನುಷ್ಯ ಬರವಣಿಗೆ ಕಂಡುಹಿಡಿದಿದ್ದು ಆ ಕಾಲದಲ್ಲಿ; ಆದರೆ ಅವನು ಸುಮಾರು ೭ ಮಿಲಿಯ ವರ್ಷಗಳಿಂದ ಈ ಭೂಮಿಯ ಮೇಲೆ ಬದುಕುತ್ತಾ ಬಂದಿದ್ದಾನೆ. ಇದಕ್ಕೆ ಹೋಲಿಸಿದರೆ ಬರವಣಿಗೆ ಅತ್ಯಂತ ಈಚಿನದೆಂದು ಕಂಡು ಬರುತ್ತದೆ. ಅಲ್ಲದೆ ಪ್ರಪಂಚದ ಬೇರೆ ಬೇರೆ ಖಂಡಗಳಲ್ಲಿ ಬದುಕಿರುವ ಅನೇಕ ಸಮಾಜದಲ್ಲಿ ಇನ್ನು ತಮ್ಮ ಭಾಷೆಯನ್ನೂ ಬರವಣಿಗೆಗೆ ಅಳವಡಿಸಿಕೊಂಡಿಲ್ಲ . ಅಂದರೆ ನಮ್ಮ ಇತಿಹಾಸ ರಚನೆ ಕೇವಲ ಪಾರ್ಶ್ವಿಕವಾದದ್ದು.

ಮೇಲೆ ಹೇಳಿದ ಎಲ್ಲಾ ರೀತಿಯ ಚರಿತ್ರೆಗಳನ್ನೂ ಬದಿಗಿರಿಸಿ ಇಡೀ ನಮ್ಮ ಜಗತ್ತನ್ನು ಒಂದು ಘಾತಕವೆಂದು ಪರಿಗಣಿಸಿ ವಿವಿಧ ಜ್ಞಾನ ಶಾಖೆಗಳಾದ ಪುರಾತತ್ವಶಾಸ್ತ್ರ , ಮಾನವಶಾಸ್ತ್ರ, ಭಾಷಾಶಾಸ್ತ್ರ, ಪ್ರಾಣಿಶಾಸ್ತ್ರ , ವಿಕಸನ ಜೀವಶಾಸ್ತ್ರ , ಭೂಗರ್ಭಶಾಸ್ತ್ರ ಇವೆಲ್ಲದರ ಹದವಾದ ಪಾಕದಿಂದ ಜೇರ್ಡ್ ಡೈಮಂಡ್ ಗನ್ಸ್, ಜರ್ನ್ಸ್, ಸ್ಟೀವ್, ದೇ ಫೇಟ್ಸ್ ಆಫ್ ಹ್ಯೂಮನ್ ಸೊಸೈಟಿ ಎಂಬ ಪುಸ್ತಕವನ್ನು ೧೯೯೭ರಲ್ಲಿ ರಚಿಸಿಕೊಟ್ಟಿದ್ದಾನೆ. ಐದು ನೂರು ಪುಟಗಳ ಈ ಪುಸ್ತಕದ ಹರವು ಅಪಾರವಾದದ್ದು.

ನಮ್ಮ ವಿಶ್ವವಿದ್ಯಾಲಯಗಳಲ್ಲಿ ಚರಿತ್ರೆಯನ್ನು ಇನ್ನೂ ವಿಜ್ಞಾನವೆಂದು ಪರಿಗಣಿಸಿಲ್ಲ. ಅದನ್ನು ಸಾಮಾಜಿಕ ಅಧ್ಯಯನದ ಒಂದು ಭಾಗವೆಂದೇ ಪರಿಗಣಿಸಲಾಗಿದೆ. ಅಲ್ಲದೆ ಚರಿತ್ರೆಕಾರರೆ ಅದನ್ನು ವಿಜ್ಞಾನವೆಂದು ಪರಿಗಣಿಸಿಲ್ಲ. ಚರಿತ್ರೆಯೆಂದರೆ ಕೆಲವು ವಿಷಯಗಳ ವಿಸ್ತಾರವಾದ ಮಂಡನೆ ಎಂದೂ ಒಂದಾದನಂತರ ಮತ್ತೊಂದು ಸಂಗತಿಯನ್ನು ಪೇರಿಸಿಡುವುದು ಎಂದು ಭಾವಿಸಿದ್ದಾರೆ ಎಂಬುದು ಜೇರ್ಡ್ ನ ಕೊರಗು, ಇದಕ್ಕಾಗಿಯೇ ಈತ ಚರಿತ್ರೆಗೆ ಸಂಬಂಧಪಟ್ಟ ಅಂತರರಾಷ್ಟ್ರೀಯ ಅಧ್ಯಯನಗಳನ್ನು ತನ್ನ ಸಾಧನವಾಗಿ ಬಳಸಿಕೊಂಡಿದ್ದಾನೆ.

ಈ ಜೇರ್ಡ್ ಡೈಮಂಡ್ ಮೂಲತಃ ಚರಿತ್ರೆಕಾರನಲ್ಲ. ತನ್ನ ತಂದೆಯಂತೆ ತಾನೂ ಡಾಕ್ಟರ್ ಆಗ ಬಯಸಿದವನು . ಅದಕ್ಕಾಗಿ ಎಳವೆಯಿಂದಲೇ ತಯಾರಿ ನಡೆಸಿದ್ದ. ಇವನ ಇನ್ನೊಂದು ಹವ್ಯಾಸವೆಂದರೆ ಹಕ್ಕಿಗಳ ವೀಕ್ಷಣೆ. ಈ ಚಟ ಎಲ್ಲಿಯವರೆಗೆ ಹೋಯಿತೆಂದರೆ ಔಷಧಶಾಸ್ತ್ರದ ಓದನ್ನು ಬಿಟ್ಟು ತನ್ನ ಕಾಲೇಜಿನ ವಿಧ್ಯಾಭ್ಯಾಸಕ್ಕೆ ಪ್ರಾಣಿಶಾಸ್ತ್ರವನ್ನು ಆರಿಸಿಕೊಂಡ. ಅತ್ಯಂತ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿದ್ದ ಈತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಸೇರಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪಡೆದ. ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಸೇರಿ ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ(೧೯೨೧). ನಂತರ ಜೀವವಿಕಾಸವಾದ ಮತ್ತು ಮಾಲಿಕ್ಯುಲಾರ್ ಜೀವಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ನಡೆಸಲು ಆಶಿಸಿದ. ಅದೇ ಸಮಯಕ್ಕೆ ಸರಿಯಾಗಿ ಆಸ್ಟ್ರೇಲಿಯಾ ಖಂಡ ಮೇಲ್ಭಾಗದಲ್ಲಿರುವ ಪಾಪುವಾ ನ್ಯುಗಿನಿಯಾ ದ್ವೀಪದಲ್ಲಿ ಅತ್ಯಂತ ಹಳೆಯ ಹಕ್ಕಿಯ ಪಳೆಯುಳಿಕೆ ಕಂಡು ಬಂದಿದೆ ಎಂಬ ಸುದ್ದಿ ಇವನನ್ನು ತಲುಪಿತು. ಈತ ಆ ದ್ವೀಪಕ್ಕೆ ಅತ್ಯಂತ ಉತ್ಶಾಹದಿಂದ ಹೋದ. ಆ ದ್ವೀಪದಲ್ಲಿರುವವರು ಮೂಲನಿವಾಸಿಗಳು ಬುಡಕಟ್ಟು ಸಂಸ್ಕೃತಿಗೆ ಸೇರಿದವರು. ಹೋದ ಮಾರನೆ ದಿನವೇ ಸಮುದ್ರ ದಂಡೆಯಲ್ಲಿ ವಾಕ್ ಮಾಡುತ್ತಿದ್ದಾಗ ಬುಡಕಟ್ಟು ಜನಾಂಗದ ಯಾಲಿ ಎಂಬುವವನ ಭೇಟಿಯಾಯಿತು. ಆತ ಕುತೂಹಲದಿಂದ ಜೇರ್ಡ್ ನನ್ನು ಪರಿಚಯ ಮಾಡಿಕೊಂಡು ಆತ ಅಲ್ಲಿಗೆ ಬಂದ ಕಾರಣ ಕೇಳಿದ. ಅದಕ್ಕೆ ಜೇರ್ಡ್ ‘ಒಂದು ಕಾಲದಲ್ಲಿ ಬದುಕ್ಕಿದ್ದು ಈಗ ಇಲ್ಲವಾಗಿರುವ ಪಕ್ಷಿಯ ಪಳೆಯುಳಿಕೆಯ ಬಗ್ಗೆ ಅಧ್ಯಯನ ಮಾಡಲು ಬಂದಿದ್ದೇನೆ’ ಎಂದ. ಆಶ್ಚರ್ಯಚಕಿತನಾದ ಯಾಲಿ, ‘ಅಲ್ಲಾ ಸ್ವಾಮಿ, ಯಾವುದೋ ಒಂದು ಕಾಲದಲ್ಲಿದ್ದ ಹಕ್ಕಿಯ ಬಗ್ಗೆ ಸಂಶೋಧನೆಗೆ ಬಂದಿದ್ದೀರಲ್ಲ, ಅದೂ ಅಮೆರಿಕಾದಿಂದ, ಇಲ್ಲಿ ಇನ್ನು ನಾವು ಬದುಕಿದ್ದೆವಲ್ಲ, ನಾವು ಯಾವ ಕಾಲದಿಂದ ಇಲ್ಲಿ ಇದ್ದೇವೆ(ಬಿಳಿಯರು ಏಕೆ ನಮ್ಮನ್ನು ಆಳುತ್ತಿದ್ದಾರೆ?) ಹೇಳಿ’ ಎಂದು ಕೇಳಿದ. ಈ ಪ್ರಶ್ನೆ ಜೇರ್ಡ್ ನನ್ನು ಅಚ್ಚರಿಗೊಳಿಸಿದ್ದೆ ಅಲ್ಲದೆ ತಲ್ಲಣಕ್ಕೂ ಈಡುಮಾಡಿತು. ಹೌದಲ್ಲ ಸತ್ತ ಹಕ್ಕಿಯ ಚರಿತ್ರೆಯನ್ನು ಹುಡುಕಿಕೊಂಡು ಬಂದವ ನಾನು. ಆದರೆ ಮಾನವನ ಚರಿತ್ರೆಯನ್ನೇ ತಿಳಿದಿಲ್ಲವಲ್ಲ ನಾನು’ ಎಂಬ ಅರಿವು ಜೇರ್ಡ್ ನಿಗಾಯಿತು.

22ಯಾಲಿ ಹಾಕಿದ ಈ ಪ್ರಶ್ನೆಗೆ ಉತ್ತರ ಕಂಡುಹಿಡಿದುಕೊಳ್ಳಲು ಹತ್ತು ವರ್ಷಗಳ ನಂತರ ಮಾನವ ಜನಾಂಗದ ಇತಿಹಾಸವನ್ನು ಕಂಡುಹಿಡಿಯಲು ಸರ್ವಸಿದ್ದತೆಗಳನ್ನು ಮಾಡಿಕೊಂಡು ೧೯೭೨ ರಲ್ಲಿ ಮತ್ತೆ ಪಾಪುವಾ ನ್ಯುಗಿನಿಯಾಗೆ ಬಂದ. ಆ ದ್ವೀಪದೇಶ ಆಸ್ಟ್ರೇಲಿಯಾದ ಬಿಳಿಯರ ವಸಾಹತುವಿನಿಂದ ಬಿಡುಗಡೆ ಪಡೆಯುವ ಸಿದ್ದತೆ ನಡೆಸಿತ್ತು. ಅಷ್ಟು ಹೊತ್ತಿಗಾಗಲೇ ಯಾಲಿ ಬುಡಕಟ್ಟು ಜನಾಂಗದ ನಾಯಕನಾಗಿ ಹೊರಹೊಮ್ಮಿದ್ದ.

ಜೇರ್ಡ್ ನ ಚರಿತ್ರೆಯ ದಾರಿ ಭಿನ್ನವಾಗಿತ್ತು. ಚರಿತ್ರೆಯ ಪುನಾಃರಚನೆ ಎಂದರೆ ವಿವಿಧ ವಿಜ್ಞಾನ ಶಾಖೆಗಳ ಜ್ಞಾನದ ಅನಿರ್ವಾರ್ಯತೆ ಇದೆಯೆಂದು ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಭಾಷಾಶಾಸ್ತ್ರಗಳ ಆಧಾರ ಒಂದು ಕಡೆಯಾದರೆ ಇನ್ನೊಂದು ಕಡೆ ಜೀವವಿಕಾಸವಾದ, ಪರ್ಯಾವರಣ ಅಧ್ಯಯನ, ಭೂಗರ್ಭಶಾಸ್ತ್ರದ ಅರಿವು ಇವೆಲ್ಲದರ ಜ್ಞಾನವನ್ನು ಹೊತ್ತು ನಡೆಸಿದ್ದ. ಆದರೆ ಜೇರ್ಡ್ ನ ಇತಿಹಾಸ ರಚನೆ ಪ್ರಾರಂಭವಾಗುವುದು ಇಂದಿನಿಂದ ಹದಿಮೂರು ಸಾವಿರ ವರ್ಷಗಳಿಂದ ಮಾತ್ರ. ಏಕೆಂದರೆ ಭೂಗರ್ಭಶಾಸ್ತ್ರದ ಪ್ರಕಾರ ಈ ಕಾಲದಲ್ಲಿ ಹಿಮಯುಗವು ಸರಿದು ‘ಇತ್ತೀಚಿನ’ ಯುಗ ಪ್ರಾರಂಭವಾಯಿತು. ಅಂದರೆ ಆಹಾರಕ್ಕಾಗಿ ಬೇಟೆಯಾಡಿ ಮತ್ತು ಅದರ ಜೊತೆ ತಿನ್ನಬಹುದಾದ ಸಸ್ಯಗಳ ಅನ್ವೇಷಣೆ ಮಾಡುತ್ತಿದ್ದ ಮನುಷ್ಯ ಒಂದು ಕಡೆ ತಳ ಊರಲು ಅಭ್ಯಾಸ ಮಾಡಿಕೊಳ್ಳುತ್ತಿದ್ದ ಕಾಲ. ಯಾವ ಬೆಳೆಗಳನ್ನು ಬಿತ್ತಿ ಬೆಳೆಯಬಹುದು, ಅದಕ್ಕಾಗಿ ಭೂಮಿಯನ್ನು ಹೇಗೆ ಉಪಯೋಗಿಸಬಹುದು, ಒಂದು ಕಡೆ ತಳ ಊರಿದರೆ ಆಹಾರಕ್ಕೆ ಯಾವ ಪ್ರಾಣಿಗಳನ್ನು ಪಳಗಿಸಿ ಸಾಕಬಹುದು ಅದರಿಂದ ಬೇಸಾಯಕ್ಕೆ ಏನಾದರು ನೆರವಾದೀತೇ ಎಂಬುದನ್ನು ಪರೀಶೀಲಿಸುತ್ತಿದ್ದ ಕಾಲ. ಒಂದು ರೀತಿಯಲ್ಲಿ ‘ಹೊಸ ತಾಂತ್ರಿಕತೆ’ಗೆ ಮನುಷ್ಯ ಸಿದ್ಧನಾಗುತ್ತಿದ್ದ ಕಾಲ. ಇದಕ್ಕೆ ಮುಂಚೆ ಏಳು ಮಿಲಯನ್ ವರ್ಷಗಳ  ಹಿಂದೆ ಮೂಲ ಮಾನವನ ನೆಲೆ ಆಫ್ರಿಕ ಖಂಡ ಎಂದು ಗುರುತಿಸಲಾಗಿದೆ. ಅಲ್ಲಿಂದ ಹಿಮಯುಗ ಮುಗಿಯುವವರೆಗೆ ಆತ ಭೂಮಿಯ ಬೇರೆ ಬೇರೆ ಕಡೆಗೆ ಪಸರಿಸಿದ ಎಂಬ ಸಿದ್ದಾಂತ ಪುರಾತತ್ವ ಮತ್ತು ಮಾನವಶಾಸ್ತ್ರಗಳಿಂದ ರೂಪುಗೊಂಡಿದೆ. ಅಂದರೆ ಕಳೆದ ಹದಿಮ್ಮೊರು ಸಾವಿರ ವರ್ಷಗಳಿಂದ ಆತ ಅಲೆಮಾರಿಯೇ ಆಗಿದ್ದ.

