Browsed by
Author: Administrator

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಕೃತಿ,ಪಠ್ಯ ಮತ್ತು ಕಂಬಾರರ ಭಾಷೆ

ಪಠ್ಯಕ್ಕೆ ಒಂದು ಅರ್ಥವಿಲ್ಲ. ಅದು ಓದುಗರ ಸೃಷ್ಟಿಗೆ ಅನುಗುಣವಾಗಿ ಹುಟ್ಟಿಕೊಳ್ಳುತ್ತದೆ. ಒಂದು ವಿಷಯಕ್ಕೆ ಒಂದು ರಚನೆಯಿದೆ ಎಂದುಕೊಂಡಾ ಕ್ಷಣವೇ ಈ ರಚನೆಯೇ ಪಠ್ಯದ ವಸ್ತು ಎಂದು ಹೇಳಿಬಿಡಬಹುದು . ಇದು ಒಂದು ಕೇಂದ್ರವನ್ನು ಹುಡುಕಿದಂತೆ. ಆದರೆ ಪಠ್ಯದ ಕೇಂದ್ರವು ಯಾವಾಗಲೂ ದೃಷ್ಟಿಕೋನಕ್ಕೆ ಅನುಗುಣವಾಗಿ ತನ್ನ ಕೇಂದ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಇಲ್ಲಿ ಪಠ್ಯವೆಂದರೆ ಯಾವುದಾದರೂ ಒಂದು ನಾಟಕವಾಗಿರಬಹುದು ಅಥವಾ ಯಾವುದೇ ಸಾಹಿತ್ಯ ಕೃತಿಯಾಗಿರಬಹುದು. ಈ ಸಾಹಿತ್ಯ ಕೃತಿಗೆ ಯಾವುದೇ ಒಂದು ರೀತಿಯ ರಚನೆಯಿರುವುದಿಲ್ಲ. ಇದು ಬಹಳ ಮುಖ್ಯವಾದುದು . ಏಕೆಂದರೆ ಮಾತಿನಂತೆ ರಚನೆಗಳೂ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತವೆ. ಹೇಗೆ ಪುನರ್ ಸಾಂದರ್ಭೀಕರಣಕ್ಕೆ ಒಳಗಾಗುತ್ತಾ ಹೊಸ ರೀತಿಯ ಸಾಂಸ್ಕೃತಿಕ ಶೂನ್ಯತೆ ಉಂಟಾಗುತ್ತದೆ.

ಸಾಹಿತ್ಯ ಪಠ್ಯ ಸೃಷ್ಟಿಯಾಗುವುದೆಂದರೆ ಇದುವರೆವಿಗೂ ಆ ಸಂಸ್ಕೃತಿಯಲ್ಲಿ ಆ ಅರ್ಥ ಸೃಷ್ಟಿಯಾಗಿಲ್ಲವೆಂದರ್ಥ. ಅರ್ಥ ಭಾಷೆಗಾಗಿ ಕಾಯುತ್ತಾ ಕುಳಿತಿರುತ್ತದೆ. ಯಾವುದೇ ಪಠ್ಯವೂ ಏಕ  ಸಾಪೇಕ್ಷಕವಾಗಿಯೂ, ಸಾರ್ವತ್ರಿಕವಾಗಿಯೂ ಇರುತ್ತದೆ. ಒಬ್ಬ ಬರಹಗಾರ ಪಠ್ಯವನ್ನು ಸೃಷ್ಟಿಸಿವುದು ವೈಯಕ್ತಿಕ ನೆಲೆಯಲ್ಲಿ. ಆದರೆ ಅದೇ ಕಾಲದಲ್ಲಿ ಅದು ಇನ್ನೊಬ್ಬರಿಗೂ ಅರ್ಥವಾಗುತ್ತಿರುತ್ತದೆ. ನೂರರಷ್ಟು ಅರ್ಥವಾಗದಿರಬಹುದು. ಅರ್ಥವಾಗುತ್ತದೆ ಎನಿಸುತ್ತಿರುವಾಗಲೇ ನಿಗೂಢ ನಿಗೂಢವಾಗಿಯೂ ಇದೆ ಎನಿಸುತ್ತದೆ. ಭಾಷೆ ನಮಗೆ ಅರ್ಥವಾಗುತ್ತಿದೆ ಎನಿಸುತ್ತಿರುವಾಗಲೇ ಎಲ್ಲಿಯೋ ಅರ್ಥವಾಗಿರುವುದಿಲ್ಲ . ಸಾಹಿತ್ಯ ಕೃತಿಯೂ ಹಾಗೆಯೇ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ.
