ವಚನವೊಂದರ ವಿಶ್ಲೇಷಣೆ

ವಚನವೊಂದರ ವಿಶ್ಲೇಷಣೆ

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ ;
ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ ;
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ;
ನಿಮ್ಮ ಶರಣ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು; ಕೂಡಲಸಂಗಮದೇವಾ .
ಪ್ರೊ . ಎಂ . ಜಿ .ಕೃಷ್ಣಮೂರ್ತಿಯವರು ಈ ವಚನವನ್ನು ಬಹಳ ಸಮರ್ಥವಾಗಿ ವಿಶ್ಲೇಷಣೆ ಮಾಡುತ್ತಾ :
೧)ಕವನದ ಮೊದಲು ಮೂರು ಸಾಲುಗಳಲ್ಲಿ ‘ತಂದೆ’ ಪದದ ಪುನುರುಕ್ತಿ ಹಾಗೂ ಆ ಪದದ ಸಾಮಾನ್ಯ ಮತ್ತು ಧ್ವನಿತಾರ್ಥಗಳನ್ನು ಗುರುತಿಸಿದ್ದಾರೆ.
೨)ಮೊದಲ ಮೂರು ಸಾಲಿನ ನಿಷೇಧಕಕ್ಕೂ , ಕೊನೆಯ ಸಾಲಿನ ನಿಷೇಧಕಕ್ಕೂ ಇರುವ ಸಂಬಂಧ  – ವ್ಯತ್ಯಾಸ , ಪರಿಮಿತಿ – ಶಕ್ತಿಗಳನ್ನು ಗುರುತಿಸಿದ್ದಾರೆ.
೩) ಕೂಡಲ ಸಂಗಮ ದೇವಾ – ಎಂಬ ಪದ(ಪುಂಜ) ಕೆರಳಿಸುವ ಕುತೂಹಲವನ್ನು ವಿಶ್ಲೇಷಿಸುತ್ತಾ : ” ಈ ಹೆಸರಿಂದ ಒಂದೊಂದು
ಪದವೂ ಕವನಕ್ಕೆ ಅರ್ಥವನ್ನು ನೀಡುತ್ತದೆ.. ಕನ್ನಡದ ಕೂಡು ಶಬ್ದಕ್ಕೂ ಸಂಸ್ಕೃತದ ಗಮ (ಚಲಿಸುವ) ಶಬ್ದಕ್ಕೂ ಬಲು ಸಂಬಂಧವಿದೆ. ಹೀಗೆ ‘ಕೂಡು‘ ಹಾಗೂ ‘ಗಮ‘ಗಳು ಕೂಡಿ ಬಂದಿರುವುದರಿಂದ ‘ಕೂಡುವಿಕೆ‘ ಹಾಗೂ ‘ಹೋಗುವಿಕೆ‘ ಕೂಡಿಯೇ ನಡೆದಂತಾಗಿದೆ. ಇದು ಕವನವು ಒಳಗೊಂಡಿರುವ ದೈವತ್ವದ ಕಲ್ಪನೆಯ ಮೇಲೆ ಬೆಳಕು ಚೆಲ್ಲುತ್ತದೆ” ಎಂದು ವಿವರಿಸಿ, ಮುಂದೆ “ನಿಮ್ಮ ಶರಣ ಪಾದವಲ್ಲದೆ ಅನ್ಯವಿಷಯಕ್ಕೆ ಎಳಸದಂತೆ ಇರಿಸು ” ಎಂಬ ಕೋರಿಕೆಯಲ್ಲಿ , ನಿಜವಾಗಿಯೂ ಒಂದು ನಿರ್ದಿಷ್ಟ  ಇದೆ. ಪರಿಣಾಮವೆಂದರೆ ಮೊದಲ ಸಾಲಿನ ‘ಹೋಗು’ ಶಬ್ದದ ಅರ್ಥವ್ಯಾಪ್ತಿಯು ಕವನದಲ್ಲೇ ಸಂಭವಿಸಿ ಕವನ ಅರ್ಥವೂ  ಹೊಮ್ಮುತ್ತದೆ”ಎಂದಿದ್ದಾರೆ.  