ಮಾನವ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಬೇಸಾಯ ಸಂಸ್ಕೃತಿ ಪ್ರಾರಂಭವಾದದ್ದು ಪಶ್ಚಿಮ ಏಷ್ಯಾದಲ್ಲಿ. ಇಲ್ಲಿ ಕ್ರಿ.ಪೂ.ಏಳು ಸಾವಿರ ವರ್ಷಗಳ ಹಿಂದೆ ಆಹಾರ ಉತ್ಪಾದನೆ ಪ್ರಾರಂಭವಾಯಿತು. ಈಗಿನ ಜೋರ್ಡಾನ್ , ಸಿರಿಯಾ,ಇರಾಕ್, ಟರ್ಕಿ ಈ ಭಾಗದಲ್ಲಿ. (ಇಲ್ಲಿಯೇ ಮೊದಲ ಬಾರಿಗೆ ಪಟ್ಟಣಗಳು, ಬರವಣಿಗೆ, ರಾಜ್ಯ, ನಾಗರೀಕತೆ ಪ್ರಾರಂಭವಾದದ್ದು) ಇಲ್ಲಿಂದ ಭೂಮಿಯ ಪಶ್ಚಿಮ ಮತ್ತು ಪೂರ್ವಾಭಿಮುಖವಾಗಿ ಈ ಬೆಳೆಗಳು , ಪ್ರಯಾಣ ಮಾಡಿದವು. ಜೇರ್ಡ್ ನ ಪ್ರಕಾರ ಈ ಭೂಭಾಗದಲ್ಲಿ ಆಹಾರ ಉತ್ಪಾದನೆ ಪ್ರಾರಂಭವಾದರೂ ಅದು ಸಮೃದ್ಧವಾಗಿ  ಬೆಳೆದದ್ದು ಯುರೋಪಿನಲ್ಲಿ. ಜೇರ್ಡ್ ನ ಪ್ರಮುಖವಾದ ವಾದವೆಂದರೆ ಮನುಷ್ಯನ ಅಭಿವೃದ್ಧಿಗೆ ಮುಖ್ಯಕಾರಣ ಆತ ಬದುಕುವ ಭೂಪ್ರದೇಶ; ಅಲ್ಲಿಯ ಪರ್ಯಾವರಣ; ಅದರಿಂದ ಆತ ಅಭಿವೃದ್ಧಿ ಹೊಂದುತ್ತಾನೆ ಎಂಬುದು.

23ಯಾವಾಗ ಮನುಷ್ಯ ಬೇಸಾಯ ಪ್ರಾರಂಭಿಸಿದನೋ ಆಗಿನಿಂದ ಆತನ ಬದುಕು ಬದಲಾಗಲು ಪ್ರಾರಂಭಿಸಿತು. ಬೇಸಾಯ ಯೋಗ್ಯ ಸಸ್ಯಗಳನ್ನು ಬೇಸಾಯಕ್ಕೆ ಒಗ್ಗಿಸಿಕೊಂಡ. ತಳ ಊರಿ ಬದುಕಲಾರಂಭಿಸಿದ . ಈ ಆಹಾರ ಉತ್ಪಾದನಾ ಸಂಸ್ಕೃತಿ ಬುಡಕಟ್ಟು ಜನಾಂಗದಲ್ಲಿ ಇಲ್ಲದ ಅನೇಕ ಖಾಯಿಲೆಗಳನ್ನು ಹುಟ್ಟು ಹಾಕಿತು. ಮನುಷ್ಯನ ಬಹುಪಾಲು ಖಾಯಿಲೆಗಳು ಸಾಕು ಪ್ರಾಣಿಜನ್ಯ ಎಂದು ಜೇರ್ಡ್ ಹೇಳುತ್ತಾನೆ. ಪ್ರಮುಖ ಖಾಯಿಲೆಗಳಾದ ಸಿಡುಬು,ಇನ್ಫುಎನ್ಜ , ಟಿಬಿ, ಮಲೇರಿಯ,ಪ್ಲೇಗ್, ದಡಾರ, ಕಾಲರಾ ಈ ಎಲ್ಲಾ ಖಾಯಿಲೆಗಳು ಮನುಷ್ಯನ ಇತಿಹಾಸವನ್ನು ರೂಪಿಸುವಲ್ಲಿ ಪ್ರಮುಖ ಪ್ರಾತ್ರವನ್ನೇ ವಹಿಸಿವೆ. ಎರಡನೇ ವಿಶ್ವ ಸಮರದ ತನಕ ಜನರು ಯುದ್ಧಗಳಲ್ಲಿ ಸತ್ತದ್ದಕ್ಕಿಂತ ಮಾರ್ಕ್ ರೋಗಗಳಿಗೆ ತುತ್ತಾದವರ ಸಂಖ್ಯೆ ಜಾಸ್ತಿ. ಹಿಂದಿನ ಅನೇಕ ಯುದ್ದಗಳನ್ನು ಗೆದ್ದವರು ಸೈನಿಕರಲ್ಲ. ಸೈನ್ಕರು ಹೊತ್ತು ತಂದ ಖಾಯಿಲೆಯ. ಯುರೋಪಿಯನ್ನರು ಮೊದಲು ಅಮೆರಿಕಾವನ್ನು ಗೆದ್ದಾಗ ಸ್ತಳೀಯ ಅಮೇರಿಕನ್ ಬುಡಕಟ್ಟು ಜನಾಂಗದವರು ಸತ್ತಿದ್ದು ಈ ಫಿರಂಗಿಯವರ ಖಾಯಿಲೆಯಿಂದ. ಆಫ್ರಿಕಾ ಮತ್ತು ಏಷ್ಯಾದಲ್ಲೂ ಇದೇ ರೀತಿಯಾಯಿತು. ತಲೆತಲಾಂತರದಿಂದ ಬಂದ ಖಾಯಿಲೆಯನ್ನು ತಡೆಯುವ ದೇಹಶಕ್ತಿ ಇಲ್ಲದ ಇತರರಿಗೆ ಇವರು ಸುಲಭವಾಗಿ ಬಳುವಳಿಕೊಟ್ಟರು. ಅಲಾಸ್ಕಾದ ಒಂದು ಇಡೀ ಬುಡಕಟ್ಟು ಜನಾಂಗ ಇದರಿಂದ ನಿರ್ನಾಮವಾಯಿತಂತೆ.

ಬೇಸಾಯ ಸಂಸ್ಕೃತಿ ಜನಸಂಖ್ಯೆ ವೃದ್ಧಿಯಲ್ಲಿ ಪಾತ್ರವಹಿಸಿತು. ಪಟ್ಟಣಗಳು ಹುಟ್ಟಿಕೊಂಡವು . ಪಟ್ಟಣಗಳಲ್ಲಿ ಒಟ್ಟೊಟ್ಟಿಗೆ ವಾಸಮಾಡುವ ಮನುಷ್ಯ ತಾನೇ ಈ ಖಾಯಿಲೆಗಳನ್ನು ಹರಡುವ ಮಾಧ್ಯಮವಾದ. ರೋಮನ್ನರ ವ್ಯಾಪಾರ ಮಾರ್ಗದಲೆಲ್ಲ ಈ ಖಾಯಿಲೆಗಳು ಹಬ್ಬಿದವು. ಕ್ರಿ.ಶ.೧೬೫ ರಲ್ಲಿ ಮಿಲಿಯಾಂತರ ರೋಮನ್ ಪ್ರಜೆಗಳು ಸಿಡುನಿಂದ ಸತ್ತರು. ಇದೆಲ್ಲ ಆದದ್ದು ಯೂರೋಪಿನ ಕೊಡುಗೆ ಎಂದು ಜೇರ್ಡ್ ನ ಸಂಶೋಧನೆ ತಿಳಿಸುತ್ತದೆ.

ಬೇಸಾಯ ಸಂಸ್ಕೃತಿಯ ಮತ್ತೊಂದು ಕೊಡುಗೆಯೆಂದರೆ ಬರಹ ಕಂಡುಹಿಡಿದಿದ್ದು. ಬರಹ ಚಾರಿತ್ರಿಕ ಕಾಲದ ಸಮಾಜದಲ್ಲಿ ಶಕ್ತಿಯುತವಾದ ಆಯುಧವಾಗಿ ಉಪಯೋಗಿಸಿಕೊಳ್ಳಲ್ಪಟ್ಟಿತು. ಶಾಸ್ತ್ರಗಳ ಜೊತೆ ಖಾಯಿಲೆ ತರುವ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬರಹವೂ ತನ್ನ ಕೊಡುಗೆಯನ್ನು ಕೊಟ್ಟಿದೆ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಕಂಡು ಹಿಡಿದ ಬರಹ ಮಾಧ್ಯಮ ಇತ್ತೀಚಿನವರೆಗೂ ಚಕ್ರವರ್ತಿಗಳು ಮತ್ತು ವ್ಯಾಪಾರಿಗಳು ತಮ್ಮ ಜ್ಞಾನಕ್ಕೆ ಬೇಕಾದಾದ್ದನ್ನೆಲ್ಲ ಬರಹದಲ್ಲಿ ಮೂಡಿಸುತ್ತಿದ್ದರು. ಇದು ಕೆಲವೇ ವರ್ಗದ ಕೆಲವೇ ಜನರಲ್ಲಿ ಕೇಂದ್ರಿಕೃತವಾಗಿತ್ತು. ಬರಹ ಮಾಧ್ಯಮ ಇದ್ದದ್ದೇ ಗುಲಾಮರನ್ನು ಸೃಷ್ಟಿಸುವುದಕ್ಕಾಗಿ ಎಂಬ ಲೆವಿಸ್ತ್ರಾಸ್ ನ ವಾದವನ್ನು ಜೇರ್ಡ್ ಸಮರ್ಥಿಸುತ್ತಾನೆ.ಇತ್ತೀಚಿನವರೆಗೂ ಬರವಣಿಗೆ ಬುಡಕಟ್ಟು ಜನಾಂಗಕ್ಕೆ ಬೇಕಾಗಿರಲಿಲ್ಲ. ಏಕೆಂದರೆ ಅಲ್ಲಿ ಕೇಂದ್ರಿಕೃತ ಆಡಳಿತವಿರಲಿಲ್ಲ. ಆಯಾ ದಿನದ ಬದುಕು ಅಂದೇ ಚುಕ್ತವಾಗುತ್ತಿತ್ತು . ಆದರೆ ಬೇಸಾಯ ಸಂಸ್ಕೃತಿ ಸ್ತರೀಕೃತ ಸಮಾಜವನ್ನು ಸೃಷ್ಟಿಸಿತು . ವರ್ಷಪೂರ್ತ ದುಡಿಯ ಬೇಕಾಗಿರಲಿಲ್ಲ. ಆಹಾರ ಶೇಖರಣೆ ಬಿಡುವನ್ನು ಕೊಟ್ಟಿತು. ಅಲ್ಲದೆ ಸಂಕೀರ್ಣ ರಾಜಕೀಯ ಕೇಂದ್ರಗಳನ್ನು ಸೃಷ್ಟಿಸಿತು . ತಮ್ಮ ತಮ್ಮ ಭೂಮಿಯನ್ನು ತಾವು ಕಾಪಾಡಿಕೊಳ್ಳಲು ಯುಧ, ಯುದ್ಧಕ್ಕೆ ಆಯುಧಗಳು ಇತ್ಯಾದಿ ತಾಂತ್ರಿಕತೆ ಈ ಸ್ತರೀಕೃತ ಸಮಾಜದ ಮೂಲ ವೃತ್ತಿಗಳಾದವು. ಇವುಗಳ ಲೆಕ್ಕವನ್ನಿಡಲು ಬರಹ ಬೇಕಾಯಿತು.

ಈ ರೀತಿಯ ಆಯುಧಗಳೆಲ್ಲ ಯುರೋಪಿನಲ್ಲೇ ಏಕೆ ಬಂತು ? ಯುರೋಪ್ ಏಕೆ ಪ್ರಪಂಚದ ಇತರ ದೇಶಗಳನ್ನು ಗೆಲ್ಲಲು ಹೊರಟಿತು? ತಾಂತ್ರಿಕತೆ ಏಕೆ ಇಲ್ಲಿ ಅಭಿವೃದ್ಧಿ ಹೊಂದಿತು? ಆಫ್ರಿಕಾ, ಏಷ್ಯಾ ಖಂಡಗಳೇಕೆ ಯೂರೋಪನ್ನು ಗೆಲ್ಲಲಿಲ್ಲ? ಇವಕ್ಕೆಲ್ಲ ಆಯಾ ದೇಶಗಳ ರಾಜಕೀಯ ನಿಲುವುಗಳೇ  ಕಾರಣ ಎಂಬುದು ಜೇರ್ಡ್ ನ ವಾದ. ಯೂರೋಪಿಗೆ ಸೆಡ್ಡು ಹೊಡೆಯಬಹುದಾಗಿದ್ದ ರಾಷ್ಟ್ರ ಚರಿತ್ರೆಯಲ್ಲಿ ಚೀನಾ, ೧೪ನೆ ಶತಮಾನದಲ್ಲೇ ಸಮುದ್ರಯಾನದಲ್ಲಿ , ಸಿಡಿಮದ್ದಿನ ತಯಾರಿಕೆಯಲ್ಲಿ , ಯುದ್ಧ ಕಲೆಯಲ್ಲಿ ಯುರೋಪಿಗಿಂತ ಎಷ್ಟೋ ಶತಮಾನಗಳ ಹಿಂದೆಯೇ ಈ ತಾಂತ್ರಿಕತೆಯನ್ನು ಕರಗತ ಮಾಡಿಕೊಂಡಿತ್ತು. ಚೀನಾದ ಯುದ್ಧದ ಹಡಗು ಒಮ್ಮೆ ಆಫ್ರಿಕ ದೇಶವನ್ನು ತಲುಪಿತ್ತು. ಆದರೆ ಚೀನಾದ ರಾಜಕೀಯ ನಿಲುವು ಯುದ್ಧವನ್ನು ನಿಯಂತ್ರಿಸುವುದಾಗಿತ್ತು ಮತ್ತು ಬೇರೆ ಬೇರೆ ದೇಶಗಳನ್ನು ಗೆಲ್ಲುವುದು ಆಗಿನ ಚೀನಾದ ರಾಜಕೀಯ ನಿಲುವಾಗಿರಲಿಲ್ಲ. ಅವರೇನಾದರೂ ತಮ್ಮ ನಿರ್ಧಾರವನ್ನು ವಿರುದ್ದ ರೀತಿಯಲ್ಲಿ ನಿರ್ಣಯಿಸಿದ್ದಾರೆ ಪ್ರಾಯಶಃ ಪ್ರಪಂಚದ ಇತಿಹಾಸ ಬೇರೆಯೇ ತರಹದ್ದಾಗಿರುತ್ತಿತ್ತು ಎಂಬುದು ಜೇರ್ಡ್ ನ ವಾದ.

ಅಂತೆಯೇ ಮಧ್ಯಯುಗದಲ್ಲಿ ಪ್ರಭಾವಶಾಲಿಯಾಗಿದುದ್ದು  ಅರಬ್ ದೇಶಗಳು. ಯುದ್ದ ಸಾಮಗ್ರಿಗಳ ತಾಂತ್ರಿಕತೆ ಇಲ್ಲೂ ಬೆಳೆದಿತ್ತು. ಆದರೆ ಧರ್ಮದ ಕೈ ಮೇಲಾದಾಗ ತಾಂತ್ರಿಕತೆ ಜ್ಞಾನ ಹಿಂದೆ ಬಿಟ್ಟು. ಅತ್ಯಂತ ಹೆಚ್ಚಿನ ಸಾಕ್ಷರತೆ ಇದ್ದ ಅರಬ್ ದೇಶಗಳು ಹಿಮ್ಮುಖ ಚಲನೆ ಪಡೆದವು ಎಂಬುದನ್ನು ಜೇರ್ಡ್ ವಿಶ್ಲೇಷಿಸುತ್ತಾನೆ.

ಆದ್ದರಿಂದ ಜೇರ್ಡ್ ನ ಪ್ರಾಕಾರ ಯುರೋ ಕೇಂದ್ರಿತ ರಾಜ್ಯಗಳ ರಾಜಕೀಯ ನಿಲುವು ಅಲ್ಲಿಯ ವಿಜ್ಞಾನ, ತಾಂತ್ರಿಕತೆ ಮತ್ತು ಸಮಾಜವನ್ನು ನಿಯಂತ್ರಿಸುತ್ತದೆ. ಮತ್ತೆ ಇದರ ಮೂಲ ಸ್ತಂಭ ಆಹಾರ ಉತ್ಪಾದನೆ.

ಜೇರ್ಡ್ ಪ್ರಪಂಚದ ಯಾವುದೇ ಜನಾಂಗವು ಬುದ್ದಿ ಮಾತ್ತೆಯಲ್ಲಿ ಹಿಂದೂ-ಮುಂದು ಎಂಬುದಿಲ್ಲ. ಬುದ್ದಿವಂತಿಕೆ ಎಲ್ಲಾ ಮಾನವರಲ್ಲೂ ಒಂದೇ ಸಮನಾಗಿರುತ್ತದೆ. ಇದು ವರ್ಗ, ವರ್ಣ, ಇದನ್ನು ಅವಲಂಬಿಸಿಲ್ಲ. ವೈವಿಧ್ಯ ಬದುಕು ಬುದ್ದಿವಂತಿಕೆಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿರುತ್ತದೆ . ಅದು ಅಮೆರಿಕಾದವರಿರಬಹುದು ಅಥವಾ ಬುಡಕಟ್ಟು ಜನಾಂಗದವರಿರಬಹುದು, ಎಲ್ಲರಲ್ಲೂ ಬುದ್ದಿಮತ್ತೆ ಅಷ್ಟೇ ತೀಕ್ಷ್ಣವಾಗಿರುತ್ತದೆ ಎಂಬುದನ್ನು ವಿವರಿಸಿ ಹೇಳುವುದು ಬಹಳ ಮುಖ್ಯವಾದ ಅಂಶ.

ಮಾನವನ ಇತಿಹಾಸದಲ್ಲಿ ಅತ್ಯಂತ ವೇಗದ ಬದಲಾವಣೆ ಕಂಡು ಬಂದದ್ದು ಕ್ರಿ.ಶ.೧೫ನೆ ಶತಮಾನದಿಂದ ಈಚೆಗೆ. ಅಲ್ಲಿಯವರೆಗೆ ಆತನ ಸಾಧನಗಳು ಮತ್ತು ಅವುಗಳ ಬದಲಾವಣೆ ನಡೆದದ್ದು. ಬಹಳ ನಿಧಾವಾಗಿ ಕಲ್ಲಿನ ಆಯುಧದಿಂದ ಆಧುನಿಕ ಅಣು ಬಾಂಬ್ ಗೆ ಬೆಳೆದು ಬಂದ ತಾಂತ್ರಿಕತೆಯ ಕಾರಿತ್ರೆ ಇವನ್ನು ಸ್ಪಷ್ಟಪಡಿಸುತ್ತದೆ. ಆಫ್ರಿಕ, ಆಸ್ಟ್ರೇಲಿಯಾ ಖಂಡಗಳಲ್ಲಿ ಖನಿಜಗಳಿಗೆ ಕೊರತೆ ಇಲ್ಲದಿದ್ದರೂ ಸುಮಾರು ಹದಿನೆಂಟನೆಯ ಶತಮಾನದವರೆಗೆ ಅದರ ಬಳಕೆ ನಲವತ್ತಕ್ಕೂ ಹೆಚ್ಚು ಬುಡಕಟ್ಟು ಜನಾಂಗಗಳಿಗೆ ಗೊತ್ತೇ ಇರಲಿಲ್ಲ. ಅದೆಲ್ಲ ಬಿಳಿಯರ ಪಾಲಾಯಿತು, ನಂತರದಲ್ಲಿ.

ಜೇರ್ಡ್ ಡೈಮಂಡ್ ನ ವಾದವೆಂದರೆ ಮನುಷ್ಯನ ಅಸಮಾನತೆಗೆ ಭೂಗುಣ, ಆಹಾರ ಉತ್ಪಾದನಾ , ಹವಾಮಾನ ಮೂಲ ಸೂತ್ರ. ಇದರ ಫಲಿತಾಂಶವೇ ಬಂದೂಕುಗಳು, ಖಾಯಿಲೆಯ ಸೂಕ್ಷ್ಮಾಣು ಜೀವಿಗಳೂ ಮತ್ತು ಉಕ್ಕು. ಈ ಮೂರು ಯೂರೋಪಿಯನ್ನರ ಪ್ರಮುಖ ಅಸ್ತ್ರಗಳಾದವು.

ಈ ರೀತಿಯ ನಿಲುವಿಗೆ ಆತ ಬರಲು ಪ್ರಮುಖ ಕಾರಣ ಪಾಪುವಾ ನೂಗಿನಿಯಾದ ಬುಡಕಟ್ಟು ಜನಾಂಗದ ಯಾಲಿ. ಈ ಪುಸ್ತಕ ರಚನೆಗೆ ಜೇರ್ಡ್ ಮೂವತ್ತು24 ಮೂರು ವರ್ಷಗಳನ್ನು ಮುಡುಪಾಗಿಡಬೇಕಾಯಿತು. ಅಲ್ಲದೆ ಇಡೀ ಪ್ರಪಂಚವನ್ನು ಸುತ್ತಿ ವಿವಿಧ ಜನಾಂಗಗಳ ಅಧ್ಯಯನವನ್ನು ವಿವಿಧಶಾಸ್ತ್ರಗಳ ಅಂತರಶಾಸ್ತ್ರೀಯ ಜ್ಞಾನದಿಂದ ಪುರಾವೆ ಸಮೇತ ಮುಂದಿಟ್ಟ. ಈ ಕೃತಿಗೆ ಅನೇಕ ಬಹುಮಾನಗಳನ್ನು ಪಡೆದ ಜೇರ್ಡ್ ಡೈಮಂಡ್ ಈಗ ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೂಗೊಳಶಾಸ್ತ್ರದ ಪ್ರಾಧ್ಯಾಪಕನಾಗಿದ್ದಾನೆ. ಈ ಕೃತಿಗೆ ಬಂದ ಪ್ರುಮುಖ ಬಹುಮಾನವೆಂದರೆ ಪ್ರತಿಷ್ಟಿತವಾದ ಪುಲ್ತ್ಜರ್ ಅವಾರ್ಡ್. ಈತನ ಇನ್ನೊಂದು ಪ್ರಮುಖ ಕೃತಿ ಎಂದರೆ ದಿ ಥರ್ಡ್ ಚಿಂಪಾಂಜಿ(೨೦೦೪). ಇದಕ್ಕೆ ಮೆಕಾರ್ಥರ್ ಬಹುಮಾನ ಬಂದಿದೆ. ಈ  ಕೃತಿಗಳನ್ನು ಈತ ಅತ್ಯಂತ ಕಳಕಳಿಯಿಂದ ರೇಸಿಸ್ಟ್ ಚರಿತ್ರೆಯನ್ನು ತಿರಸ್ಕರಿಸಿ ಸಾಮಾನ್ಯ ಮನುಷ್ಯನ ಚರಿತ್ರೆಯನ್ನೂ ಕೇಂದ್ರ ಮಾಡಿಕೊಂಡು ರಚಿಸಿದ್ದಾನೆ . ಚರಿತ್ರೆಗ್ ಒಂದು ವೈಜ್ಞಾನಿಕ ತಿರುವನ್ನು ನೀಡಿದ್ದಾನೆ.

ದಮನಿತರಿಗೆ ಧ್ವನಿ ಕೊಡುವ ಕೆಲಸ

ದಮನಿತರಿಗೆ ಧ್ವನಿ ಕೊಡುವ ಕೆಲಸ

ನಮ್ಮ ‘ಅರಿವಿನ ಸ್ಫೋಟ’ (epistomological break) ಹೋಲಿಸಿದ ಅನೇಕ ಬರಹಗಳ ವಿಶ್ವವಿದ್ಯಾಲಯದ ಭದ್ರ ಗೋಡೆಯ ಆಚೆ ನಡೆಯುತ್ತಿರುತ್ತವೆ. ಗೆಲಿಯಾನೋನಾ ‘ಬೆಂಕಿಯ ನೆನಪು’ ಹೀಗೊಂದು ಕೃತಿ. ಈ ಕೃತಿ ಯಾವ ಚರಿತ್ರೆಯ ಸಿದ್ದಾಂತಗಳ ಭಾರದಿಂದಲೂ ಕುಸಿದಿರದ ಕಥಾನಕ. ಈ ಚರಿತ್ರೆಯನ್ನು ಕಾಣಲು ಸಾಧ್ಯವಾಗುವುದು ಔಪಚಾರಿಕ ಹಿನ್ನೆಲೆಯಲ್ಲಿ ಕಲಿತ ಸಿದ್ದಾಂತಗಳನ್ನು ಮರೆಯುವ ಸಾಧ್ಯತೆ ಇದ್ದಾಗ ಮಾತ್ರ. ಗೆಲಿಯಾನೋನನ್ನು ಓದಿದ ಮೇಲೆ ಚರಿತ್ರೆ ಯಾವುದೆಂದರೆ ಇದಲ್ಲ, ಇದಲ್ಲ, ಇದಲ್ಲ, ಹಾಂ! ಇದು ! ಎನ್ನಿಸುವ ಮನಸ್ಸನ್ನು ಸೃಷ್ಟಿಸುವುದು. ‘ಅವರ ಬಿಟ್ಟು, ಅವರ ಬಿಟ್ಟು ಅವರ್ಯಾರು?” ಎಂದು ಕೇಳಿ ತಿಳಿಯುವ ಸಾಮರ್ಥ್ಯವನ್ನು ಹೀಗೆ ನೀಡುವ ರೂಪ ಮತ್ತು ರೂಪಕ ಎರಡೂ ಆದ ‘ಬೆಂಕಿಯ ನೆನಪು’.

ಹೀಗೆಂದಾಕ್ಷಣ ರಾಜಕೇಂದ್ರಿತ ಚರಿತ್ರೆ, ಅಧಿಕಾರಶಾಹಿ ರಚಿಸಿದ ಚರಿತ್ರೆ, ಜನ ಕಟ್ಟಿದ ಜನಪದ ಚರಿತ್ರೆ (heroic epicvs, ballads) ಇವು ಯಾವುವು ಸಂಪೂರ್ಣ ತಪ್ಪೆಂದಲ್ಲ. ಇವು ಪರಿಪೂರ್ಣ ಅಲ್ಲ ಎಂದಷ್ಟೇ. ಇವೆಲ್ಲವಕ್ಕೂ ತಮ್ಮದೇ ಆದ ನಿಳುವುಗಲಿರುತ್ತವೆ. ಕಾಣುವ ಕ್ರಿಯೆ ಇರುತ್ತದೆ. ಆದರೆ ಈ ಚರಿತ್ರೆಗಳಲ್ಲಿ ಮನಷ್ಯ ಮಾತ್ರ ಸ್ಥಾಪಿತವಾಗಿರುವುದಿಲ್ಲ. ಜನಪದ ಚರಿತ್ರೆಯಲ್ಲಿ ಮಾತ್ರ ಮನುಷ್ಯ ಪ್ರತಿಷ್ಟಾಪಿತನಾಗಿರುವುದನ್ನು ಕಾಣಬಹುದು. ಏಕೆಂದರೆ ಜನಪದರು ತ್ರಿಕಾಲವನ್ನು ಒಟ್ಟುಗೂಡಿಸಿ ಘಟನೆಯನ್ನು ನೋಡಲು ಪ್ರಯತ್ನಿಸುತ್ತಾರೆ. ಏಕ ಕಾಲದಲ್ಲಿ ಅದು ವರ್ತಮಾನ, ಭೂತ, ಭಾವಿಶಯತ್ತಿನ ಕಡೆಗೆ ಮುಖ ಮಾಡಿರುತ್ತದೆ, ಇವೆ ಪುರಾಣ – ಇತಿಹಾಸ ಸೃಷ್ಟಿಗೆ ನಾಂದಿಯಾಗುವುದು. ಇದು ಭಾರತ ದೇಶದ ಜನರು ಚರಿತ್ರೆಯನ್ನು ನೋಡುವ ಕ್ರಮ. ಆದ್ದರಿಂದ ಇದೊಂದು ರೀತಿಯ ಮನುಷ್ಯನ ಮನಸ್ಸನ್ನು ಹಿಡಿಯುವ ಚರಿತ್ರೆಯಾಗಿರುತ್ತದೆ. ಚರಿತ್ರೆಯಲ್ಲಿ ಮನುಷ್ಯನನ್ನು ಸ್ಥಾಪಿಸಿದಾಗಲೇ ಅದಕ್ಕೆ ಜೀವ ಬರುವುದು.

ಚರಿತ್ರೆಯು ಮನುಷ್ಯನ ಮನಸ್ಸಿನ ಬೆಳವಣಿಗೆಯ ಪ್ರತೀಕವಾದಾಗಲೇ ಹಿಸ್ಟರಿ ಆಫ್ ಐಡಿಯಾಸ್ ಆಗುತ್ತದೆ, ‘ಇತಿಹಾಸ’ ವಾಗುತ್ತದೆ. ಸಾಂಸ್ಕೃತಿಕ ಸಂವಾದವಾಗುತ್ತದೆ. ಕಥಾನಕವಾಗುತ್ತದೆ. ಇದನ್ನೇ ಭಾರತದಲ್ಲಿ ಪುರಾಣೆತಿಹಾಸ ಎಂದು ಕರೆಯುತ್ತಾರೆ.

ಕನ್ನಡದ ಸಂದರ್ಭದಲ್ಲಿ ಈ ರೀತಿಯ ಇತಿಹಾಸ ರಚಿತವಾಗಿರುವುದು ಶಿವರಾಮಕಾರಂತರ ‘ಮೂಕಜ್ಜಿಯ ಕನಸು’ ಕಥಾನಕದಲ್ಲಿ. ಇದು ಎ ದೇಶದ ಧರ್ಮಗಳ, ಹೆಣ್ಣು – ಗಂಡುಗಳು ಪರಸ್ಪರ ತಮ್ಮನ್ನು ಕಂಡುಕೊಳ್ಳುವ , ಸಾಮಾಜಿಕ ರೀತಿ – ನೀತಿಗಳನ್ನು, ಅವುಗಳು ಕಾಲದಿಂದ ಕಾಲಕ್ಕೆ ಬದಲಾಗುವ, ಆದರೆ ಮನಸ್ಸಿನ ತಳದಲ್ಲೆಲ್ಲೋ ‘ಆಡಿಮತೆ’ ಉಳಿದೇ ಬಿಟ್ಟಿರುವ ವಿವಿಧ ಮುಖಗಳನ್ನು ಚಿತ್ರಿಸುವ ಸಂವಾದವಾಗಿ ಬೆಳೆದು ಬಂದಿದೆ. ಆದ್ದರಿಂದ ಇದು ದಿನಾಂಕಗಳ ಚರಿತ್ರೆಯಲ್ಲ, ಕಾರ್ಯಕಾರಣ ಸಂಬಂಧದ ಚರಿತ್ರೆಯಲ್ಲ, ವರ್ಗ ಸಂಘರ್ಷದ ಚರಿತ್ರೆಯಲ್ಲ, ಆದರೆ ಅವೆಲ್ಲವುಗಳ ಪಾಕವಾಗಿದೆ. ಭೂತದೊಡನೆ ವರ್ತಮಾನ ನಡೆಸುವ ಅನುಸಂಧಾನವಾಗಿದೆ.

ಇಷ್ಟೆಲ್ಲಾ ಏಕೆ ಹೇಳಿದೆನೆಂದರೆ ಚರಿತ್ರಯೆಂದರೆ ಮನದಾಳದಲ್ಲಿ ಸೂಕ್ಷ್ಮವಾಗಿ ಕೆತ್ತಿದ ರಚನಾ ಪ್ರಕ್ರಿಯೆಯಾಗಿರುತ್ತದೆ. ಇದನ್ನು ಕೆದಕಬೇಕೆಂದರೆ ನೆನಪುಗಳು ಒಂದು ಜನಾಂಗವನ್ನು ಒಂದುಗೂಡಿಸಿ ಮುನ್ನಡೆಸುವ ಪ್ರಕ್ರಿಯೆಯಾಗಿ ಕೆಲಸ ಮಾಡುತ್ತಿರುತ್ತದೆ.(ಒಡೆಯಲೂ ಸಹ).

ಇದಕ್ಕಾಗಿಯೇ ಗೆಲಿಯಾನೋ ತನ್ನ ಕಥಾನಕವನ್ನು ‘ಬೆಂಕಿಯ ನೆನಪುಗಳು’ ಎಂದು ಕರೆದಿದ್ದಾನೆ. ಈ ಬೇಂದ್ಕಿಯಂತಹ ನೆನಪುಗಳ ಪುನರ್ ಸೃಷ್ಟಿ ಕಾರ್ಯ ಈ ಕೃತಿಯಲ್ಲಿ ನಡೆಯುತ್ತಲೇ ಇರುತ್ತದೆ. ಆದ್ದರಿಂದಲೇ ತನ್ನ ಮುನ್ನುಡಿಯಲ್ಲಿ ‘ನಾನು ಇತಿಹಾಸಕಾರನಲ್ಲ, (ಮೂಲತಃ ಗೆಲಿಯಾನೋ ಇತಿಹಾಸದ ವಿದ್ಯಾರ್ಥಿ ) ನಾನೊಬ್ಬ ಬರೆಹಗಾರ, ಇಡೀ ಅಮೆರಿಕಾದ ಅದರಲೂ ನನ್ನ ಪ್ರೀತಿಯ ನೆಲವಾದ ತಿರಸ್ಕೃತ ಲ್ಯಾಟಿನ್ ಅಮೆರಿಕಾದ ‘ಅಪಹೃತ ಸ್ಮೃತಿ’ಯ ಬಿಡುಗಡೆಯ ಯತ್ನಕ್ಕೆ ಕಿಂಚಿತ್ ಕೊಡುಗೆ ನೀಡಬಯಸುವ ಲೇಖಕ’ ಎಂದು ವಿನಯಾಪೂರ್ನವಾಗಿ ಹೇಳಿಕೊಂಡಿದ್ದಾನೆ.ಒಂದು ರೀತಿಯಲ್ಲಿ ಮನುಷ್ಯನ ಇತಿಹಾಸವೇ ಒಬ್ಬನ ಮೇಲೆ ಇನ್ನೊಬ್ಬ ತನ್ನ ಅಧಿಕಾರವನ್ನು ಹೆರುವ ಇತಿಹಾಸ ಆಗಿಬಿಟ್ಟಿರುತ್ತದೆ. – ಭೌತಿಕವಾಗಿಯೂ, ಬೌಧಿಕವಾಗಿಯೂ. ಆದರೆ ನಮಗೆ ಕೇಳಿಸುವುದು ಮಾತ್ರ ಬಲಾಡ್ಯನ ಧ್ವನಿ. ಗೆಲಿಯಾನೋ ಈ ಕಥಾನಕದಲ್ಲಿ ಮಾಡಿರುವುದು ದಮನಕ್ಕೊಳಗಾದ ಲ್ಯಾಟಿನ್ ಅಮೆರಿಕಾದ ಜನಾಂಗಗಳಿಗೆ ಧ್ವನಿ ಕೊಡುವು ಕೆಲಸ. ಆದ್ದರಿಂದ ಈ ನೆನಪು ‘ಬೆಂಕಿಯ ನೆನಪು’.