ಈ ದೃಷ್ಟಿಯಲ್ಲಿ ನೋಡಿದಾಗ ಪಠ್ಯದಲ್ಲಿ ಪಠ್ಯ ಸೃಜಿಸುವವನ ಅರ್ಥ ಮತ್ತು ಓದುಗರ ಅರ್ಥ ಎಂಬುದಿಲ್ಲ. ಯಾವುದೇ ಪಠ್ಯದಲ್ಲಿ ಒಂದು ಅರ್ಥವಿರುವುದಿಲ್ಲ. ಒಂದು ಪಠ್ಯದಲ್ಲಿ ಅರ್ಥದ ವಿವಿಧ ಛಾಯೆಗಳು ಮಾತ್ರ ಇರುತ್ತವೆ. ನಾವು ಈಗ ಏನನ್ನು ಗುರುತಿಸುತ್ತಿದ್ದೇವೆಯೋ ಅಷ್ಟನ್ನು ಮಾತ್ರ ಗುರುತಿಸಕೊಳ್ಳಬಹುದು . ಒಂದು ವಸ್ತು ಅಥವಾ ಪಠ್ಯವನ್ನು ಓದಿದಾಗ, ಒಂದು ಕತೆಯನ್ನು ಅಥವಾ ಒಂದು ನಾಟಕವನ್ನು ಓದಿದಾಗ, ನಮಗೆ ಸದ್ಯದ ಅರ್ಥ ಮಾತ್ರ ಸಿಗುತ್ತಿರುತ್ತದೆ. ಉಳಿದ ಅರ್ಥಗಳೆಲ್ಲ ಗಾಳಿಯಲ್ಲಿ ತೇಲಾಡಿದಂತೆ ಇರುತ್ತದೆ. ಹಿಂದೆ ಹೇಳಿದಂತೆ ಯಾವುದೇ ಸಂಜ್ಞೆಯು ತನ್ನ ಶುದ್ಧ ಸ್ಥಿತಿಯಲ್ಲಿರುವುದಿಲ್ಲ. ಏಕೆಂದರೆ ಯಾವುದೇ ಒಂದು ಪಠ್ಯ ಎಂದ ತಕ್ಷಣ ಅದಕ್ಕೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಆಯಾಮಗಳು ಬಂದು ಬಿಡುತ್ತವೆ. ಯಾವುದೇ ಪಠ್ಯವೇ ಆಗಲಿ, ಓದಾಗಲಿ ಈ ಅರ್ಥದಲ್ಲಿ ಸಾಚಾ ಆಗಿರುವುದಿಲ್ಲ. ಈ ರೀತಿಯ ಸಂದರ್ಭವನ್ನು ಸೃಷ್ಟಿಸಿಕೊಳ್ಳುವುದೆಂದರೆ ಒಂದು ರೀತಿಯ ಒಂದು ಓದುವಿಗೂ ಮತ್ತೊಂದು ಓದಿವಿಗೂ ನೂರಕ್ಕೆ ನೂರರಷ್ಟು ಅನುಗುಣವಾಗಿ ಅರ್ಥದ ವಿವಿಧ ಛಾಯೆಗಳನ್ನು ಮಾತ್ರ ಓದುಗ ಗುರುತಿಸಿಕೊಳ್ಳಬಲ್ಲ. ಸಾಮಾನ್ಯವಾಗಿ ನಮ್ಮಲ್ಲಿ ವಿಮರ್ಶಕರು ಏನು ಮಾಡುತ್ತಿದ್ದಾರೆಂದರೆ ಯಾವುದೇ ಒಂದು ಸಾಹಿತ್ಯ ಕೃತಿಯಲ್ಲಿ ಒಂದು ಅರ್ಥವನ್ನು ಮಾತ್ರ ಕಾಣುವುದಕ್ಕೆ ಪ್ರಾರಂಭಿಸುತ್ತಾರೆ. ನಾನ ಮೊದಲೇ ಹೇಳಿದಂತೆ ಭಾಷೆಗೆ ಒಂದು ಅರ್ಥವಿರುವುದಿಲ್ಲ. ಯಾವಾಗ ಪುನರ್ ಸಂದರ್ಭೀಕರಣಕ್ಕೆ ಒಳಗಾಗುತ್ತಿರುತ್ತದೋ ಆಗ ಅನೇಕ ಅರ್ಥಗಳು ಹೊರಡುತ್ತಿರುತ್ತವೆ.
ಈಗ ಉದಾಹರಣೆಗೆ ಮನೋವೈಜ್ಞಾನಿಕ ವಿಮರ್ಶಕರು ಏನು ಮಾಡುತ್ತಾರೆಂದರೆ ಸಾಹಿತ್ಯ ಕೃತಿಯನ್ನು ಮನೋವೈಜ್ಞಾನಿಕ ವಿಶ್ಲೇಷಣೆಯ ಉದಾಹರಣೆಯಾಗಿ ತೆಗೆದುಕೊಂಡು ಅಷ್ಟಕ್ಕೇ ಮಾತ್ರ ತಮ್ಮ ಅರ್ಥವನ್ನು ಸಂಕುಚಿತಗೊಳಿಸುತ್ತಾರೆ. ಒಂದು ರೀತಿಯಲ್ಲಿ ಬರಹಗಾರನ ವೈಯಕ್ತಿಕ ಮಾನಸಿಕ ಸ್ಥಿತಿಯನ್ನು ಹುಡುಕುವುದಕ್ಕೆ ಪ್ರಯತ್ನಿಸುತ್ತಾರೆ.  ವಿಮರ್ಶೆ ಅಲ್ಲಿ ಮಿತಿಗೊಳಿಸಿಕೊಳ್ಳುತ್ತದೆ. ಅಸ್ತಿತ್ವವಾದಿ ವಿಮರ್ಶೆ ಪಠ್ಯವನ್ನು ಒಂದು ಯೋಜನೆಯೆಂದು ಭಾವಿಸುತ್ತದೆ. ಒಂದು ಪಠ್ಯ ಹೇಗೆ ಯೋಜಿತವಾಗಿದೆ ಎನ್ನುವುದನ್ನು ನೋಡುತ್ತದೆ. ಮಾರ್ಕ್ಸ್ ವಾದಿ  ವಿಮರ್ಶೆ ಸಾಮಾಜಿಕ ಚಾರಿತ್ರಿಕ ಅರ್ಥವನ್ನು ಮಾತ್ರ ಹುಡುಕುತ್ತಾ ಹೋರಾಡುತ್ತದೆ. ಈ ರೀತಿ ನಮ್ಮ ವಿಮರ್ಶೆಗಳು ಏನು ಮಾಡುತ್ತಿವೆಯೆಂದರೆ ಪಠ್ಯವನ್ನು ಒಂದು closed text ಆಗಿ ನೋಡುತ್ತಿವೆ. ಆದರೆ ಪ್ರತಿ ಸಲ ಯಾವುದೇ ಟೆಕ್ಸ್ಟ್ retexutal ಆಗಿರುತ್ತದೆ. ಈಗ ಉದಾಹರಣೆಗೆ ಕಂಬಾರರು ಜಾನಪದ ಅಥವಾ myth ಬಳಸುತ್ತಾರೆ. myth ಬಳಸುವ ಉದ್ದೇಶ ಅದರ ಮೂಲಕ ಇನ್ನೊಂದೇನನ್ನೂ ಹೇಳುವುದು. ಆ myth  ಅಲ್ಲಿ ಒಂದು ಸಂದರ್ಭವನ್ನು ತೆಗೆದು ಇನ್ನೊಂದು ಸಂದರ್ಭಕ್ಕೆ ಅದನ್ನು ಸಂಯೋಜಿಸಿದಾಗ ಹೊರಡುವ ಅರ್ಥವೇ ಬೇರೆಯಾಗಿರುತ್ತದೆ.