ವಿಮರ್ಶಕರಾಗಿ ಎಂ .ಜಿ . ಕೆ .  ಯವರು ಮಾಡಿರುವ ಈ ವಚನದ ವಿಶ್ಲೇಷಣೆ ಎಷ್ಟು ಮರ್ಪಕವಾಗಿದೆಯೆಂದರೆ, ಇದರ ಮೇಲೆ ಇನ್ನೂ ಹೆಚ್ಚಿನ ವಿಶ್ಲೇಷಣೆ, ವಿಮರ್ಶೆಗೆ ಎಡೆಯಿಲ್ಲ ಎನಿಸುತ್ತದೆ. ಆದರೆ, ಭಾಷಾಶಾಸ್ತ್ರದ ವಿದ್ಯಾರ್ಥಿ ಈ ವರ್ಚನವನ್ನು ಹೇಗೆ ನೋಡಬಹುದು ಎಂಬುದು ನನ್ನ ಕುತೂಹಲ. ಇದನ್ನು ಹತ್ತಿಕ್ಕಲಾರದೆ ನ್ನೆನು ಈ ಟಿಪ್ಪಣಿಯನ್ನು ಬರೆಯುತ್ತಿದ್ದೇನೆ. ಅಲ್ಲದೆ ಈ ವಚನದಲ್ಲಿ ಪ್ರಯೋಗವಾಗಿರುವ ಪ್ರತಿಯೊಂದು ಪದ – ವ್ಯಾಕರಣ , ವಿಶೇಷ ಮತ್ತು ವಾಕ್ಯದ ಬಳಕೆ ಕಾವ್ಯ ಸಂದರ್ಭದಲ್ಲಿ ಆಕಸ್ಮಿಕವಲ್ಲ ಎಂಬ ಇನ್ನೊಂದು ಅಂಶವೂ ಕಾರಣ. ಈ ಕೆಳಗಿನ ವಿಮರ್ಶೆ ದೊಂಬರಾಟ ಎಣಿಸಬಹುದು. ಇರಲಿ.
ಇಲ್ಲಿ ನಾನು ಎಂ .ಜಿ. ಕೆ . ಯವರ ಮೇಲಿನ ಮೂರು ಅಂಶಗಳನ್ನು ಸಂಗ್ರಹಿಸಿದ್ದಕ್ಕೆ ಕಾರಣ ಇವು ನನ್ನ ಮುಂದಿನ ಭಾಷಾ ವಿಶ್ಲೇಷಣೆಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಅಂಶದಿಂದ .
೧)ಮೇಲಿನ ವಚನದಲ್ಲಿ ಪ್ರತಿಯೊಂದು ಮಾಲ್ಕು ವಾಕ್ಯ (ಮತ್ತು ಐದು ಸಾಲು) ಗಳ್ಲಲೂ ಬರುವ ಕ್ರಿಯಾಪದಗಳು ಎರಡು ರೀತಿಯಾಗಿವೆ.
ಅ )ಅಸಮಾಪಕ(infinte ) ಆ) ಸಮಾಪಕ(finite ) ಕ್ರಿಯಾಪದಗಳು .
ಅಸಮಾಪಕ ಕ್ರಿಯಾಪದಗಳು : ೧)ಹೊಳದಂತೆ, ನೋಡದಂತೆ, ಕೇಳದಂತೆ, ಎಳಸದಂತೆ ಇವು ನಾಲ್ಕು ಕ್ರಿಯಾಪದಗಳೂ ಅಸಮಾಪಕ ಕ್ರಿಯಾಪದಗಳು. ಆದ್ದರಿಂದ ಇವು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಲಾರವು. ಈ ಕ್ರಿಯಾಪದಗಳೆಲ್ಲವೂ ವಾಕ್ಯದಲ್ಲಿ
ಭಕ್ತನಿಗೆ ಸಂಬಂಧಪಟ್ಟುವುಗಳಾದ್ದರಿಂದ ಮತ್ತು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಲಾರದವುಗಳಾಗಿರುವುದರಿಂದ ಭಕ್ತ- ತಂದೆಯನ್ನು ಅವಲಂಬಿಸಿರುವುದನ್ನು ಧ್ವನಿಸುತ್ತದೆ.