‘ಬೆಂಕಿಯ ನೆನಪು’ ಕೃತಿಯನ್ನು ಕನ್ನಡಕ್ಕೆ ತಂದಿರುವ , ತನ್ನ ಅಸ್ತಿತ್ವದ ಇತಿಹಾಸವನ್ನೇ ಮತೆತಂತಿರುವ ನನ್ನ ಬಹುಕಾಲದ ಗೆಳೆಯ ಕೆ.ಪಿ.ಸುರೇಶ , ಈ ಕೃತಿಯನ್ನು ನನ್ನ ಕೈಗೆ ಕೊಟ್ಟಾಗ ಓದಿದೆ. ಒಮ್ಮೆಯಲ್ಲ , ಐದು ಬಾರಿ. ಐದು ಬಾರಿ ಓದಿದಾಗಲೂ ನನ್ನ ಬುದ್ದಿ ಕೋಶ ಭಾವಕೋಶದೊಳಗೆ ಅಡಗಿ ಕುಳಿತುಬಿಟ್ಟಿತು . ಪ್ರಜ್ಞಾಪೂರ್ವಕವಾಗಿ ಇದರ ಬಗ್ಗೆ ಆಲೋಚಿಸುವಾಗಲೆಲ್ಲಾ ಅಪ್ರಜ್ಞಾಪೂರ್ವಕವಾಗಿ ಭಾವಕೋಶಕ್ಕೆ ಜಾರಿಕೊಂಡುಬಿಟ್ಟಿದ್ದೇನೆ.

ಈ ತ್ರಿವಳಿ ಪುಸ್ತಕಗಳ ಮೊದಲ ಭಾಗ – ಕೊಲಂಬಸ್ ಬಂದು ಕಾಲೂರುವ ತನಕ ಪುರಾಣೆತಿಹಾಸ ಸ್ಥಲೇಎಯ ಅಮೆರಿಕನ್ನರು ತಮ್ಮನ್ನು, ತಮ್ಮ ಹುಟ್ಟನ್ನು, ತಮ್ಮ ಪ್ರಾಪಂಚಿಕ ದೃಷ್ಟಿಯನ್ನು ರೂಢಿಸಿಕೊಂಡು ತಮ್ಮಷ್ಟಕ್ಕೆ ತಾವು ಬದುಕುತ್ತಿದ್ದರು. ಕಾಲವನ್ನು ಗುರುತಿಸಲು ಕಲಿತರು, ತಮ್ಮದೇ ಆದ ಜಗತ್ತನ್ನು ಸೃಷ್ಟಿಸಿಕೊಂಡರು. ಗಂಡು – ಹೆಣ್ಣು ಜೊತೆಯಲ್ಲಿ ಬಾಳಿ ಬದುಕುವುದು, ಸ್ಸವನ್ನು ಎದುರಿಸುವುದನ್ನು ಕಲಿತರು. ‘ಹುಟ್ಟಿ ಸಾಯುವವರು, ಮತ್ತೆ ಹುಟ್ಟುವವರು, ಅವರು ಜನ್ಮಿಸುವುದಕ್ಕೆ ಅಂತ್ಯವಿಲ್ಲ. ಯಾಕೆಂದರೆ ಸಾವೆಂಬುದು ಮಿಥ್ಯ’ ತಮ್ಮಷ್ಟಕ್ಕೆ ತಾವು ಆಯಾ ದಿಂದ ಆಹಾರವನ್ನುಯ್ ಸಂಗ್ರಹಿಸಿಕೊಂಡು , ಹಂಚಿಕೊಂಡು ಇರುವ ಕಾಲ.

ಆದರೆ ಯುಕಾಟಿನ್ ಪುರೋಹಿತ ದೇವರ ಸಂದೇಶವನ್ನು ಕೇಳಿಸಿಕೊಂಡು ಹೇಳುವುದು ಅತ್ಯಂತ ಮಾರ್ಮಿಕವಾಗಿದೆ. ‘ಜಗದ ಉದ್ದಗಲಕ್ಕೂ ಹಾದಿ ಕುಣಿವ ಹೆನ್ನುಗಲಿರುತ್ತಾರೆ. ದುರಾಸೆಯ ಆಳ್ವಿಕೆಯ ಕಾಲದಲ್ಲಿ ಸಂಕಷ್ಟ ಅಧಿಕವಾಗಿರುತ್ತದೆ. ಮನುಷ್ಯರು ಗುಲಾಮರಾಗುತ್ತಾರೆ. ಸೂರ್ಯನ ಮುಖ ವಿಷಾದದಿಂದ ಕೂಡಿರುತ್ತದೆ. ಪ್ರಪಂಚದಲ್ಲಿ ಜನ ನಶಿಸುತ್ತಾರೆ. ಪ್ರಪಂಚ ಅವಮಾನದಿಂದ ಕುಬ್ಜವಾಗುತ್ತದೆ”.

ಆಳರಸರ, ಅಧಿಕಾರಶಾಹಿಗಳ ಚರಿತ್ರೆ ತಮ್ಮ ಧ್ವನಿಯನ್ನು ಮಾತ್ರ ಕೆತ್ತಿರುವಂತಹ ಚರಿತ್ರೆ. ಈ ಚಾರಿತ್ರಿಕ ಕಥನವು ನೆರವಾಗಲ್ಲದಿದ್ದರೂ, ಪರೋಕ್ಷವಾಗಿ ತಮ್ಮ ಚಹರೆಗಳನು ಬಿಟ್ಟಿರುತ್ತದೆ. ಈ ಚರೆಗಳು ಮೌನವಾಗಿ ಪಠ್ಯಗಳಲ್ಲಿ ಅಡಗಿ ಕುಳಿತಿರುತ್ತದೆ. ಇಂತಹ ಮೌನ, ಮಾತಿಗಾಗಿ ಗೆಲಿಯಾನೋನಂತಹ ಮನಸ್ಸುಳ್ಳ ವ್ಯಕ್ತಿಗಳಿಗಾಗಿ ಕಾಯುತ್ತಾ ಕುಳಿತ್ತಿರುತ್ತದೆ. ಅಧಿಕಾರಶಾಹಿ ಹೆಜ್ಜೆ ಗುರುತನ್ನು ಅನುಸರಿಸಿ ದಮಕ್ಕೊಳಗಾದವರ ಚರಿತ್ರೆಯನ್ನು, ಉಂಟಾಗಿರುವ ಗ್ಯಾಪ್ ಗಳನ್ನೂ ಗೆಲಿಯಾನೋ ತುಂಬಿಕೊಟ್ಟಿದ್ದಾನೆ. ಮೌನವಾಗಿ ಮಾತನಾಡಿಸಿದ್ದಾನೆ . ಇಂತಹ ಇತಿಹಾಸ ಬರೆದವರ ಭಾಷೆಯನ್ನೇ ಬಳಸಿ ಅವರಿಗೇ ತಿರುಗೇಟು ಕೊಡುತ್ತಾನೆ.

ಗೆಲಿಯಾನೋ ೧೬೯೩ರಿಂದ ಈಚಿನ ಲ್ಯಾಟಿನ್ ಅಮೆರಿಕಾದ ಇತಿಹಾಸವನ್ನು ಆ ಘಟನೆಗಳು ನಡೆದ ವರ್ಷಗಳನ್ನು ನಮೂದಿಸುತ್ತಾನೆ. ಹೀಗೆ ನಡೆದ ಘಟನೆಗಳ ಆಯ್ಕೆ ಮತ್ತು ಸಂಯೋಜನೆ ಚರಿತ್ರೆಯ ಆಧಾರ ಪಡೆದಿದ್ದರೂ ಚರಿತ್ರೆಯ ನಿರ್ವಹಣೆಯ ರೀತಿಯನ್ನೇ ಬದಲಾಯಿಸಿಬಿಡುತ್ತದೆ. ಈ ಎಲ್ಲಾ ನೆಗಳಿಂದ ತುಳಿತಕ್ಕೆ ಒಳಗಾದ ಮುಂಶ್ಯನ ಭಾವನೆ ಮುನ್ನೆಲೆಗೆ ಬರುವುದರಿಂದ; ಕಾಣದ ಮುಖಗಳು , ಅವುಗಳ ಮನಸ್ಸಿನೊಳಕ್ಕೆ ಓದುಗರನ್ನು ಸೆಳೆದುಕೊಂಡುಬಿಡುತ್ತದೆ.

ಧರ್ಮ ಮತ್ತು ಸಾಮ್ರಾಜ್ಯಶಾಹಿ ಬಲಗಳೆರಡೂ ಸೇರಿ ಮೂಲ ಅಮೆರಿಕಾದ ನಿವಾಸಿಗಳ ಮತ್ತು ಆಫ್ರಿಕಾದಿಂದ ಎಳೆದು ತಂದಿರುವ ಮನುಷ್ಯರ ದೇಹದ ಮೇಲೆ – ಅವರ ಮನಸ್ಸು ಇವರ ಕೈಗೆ ಸಿಗುವುದಿಲ್ಲವಲ್ಲ – ಆಡುವ ಆಟ.

ಆರು ಜನ ಇಂಡಿಯನ್ನರನ್ನು ಮರಕ್ಕೆ ಕಟ್ಟಿ ಜೀವಂತ ಸುಡುವ ಚಿತ್ರ. ಅವರು ಮಾಡಿದ್ದೆ ತಪ್ಪು ಇಷ್ಟೇ. ಮನ್ದಿಯೂರಿ ಪ್ರಾರ್ಥಿಸಿ ಎಂದು ಪಾದ್ರಿ ನೀಡಿದ ಏಸು ಕ್ರಿಸ್ತ ಮತ್ತು ಮೇರಿ ಪ್ರತಿಮೆಗಳನ್ನೂ ಈ ಆರು ಮಂದಿ ಇಂಡಿಯನ್ನು ನೆಲದಲ್ಲಿ ಹೊತಿದ್ದರು. ಧರ್ಮವನ್ನು ಅವಹೇಳನಗೊಳಿಸಿದ ಅಪರಾಧಕ್ಕೆ ಅವರನ್ನು ಜೀವಂತ ಸುಡಲಾಯಿತು. ಈ ಹೊಸ ದೇವರು ನಾಮಾ ನೆಲವನ್ನು ಫಲವತ್ತಾಗಿಸಲಿ – ಜೋಳ, ಕಾಳು, ಗೆದ್ದೇ, ಗೆಣಸು ಸಮೃದ್ಧವಾಗಲಿ ಎಂದು ಆಸೆಯ ಪ್ರಾರ್ಥನೆಯೊಂದಿಗೆ ಅವರು ಪ್ರತಿಮೆಗಳನ್ನು ಹೂತಿದ್ದರು.

‘ಲೋಕ ದೃಷ್ಟಿ’ಗಳು ಹಲವಿರುತ್ತದೆ. ಆದರೆ ‘ಅಧಿಕಾರ’ ಅವೆಲ್ಲವನ್ನು ಧ್ವಂಸಗೊಳಿಸಿ ತಮ್ಮ ‘ಲೋಕದೃಷ್ಟಿ’ಯೇ ಸಾಯಿ ಎಂಬ ‘ಅಹಂ’ ಅನ್ನು ಹೊಂದಿರುತ್ತದೆ.

ಆದರೆ ಅಧಿಕಾರ ಎನ್ನುವುದು ಯಾವಾಗಲೂ ಏಕಮುಖವಾಗಿ ವರ್ತಿಸುತ್ತಿದ್ದರೂ ಮೌನಿಗಳು, ದುರ್ಬಳರೂ ಈಅಧಿಕಾರವನ್ನು ಕೆಣಕುತ್ತಲೇ ಇರುತ್ತಾರೆ. ಒಂದು ಘಟ್ಟದಲ್ಲಿ ಗೆಲ್ಲುತ್ತಾರೆ ಕೂಡಾ. ಜಾಗತೀಕರಣಕ್ಕೆ ತಾವು ಸ್ಪೇಸ್ ನೀಡುತ್ತಿರುವವರು ಇದನ್ನ ಗಮನಿಸಬೇಕಾಗಿದೆ.

ಯಾವುದೇ ಅಧಿಕಾರ ಅಥವಾ ಶಕ್ತಿಯನ್ನು ಗಲೈಸಲೂ ಕೂಡ ಸಾಧನೆ ಮುಖ್ಯವಾಗುತ್ತದೆ. ಸಾಧನೆಗೆ ಶಿಸ್ತು ಬೇಕಾಗುತ್ತದೆ. ಅದು ಬೌಧಿಕತೆಯನ್ನು ಬೇಡುತ್ತದೆ. ಆದರೆ ಜ್ಞಾನ ಬೇಗ ನಾಶದ ಕಡೆಗೆ ಚಲಿಸುತ್ತಿರುತ್ತದೆ. ಈ ಶಕ್ತಿಯನ್ನುಯ್ ಸಮಾಜ ಒಳಿತಿಗಾಗಿ ಉಪಯೋಗಿಸಲು ‘ವಿವೇಕ’ ಬೇಕಾಗುತ್ತದೆ. ಈ ವಿಷಯವನ್ನು ಎರಡೆನೆಯ ಸಂಪುಟ ‘ಮುಖಗಳು ಮತ್ತು ಮುಖವಾಡಗಳು’ ವಿಷದವಾಗಿ ತಿಳಿಸುತ್ತವೆ.

ವಸಾಹತೀಕರಣವೆಂದರೆ ಇದು ಕೇವಲ ಆರ್ಥಿಕ ಆಯಾಮವನ್ನು ಮಾತ್ರ ಹೊಂದುವುದಿಲ್ಲ. ಆಳ್ವಿಕೆಗೆ ಒಳಪತ್ತವರ ದೇಹ ಮತ್ತು ಮನಸ್ಸಿನ ಆಳಕ್ಕೆ ಆಳುವವರ ವಿಚಾರಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇಲಿದುಬಿದುವಂತೆ ನೋಡಿಕೊಳ್ಳುವ ವಿಧಾನವಾಗಿರುತ್ತದೆ. ತನ್ನತನವನ್ನೇ ಮರೆಸಿ ವಿಸ್ಮೃತಿಗೆ ದೂಡಿಬಿಡುತ್ತದೆ, ಈ ತನ್ನದೆಲ್ಲವನ್ನೂ ಕೀಳರಿಮೆಗೆ ಒಳಪದಿಸಿಬಿದುತ್ತದೆ.

ಹೆಣ್ಣಿನ ಮೈಯಂತೂ ಕೇವಲ ಭೋಗದ ವಸ್ತುವಾಗಿಬಿಡುತ್ತದೆ. ಇವೆಲ್ಲವೂ ಪ್ರತಿ ಸಂಸ್ಕೃತಿಯನ್ನು ಸೃಷ್ಟಿಸಿಕೊಳ್ಳುತ್ತಾ ಹೋರಾಟವಾಗಿ ಮಾರ್ಪದಿಸಿಕೊಲ್ಲಬೇಕಾಗುತ್ತದೆ. ಇದಕ್ಕೆ ಅಪಾರ ದೈಹಿಕ, ಮಾನಸಿಕ ಶಕ್ತಿ ಬೇಕಾಗಾಗುತ್ತದೆ. ಗಾಂಧೀಜಿಯಂತಹವರು ಬೇಕಾಗುವುದು ಇಲ್ಲೇ. ಈ ವಿಚಾರಗಳನ್ನೆಲ್ಲಾ  ಗೆಲಿಯಾನೋ ಓದುಗರಿಗೆ ತನ್ನ ದೃಷ್ಟಿಕೋನದಿಂದ ನೀಡುತ್ತಾನೆ. ಹೊಸ ಚಾರಿತ್ರಿಕ ದೃಷ್ಟಿಕೋನವನ್ನು ಸೃಷ್ಟಿಸುತ್ತಾನೆ.

ಕನ್ನಡಕ್ಕೆ ಅತ್ಯಂತ ಸಮರ್ಪಕವಾಗಿ ಈ ಕೃತಿಯನ್ನು ಕೆ.ಪಿ.ಸುರೇಶ ತಂದಿರುವುದೇ ಅಲ್ಲದೆ ಮನುಕುಲದ ಚರಿತ್ರೆಯ ಕಾಣ್ಕೆಯನ್ನು ಹೊತ್ತು ತಂದಿದ್ದಾರೆ.