 ಈಗ ಉದಾಹರಣೆಗೆ ಅವರ “ಜೋಕುಮಾರ ಸ್ವಾಮಿ”ಯಲ್ಲಿ ಬರತಕ್ಕಂತಹ ಪಡುವಲಕಾಯಿ myth ತೆಗೆದುಕೊಂಡರೆ ಅದು ಕೇವಲ ನಮಗೆ ಪಡುವಲಕಾಯಿ myth ಆಗಿ ಉಳಿಯುವುದಿಲ್ಲ. ಏಕೆಂದರೆ ಅಲ್ಲಿ ಕಂಬಾರರ ನಾಟಕದ  ಪಠ್ಯದ ಬೆಳವಣಿಗೆಯ ದೃಷ್ಟಿಯಲ್ಲಿ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಿರುತ್ತದೆ. ಅದು ಕೇವಲ ಜಾನಪದವಾಗಬೇಕಾಗಿಲ್ಲ. ಅದನ್ನು ಪರಿಗಣನೆಗೆ ತೆಗೆದುಕೊಂಡಾಗ ಅದು ಪುನಃ ಪುನರ್ ಸಾಂದರ್ಭೀಕರಣಕ್ಕೆ ಒಳಗಾದಾಗ ಅದರ ಅರ್ಥವೇ ಬೇರೆಯಾಗಿರುತ್ತದೆ . ಆದ್ದರಿಂದ ಅದು ಕೇವಲ ಜಾನಪದವಾಗಿಯೇ ಉಳಿದುಕೊಂಡಿರುವುದಿಲ್ಲ. ಅದು ಜಾನಪದಕ್ಕಿಂತ ಬೇರೆಯದಾಗಿ ಬೇರೆಯ ಅರ್ಥಗಳನ್ನೇ ಹೊರಡಿಸುವುದಕ್ಕೋಸ್ಕರವಾಗಿಯೇ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಲೇ  ಇರುತ್ತದೆ. ಆದ್ದರಿಂದ ಪಠ್ಯವನ್ನು ಗ್ರಹಿಸಿದ ತಕ್ಷಣ ಅದಕ್ಕೆ ಅನೇಕ ಅರ್ಥದ ಸ್ಥಳಾವಕಾಶವಿದ್ದೇ ಇರುತ್ತದೆ.
ಆದ್ದರಿಂದ ಪಠ್ಯ ಬಹುರೂಪಿ. ಸೈದ್ಧಾಂತಿಕವಾಗಿ  ಅನುಭವಕ್ಕೆ ಬಂದಿದ್ದೆಲ್ಲವನ್ನು ಹೇಳಬಹುದಾದರೂ ವಿಜ್ಞಾನದ ದೃಷ್ಟಿಯಿಂದ ನಾವು ಒಂದು ಸಂದರ್ಭವನ್ನು ಸೃಷ್ಟಿಸಿಕೊಂಡು ಏನನ್ನು ಹೇಳುತ್ತಿದ್ದೇವೆ ಎನ್ನುವುದಕ್ಕೆ ಒಂದು ಆವರಣವನ್ನು ಸೃಷ್ಟಿಸಿಕೊಳ್ಳುತ್ತೇವೆ. ಹೀಗೆ ಸೃಷ್ಟಿಸಿಕೊಂಡ ಆವರಣದಿಂದ ಸಂವಾದ ಕ್ರಿಯೆ ಸರಿಯಾಗಿ ನಡೆಯುವ ನೆಲೆ ಸ್ಥಾಪಿತವಾಗಿದೆಯೆಂದ ಮೇಲೆ ಅನುಭವವನ್ನು ಹಿಗ್ಗಿಸಲು ಪ್ರಯತ್ನಿಸುತ್ತೇವೆ. ಆದರೆ ಅರ್ಥವೂ ಸಂದರ್ಭಕ್ಕೆ ತಕ್ಕಂತೆ ಸಂಕುಚಿತಗೊಳ್ಳುತ್ತಲೇ ವೈಶಾಲ್ಯತೆಯನ್ನು ಪಡೆಯುತ್ತದೆ. ಸಂಕುಚಿತತೆ ಮತ್ತು ವೈಶಾಲ್ಯತೆ ಎರಡೂ ಒಟ್ಟೊಟ್ಟಿಗೆ ನಡೆಯುತ್ತಿರುತ್ತದೆ. ಇದೆ ರೀತಿ ಒಂದು ಸಾಹಿತ್ಯ ಪಠ್ಯದಲ್ಲೂ ಅದಕ್ಕೆ ಯಾವ ಓದು ಅರಾಜಕವಾಗಿರುವುದಿಲ್ಲ. ಆದ್ದರಿಂದ ಪಠ್ಯ ಮತ್ತು ಸಂದರ್ಭ ಬಹಳ ಮುಖ್ಯ. ಇದು ಅರ್ಥ ಪ್ರಸರಣ ಕ್ರಿಯೆ ನಡೆಯುವ ವಿಧಾನ. ಮಾರ್ಕ್ಸ್ ವಾದಿಗಳು ಹೇಳಿದಂತೆ ಥೀಸಿಸ್ ಮತ್ತು ಆಂಟಿಥೆಸಿಸ್ ಎರಡು ಸಿಂಥೆಸಿಸ್ ಆಗುವುದಿಲ್ಲ. ಭಾಷೆಯಲ್ಲಿ ಸೂಚಿ ಇರುತ್ತದೆ. ಸೂಚ್ಯ ಇರುತ್ತದೆ. ಇಲ್ಲಿ ಸೂಚ್ಯ ನಿರ್ದಿಷ್ಟವಾಗಿ ಕಂಡುಬಂದರೂ ಸೂಚಕ ನಿರ್ದಿಷ್ಟವಲ್ಲ. ಸೂಚ್ಯ ಮತ್ತು ಸೂಚ್ಯ ಮತ್ತು ಸೂಚಕ ಒಂದರಲ್ಲಿ ಒಂದು ಬೆರೆತುಕೊಳ್ಳುವುದಿಲ್ಲ. ಅದು ಕೇವಲ ಮೈ ಮತ್ತು ಮನಸ್ಸೆಂದು, ಆತ್ಮ ಮತ್ತು ದೇಹಗಳೆಂದು ಎರಡಾಗಿ ಒಡೆದಂತೆ ಆಗಿರುತ್ತದೆ, ಬೆಸುಗೆಯಾಗುತ್ತಿರುತ್ತದೆ ಮತ್ತು ಬಿಚ್ಚಿಕೊಳ್ಳುತ್ತಿರುತ್ತದೆ. ಇದೊಂದು ಸತತವಾದ ಪ್ರಕ್ರಿಯೆಯಾಗಿ ನಡೆಯುತ್ತಿರುತ್ತದೆ.
ಪಠ್ಯ ಈ ರೀತಿ ಕೆಲಸ ಮಾಡುತ್ತಿರುತ್ತದೆ. ಆದ್ದರಿಂದ ಯಾವುದೇ ಒಂದು ಪಠ್ಯದಲ್ಲಿ ಒಂದು ಕೇಂದ್ರವಿರುವುದಿಲ್ಲ. ಕೇಂದ್ರ ಬದಲಾಗುತ್ತಲೇ ಇರುತ್ತದೆ. ಕೃತಿ ಒಂದೇ ಆದರೂ ಅದರ ಕೇಂದ್ರ ಮಾತ್ರ ಬೇರೆ ಬೇರೆಯಾಗುತ್ತಿರುವುದು ಬಹಳ ಮುಖ್ಯವಾಗಿ ಗಮನಿಸಬಹುದಾದ ಅಂಶ.
ಇನ್ನೊಂದು ಉದಾಹರಣೆ ಕೊಡಬೇಕಾದರೆ ಕೃಷ್ಣ ಕಂಸನನ್ನು ಕೊಲ್ಲುವುದಕ್ಕೆ ಬಂದಾಗ ಜಟ್ಟಿಗಳಿಗೆ ಮೇರು ಪರ್ವತದಂತೆ ಕಂಡನು. ಬ್ರಾಹ್ಮಣರಿಗೆ ಇನ್ನೊಂದು ರೀತಿ ಕಂಡನು. ಕಂಸನಿಗೆ ಮತ್ತೊಂದು ರೀತಿ ಕಂಡನು . ಕೃಷ್ಣ ಒಬ್ಬನೇ ಆದರೂ ಅವನ ಕಾಣುವಿಕೆ ಬೇರೆ ಬೇರೆಯಾಗಿದ್ದಂತೆ ಪಠ್ಯವೂ ಸಹ ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿರುವುದಿಲ್ಲ. ಸಂದರ್ಭ ಇದನ್ನು ನಿರ್ಧರಿಸುತ್ತಾ ಹೋಗುತ್ತಿರುತ್ತದೆ. ಹಾಗಾದರೆ ಈ ಅರ್ಥದಲ್ಲಿ ಪಠ್ಯವೆಂದರೇನು ಎನ್ನುವುದಕ್ಕೆ ನಾವು ಸ್ವಲ್ಪ ವಿಶ್ಲೇಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಪಠ್ಯ ಮತ್ತು ಕೃತಿ ಬೇರೆ ಬೇರೆ ಎಂದು ನೋಡಬೇಕಾಗುತ್ತದೆ. ಕೃತಿಯೆಂದರೆ ನಾವು ಕೈಗಳಲ್ಲಿ ಹಿಡಿದುಕೊಳ್ಳುವಂತಹ ಒಂದು ಅಷ್ಟು. ಅದರಲ್ಲಿ ಪುಟಗಳಿರುತ್ತವೆ. ಆದರೆ ಪಠ್ಯ ಭಾಷೆಯಲ್ಲಿ ಆಗಿರುತ್ತದೆ. ಅದು ಯಾವುದೇ ಪಠ್ಯವಾಗಿರಬಹುದು . ಕೃತಿಗೂ, ಭಾಷೆಗೂ ಈ ವ್ಯತ್ಯಾಸವಿರುತ್ತದೆ. ಕೃತಿ ಹಾಳೆಗಳಲ್ಲಿ ಮುದ್ರಿತವಾಗಿ ಕಪಾಟಿನಲ್ಲಿ ಜಾಗ ಪಡೆಯುವ ಒಂದು ವಸ್ತು. ಪಠ್ಯ ಒಂದು ವಿಧಾನಾತ್ಮಕವಾದ ಕ್ಷೇತ್ರ. ಕೃತಿಯನ್ನು ಕೈಗಳಲ್ಲಿ ಹಿಡಿದರೆ ಪಠ್ಯವನ್ನು ಭಾಷೆಯಲ್ಲಿ ಹಿಡಿಯಬೇಕಾಗುತ್ತದೆ. ಅದು ಭಾಷೆಯಲ್ಲದೆ ಬೇರೆಯಲ್ಲ. ಅದರ ಇರುವಿಕೆ ಭಾಷೆಯಲ್ಲಿಯೇ, ಪಠ್ಯ ಭಾಷೆಯನ್ನೂ ಪುನರ್ ವಿಂಗಡಿಸುತ್ತದೆ. ಒಂದು ಬಾಷೆಯೆನ್ನುವುದು ಅದರಲ್ಲಿರುವುದಿಲ್ಲ. ಇದು ಬಹಳ ಮುಖ್ಯ .