೨) ಹೋಗು , ನೋಡು, ಕೇಳು, ಎಳಸು – ಈ ಕ್ರಿಯಾಪದಗಳೆಲ್ಲ ಗತಿಸೂಚಕ (motion) ಕ್ರಿಯಾಪದಗಳು೨ . ಈ ಗತಿಸೂಚಕ ಕ್ರಿಯಾಪದಗಳು ಭಕ್ತನ ಚಂಚಲತೆಯನ್ನು ಧ್ವನಿಸುತ್ತವೆ . ಈ ಕ್ರಿಯಾಪದಗಳ ಹಿಂದೆ ಬರುವ ಅತ್ತಲಿತ್ತ , ಸುತ್ತಸುಲಿದು, ಮತ್ತೊಂದು, ಅನ್ಯ ಈ ಪದಗಳು ಚಂಚಲತೆಗೆ ಇನ್ನಷ್ಟು ಪುಷ್ಟಿಕೊಡುತ್ತವೆ .
**************************************************************************************************
೧. “ಐದು ವಚನಗಳು: ಒಂದು ವಿಶ್ಲೇಷಣೆ ” ಆಧುನಿಕ ಭಾರತೀಯ ಸಾಹಿತ್ಯ ಮತ್ತು ಇತರ ಲೇಖನಗಳು (೧೯೭೦) ಅಕ್ಷರ ಪ್ರಕಾಶನ ೬೭-೬೮.
೨. ಭಾಷೆಯ ಮೂಲ ಕ್ರಿಯಾಪದಗಳನ್ನು ಅರ್ಥವಿಜ್ಞಾನದ(semantics) ಪ್ರಕಾರ ನಾಲ್ಕು ಭಾಗಗಳನ್ನಾಗಿ ವಿಂಗಡಿಸಬಹುದು.
ಅ ) ಸ್ಥಿರ ಸ್ಥಿತಿ ಸೂಚಕ ಕ್ರಿಯಾಪದ (static verb ): ‘ ಮರ ಒಣಗಿದೆ ‘ – ಈ ರೀತಿಯ ವಾಕ್ಯಗಳಲ್ಲಿ ಕ್ರಿಯೆಯು ನಾಮಪದದ ಇರುವಿಕೆಯನ್ನು (state) ಸೂಚಿಸುತ್ತದೆ .
ಆ ) ಪರಿವರ್ತನಾ ಕ್ರಿಯಾಪದ (process verb): ‘ ಮರ ಒಣಗಿತ್ತು’ – ಈ ರೀತಿಯ ವಾಕ್ಯಗಳಲ್ಲಿ ನಾನು(ಕರ್ತೃ ) ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬದಲಾವಣೆಯನ್ನು ಹೊಂದುತ್ತದೆ ಎಂಬುದನ್ನು ಕ್ರಿಯಾಪದ ಸೂಚಿಸುತ್ತದೆ. ಈ ರೀತಿಯ ವಾಕ್ಯಗಳಿಗೆ “ಏನಾಯಿತು” ಎಂಬ ಪ್ರಶ್ನೆಗೆ ಉತ್ತರೆ ಸಿಗುತ್ತದೆ.
ಇ) ಗತಿಸೂಚಕ ಮತ್ತು ಕ್ರಿಯಾಸೂಚಕ ಕ್ರಿಯಾಪದ (motion  action  verb ):  ‘ರಾಮ ಓಡಿದ ‘, ‘ಅವನು ನೋಡಿದ’ ಈ ರೀತಿಯ ವಾಕ್ಯಗಳಲ್ಲಿ  ಕರ್ತೃ ಏನು ಮಾಡುತ್ತದೆ ಎಂಬುದನ್ನು ಕ್ರಿಯೆ ಸೂಚಿಸುತ್ತದೆ. ಕರ್ತೃವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಬರುವ ಚಲನೆಯನ್ನು (ಬದಲಾವಣೆಯನ್ನು) ಸೂಚಿಸುತ್ತದೆ. ಏನು ಮಾಡಿ(-ದ , -ಳು , -ತು ) ಮುಂತಾದ ಪ್ರಶ್ನೆಗಳಿಗೇ ಈ ರೀತಿಯ ಕ್ರಿಯಾಪದಗಳು ಉತ್ತರ ಕೊಡುತ್ತವೆ.
ಈ ) ಪ್ರಕ್ರಿಯಾ ಕ್ರಿಯಾಪದ (process  and action verb ): ‘ ರಾಮ ಬಟ್ಟೆಯನ್ನು ಒಣಗಿಸಿದ’. ಈ ರೀತಿಯ ವಾಕ್ಯಗಳಲ್ಲಿ ಕ್ರಿಯಾಪದವು ಕರ್ತೃ ಏನು ಮಾಡಿದ್ದಾನೆ ? ಕರ್ಮಾ ಏನು ಬದಲಾವಣೆ ಹೊಂದಿದೆ? ಎಂಬ ಎರಡೂ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ.