ವಚನವೊಂದರ ವಿಶ್ಲೇಷಣೆ

ವಚನವೊಂದರ ವಿಶ್ಲೇಷಣೆ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ;
ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ;
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ;
ನಿಮ್ಮ ಶರಣ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು; ಕೂಡಲಸಂಗಮದೇವಾ .
ಪ್ರೊ . ಎಂ . ಜಿ .ಕೃಷ್ಣಮೂರ್ತಿಯವರು ಈ ವಚನವನ್ನು ಬಹಳ ಸಮರ್ಥವಾಗಿ ವಿಶ್ಲೇಷಣೆ ಮಾಡುತ್ತಾ :
೧)ಕವನದ ಮೊದಲು ಮೂರು ಸಾಲುಗಳಲ್ಲಿ ‘ತಂದೆ’ ಪದದ ಪುನುರುಕ್ತಿ ಹಾಗೂ ಆ ಪದದ ಸಾಮಾನ್ಯ ಮತ್ತು ಧ್ವನಿತಾರ್ಥಗಳನ್ನು ಗುರುತಿಸಿದ್ದಾರೆ.
೨)ಮೊದಲ ಮೂರು ಸಾಲಿನ ನಿಷೇಧಕಕ್ಕೂ , ಕೊನೆಯ ಸಾಲಿನ ನಿಷೇಧಕಕ್ಕೂ ಇರುವ ಸಂಬಂಧ  – ವ್ಯತ್ಯಾಸ , ಪರಿಮಿತಿ – ಶಕ್ತಿಗಳನ್ನು ಗುರುತಿಸಿದ್ದಾರೆ.
೩) ಕೂಡಲ ಸಂಗಮ ದೇವಾ – ಎಂಬ ಪದ(ಪುಂಜ) ಕೆರಳಿಸುವ ಕುತೂಹಲವನ್ನು ವಿಶ್ಲೇಷಿಸುತ್ತಾ : ” ಈ ಹೆಸರಿಂದ ಒಂದೊಂದು
ಪದವೂ ಕವನಕ್ಕೆ ಅರ್ಥವನ್ನು ನೀಡುತ್ತದೆ.. ಕನ್ನಡದ ಕೂಡು ಶಬ್ದಕ್ಕೂ ಸಂಸ್ಕೃತದ ಗಮ (ಚಲಿಸುವ) ಶಬ್ದಕ್ಕೂ ಬಲು ಸಂಬಂಧವಿದೆ. ಹೀಗೆ ‘ಕೂಡು‘ ಹಾಗೂ ‘ಗಮ‘ಗಳು ಕೂಡಿ ಬಂದಿರುವುದರಿಂದ ‘ಕೂಡುವಿಕೆ‘ ಹಾಗೂ ‘ಹೋಗುವಿಕೆ‘ ಕೂಡಿಯೇ ನಡೆದಂತಾಗಿದೆ. ಇದು ಕವನವು ಒಳಗೊಂಡಿರುವ ದೈವತ್ವದ ಕಲ್ಪನೆಯ ಮೇಲೆ ಬೆಳಕು ಚೆಲ್ಲುತ್ತದೆ” ಎಂದು ವಿವರಿಸಿ, ಮುಂದೆ “ನಿಮ್ಮ ಶರಣ ಪಾದವಲ್ಲದೆ ಅನ್ಯವಿಷಯಕ್ಕೆ ಎಳಸದಂತೆ ಇರಿಸು ” ಎಂಬ ಕೋರಿಕೆಯಲ್ಲಿ , ನಿಜವಾಗಿಯೂ ಒಂದು ನಿರ್ದಿಷ್ಟ  ಇದೆ. ಪರಿಣಾಮವೆಂದರೆ ಮೊದಲ ಸಾಲಿನ ‘ಹೋಗು’ ಶಬ್ದದ ಅರ್ಥವ್ಯಾಪ್ತಿಯು ಕವನದಲ್ಲೇ ಸಂಭವಿಸಿ ಕವನ ಅರ್ಥವೂ  ಹೊಮ್ಮುತ್ತದೆ”ಎಂದಿದ್ದಾರೆ.  ವಿಮರ್ಶಕರಾಗಿ ಎಂ .ಜಿ . ಕೆ .  ಯವರು ಮಾಡಿರುವ ಈ ವಚನದ ವಿಶ್ಲೇಷಣೆ ಎಷ್ಟು ಮರ್ಪಕವಾಗಿದೆಯೆಂದರೆ, ಇದರ ಮೇಲೆ ಇನ್ನೂ ಹೆಚ್ಚಿನ ವಿಶ್ಲೇಷಣೆ, ವಿಮರ್ಶೆಗೆ ಎಡೆಯಿಲ್ಲ ಎನಿಸುತ್ತದೆ. ಆದರೆ, ಭಾಷಾಶಾಸ್ತ್ರದ ವಿದ್ಯಾರ್ಥಿ ಈ ವರ್ಚನವನ್ನು ಹೇಗೆ ನೋಡಬಹುದು ಎಂಬುದು ನನ್ನ ಕುತೂಹಲ. ಇದನ್ನು ಹತ್ತಿಕ್ಕಲಾರದೆ ನ್ನೆನು ಈ ಟಿಪ್ಪಣಿಯನ್ನು ಬರೆಯುತ್ತಿದ್ದೇನೆ. ಅಲ್ಲದೆ ಈ ವಚನದಲ್ಲಿ ಪ್ರಯೋಗವಾಗಿರುವ ಪ್ರತಿಯೊಂದು ಪದ – ವ್ಯಾಕರಣ , ವಿಶೇಷ ಮತ್ತು ವಾಕ್ಯದ ಬಳಕೆ ಕಾವ್ಯ ಸಂದರ್ಭದಲ್ಲಿ ಆಕಸ್ಮಿಕವಲ್ಲ ಎಂಬ ಇನ್ನೊಂದು ಅಂಶವೂ ಕಾರಣ. ಈ ಕೆಳಗಿನ ವಿಮರ್ಶೆ ದೊಂಬರಾಟ ಎಣಿಸಬಹುದು. ಇರಲಿ.
ಇಲ್ಲಿ ನಾನು ಎಂ .ಜಿ. ಕೆ . ಯವರ ಮೇಲಿನ ಮೂರು ಅಂಶಗಳನ್ನು ಸಂಗ್ರಹಿಸಿದ್ದಕ್ಕೆ ಕಾರಣ ಇವು ನನ್ನ ಮುಂದಿನ ಭಾಷಾ ವಿಶ್ಲೇಷಣೆಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಅಂಶದಿಂದ .
೧)ಮೇಲಿನ ವಚನದಲ್ಲಿ ಪ್ರತಿಯೊಂದು ಮಾಲ್ಕು ವಾಕ್ಯ (ಮತ್ತು ಐದು ಸಾಲು) ಗಳ್ಲಲೂ ಬರುವ ಕ್ರಿಯಾಪದಗಳು ಎರಡು ರೀತಿಯಾಗಿವೆ.
ಅ )ಅಸಮಾಪಕ(infinte ) ಆ) ಸಮಾಪಕ(finite ) ಕ್ರಿಯಾಪದಗಳು .
ಅಸಮಾಪಕ ಕ್ರಿಯಾಪದಗಳು : ೧)ಹೊಳದಂತೆ, ನೋಡದಂತೆ, ಕೇಳದಂತೆ, ಎಳಸದಂತೆ ಇವು ನಾಲ್ಕು ಕ್ರಿಯಾಪದಗಳೂ ಅಸಮಾಪಕ ಕ್ರಿಯಾಪದಗಳು. ಆದ್ದರಿಂದ ಇವು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಲಾರವು. ಈ ಕ್ರಿಯಾಪದಗಳೆಲ್ಲವೂ ವಾಕ್ಯದಲ್ಲಿ
ಭಕ್ತನಿಗೆ ಸಂಬಂಧಪಟ್ಟುವುಗಳಾದ್ದರಿಂದ ಮತ್ತು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಲಾರದವುಗಳಾಗಿರುವುದರಿಂದ ಭಕ್ತ- ತಂದೆಯನ್ನು ಅವಲಂಬಿಸಿರುವುದನ್ನು ಧ್ವನಿಸುತ್ತದೆ.
೨) ಹೋಗು , ನೋಡು, ಕೇಳು, ಎಳಸು – ಈ ಕ್ರಿಯಾಪದಗಳೆಲ್ಲ ಗತಿಸೂಚಕ (motion) ಕ್ರಿಯಾಪದಗಳು೨ . ಈ ಗತಿಸೂಚಕ ಕ್ರಿಯಾಪದಗಳು ಭಕ್ತನ ಚಂಚಲತೆಯನ್ನು ಧ್ವನಿಸುತ್ತವೆ . ಈ ಕ್ರಿಯಾಪದಗಳ ಹಿಂದೆ ಬರುವ ಅತ್ತಲಿತ್ತ , ಸುತ್ತಸುಲಿದು, ಮತ್ತೊಂದು, ಅನ್ಯ ಈ ಪದಗಳು ಚಂಚಲತೆಗೆ ಇನ್ನಷ್ಟು ಪುಷ್ಟಿಕೊಡುತ್ತವೆ .
**************************************************************************************************
೧. “ಐದು ವಚನಗಳು: ಒಂದು ವಿಶ್ಲೇಷಣೆ ” ಆಧುನಿಕ ಭಾರತೀಯ ಸಾಹಿತ್ಯ ಮತ್ತು ಇತರ ಲೇಖನಗಳು (೧೯೭೦) ಅಕ್ಷರ ಪ್ರಕಾಶನ ೬೭-೬೮.
೨. ಭಾಷೆಯ ಮೂಲ ಕ್ರಿಯಾಪದಗಳನ್ನು ಅರ್ಥವಿಜ್ಞಾನದ(semantics) ಪ್ರಕಾರ ನಾಲ್ಕು ಭಾಗಗಳನ್ನಾಗಿ ವಿಂಗಡಿಸಬಹುದು.
ಅ ) ಸ್ಥಿರ ಸ್ಥಿತಿ ಸೂಚಕ ಕ್ರಿಯಾಪದ (static verb ): ‘ ಮರ ಒಣಗಿದೆ ‘ – ಈ ರೀತಿಯ ವಾಕ್ಯಗಳಲ್ಲಿ ಕ್ರಿಯೆಯು ನಾಮಪದದ ಇರುವಿಕೆಯನ್ನು (state) ಸೂಚಿಸುತ್ತದೆ .
ಆ ) ಪರಿವರ್ತನಾ ಕ್ರಿಯಾಪದ (process verb): ‘ ಮರ ಒಣಗಿತ್ತು’ – ಈ ರೀತಿಯ ವಾಕ್ಯಗಳಲ್ಲಿ ನಾನು(ಕರ್ತೃ ) ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬದಲಾವಣೆಯನ್ನು ಹೊಂದುತ್ತದೆ ಎಂಬುದನ್ನು ಕ್ರಿಯಾಪದ ಸೂಚಿಸುತ್ತದೆ. ಈ ರೀತಿಯ ವಾಕ್ಯಗಳಿಗೆ “ಏನಾಯಿತು” ಎಂಬ ಪ್ರಶ್ನೆಗೆ ಉತ್ತರೆ ಸಿಗುತ್ತದೆ.
ಇ) ಗತಿಸೂಚಕ ಮತ್ತು ಕ್ರಿಯಾಸೂಚಕ ಕ್ರಿಯಾಪದ (motion  action  verb ):  ‘ರಾಮ ಓಡಿದ ‘, ‘ಅವನು ನೋಡಿದ’ ಈ ರೀತಿಯ ವಾಕ್ಯಗಳಲ್ಲಿ  ಕರ್ತೃ ಏನು ಮಾಡುತ್ತದೆ ಎಂಬುದನ್ನು ಕ್ರಿಯೆ ಸೂಚಿಸುತ್ತದೆ. ಕರ್ತೃವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬರುವ ಚಲನೆಯನ್ನು (ಬದಲಾವಣೆಯನ್ನು) ಸೂಚಿಸುತ್ತದೆ. ಏನು ಮಾಡಿ(-ದ , -ಳು , -ತು ) ಮುಂತಾದ ಪ್ರಶ್ನೆಗಳಿಗೇ ಈ ರೀತಿಯ ಕ್ರಿಯಾಪದಗಳು ಉತ್ತರ ಕೊಡುತ್ತವೆ.
ಈ ) ಪ್ರಕ್ರಿಯಾ ಕ್ರಿಯಾಪದ (process  and action verb ): ‘ ರಾಮ ಬಟ್ಟೆಯನ್ನು ಒಣಗಿಸಿದ’. ಈ ರೀತಿಯ ವಾಕ್ಯಗಳಲ್ಲಿ ಕ್ರಿಯಾಪದವು ಕರ್ತೃ ಏನು ಮಾಡಿದ್ದಾನೆ ? ಕರ್ಮಾ ಏನು ಬದಲಾವಣೆ ಹೊಂದಿದೆ? ಎಂಬ ಎರಡೂ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ.
**************************************************************************************************
ಸಮಾಪಕ ಕ್ರಿಯಾಪದಗಳು : ೧) ನಾಲ್ಕು ವಾಕ್ಯಗಳ ಈಡನ್ ಭಾಗದಲ್ಲಿ ‘ತಂದೆ’ಗೆ ಸಂಬಂಧಿಸಿ ಬರುವ ‘ಮಾಡು’ ಮತ್ತು ‘ಇರಿಸು’ ಎಂಬುವು ಸಮಾಪಕ ಕ್ರಿಯಾಪದಗಳು. ಸಮಾಪಕ ಕ್ರಿಯಾಪದಗಳು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಬಲ್ಲವು. ಈ ಕ್ರಿಯಾಪದಗಳು ‘ತಂದೆ’ಯ ಸ್ವತಂತ್ರ ಅಸ್ತಿತ್ವವನ್ನು ಧ್ವನಿಸುತ್ತವೆ .
೨) ಈ ಭಾಗದಲ್ಲಿ ಬರುವ ‘ಮಾಡು’ ಕ್ರಿಯಾಪದ, ಕ್ರಿಯಾಸೂಚಕ ಕ್ರಿಯಾಪದವಾದಂತೆಯೇ ಸೃಷ್ಠಿಸೂಚಕವೂ ಆಗಿದೆ. ಇದು ‘ತಂದೆ’ಯ  ಸೃಜನಶೀಲತೆ(creativity) ಶಕ್ತಿಯನ್ನು ಧ್ವನಿಸುತ್ತವೆ .
೩)ಇರ್  + ಇಸು . ‘ಇರ್’ ಎಂಬ ಕ್ರಿಯಾಪದದ ಸ್ಥಿರಸೂಚಕ(static ) ಕ್ರಿಯಾಪದ. ‘ತಂದೆ’ ಮಾತ್ರ ಭಕ್ತನನ್ನು ಒಂದು ಸ್ಥಿತಿಯಲ್ಲಿ ಇಡಬಲ್ಲ ಎಂಬುದನ್ನು ಸೂಚಿಸಿದರೆ, ಇಸು ಎಂಬ ಪ್ರೇರಣಾತ್ಮಕ ಪ್ರತ್ಯಯ ತಂದೆಯೇ ಈ ರೀತಿಯಲ್ಲಿ ಇರಿಸಲು ಸಮರ್ಥನಾದ, ಕಾರಣ ಕರ್ತಾ ಮತ್ತು ಪ್ರೇರಕ ಎಂಬುದನ್ನು ಧ್ವನಿಸುತ್ತದೆ . ೪)’ತಂದೆ’ಯು ಕ್ರಿಯಾಶೀಲನೂ ಪ್ರೇರಣಾತ್ಮಕನೂ ಆದ್ದರಿಂದ ಇವೆರಡನ್ನೂ ಕೂಡಿಕೊಂಡಿರುವ ಕೂದಲ ಸಂ -ಗಮ (ಚಲನಶೀಲ ಕ್ರಿಯಾಪದ) ಭಕ್ತ ಅಂತಹ ತಂದೆಯೊಡನೆ ಕೂಡಿಕೊಂಡಿರಲು ಮೊರೆ ಇಡುತ್ತಿರುವುದು ಧ್ವನಿತವಾಗುತ್ತದೆ.
೨) ಮತ್ತು ನಾಲ್ಕು ವಾಕ್ಯಗಳಲ್ಲಿ ಬರು ಕೂಡುವಾಕ್ಯರಚನಾ(conjunctive) ಪ್ರತ್ಯಯ ‘ಭಕ್ತ’ ಮತ್ತು ‘ತಂದೆ’ ಕೂಡುವ ಆಕಾಂಕ್ಷೆಯನ್ನು ಹೇಳಿ ‘ಕೂದಲ ಸಂಗಮ’ ಎಂಬ ಧ್ವನಿಯನ್ನು ಪುಷ್ಟೀಕರಿಸುತ್ತದೆ.
೩) ಮೊದಲ ಮೂರು ವಾಕ್ಯಗಳಲ್ಲೂ ‘ನಾನು’ ಅಥವಾ ‘ನೀವು’ ಎಂಬ ಸರ್ವನಾಮಗಳು ವಾಕ್ಯಗಳ ಮೇಲೆ ಮೇಲ್ಮೈ ಮಟ್ಟದಲ್ಲಿ (surface level) ಕಾಣಿಸಿಕೊಳ್ಳುವುದಿಲ್ಲ. ‘ನಾನು’ ವಾಕ್ಯದ ಮೊದಲಲ್ಲೂ ‘ನೀವು’ ಕೂಡು ವಾಕ್ಯದ ಮೊದಲಲ್ಲೂ  ಗೃಹೀತವಾಗಿ ಬಂದಿದೆ. ಆದರೆ ನಾಲ್ಕನೆಯ ವಾಕ್ಯದಲ್ಲಿ ಈ ಕ್ರಮ ಹಿಂದೂ ಮುಂದಾಗಿ ‘ನಿಮ್ಮ’ ಎಂದು ಗೌರವ ಸೂಚಕವಾಗಿ ಬರಂದಿರುವುದರಿಂದ ‘ನೀವು’ ವಾಕ್ಯದ ಮೇಲ್ಮೈ ಮಟ್ಟದಲ್ಲಿ ಮೂರ್ತವಾಗುತ್ತದೆ. ಈ ಸ್ಥಾನ ಪಲ್ಲಟ ಮತ್ತು ‘ತಂದೆ’ಗೆ ಸಂಬಂಧಪಟ್ಟ ಸರ್ವನಾಮದ ಮೂರ್ತತೆ ವಚನದ ಸಂದರ್ಭದಲ್ಲಿ ಗಮನಾರ್ಹವಾಗಿದೆ.
 ೪)ಹೋಗದಂತೆ, ನೋಡದಂತೆ, ಕೇಳದಂತೆ , ಎಳಸದಂತೆ ಎಂಬ ಕ್ರಿಯಾ ನಿಷೇಧಕಗಳ ಭಕ್ತನ ‘ಅಭಾವ’ವನ್ನು ಸೂಚಿಸಿದರೆ, ‘ಪಾದವಲ್ಲದೆ’ ಎಂಬ ನಾಮ ನಿಷೇಧಕವು ‘ಖಚಿತತೆ’ಯನ್ನು ಸೂಚಿಸುತ್ತದೆ. ಅಂದರೆ ರೂಪ (linguistic  form) ಮಟ್ಟದಲ್ಲಿ ನಿಷೇಧಕವಾಗಿದ್ದರೂ ಅರ್ಥದ ದೃಷ್ಟಿಯಿಂದ postive  ಆಗಿ ಬಂದಿದೆ.
೫)ಹೆಳವ, ಅಂಧಕ, ಕಿವುಡಮ್ ಅನ್ಯವಿಷಯ ಎಂಬ ಪದಗಳು ತಮ್ಮ ಮುಂದೆ ಬರುವ ನಿಷೇಧಾರ್ಥಕ ಕ್ರಿಯಾಪದದ ಸಂಸರ್ಗ (collocation)ದಿಂದ ಭಕ್ತನ ಆಕಾಂಕ್ಷೆಯನ್ನು ಸೂಚಿಸುತ್ತವೆ