 ಈಗ ಕಂಬಾರರ ಸಾಹಿತ್ಯದಲ್ಲಿ ಭಾಷೆ ಎಂದ ತಕ್ಷಣ ಅದರಲ್ಲಿ ಜಾನಪದದ ಸೊಗಡಿದೆ ಅಥವಾ ಉತ್ತರ ಕರ್ನಾಟಕದ ಭಾಷೆಯನ್ನೂ ಬಳಸುತ್ತಾರೆ ಎಂದು ನಾವು ತಿಳಿದು ಕೊಂಡಿರುತ್ತೇವೆ . ಆದರೆ ಇದು ಹಾಗೆ ಆಗುವುದಿಲ್ಲ. ಅಲ್ಲಿ ನಾನಾ ರೀತಿಯ ಭಾಷೆಗಳು ಬೆರೆತುಕ್ಕೊಳ್ಳುತ್ತಿರುತ್ತವೆ ಮತ್ತು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಿರುತ್ತವೆ. ಹೀಗಿರುವುದರಿಂದ ಅದು ಕಂಬಾರರ ಪಠ್ಯವಾಗುತ್ತದೆ. ಇದನ್ನು ನಾವು ಪಠ್ಯ ಎಂದು ತಿಳಿದು ಓದಬೇಕಾಗುತ್ತದೆಯೇ ವಿನಃ ಕೃತಿ ಎಂದು ಓದುವುದಕ್ಕಾಗುವುದಿಲ್ಲ. ಕೃತಿ ಒಂದು ನಿರ್ದಿಷ್ಟ ವಸ್ತು. ಆದರೆ ಪಠ್ಯವೆನ್ನುವುದು ಒಂದು ನಿರ್ದಿಷ್ಟ ವಸ್ತುವಲ್ಲ. ಅದು ಅಮೂರ್ತವಾದುದು . ನಮ್ಮ ಮನಸ್ಸಿನಲ್ಲಿ ರೂಪುಗೊಳ್ಳುವಂತಹದು. ಆದ್ದರಿಂದ ಭಾಷ ದೃಷ್ಟಿಯಲ್ಲಿ ನೋಡಿದಾಗ ಯಾವುದೇ ಕೃತಿಯನ್ನು ನಾವು ಬೇರೆ ಬೇರೆ ರೀತಿಯಲ್ಲಿ ನೋಡಬೇಕಾಗುತ್ತದೆ. ಅಲ್ಲಿ ಅನೇಕ ಭಾಷೆಗಳು ಕೂಡಿಕೊಂಡಿರುವುದನ್ನು ನಾವು ನೋಡಬೇಕಾಗುತ್ತದೆ. ಈಗ ಉದಾಹರಣೆಗೆ ಮಹಾದೇವರವರ “ಕುಸುಮ ಬಾಲೆ”ಯಲ್ಲಿ ಬೇರೆ ಬೇರೆ ರೀತಿಯ ಭಾಷೆಗಳಿವೆ. ಅಲ್ಲಿ ಬ್ರಾಹ್ಮಣರ ಭಾಷೆಯಿದೆ, ಹರಿಜನರ ಭಾಷೆಯಿದೆ. ಲಿಂಗಾಯಿತರ ಭಾಷೆಯಿದೆ, ಮಾರ್ಕ್ಸ್ ವಾದಿಗಳ ಭಾಷೆಯಿದೆ. ಎಲ್ಲಾ ಭಾಷೆಗಳೂ ಇವೆ. ಇವೆಲ್ಲವೂ ಕೂಡಿಕೊಂಡು ಅದೊಂದು ಪಠ್ಯವಾಗಿದೆ. ನಾವು ವಿಮರ್ಶಕರು, ಸಾಮಾನ್ಯವಾಗಿ ಇದು ನಂಜನಗೂಡಿನ ಭಾಷೆ, ಕಂಬಾರರ ಬಗೆಗೆ ಹೇಳಬೇಕೆಂದರೆ ಇದು ಧಾರವಾಡದ ಭಾಷೆ ಎಂದು ಹೇಳುತ್ತೇವೆ. ಆದರೆ ವಾಸ್ತವವಾಗಿ ಇದು ನಿಜವಲ್ಲ. ಅವು ಪುನರ್ ಸಂದರ್ಭೀಕರಣಕ್ಕೊಳಗಾಗಿ ಪಠ್ಯದ ಭಾಷೆಯಾಗಿ ಮಾತ್ರವಾಗಿರುತ್ತವೆ . ಆದ್ದರಿಂದ ಕೆಲವೊಂದು ಪದಗಳನ್ನು ತೆಗೆದುಕೊಂಡು ನಾವು ಇದು ಧಾರವಾಡದ ಭಾಷೆ ಅಥವಾ ಇದು ನಂಜನಗೂಡಿನ ಭಾಷೆ ಎಂದು ಹೇಳಲಿಕ್ಕಾಗುವುದಿಲ್ಲ. ಪುನರ್ ಸಂದರ್ಭೀಕರಣಕ್ಕೊಳಗಾದಾಗ ಅದರಲ್ಲಿ ಬೇರೆ ಬೇರೆ ಭಾಷೆಗಳಿರುತ್ತವೆ. ಒಬ್ಬ ಕಳ್ಳನ ಭಾಷೆಯಿರಬಹುದು, ಒಬ್ಬ ಯೋಗಿಯ ಭಾಷೆಯಿರಬಹುದು. ಒಬ್ಬ ಬ್ಯಾಪಾರಿಯ ಭಾಷೆಯಿರಬಹುದು. ಈ ಎಲ್ಲ ಭಾಷೆಗಳ ಮಿಳಿತವಾಗಿ ಒಂದು ಪಠ್ಯವಾಗಿರುತ್ತದೆ. ಪಠ್ಯ ಭಾಷೆಯನ್ನೂ ಪುನರ್ ವಿಂಗಡಿಸುತ್ತದೆ . ಪ್ರತಿ ಪಠ್ಯವೂ ಒಂದು ಅರ್ಥದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅಂತರ್  ಪಠ್ಯಗಳಿಂದ ಕೂಡಿರುತ್ತದೆ . ಇದು ಬಹಳ ಮುಖ್ಯವಾದುದು .
ಪಠ್ಯ ಸೃಷ್ಟಿಯ ಮೂಲ ಉದ್ದೇಶ ಜ್ಞಾನ ಪ್ರಸರಣ. ಜ್ಞಾನ ಪ್ರಸರಣ ಕ್ರಿಯೆ ಕಾಲಾನುಕ್ರಮದಲ್ಲಿ ಸರಳ ರೇಖಾತ್ಮಕವಾಗಿ ನಡೆಯುವುದಿಲ್ಲ. ಪ್ರಸಾರಣವು ಪ್ರಜ್ಞಾಪೂರ್ವಕವಾಗಿಯಾಗಲಿ ಅಥವಾ ಅಪ್ರಜ್ಞಾಪೂರ್ವಕವಾಗಿಯಾಗಲೀ ಒಂದು ಗುಂಪಿನ ಶಕ್ತಿಯೊಡನೆ ನೆರೆ ಸಂಪರ್ಕವನ್ನು ಹೊಂದಿರುತ್ತದೆ. ಅದು ಅಗೋಚರವಾಗಿ, ವಿರಳವಾಗಿ ಕಾಣಿಸಿಕೊಳ್ಳುತ್ತಿರುತ್ತದೆ . ಈ ಶಕ್ತಿ ಸರ್ವಾಂತರ್ಮಿಯಾಗಿರುತ್ತದೆ. ಯಾವುದೇ ಸಂಸ್ಕೃತಿಯು, ಅದು ವಸಾಹತುಶಾಯಿಯದ್ದಾಗಿರಲಿ ಅಥವಾ ಆಳುವವರದ್ದಾಗಿರಲಿ, ಏಕ ಕಾಲದಲ್ಲಿ ಅಂತರ್ ಸಂಸ್ಕೃತಿಗಳಲ್ಲಿ ಪ್ರಕಟಗೊಳ್ಳುವುದಿಲ್ಲ. ಪ್ರಸಾರಣಗೊಂಡರೂ ಅದು ರೂಪುಗೊಳ್ಳುವುದಿಲ್ಲ. ಇದನ್ನು ನಾವು ಹೆಚ್ಚು ಹೊರಗಡೆಯಿಂದ ಎರವಲು ಪಡೆಯುತ್ತಿದ್ದೇವೆ ಎನ್ನುವ ಅಭಿಪ್ರಾಯವಿದೆ.