**************************************************************************************************
ಸಮಾಪಕ ಕ್ರಿಯಾಪದಗಳು : ೧) ನಾಲ್ಕು ವಾಕ್ಯಗಳ ಈಡನ್ ಭಾಗದಲ್ಲಿ ‘ತಂದೆ’ಗೆ ಸಂಬಂಧಿಸಿ ಬರುವ ‘ಮಾಡು’ ಮತ್ತು ‘ಇರಿಸು’ ಎಂಬುವು ಸಮಾಪಕ ಕ್ರಿಯಾಪದಗಳು. ಸಮಾಪಕ ಕ್ರಿಯಾಪದಗಳು ವಾಕ್ಯದಲ್ಲಿ ಸ್ವತಂತ್ರವಾಗಿ ನಿಲ್ಲಬಲ್ಲವು. ಈ ಕ್ರಿಯಾಪದಗಳು ‘ತಂದೆ’ಯ ಸ್ವತಂತ್ರ ಅಸ್ತಿತ್ವವನ್ನು ಧ್ವನಿಸುತ್ತವೆ .
೨) ಈ ಭಾಗದಲ್ಲಿ ಬರುವ ‘ಮಾಡು’ ಕ್ರಿಯಾಪದ, ಕ್ರಿಯಾಸೂಚಕ ಕ್ರಿಯಾಪದವಾದಂತೆಯೇ ಸೃಷ್ಠಿಸೂಚಕವೂ ಆಗಿದೆ. ಇದು ‘ತಂದೆ’ಯ  ಸೃಜನಶೀಲತೆ(creativity) ಶಕ್ತಿಯನ್ನು ಧ್ವನಿಸುತ್ತವೆ .
೩)ಇರ್  + ಇಸು . ‘ಇರ್’ ಎಂಬ ಕ್ರಿಯಾಪದದ ಸ್ಥಿರಸೂಚಕ(static ) ಕ್ರಿಯಾಪದ. ‘ತಂದೆ’ ಮಾತ್ರ ಭಕ್ತನನ್ನು ಒಂದು ಸ್ಥಿತಿಯಲ್ಲಿ ಇಡಬಲ್ಲ ಎಂಬುದನ್ನು ಸೂಚಿಸಿದರೆ, ಇಸು ಎಂಬ ಪ್ರೇರಣಾತ್ಮಕ ಪ್ರತ್ಯಯ ತಂದೆಯೇ ಈ ರೀತಿಯಲ್ಲಿ ಇರಿಸಲು ಸಮರ್ಥನಾದ, ಕಾರಣ ಕರ್ತಾ ಮತ್ತು ಪ್ರೇರಕ ಎಂಬುದನ್ನು ಧ್ವನಿಸುತ್ತದೆ . ೪)’ತಂದೆ’ಯು ಕ್ರಿಯಾಶೀಲನೂ ಪ್ರೇರಣಾತ್ಮಕನೂ ಆದ್ದರಿಂದ ಇವೆರಡನ್ನೂ ಕೂಡಿಕೊಂಡಿರುವ ಕೂದಲ ಸಂ -ಗಮ (ಚಲನಶೀಲ ಕ್ರಿಯಾಪದ) ಭಕ್ತ ಅಂತಹ ತಂದೆಯೊಡನೆ ಕೂಡಿಕೊಂಡಿರಲು ಮೊರೆ ಇಡುತ್ತಿರುವುದು ಧ್ವನಿತವಾಗುತ್ತದೆ.
೨) ಮತ್ತು ನಾಲ್ಕು ವಾಕ್ಯಗಳಲ್ಲಿ ಬರು ಕೂಡುವಾಕ್ಯರಚನಾ(conjunctive) ಪ್ರತ್ಯಯ ‘ಭಕ್ತ’ ಮತ್ತು ‘ತಂದೆ’ ಕೂಡುವ ಆಕಾಂಕ್ಷೆಯನ್ನು ಹೇಳಿ ‘ಕೂದಲ ಸಂಗಮ’ ಎಂಬ ಧ್ವನಿಯನ್ನು ಪುಷ್ಟೀಕರಿಸುತ್ತದೆ.