ಹೀಗೆ ಈ ವಚನದಲ್ಲಿ ಬರುವ ಒಂದೊಂದು ಭಾಷಾ – ಘಟಕವೂ ಅರ್ಥವತ್ತಾದ ಶಬ್ದ- ಅರ್ಥದ ಪರಿಪೂರ್ಣ ಬೆಸುಗೆಯಾಗಿದೆ. ಈ ರೀಇಟಿ ಕವನಗಳಲ್ಲಿ ಧ್ವನಿಮಾಪದ, ವ್ಯಾಕರಣ ಮತ್ತು ವಾಕ್ಯರಚನೆಯಲ್ಲಿ ಕವನದ ವಸ್ತುವಿನ ಕಡೆಗೆ ತುಡಿಯುವುದನ್ನು ಶೈಲಿ ವಿಜ್ಞಾನ (stylistic )ದಲ್ಲಿ lingusitic cohesion ಎಂದು ಕರೆಯುತ್ತಾರೆ.

ರುಜುವಾತು : ೧೩
ಜನವರಿ – ಮಾರ್ಚ್ ೧೯೮೪
ಪುಟ : ೩೭-೪೦
ಕುವೆಂಪು ನಾಟಕಗಳ ವೈಚಾರಿಕತೆ

ಕುವೆಂಪು ನಾಟಕಗಳ ವೈಚಾರಿಕತೆ

ಪುಸ್ತಕ – ರಂಗಭೂಮಿಯ ಸವಾಲುಗಳು 

j1 ಸ್ನೇಹಿತರೆ ಈಗಾಗಲೇ ಬೆಳಗ್ಗಿನಿಂದ ಕುವೆಂಪುರವರ ಕೃತಿಗಳನ್ನ ಜಾಗತೀಕರಣದ ಸಂದರ್ಭದಲ್ಲಿ ಇತ್ತು ಮತ್ತೆ ಸ್ಥಳೀಯತೆಯ ಬಗ್ಗೆ ಅನೇಕ ವಿಷಯಗಳು ಮಂಡಿತವಾಗಿವೆ. ಆದರೆ ನಾನು ಈಗ ಕುವೆಂಪು ನಾಟಕಗಳಲ್ಲಿ ವೈಚಾರಿಕತೆಯ ಬಗ್ಗೆ ಮಾತನಾಡಲಿಕ್ಕೆ ಹೊರಟಿದ್ದೇನೆ. ಅದಕ್ಕೆ ಮುಂಚೆ ವೈಚಾರಿಕತೆ ಅಂತಂದ್ರೆ ಏನು? ನಾವು ಅದನ್ನು ಯೋಚನೆ ಮಾಡಿದ್ದೇವೆಯಾ? ಯಾವುದನ್ನು ನಾವು ವೈಚಾರಿಕತೆ ಅಂತೀವಿ? ಯಾವುದನ್ನು ವೈಚಾರಿಕತೆ ಅಲ್ಲ ಅಂತೀವೇ. ಇದನ್ನ ಒಂದು ದೃಷ್ಟಾಂತದ ಮೂಲಕ ನಿಮಗೆ ಹೇಳಿ ಆಮೇಲೆ ಕುವೆಂಪುರವರು ವೈಚಾರಿಕತೆಯನ್ನು ಯಾವ ರೀತಿ ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನೋದರ ಬಗ್ಗೆ ಹೇಳುತ್ತೇನೆ. ಈ  ಒಂದು ತಿಂಗಳ ಹಿಂದೆ ಜಾನಪದ ವಿಷಯದ ಬಗ್ಗೆ ಕ್ಷೇತ್ರಕಾರ್ಯಕ್ಕೆ ಅಂತ ಹೋಗಿ, ಅಂದ್ರೆ “ಬೀದಿ ಬದಿಯ ದೇವರುಗಳು” ಅನ್ನುವ ವಿಷಯದಲ್ಲಿ ಒಂದು ಕ್ಷೇತ್ರಕಾರ್ಯಕ್ಕೆ ಅಂತ ಹೋಗಿದ್ವಿ. ಅದರಲ್ಲಿ ನನ್ನ ಸ್ನೇಹಿತರಿಬ್ಬರು ಅಮೆರಿಕಾದವರು. ಮುಖ್ಯವಾಗಿ ಆ ಕೆಲಸದ ಮೇಲೆ ಬಂದಿದ್ದರು. ಅವರು ಬಂದು ನನಗೊಂದು ಪ್ರಶ್ನೆ ಕೇಳಿದ್ರು. ಇಲ್ಲಿ ‘ಬೀದಿ ದೇವರಗಳ ವಿಚಾರದ ಬಗ್ಗೆ ನಾವು ಹೋದಾಗ ಎಲ್ಲ ಕಡೆಯೂ ಈ ಕಲ್ಲು ಬೆಳಿತಾ ಇದೆ, ಈ ಕಲ್ಲು ಬೆಳಿತಾ ಇದೆ ‘ ಅಂತ ಹೆಲ್ತಹಾರಲ್ಲ ಇದು ಏನು ಅಂತ ಹೇಳಿ. ಪ್ರಾಯಶಃ ನಾವಾಗಿದ್ದರೆ ವೈಚಾರಿಕತೆಯನ್ನ ಇಟ್ಟುಕೊಂಡಿದ್ದಾರೆ ಅದೆಲ್ಲ ಸುಳ್ಳು , ನಾನು ನಲವತ್ತು ವರ್ಷದಿಂದ ಅಲ್ಲೇ ಓಡಾಡುತಾ ಇರುತ್ತೀನಿ. ದಿನಾ ನೋಡ್ತಾ ಇರ್ತಿನಿ. ಒಂದಿಂಚೂ ಬೆಳೆದಿಲ್ಲ. ಸುಮ್ಮನೆ ಈ ಜನಕ್ಕೆ ಬುದ್ದಿ ಇಲ್ಲ. ಅದಕ್ಕೆ ಹೇಳ್ತಾರೆ ಅಂತ ಹೇಳಬಹುದು . ಆದ್ರೆ ಹೀಗೆ ವಿಶ್ಲೇಷಿಸುತ್ತಾ , ಯೋಚನೆ ಮಾಡಿದಾಗ ನನಗನ್ನಿಸಿತು . ಕಲ್ಲಲ್ಲಿ ಅಲ್ಲಿ ಬೆಳೆಯುವುದು ಆ ಕಲ್ಲು ದೇವತೆಯಾಗಿ ಅದು ಸೃಷ್ಟಿಸುವ ವಿಚಾರಗಳು ಅಲ್ಲಿ ಬೆಳಿತಾ ಹೋಗುತ್ತದೆ. ಒಂದು ದಿವಸ ಅದಕ್ಕೆ ಸಂಬಂಧಪಟ್ಟಂತೆ ಒಂದು ಕತೆ ಆಗುತ್ತೆ. ಇನ್ನೊಂದು ದಿವಸ ಇನ್ನೊಂದು ಕತೆಯಾಗುತ್ತೆ. ಇನ್ನೊಬ್ಬ ಯಾವನಿಗೋ ಹುಷಾರಿಲ್ಲದೆ ಇದ್ದಾಳ ಅವನಿಗೆ ಹುಷಾರಾಗುತ್ತೆ ಅನ್ನುವಂತದ್ದು , ಹಣ ಇಲ್ಲದವರಿಗೆ ಹಣ ಬರುತ್ತದೆ ಅನ್ನುವಂತದ್ದು. ದೇವರನ್ನು ಬಿತ್ತುವು ಇನ್ನೆಲ್ಲ ವಿಚಾರವನ್ನು ಅಲ್ಲಿ ಮಾಡ್ತಾ ಇರ್ತರೆ. ಅದು ದೇವರು ಅನ್ನೊದು ನೆಪಕ್ಕೆ ಮಾತ್ರ. ಇಲ್ಲೇ ವೈಚಾರಿಕತೆ ಇಲ್ಲವೇ? ಈ ವೈಚಾರಿಕತೆ ಎಂಥದ್ದು? ಈ ರೀತಿಯ ಸಂವಾದ ಎಂಥದ್ದು ಅಂದರೆ ದೇವರು ಬೆಳೆಯುವುದು ಆ ಜನರ ಮನಸ್ಸಿನಲ್ಲಿ, ಆ ಕಲ್ಲು ಬೆಳೆಯುವುದು ಮತ್ತು ಆ ಕಲ್ಲಿನ ಬಗ್ಗೆ ಜನರ ಮನಸ್ಸಿನಲ್ಲಿ , ಆ ಕಲ್ಲು ಬೆಳೆಯುವುದು ಮತ್ತು ಆ ಕಲ್ಲಿನ ಬಗ್ಗೆ ಜನರ ಮನಸ್ಸಿನಲ್ಲಿ ಬೆಳೆಯುತ್ತಿರುವ ವಿಚಾರಗಳಿವು. ಹೀಗೆ ತೆಗೆದುಕೊಂಡಾಗ ನಮಗೆ ಹಲವಾರು ರೀತಿಯ ಸಮಸ್ಯೆಗಳು ಮತ್ತು ಆ ಸಂವಾದವನ್ನು ಆ ಪುರಾಣವನ್ನು ವಿಶ್ಲೇಷಣೆ ಮಾಡಲಿಕ್ಕೆ ಮತ್ತು ಆ ಮೂಲಕ ಅದನ್ನ ಸೃಷ್ಟಿಸುವ ಮನಸ್ಸನ್ನ ಅರಿತುಕೊಳ್ಳುವುದಕ್ಕೆ ಇದು ಸಹಾಯಕವಾಗುತ್ತದೆ ಅನ್ನುವಂತದ್ದು ರಾಷನಲಿಸ್ಟ್ ಆಗಿದ್ದರೆ ಅದು ಅಲ್ಲೇ ನಿಂತು ಹೋಗುತ್ತದೆ. ಆದೆ ಇದು ಸಾಮಾನ್ಯ ಕ್ರಮದಲ್ಲಿ ಆರ್ಡಿನರಿ. ಈ ಜೀವನ ಕ್ರಮದಲ್ಲಿ ಅದು ಬೇರೆ ಕ್ರಮದ್ದು ಅಂತ ತಿಳಿದುಕೊಂಡು ನಾವು ಅದರ ಬಗ್ಗೆ ಗಮನ ಹರಿಸಿದಾಗ ನಮಗೆ ಅನೇಕ ವಿಷಯಗಳು ಅದರಿಂದ ಹೊರಗಡೆ ಬರುತ್ತದೆ. ಇದು ಭಾರತೀಯ ಮನಸ್ಸು. ನೀವು ಯಾವುದಾದ್ರೂ ಜಾನಪದ ಕಥೆ ತೆಗೆದುಕೊಳ್ಳಿ, ಇದಿರುತ್ತದೆ ಅಥವಾ ಜನಗಳು ಹೇಳುವ ದೃಷ್ಟಾಂತ ತೆಗೆದುಕೊಳ್ಳಿ ಇದಿರುತ್ತೆ. ಹಾಗಾಗಿಯೇ ಇನ್ನೊಂದಿದೆ. ಈ ಬಸವ ಬೆಳಿತಾ ಇತ್ತು, ಬೆಳೆದು ಬೆಳೆದು ಆಕಾಶ ಮುಟ್ಟಿಬಿಡುತ್ತಾ ಇತ್ತು. ಅದಕ್ಕೋಸ್ಕರ ಏನ್ ಮಾಡ್ದ ಒಂದು ಗೂಟ ಹೊಡ್ದ . ಈಗ ಅದು ಬೆಳಿತಾ ಇಲ್ಲ , ನಿಂತುಬಿಟ್ಟಿದೆ ಅಂತ. ಅಂದ್ರೆ ಅದು ಎಲ್ಲಿಗೆ ನಿಲ್ಲಬೇಕು ಅದೂ ಕೂಡ ಅವರಿಗೆ ಗೊತ್ತು . ಆ ಜನಕ್ಕೆ ಅದನ್ನು ಎಷ್ಟು ಬೆಳೆಸಬೇಕು  ಅಂತಾನೂ ಗೊತ್ತು, ಎಲ್ಲಿಗೆ ನಿಲ್ಲಿಸಬೇಕು ಅಂತಾನೂ ಗೊತ್ತು. ಇದು ವೈಚಾರಿಕತೆಯಲ್ಲವೇ ? ಈ ಸಮಸ್ಯೆಯನ್ನು ನಾವು ಮೊದಲು ಪರಿಹರಿಸಕೊಳ್ಳಬೇಕಾಗುತ್ತದೆ. ಇಲ್ಲ ಅಂದ್ರೆ ಯಾರೋ ಅಲ್ಲಿ ಪೂಜೆ ಮಾಡುತ್ತಾ ಇರುತ್ತಾರೆ. ಅವರನ್ನು ಪೂಜೆ ಮಾಡಬೇಡಿ ಅಂತ ಹೇಳೋದು ವೈಚಾರಿಕತನ ಅಥವಾ ಆಲ್ವಾ ಈ ಪ್ರಶ್ನೆಗಳನ್ನ ಬಿಡಿಸಿಕೊಳ್ಳದ ಹೊರತು ಕುವೆಂಪುರವರ ನಾಟಕಗಳಲ್ಲಿ ಅಥವಾ ಅವರ ಯಾವುದೇ ಬರಹಗಳಲ್ಲಿ ವೈಚಾರಿಕತೆ ಎಂದರೇನು? ಅನ್ನೋದನ್ನ ಸಂಪೂರ್ಣ ದೃಷ್ಟಿಯಿಂದ ಪುನರ್ಸೃಷ್ಟಿಕೊಳ್ಳೋದಕ್ಕೆ ನಮ್ಮ ಮನಸ್ಸಿನಿಂದ ಸಾಧ್ಯವಾಗಲ್ಲ. ಇದು ಮೊದಲನೇ ಅಂಶ. ಎರಡನೆಯದು ಜಾಗತೀಕರಣದ ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಬೆಳೆಗ್ಗೆನೂ ಬಂತು. ಅದಕ್ಕೆ ಕುವೆಂಪುರವರು ಎಷ್ಟು ತಮ್ಮ ಆಲೋಚನೆಯನ್ನು ಕೊಟ್ಟಿದ್ದಾರೆ ಅನ್ನೊದು ಬಂತು. ನೀವು ಟಿ.ವಿ.ಯಲ್ಲಿ ಒಂದು ಅಡ್ವರ್ಟೈಜ್ಮೆಂಟ್ ಬರೋದನ್ನು ನೋಡಿರಬಹುದು. ಒಬ್ಬ ಬಹಳ ಪ್ರಸಿದ್ಧ ನಟ ಬರುತ್ತಾನೆ. ‘ಏಯ್ , ಥಂಡಾ ದೇ ” ಅನ್ನುತ್ತಾನೆ. ಅಲ್ಲೊಬ್ಬ ಕೂಲ್ ಡ್ರಿಂಕ್ಸ್ ಬಾಟಲಿ ತೆಗೆದುಕೊಡುತ್ತಾನೆ. ಆಮೇಲೆ ‘ಏಯ್ . ಥಂಡಾ ದೇ ” ಅಂತಾನೆ. ಪಾಪ ಅವನು ‘ಎ ಭೀ ಥಂಡಾ ಹೇ’ ಅನ್ನುತ್ತಾನೆ. ನೋಡಿ ಅವನಿಗೆ ಭಾಷೆಯನ್ನು ಭೋದಿಸುತ್ತಾನೆ ಯಾವ ಭಾಷೆ ಮಾತನಾಡಬೇಕು ಅಂತ. ಇದು ಗುರುತಿಸಿಕೊಳ್ಳಲೇ ಆಗಬಾರದಂತಹ ರೀತಿಯಲ್ಲಿ ಜಾಗತೀಕರಣದ ಈ ಕ್ರಿಯೆ ನಡಿತಾ ಇರುತ್ತದೆ. ಬಹಳ ಮುಖ್ಯ ಇದು. ಈ ಅಡ್ವರ್ಟೈಜೆಮೆಂಟ್ ಇದೆಯಲ್ಲ ಅದು ಅವನದೇ ಭಾಷೆಯಲ್ಲಿ ಹೇಳಿಕೊಡುವಂತದ್ದು. ಹಿಂದೀ ಭಾಷೆಯಲ್ಲಿಯೇ ಹೇಳಿಕೊಡುತ್ತಾನೆ. ಇಂಗ್ಲಿಷ್ ಭಾಷೆಯನ್ನಲ್ಲ , ಜಾಗತೀಕರಣದ್ದು ಇಂಗ್ಲಿಷ್ ಮೂಲಕ ಪ್ರಾಯಶಃ ಅವರ ಬೇರೆಯ ಸಾಹಿತ್ಯ ಕೃತಿಯನ್ನ ಅದು ಹೇಗೆ ನಾಟಕದಿಂದ ಬೇರೆ ಕಡೆಗೂ ವಿಸ್ತರಿಸಿದೆ ಅನ್ನೋದನ್ನ ಇಟ್ಟುಕೊಂಡು ಕೆಲವು ಮಾತುಗಳನ್ನಾಡುತ್ತೇನೆ .