ಈಗ ಉದಾಹರಣೆಗೆ ಕಂಬಾರರು ಜಾನಪದದ ಎರವಲು ಪಡೆಯುತ್ತಾರೆ ಎನ್ನುತ್ತೇವೆ . ಇದು ನಿಜವಲ್ಲ. ಇಲ್ಲಿ ಅದು ಪುನರ್ ಸಂದರ್ಭೀಕರಣಕ್ಕೊಳಗಾಗುತ್ತಾ ಇರುತ್ತದೆ. ಒಂದು ರೀತಿಯ ಚರಿತ್ರೆಯನ್ನು ಬದಲಾಯಿಸುತ್ತಿರುತ್ತದೆ . ಈ ಹಿನ್ನೆಲೆಯಲ್ಲಿ “ಸಿರಿ ಸಂಪಿಗೆ” ನಾಟಕದೊಳಗಿನ ಒಂದೆರಡು ಮಾತುಗಳನ್ನು ಇಲ್ಲಿ ಗಮನಿಸೋಣ. ಇದು ಹೇಗೆ ಕೆಲಸ ಮಾಡುತ್ತಿರುತ್ತದೆ ಎಂಬುದನ್ನು ಪರಿಶೀಲಿಸೋಣ. ಭಾಷೆ ಬೇರೆ ಬೇರೆಯಾಗಿರುವುದೆಂದು ನಾನು ಹೇಳಿದೆನು. ಒಬ್ಬ ಹುಚ್ಚನ ಭಾಷೆಯಿರುತ್ತದೆ, ಒಬ್ಬ ಪ್ರವಾದಿಯ ಭಾಷೆಯಿರುತ್ತದೆ, ಒಬ್ಬ ವಿಜ್ಞಾನಿಯ ಭಾಷೆಯಿರುತ್ತದೆ, ಒಬ್ಬ ರಾಜಕಾರಣಿಯ ಭಾಷೆಯಿರುತ್ತದೆ.  ಈ ಎಲ್ಲಾ ಭಾಷೆಗಳೂ ಒಂದು ರೀತಿಯಲ್ಲಿ ಒಂದು ಪಠ್ಯದಲ್ಲಿ ಕೆಲಸ ಮಾಡುತ್ತಿರುತ್ತವೆ . ಕಂಬಾರರ “ಸಿರಿ ಸಂಪಿಗೆ”ಯಲ್ಲಿ  ಸಹ ಕೆಲಸ ಮಾಡುತ್ತಿರುವ ಭಾಷೆ ಯಾವುದೆಂದರೆ ಒಂದು ಪ್ರವಾದಿಯ ಭಾಷೆ ಮತ್ತು ಇನ್ನೊಂದು ಹುಚ್ಚನ ಭಾಷೆ. ಹುಚ್ಚನ ಭಾಷೆ ಅಥವಾ ಪ್ರವಾದಿಯ ಭಾಷೆ ನಮಗೆ ಏಕೆ ಅರ್ಥವಾಗುವುದಿಲ್ಲವೆಂದರೆ ಅದನ್ನು ನಮ್ಮ ಕ್ರಮದ ಸಾಂದರ್ಭೀಕರಣಕ್ಕೆ ಒಳಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.
ಈಗ ಭಾಗವತ ಹೇಳುವಂತಹದು “ಕುಲದೇವರವತರಿಸಿ ಕಾರಣಿಕ ಹೇಳಿದರು – ಎಲೆಗೆ, ಉಂಟವಗೆರಡು ದೋಷ, ಸನ್ಯಾಸಿಯಾಗುವನು  – ಧ್ವನಿ , ಭಂಗವಾದಾಗ ಅನುಜ ಸತ್ತಾಗ” ಈ ಒಂದು ಪ್ರವಾದಿ ಭಾಷೆಯನ್ನೂ ತಾಯಿ ಅರ್ಥ ಮಾಡಿಕೊಳ್ಳುವ ರೀತಿಯೇ ಬೇರೆ, ಮಗ ಸತ್ತು ಹೋಗುತ್ತಾನೆ ಎನ್ನುವ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾಳೆ. ಅದಕ್ಕಾಗಿ ಅವಳು ಏನು ಮಾಡುತ್ತಾಳೆಂದರೆ ನೀರಿನಲ್ಲಿ ನೆರಳು ನೋಡಿದ ಹಾಗೇ ಅವನಿಗೆ ಒಬ್ಬ ತಮ್ಮನಿಲ್ಲದಿರುವುದರಿಂದ ಅವನು ಸಾಯುವ ಸಾಧ್ಯತೆ ಕಡಿಮೆ ಎಂದು ಸಮಾಧಾನಪಟ್ಟುಕೊಳ್ಳುತ್ತಾಳೆ.
ಹೀಗಾಗಿ ಆ ಧ್ವನಿಗೆ ಅರ್ಥ ಬರುವುದು ಕೊನೆಯಲ್ಲಿ . ಈ ಒಗಟೆಲ್ಲಾ ಈ ಆಪಮ್ಭ್ರಂಶ ವೈರುಧ್ಯಗಳೆಲ್ಲಾ ಅಳಿದು “ಓ ಹೌದು ನಾನು ಹೀಗನ್ನಬಾರದಿತ್ತು ನಿನ್ನ ಮಾತನ್ನು ನಾನು ನಂಬುತ್ತೇನೆ” ಎಂದು ತಾಯಿ ಹೇಳುವಾಗ ಮಾತ್ರ ಅದು contextual ಆಗುತ್ತದೆ ಮತ್ತು ಅದರ ಅರ್ಥ ಅಲ್ಲಿ ಸೃಷ್ಟಿಯಾಗುತ್ತದೆ. ಈ ರೀತಿ ಕಂಬಾರರು ಭಾಷೆಯನ್ನು – ನಮ್ಮ ಕ್ರಮದಲ್ಲಿಲ್ಲದ ಭಾಷೆಯನ್ನೂ – ಬಳಸಿಕೊಂಡು ಅದನ್ನೊಂದು ಕ್ರಮಕ್ಕೆ ಅಳವಡಿಸಿಕೊಳ್ಳಲು ನೋಡುತ್ತಾರೆ. ಇದೆ ರೀತಿ ಬೇರೆ ನಾಟಕಗಳಲ್ಲೂ ಮಾಡುತ್ತಾರೆ. “ನಾಯಿ ಕಥೆ” ಎನ್ನುವ ನಾಟಕದಲ್ಲಿಯೂ ಅಷ್ಟೇ. ನಾಯಿ ಮಗ ಮಾತನಾಡಲು ಯಾವ ಅವಕಾಶವೂ ಇಲ್ಲ. ಆದರೆ ಕೊನೆಯಲ್ಲಿ ಮಾತ್ರ ಅವನು ಮಾತನಾಡುತ್ತಾನೆ. ಅವನ ಮೌನವನ್ನು ಮುರಿದು ಮಾತನಾಡಿಸುವ ಕ್ರಿಯೆಯನ್ನು ಕಂಬಾರರು ಇಲ್ಲಿ ಮಾಡುತ್ತಾರೆ. ಹೀಗೆ ಮೌನವನ್ನು ಮಾತನಾಡಿಸುವ ಕ್ರಿಯೆಯನ್ನು, ಪಠ್ಯವನ್ನು ಸೃಷ್ಟಿಸುವ ಕ್ರಿಯೆಯಾಗಿ ಕಂಬಾರರು ಕಂಡುಕೊಂಡಿದ್ದಾರೆ. ಅವರ ಪಠ್ಯಗಳಲ್ಲಿ ಮುಖ್ಯವಾಗಿ ಈ ವೈರುಧ್ಯಗಳು ಒಂದರ ಮೇಲೊಂದು ಆಗುವುದನ್ನು ಕಾಣುತ್ತೇವೆ . ಸರ್ಪ ಗರುಡಗಳೆಲ್ಲಾ ಮಿಳಿತಗೊಂಡು ಅದು ಒಂದೇ ಆಗುವುದನ್ನು ಕಾಣುತ್ತೇವೆ.