೩) ಮೊದಲ ಮೂರು ವಾಕ್ಯಗಳಲ್ಲೂ ‘ನಾನು’ ಅಥವಾ ‘ನೀವು’ ಎಂಬ ಸರ್ವನಾಮಗಳು ವಾಕ್ಯಗಳ ಮೇಲೆ ಮೇಲ್ಮೈ ಮಟ್ಟದಲ್ಲಿ (surface level) ಕಾಣಿಸಿಕೊಳ್ಳುವುದಿಲ್ಲ. ‘ನಾನು’ ವಾಕ್ಯದ ಮೊದಲಲ್ಲೂ ‘ನೀವು’ ಕೂಡು ವಾಕ್ಯದ ಮೊದಲಲ್ಲೂ  ಗೃಹೀತವಾಗಿ ಬಂದಿದೆ. ಆದರೆ ನಾಲ್ಕನೆಯ ವಾಕ್ಯದಲ್ಲಿ ಈ ಕ್ರಮ ಹಿಂದೂ ಮುಂದಾಗಿ ‘ನಿಮ್ಮ’ ಎಂದು ಗೌರವ ಸೂಚಕವಾಗಿ ಬರಂದಿರುವುದರಿಂದ ‘ನೀವು’ ವಾಕ್ಯದ ಮೇಲ್ಮೈ ಮಟ್ಟದಲ್ಲಿ ಮೂರ್ತವಾಗುತ್ತದೆ. ಈ ಸ್ಥಾನ ಪಲ್ಲಟ ಮತ್ತು ‘ತಂದೆ’ಗೆ ಸಂಬಂಧಪಟ್ಟ ಸರ್ವನಾಮದ ಮೂರ್ತತೆ ವಚನದ ಸಂದರ್ಭದಲ್ಲಿ ಗಮನಾರ್ಹವಾಗಿದೆ.
 ೪)ಹೋಗದಂತೆ, ನೋಡದಂತೆ, ಕೇಳದಂತೆ , ಎಳಸದಂತೆ ಎಂಬ ಕ್ರಿಯಾ ನಿಷೇಧಕಗಳ ಭಕ್ತನ ‘ಅಭಾವ’ವನ್ನು ಸೂಚಿಸಿದರೆ, ‘ಪಾದವಲ್ಲದೆ’ ಎಂಬ ನಾಮ ನಿಷೇಧಕವು ‘ಖಚಿತತೆ’ಯನ್ನು ಸೂಚಿಸುತ್ತದೆ. ಅಂದರೆ ರೂಪ (linguistic  form) ಮಟ್ಟದಲ್ಲಿ ನಿಷೇಧಕವಾಗಿದ್ದರೂ ಅರ್ಥದ ದೃಷ್ಟಿಯಿಂದ postive  ಆಗಿ ಬಂದಿದೆ.
೫)ಹೆಳವ, ಅಂಧಕ, ಕಿವುಡಮ್ ಅನ್ಯವಿಷಯ ಎಂಬ ಪದಗಳು ತಮ್ಮ ಮುಂದೆ ಬರುವ ನಿಷೇಧಾರ್ಥಕ ಕ್ರಿಯಾಪದದ ಸಂಸರ್ಗ (collocation)ದಿಂದ ಭಕ್ತನ ಆಕಾಂಕ್ಷೆಯನ್ನು ಸೂಚಿಸುತ್ತವೆ

ಹೀಗೆ ಈ ವಚನದಲ್ಲಿ ಬರುವ ಒಂದೊಂದು ಭಾಷಾ – ಘಟಕವೂ ಅರ್ಥವತ್ತಾದ ಶಬ್ದ- ಅರ್ಥದ ಪರಿಪೂರ್ಣ ಬೆಸುಗೆಯಾಗಿದೆ. ಈ ರೀಇಟಿ ಕವನಗಳಲ್ಲಿ ಧ್ವನಿಮಾಪದ, ವ್ಯಾಕರಣ ಮತ್ತು ವಾಕ್ಯರಚನೆಯಲ್ಲಿ ಕವನದ ವಸ್ತುವಿನ ಕಡೆಗೆ ತುಡಿಯುವುದನ್ನು ಶೈಲಿ ವಿಜ್ಞಾನ (stylistic )ದಲ್ಲಿ lingusitic cohesion ಎಂದು ಕರೆಯುತ್ತಾರೆ.

ರುಜುವಾತು : ೧೩
ಜನವರಿ – ಮಾರ್ಚ್ ೧೯೮೪
ಪುಟ : ೩೭-೪೦

Leave a Reply

Your email address will not be published. Required fields are marked *