ಉಮೇಶ್ ಅವರು ಕುವೆಂಪು ನಾಟಕಗಳ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದಾರೆ. ಆದ್ದರಿಂದ ಆ ವಿಷಯಗಳನ್ನ ಮುಟ್ಟಲ್ಲ. ಆ ವಿಷಯಗಳನ್ನ ಒಂದು ರೀತಿಯಲ್ಲಿ ತೆಗೆದುಕೊಂಡು ಮುಂದುವರಿಕೆಯಾಗಿ ಮಾತನಾಡೋದಕ್ಕೆ ಇಷ್ಟಪಡುತ್ತೇನೆ .

ಕುವೆಂಪುರವರು ಉಮೇಶ್ ಹೇಳಿದಹಾಗೆ ಲೋಕೋತ್ತರ ವಿಷಯವನ್ನ ತೆಗೆದುಕೊಂಡಿರುತ್ತಾರೆ. ಆದರೆ ಒಂದು  ಅವರ ಸಾಹಿತ್ಯದಲ್ಲಿ ಎಲ್ಲಯೂ ರಿಚುಯಲ್ಸ್ ಅನ್ನೋದು ಬರೋದಿಲ್ಲ. ಯಾವುದೇ ಜಾತಿಗೆ ಸೇರಿದ ಕ್ರಿಯಾವಿಧಿಗಳು ಅವರ ಸಾಹಿತ್ಯದಲ್ಲಿ ಬರುವುದಿಲ್ಲ. ಇದು ಬಹಳ ಸೂಕ್ಷ್ಮವಾಗಿ ಗಮನಿಸಿದಾಗ ಮತ್ತು ಆಳವಾಗಿ ನೋಡಿದಾಗ ಕುವೆಂಪು ಕೃತಿಗಳಲ್ಲಿ ಇದು ಕಂಡು ಬರೋದಿಲ್ಲ. ಹಾಗೆಯೇ ಅವರ ಯಾವುದೇ ಸಾಹಿತ್ಯ ಕೃತಿಯಲ್ಲಿ ರಿಚುಯಲ್ಸ್ ಬರೋದಿಲ್ಲ. ನಾವು ಬಹಳ ಮುಖ್ಯವಾಗಿ ಗಮನಿಸಬೇಕಾದದ್ದು ಒಂದು ಆಚಾರ ಇನ್ನೊಂದು ವಿಚಾರ. ಆಚಾರದ ವಿಷಯಕ್ಕೆ ಬಂದಾಗ ಕುವೆಂಪು ಆಚಾರವನ್ನ ಎಲ್ಲೂ ತರುವುದಿಲ್ಲ. ತರುವುದಕ್ಕೆ ಸುಮಾರು ಚಾನ್ಸ್  ಗಲಿದೆ. ಆದ್ರೆ ತರೋಲ್ಲ . ವಿಚಾರವನ್ನು ತರುತ್ತಾರೆ. ವಿಹಕಾರದ ಭಾಗಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಮತ್ತೆ ಅವರು ನಾಟಕಗಳಲ್ಲಿ ರೇಗೆದುಕೊಂಡ ವಿಷಯಗಳನ್ನ ನೋಡಿ ಒಂದು ರೀತಿಯ ಸಂಧ್ಯಾಯುಗವನ್ನ ತೆಗೆದುಕೊಳ್ಳುತ್ತಾರೆ. ಸ್ಮಶಾನ ಕುರುಕ್ಷೇತ್ರದಲ್ಲಿರಬಹುದು . ಒಂದು ಸಂಧ್ಯಾಯುಗ. ದ್ವಾಪರ ಮತ್ತು ಕಲಿಯುಗ ಮೀಟಾಗುವಂಥಹ ಒಂದು ಕಾಲವನ್ನು ತೆಗೆದುಕೊಂಡು ಅಲ್ಲಿ ನಾಟಕವನ್ನ ರಚಿಸುತ್ತಾರೆ. ಅಲ್ಲಿ ಬರುವ ಪಾತ್ರಗಳೆಲ್ಲವೂ ತಮ್ಮ ಭೂತಕಾಲವನ್ನು ನೋಡಿಕೊಂಡು ಬರುತ್ತವೆ, ವರ್ತಮಾನದಲ್ಲಿ ಅದನ್ನ ಇಟ್ಟು ಚರ್ಚೆ ಮಾಡುತ್ತವೆ. ಕೃಷ್ಣ ಆಗಲಿ, ದುರ್ಯೋಧನ ಆಗಲಿ ರಣರಂಗದಲ್ಲಿ ಸತ್ತೋಗಿದ್ದಾರೆ. ಪ್ರಾಯಶಃ ಪಾಂಡವರು ಮತ್ತು ದುರ್ಯೋಧನ ಮುಖ್ಯಪಾತ್ರಗಳಲ್ಲಿ ಇವರು ಮಾತ್ರ ಉಳಿದುಕೊಂಡಿದ್ದಾರೆ. ದುರ್ಯೋಧನ ಇನ್ನೂ ಸತ್ತಿಲ್ಲ ತೊಡೆ ಮುರಿದು ಬಿದ್ದಿದ್ದಾನೆ. ಅಲ್ಲಿ ಬರುವಾಗಲೂ ಅಷ್ಟೇನೆ ಅವರು ತಮ್ಮ ಭೂತಕಾಲವನ್ನ ರಿವೀವ್ ಮಾಡಿಕೊಳ್ಳುತ್ತಾರೆ. ಏನೇನು ಮಾಡಿದ್ವಿ ಅಂತ . ಆಮೇಲೆ ಅಲ್ಲಿ ವರ್ತಮಾನವನ್ನು ತೆಗೆದುಕೊಂಡು ಬರುತ್ತಾರೆ. ಸಾಮಾನ್ಯ ಜನರನ್ನು ಅಲ್ಲಿ ತಂದು ರಾಜರಾಜರಿಗೆ ಆಗಿರುವ ಯುದ್ಧ ಇದು ಅಂತಾನೂ ತೋರಿಸುತ್ತಾರೆ. ಅಂದ್ರೆ ಸಾಮಾನ್ಯ ಮನುಷ್ಯನ, ಸೈನಿಕನ, ಹೋರಾಟಗಾರನ ಸಂಸಾರದ ಹಿನ್ನೆಲೆಯನ್ನೂ . ಅದು ಇಲ್ಲಿ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಅದು ಬರೀ ಪಾಂಡವ ಕೌರವರ ಚರಿತ್ರೆಯಲ್ಲ. ಆ ಚರಿತ್ರ ಸಾಮಾನ್ಯ ಜನರ ಚರಿತ್ರೆಯಾಗಿಯೂ ಮತ್ತು ವರ್ತಮಾನವನ್ನ ಹೇಳುವ ಒಂದು ಸ್ಥಿತಿಯನ್ನ ಸೃಷ್ಟಿ ಮಾಡುವ ಕ್ರಿಯೆಯಾಗಿ ತರುತಾರೆ, ಆಮೇಲೆ ನಾಟಕದ ಕೊನೆಯಲ್ಲಿ ಅಲ್ಲಿ ಕಲಿ ಬಂದು ಮುಂದೆ ಏನಾಗುತ್ತೆ ಅಂತ ಹೇಳ್ತಾನೆ. ಅದು ಆ ನಾಟಕದ ಭಾಗವಾಗಿ ಬಂದಿರುವಂತದು ಬಹಳ ಮುಖ್ಯವಾದು ಮುಂದೆ ಭಾರತಾಂಬೆ ಹೀಗಾಗ್ತಾಳೆ,. ಬ್ರಿಟೀಷರ ಆಳಾಗ್ತಾಳೆ , ಆಮೇಲಿನಿ೦ದ ಮೊಗಲರು ಬರ್ತಾರೆ , ಎಲ್ಲಾನು ಹೇಳಿ, ರಷ್ಯದಲ್ಲಿ ಹೀಗಾಗುತ್ತ, ರಾಮಕೃಷ್ಣ ಪರಮಹಂಸರು ಹುಟ್ಟಿಬರುತಾರೆ. ವಿವೇಕಾನಂದರು ಬರುತ್ತಾರೆ ಅನ್ನುವ ಭವಿಷ್ಯತ್ತನ್ನ ಹೇಳುವಂತ ಒಂದು ಕ್ರಿಯೆಯನ್ನ ನಡಿಸ್ತಾರೆ. ಇಲ್ಲಿ ನೋಡಿ ಮತ್ತೆ ಜಾಗತೀಕರಣದ ವಿರುದ್ದ ಹೋರಾಡುವ ಮನಸ್ಸು ಇಲ್ಲಿದೆ. ಇದು ಸ್ಥಳೀಯ ಮನಸ್ಸು . ಈ ಸ್ಥಳೀಯ ಮನಸ್ಸು ಹೇಗೆ ಘಟನೆಯನ್ನು ಗ್ರಹಿಸುತ್ತದೆ ಅನ್ನೋದು ಬಹಳ ಮುಖ್ಯ. ಒಂದು ಮಿಥ್ ಆಗಬೇಕಾದರೆ ಕಾಲದ ಮೂರು ಪರಿಕಲ್ಪನೆಗಳು ಒಂದಾಗಿ ಬ೦ದಾಗ ಅದು ಮಿಥ್ ಆಗುತ್ತದೆ. ಮಿಥ್ (ಪುರಾಣ)ನ ಡೆಪ್ಪೆಷನ್ ಅದು. ಅಂದ್ರೆ ಕುವೆಂಪು ಒಂದು ಹೊಸ ಮಿಥ್ ನ ಕ್ರಿಯೇಟ್ ಮಾಡ್ತಾ ಇದ್ದಾರೆ. ಮಿಥ್ ಮೇಕಿಂಗ್ ಅಂಡ್ ಮಿಥ್ ಬ್ರೇಕಿಂಗ್ . ಅಂದ್ರೆ ಏನು ದೇವ್ರು ಅಂತ ಇರೋಂದು ಬರೀ ಒಂದು ಜಾತಿಯಲ್ಲಲ್ಲ ಅಥವಾ ವರ್ಗದಲ್ಲಲ್ಲ. ಅವನು ಅತ್ಯಂತ ಸಾಮಾನ್ಯ ಕೆಳಜಾತಿವನಲ್ಲಿಯೂ ಇರುತ್ತಾನೆ. ಬರೀ ಇರುತ್ತಾನೆ ಅಲ್ಲ, ಅವನ ನಿಜವಾದ ಅರ್ಥವನ್ನ ಆ ಕೆಳಜಾತಿಯವ ತಿಳಿದಿರುತಾನೆ ಅನುವಂಥದು ಮೇಲುನೋಟದ ರಿಚುವೆಲ್ ಅವನಿಗೆ ಮುಖ್ಯವಾಗೋಲ್ಲ, ಜಲಗಾರ ಕೇಳ್ತಾನೆ ಜಾತ್ರೆಯಿಂದ ಏನ್ ತಂದೆ ಎಂದು. ಅದಕ್ಕವನು ಹಣ್ಣುಕಾಯಿ ಅಂತ ಹೇಳ್ತಾನೆ . ಅವನು ದೇವರನ್ನ ಜಾತ್ರೆಯಿಂದ ತರೋದಕ್ಕೆ ಆಗಲ್ಲ. ಆದ್ರೆ ಜಲಗಾರ ದೇವರನ್ನ ಯಾವಾಗಲೂ ತನ್ನ ಜೊತೆಯಲ್ಲೇ ಇರುವಂತೆ ಮಾಡಿಕೊಳ್ಳುತ್ತಾನೆ. ಬಹಳ ಚೆನಾಗಿದೆ ಕಾಮೆಂಟು, ಶಿವನನ್ನು ಏನೇನೋ ಮಾಡಿಬಿಟ್ಟಿದ್ದಾರೆ. ನಿಜವಾಗಲೂ ಅವನು ಶೂದ್ರದೇವರು. ಅವನಿಗೆ ಜನಿವಾರ ಹಾಕಿದ್ದಾರೆ ಅವನು ಕ್ಲೀನ್ ಆಗಿಲ್ಲ, ಬೂದಿ ಬಳಿದುಕೊಂಡಿದ್ದಾನೆ ಅಂತ ಗಂಗೇನ ತಲೆ ಮೇಲೆ ಇಟ್ಟಿದ್ದಾರೆ. ಇಲ್ಲಿ ನಿಮಗೆ ಕುವೆಂಪುರವರು ರಿಚುಯಲ್ಸ್ ಕಟ್ಟಿಕೊಡೋದನ್ನ ಪರಂಪರೆಯಾಗಿ ಬಂದದ್ದನ್ನ ಹೊಡೆಯೋದಕ್ಕೆ ಪ್ರಯತ್ನಪಡುತ್ತಾರೆ. ಅದನ್ನ ಮಿಥ್ ಬ್ರೇಕಿಂಗ್ ಅಂತೀವಿ. ಅದಕ್ಕೋಸ್ಕರ ಕ್ಲೀನ್ ಮಾಡಲಿಕ್ಕೆ ತಲೆ ಮೇಲೆ ಗಂಗೇನಂತೆ , ಈಥವರೆಲ್ಲ ಸೃಷ್ಟಿಸಸಿದ್ದೀರಲ್ಲ ಇದು ಅಲ್ಲ ಅಂತ ಹೇಳುತ್ತಾರೆ. ಕೊಂಡಿಗೆ ಜಲಗಾರನ ಜೊತೆಗೆ ಶಿವ ಬಂದುಬಿಡುವಂತದ್ದು . ಇಲ್ಲಿ ನೋಡಿ ಹೊಸ ಮಿಥ್ ನ ಪುನಃ ಕ್ರಿಯೆಟ್ ಮಾಡುವಂತದ್ದು. ಇಲ್ಲಿ ರಿಚುಯಲ್ಸ್ ಅಲ್ಲೂ ಜಾಗ ಇಲ್ಲ, ಆದ್ರೆ ಕುವೆಂಪು ಹೊಸ ರೀತಿಯ ಪುರಾಣವನ್ನು ಕಟ್ಟಿಕೊಡುತ್ತಾರೆ. ಇಲ್ಲಿ ನೋಡು ವಿಚಾರವಾದ ಹೇಗಿಡೇ ಅಂತ . ಹಾಗೇನೇನೇ ಶೋತೃ ತಪಸ್ವಿಯಲ್ಲಿ ಶಂಬೂಕ . ಇಲ್ಲಿ ನಿಜವಾದ ತಪಸ್ವಿ ಯಾರು? ಈ ಹಿನ್ನೆಲೆಯಲ್ಲಿ ಅವರು ನೋಡುವಂತಹದ್ದು ಬಹಳ ಮುಖ್ಯ. ರಾಮಕೃಷ್ಣ ಪರಮಹಂಸರಿಂದ, ವಿವೇಕಾನಂದರಿಂದ ಅವರು ಬಹಳವಾಗಿ ಪ್ರಭಾವಿತರಾದವರು . ಆದರೆ ನಾವು ಇನ್ನೂ ಕುವೆಂಪುರವರ ಕೆಲವು ಕೃತುಗಳನ್ನ ನೋಡುತ್ತಾ ಹೋದಾಗ ಈ ಅಂಶಗಳು ಈ ನಾಟಕದಲ್ಲಿದ್ದಂತೆ ಬೆಳಿತಾ ಹೋಗುತ್ತದೆ. ೧೯೩೦ರಲ್ಲಿ ಅವರು ಸ್ಮಶಾನ ಕುರುಕ್ಷೇತ್ರ ಬರೆದರು . ಆಗಲೇ ರಾಮಾಯಣ ದರ್ಶನಂ ಬರೆದಾಗಿತ್ತು, ಅಲ್ಲೂ ಸಹ ಯುದ್ಧದ ವಿಷಯವನ್ನ ಚರ್ಚೆ ಮಾಡಿದ್ದಾರೆ. ಅಲ್ಲಿಯೂ ಸಹ ಕಾಲದ ವಿಷಯವನ್ನ ಚರ್ಚೆ ಮಾಡಿದ್ದಾರೆ, ಪ್ರಸ್ತುತಕ್ಕೆ ಬರುತ್ತಾರೆ, ಒಂದು ಹೊಸ ಮಿಥ್ನ ಕ್ರಿಯೇಟ್ ಮಾಡಿಕೊಳ್ಳುತ್ತಾರೆ.

k2ಅದೇ ರೀತಿ ಅವರ ಕಾದಂಬರಿ ಇದೆಯಲ್ಲ ‘ಮಲೆಗಳಲ್ಲಿ ಮದುಮಗಳು ‘ , ಅಲ್ಲಿ ಮೊನ್ನೆ ಜಿ. ಹೆಚ್ . ನಾಯಕರು ಚರ್ಚೆ ಕೆಲವು ಪ್ರಶ್ನೆಗಳನ್ನು ಎತ್ತಿದರು. ನಾವು ಕುವೆಂಪುರವರನನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅಲ್ಲಿ ಬರುವ ಪುರ್ನಜನ್ಮದ ಪ್ರಶ್ನೆ ಮತ್ತೆ ಯಾರಿಗೋ ದೇಹ ಇದು ಅವನಿಗೆ ಯಾವುದೋ ಆವಾಹನೆಯಾಗಿ ಇರುವಂತದ್ದು. ಇದನ್ನೆಲ್ಲಾ ಹೇಗೆ ನೋಡಬೇಕು? ಇದರಿಂದ ಕುವೆಂಪುರವರನ್ನ ಹೇಗೆ ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯ? ಇವೆಲ್ಲ ತೊಡಕಲ್ಲವೇ? ಎನ್ನುವಂಥ ಪ್ರಶ್ನೆಯನ್ನು ಎತ್ತಿದರು. ಆದರೆ ಈ ರೀತಿ ವೈಚಾರಿಕತೆಯಿಂದ ನೋಡಿದರೆ ಅಲ್ಲಿ ಸಮಸ್ಯೆ ಬಗೆಹರಿಯಲ್ಲ ಅಲ್ಲಿ ಮುಖ್ಯವಾಗಿ ಕುವೆಂಪುರವರು ನಾಟಕಗಳಲ್ಲಿ ಮಾಡಿದಂತೆ ಏನ್ ಮಾಡಿದ್ದಾರೆ ಅಂತಂದ್ರೆ ಅಲ್ಲಿ ಒಬ್ಬ ಸೂರ್ಯೋದಯವಾಗುವ ಸಮಯದಲ್ಲಿ ಸುಮ್ಮನೆ ಕುಳಿತಿರುತ್ತಾನೆ. ಅಲ್ಲಿ ಅವನಿಗೆ ಕಾಣುವಂತದ್ದೇನೆಂದರೆ ಯುಗ ಯುಗಾಂತರಗಳಿಂದ ಮನುಷ್ಯನ ಸೂಕ್ಷ್ಯ ಭಿತ್ತಿಯಲ್ಲಿ ಮನಸ್ಸಿನಲ್ಲಿ ಇದ್ದಂತ ಇನ್ಸ್ಟಿಂಗ್ಸ್, ಅದು ಅವನನ್ನ ವಿಶ್ವ ಪ್ರಜೆಯನಾಗಿ ಮಾಡುತ್ತ ಅ೦ತ ಹೇಳುತ್ತಾರೆ, ಯಾಕೆಂದರೆ ನಿಮಗೆ ಗೊತ್ತಿದೆ ಜಿಂಕೆ ಮೊದಲನೇ ಸಲ ಹುಲಿ ಏನಾದ್ರೂ ಓದಿಸಿಕೊಂಡು ಬಂದಾಗ ಅದರ ವಾಸನೆ ಕಂಡ ತಕ್ಷಣವೇ ತಾಪಿಇಸಿಕೊಳ್ಳಲಿಕ್ಕೆ ಪ್ರಾಯ್ಟ್ನ ಮಾಡುತ್ತೆ. ಇದನ್ನ ಅದಕ್ಕೆ ಯಾರೂ ಹೇಳಿಕೊಟ್ಟಿರುವುದಿಲ್ಲ.ನಮಗೂ ಅಷ್ಟೇ ಬೆಂಕಿ ಶಾಖ ತಗುಲಿತು ಅಂದ ತಕ್ಷಣವೇ ಕೈಯನ್ನು ಹಿಂದೆ ತಗದುಕೊಳ್ಳುತ್ತೇವೆ. ಈ ರೀತಿಯ ಒಂದು ಮನಸ್ಸು ಕೆಲಸ ಮಾಡುತ್ತಾ ಇರುತ್ತದೆ. ಪ್ರತಿಯೊಬ್ಬರೂ ಜೀವಿಯಾಗಿರುವುದರಿಂದ ವಿಶ್ವಜೀವಿಯಾಗಿರುತ್ತಾರೆ ಅನ್ನವಂತ ಮಾತನ್ನ ಆಡುತಾರೆ. ಅಮೇಲೆ ಇನ್ನೂ ಒಂದು ರೀತಿಯ ಟೈಂ ಬರುತ್ತ ಅಲ್ಲಿ , ಇದೆಲ್ಲ ನೋಡಿ ಕಾಲದ ಬೇರೆ ಬೇರೆ ಪರಿಕಲ್ಪನೆಯನ್ನ ಅವರು ಉಪಯೋಗಿಸಿಕೊಂಡು ನಮಗೆ ಏನನ್ನೋ ಹೇಳಲಿಕ್ಕೆ ಪ್ರಯತ್ನಪಡುತ್ತಾ ಇದ್ದಾರೆ ಅನ್ನುವಂತದ್ದನ್ನ ನಾವು ಗುರುತಿಸಿಕೊಳ್ಳಬೇಕಾಗಿದೆ. ಒಂದು ಸ್ವತಿ ಹಿಂದಿನದೆಲ್ಲ ಜ್ಞಾಪಕಕ್ಕೆ ಬರುವಂತದು. ಅಲ್ಲಿ ಒಂದು ಹುಡುಗಿ ‘ಚೆನ್ನಿ ಏನ್ ಹೇಳಾಳೆ ಅಂತಂದ್ರೆ ಮೊದಲನೆ ಬಾರಿ ತನ್ನ ಗಂಡನಾಗುವವನ ಮನೆಗೆ ಹೋಗುತ್ತಾ ಇದ್ದಾ ಳೆ, ಅಜ್ಜಿ ರಸ್ತೆ ತಪ್ಪುತಾಳೆ. ಆದರೆ ಈ ಚಿಕ್ಕ ಹುಡುಗಿ ಅಲ್ಲಲ್ಲಿ ರಸ್ತೆ ಇಲ್ಲಿ ಹೋಗೋದು ಬಾ ಅಂತ ಹೇಳಿ ಮುಕುಂದಯ್ಯನ ಮನೆಗೆ ಕರೆದುಕೊಂಡು ಹೋಗುತ್ತಾಳೆ.. ಅವನೇ ನನಗೆ ಗಂಡ ಆಗಿದ್ದ ಅಂತ ಹೇಳಾಳೆ, ಮತ್ತೆ ಸ್ವತಿ ಆಮೇಲೆ ದೊಡ್ಡಣ್ಣ ಹೆಗ್ಗಡೆ ಪಾತ್ರ ಬರುತ್ತದೆ. ಅವನು ಎಲ್ಲೋ ಯಾತ್ರೆಗೆ ಹೋಗಿದ್ದವನು ಕಾಯಿಲೆಗೆ ಒಳಗಾಗಿ ಜ್ಞಾನವನ್ನ ಕಳೆದುಕೊಳ್ಳುತ್ತಾನೆ. ಅವನ ಸ್ಮೃತಿ ಹೋಗುತ್ತೆ. ಅವನು ಯಾರು ಅಂತ ಅವನಿಗೆ ಗುರುತಿಸುವಕ್ಕೆ ಆಗೋದಿಲ್ಲ. ಇದು ವಿಸ್ಮೃತಿ. ಸ್ಮೃತಿ ಇದೆ, ವಿಸ್ಮೃತಿ ಇದೆ. ಮತ್ತೆ ಅಸ್ಮೃತಿ ಸಹ ಇದೆ. ಇದನ್ನ ಯಾಕೆ ಕುವೆಂಪುರವರು ತಮ್ಮ ಹೆಚ್ಚಿನ ರಚನೆಗಳಲ್ಲಿ ಬಳಸಿಕೊಳ್ಳುತ್ತಾರೆ ಅಂತಂದ್ರೆ ಕಾಲವನ್ನು ಹಿಡಿಯಲು ಪ್ರಯತ್ನಪಡುವಂಥಹದ್ದು . ಕಾಲವನ್ನು ಯಾವುದರಲ್ಲಿ ಹಿಡಿತಾ ಇದ್ದಾರೆ ಅಂತಂದ್ರೆ ಅವರು ಸ್ಪೇಸ್ ನೋಡಿ ಯಾವತ್ತೋ ಒ೦ದು ದಿವಸ 1894ನೇ ಇಸವಿ ವಿವೇಕಾನಂದರು ಚಿಕಾಗೋದಲ್ಲಿ ಭಾಷಣ ಮಾಡಿದ್ದನ್ನ ಕೇಳಿ ಇಲ್ಲಿ ಒಂದು ರಿಯಾಕ್ಷನ್ ಇರುತ್ತೆ. ಎಲ್ಲಿ ? ಮಲೆನಾಡಿನ ಒಂದು ಸಣ್ಣ ಹಳ್ಳಿಯಲ್ಲಿ. ಕಾಲ ಮತ್ತು ದೇಶವನ್ನ ಗೆಲ್ಲುವ ಕ್ರಿಯೆ. ಇದೆ ವಿಶ್ವಮಾನವ ಗೀತೆ. ಕುವೆಂಪುರವರ ವೈಚಾರಿಕತೆಯ ಬಗ್ಗೆ ನಾನು ಕೊನೆಗೆ ಬರುತ್ತಾ ಇದ್ದೇನೆ. ಅವರು ಯಾತಕ್ಕೆ ಇದನ್ನ ತರುತ್ತಾರೆ ಅಂತಂದ್ರೆ ಕಾಲ ಮತ್ತು ದೇಶವನ್ನು ಗೆಲುವ ಪರಿ ಹೇಗೆ? ಹಾಗೆ ಮಾಡಿದಾಗ ಮಾತ್ರ ವಿಶ್ವಮಾನವನಾಗಬಲ್ಲ ಅನ್ನುವಂತಹದ್ದು . ಇಲ್ಲದಿದ್ದರೆ ಅವನು ವಿಶ್ವಮಾನವನಾಗಲು ಸಾಧ್ಯವಿಲ್ಲ. ಅವನು ವಿಶ್ವಮಾನವನಾಗಬೇಕಾದರೆ ಅವನೇನು ವಿಶ್ವಪರ್ಯಟನೆ ಮಾಡಬೇಕಾಗಿಲ್ಲ . ಕುಳಿತ ಕಡೆನೆ ಒಬ್ಬ ಮನುಷ್ಯ ವಿಶ್ವಮಾನವನಾಗಬಹುದು ಅನ್ನುವಂತದು ಇದು ಅವರ ವೈಚಾರಿಕತೆಯ ತುತ್ತ ತುದಿ ಅಂತ ನಾನು ತಿಳಿದುಕೊಂಡಿದ್ದೇನೆ. ಅದಕ್ಕೋಸ್ಕರ ಅವರು ಇದೆಲ್ಲವನ್ನು ಓದಿ ಕೊನೆಗೆ ‘ಓ ನನ್ನ ಚೇತನ’ವನ್ನು ನಾವು ಹಾಡೋದಕ್ಕೆ ಹೋದರೆ ಪ್ರಾಯಶಃ ವಿಶ್ವಮಾನವಗೀತೆ ಅಂತ ಯಾಕೆ ಇದನ್ನ ಕರೀತಾರೆ ಅಂತ ಹೇಳಿ , ಚೇತನ ಎಲ್ಲೆಲ್ಲೋ ಸುತ್ತಾಡಬೇಕಾಗಿಲ್ಲ, ತನ್ನೊಳಗೇ ಇದ್ದು ವಿಶ್ವವನ್ನ ಸೆಳೆದುಕೊಳ್ಳಬಹುದು ಅನ್ನುವಂತದ್ದು. ಇದು ಕುವೆಂಪುರವರ ವೈಚಾರಿಕತೆ. ಇದನ್ನ ನಾನು ಒಂದು ಜಾಹಿರಾತಿನ ಉದಾಹರಣೆ ಕೊಟ್ಟೆನಲ್ಲ ಯಾಕೆ ಕೊಟ್ಟೆ ಅಂತಂದ್ರೆ ಒಂದು ರೀತಿ ಸೆಂಟ್ರಲೈಝಷನ್ ಇರುತ್ತೆ. ಈ ಕೇಂದ್ರೀಕೃತವಾದ ಒಂದು ಶಕ್ತಿ ಇದೆಯಲ್ಲ ಅದು ಉಳಿದ ಕಡೆಯ ಶಕ್ತಿಯನ್ನೆಲ್ಲ ನಿಯಂತ್ರಣದಲ್ಲಿ ಇಟ್ಟುಕೊಳ್ಳಲ್ಲು ಪ್ರಯತ್ನಪಡುತ್ತಿರುತ್ತದೆ. ಆದರೆ ಕುವೆಂಪುರವರ ವಿಶ್ವಮಾನವತೆ ಯಾವ ಥರದ್ದು ಅಂತಂದ್ರೆ ತನ್ನ ಒಳಗೆ ತಾನು ಅರಳಿ ವಿಶ್ವವನ್ನ ಗ್ರಹಿಸುವಂತದ್ದು. ಇಲ್ಲಿ ಜಾಗತೀಕರಣದ ಥರ ಯಾವ ಹೀರಿಕೆಯೂ ಇರುವುದಿಲ್ಲ. ಯಾವ ಹೀರಿಕೆಯೂ ಇರುವುದಿಲ್ಲ . ಇದು ಅರಳುವಿಕೆ . ಒಂದು ಹೀರುವಿಕೆಯಾದರೆ ಇನ್ನೊಂದು ಅರಳುವಿಕೆ . ಇಲ್ಲಿ ಪ್ರಾಯಶಃ ಜಾಗತೀಕರಣವನ್ನ ಹೆದರಿಸಬೇಕಾದರೆ ನಾವು ಕುವೆಂಪುರವರಿಂದ ಪಡೆದರೆ ನಮ್ಮ ದೇಶೀಯತೆ ಇದೆಲ್ಲವನ್ನು ತರುವ, ಅಥಮಾಡಿಕೊಳ್ಳುವ ವೈಚಾರಿಕತೆ ಅಂದ್ರೆ ಏನು ಅಂತ ತಿಳಿದುಕೊಳ್ಳುವ ಕೆಲವು ಪರಿಕಲ್ಪನೆ ನಮಗೆ ಬರುತ್ತೆ ಅಂತ ತಿಳಿದುಕೊಂಡು ನಾನು ಇಲ್ಲಿ ಬಂದು ಮಾತನಾಡಲಿಕ್ಕೆ ಅನುವು ಮಾಡಿಕೊಟ್ಟ ದೇಸಿರಂಗ ತಂಡಕ್ಕೆ ವಂದಿಸುತ್ತೇನೆ.