ಆದ್ದರಿಂದ ಕಂಬಾರರು ಸೃಷ್ಟಿಸುವಂತಹ ಸಾಹಿತ್ಯದಲ್ಲಿ ಬಾಷೆಯ ಮಿತಿಯನ್ನು ಕಂಡುಕೊಳ್ಳುವುದರೊಂದಿಗೆ ಭಾಷೆಯ ಶಕ್ತಿಯನ್ನು ಸಹ ಅವರು ತೋರಿಸುತ್ತಾರೆ. ಯಾವುದೇ ಬರಹವೂ ಭಾಷೆಯ ಮಿತಿಯಾಗುವಂತೆ, ಭಾಷೆಯ ಶಕ್ತಿಯೂ ಆಗುತ್ತದೆ. ಪ್ರತಿಯೊಬ್ಬ ಬರಹಗಾರನು ಎದುರಿಸುವ ಈ ಒಂದು ಪ್ರಶ್ನೆ ಈ ಭಾಷೆಯಲ್ಲಿಯೇ ಉಳಿಯ ತಕ್ಕಂತಹದು ಭಾಷೆಯನ್ನೂ ಬಿಟ್ಟು ಪಠ್ಯ ಇರುವುದಿಲ್ಲ. ಪಠ್ಯವೆಲ್ಲಾ ಭಾಷೆಯೇ ಆಗಿರುತ್ತದೆ. ಆದರೆ ಅದು ಸೃಜಿಸುವ ಅರ್ಥಗಳು ಅನಂತವಾಗಿರುತ್ತವೆ. ನಾವು ಈ ಅನಂತವಾದ ಅರ್ಥಗಳನ್ನು ಒಂದು ಸಂದರ್ಭಕ್ಕೊಳಪಡಿಸಿ ಅರ್ಥಮಾಡಿಕೊಳ್ಳಲು ಪ್ರಯತ್ನಪಡುತ್ತಿರುತ್ತೇವೆ.
ಕಂಬಾರರು ತಮ್ಮ ನಾಟಕಗಳಲ್ಲಿ ಪ್ರಮುಖವಾಗಿ ಬಳಸುವ ತಂತ್ರ ಭಾಷೆಯ ತಂತ್ರವಾಗಿರುತ್ತದೆ. ಆದ್ದರಿಂದ ನಾವು ಕಂಬಾರರ ಭಾಷೆಯನ್ನೂ ಭಾಷೆ ಎಂದಾಗ, ಕೇವಲ ಅದರ ಪದಗಳನ್ನಲ್ಲ , ಆ ಪದಗಳೆಲ್ಲಾ ಹೇಗೆ ಪುನರ್   ಸಂದರ್ಭೀಕರಣಕ್ಕೊಳಗಾಗಿ ಹೊಸ ಅರ್ಥವನ್ನು – ವಿವಿಧ ರೀತಿಯಲ್ಲಿ, ವಿವಿಧ ಕೇಂದ್ರಗಳಲ್ಲಿ , ನೆಲೆಗಳಲ್ಲಿ ನಿಂತು ನೋಡಿದಾಗ ಹೇಗೆ ಕೊಡುತ್ತದೆ – ಎನ್ನುವುದನ್ನು ನೋಡಬಹುದು. ಹೀಗೆ ಸ್ಥೂಲವಾಗಿ ನಾನು ಭಾಷೆ ಎನ್ನುವ ಪರಿಕಲ್ಪನೆಯನ್ನು ಕಂಬಾರರ ಕೆಲವು ನಾಟಕಗಳಿಗೆ ಅನ್ವಯಿಸಿ ಹೇಳಿದ್ದೇನೆ.
ನವ್ಯತೆ ಕೆಲವು ಪ್ರಶ್ನೆಗಳು

ನವ್ಯತೆ ಕೆಲವು ಪ್ರಶ್ನೆಗಳು

೧೯೫೦, ಅಂದರೆ ಸರಿಯಾಗಿ ಈ ಶತಮಾನದ ಉತ್ತರಾರ್ಧದ ಪ್ರಾರಂಭದಲ್ಲಿ ಗೋಕಾಕರು ‘ನವ್ಯ ಕಾವ್ಯ’ದ ಪ್ರಣಾಳಿಕೆಯನ್ನು ಮುಂಬಯಿಯ ಸಾಹಿತ್ಯ ಸಮ್ಮೇಳನದ ಲೇಖಕ ಗೋಷ್ಟಿಯ ಅಧ್ಯಕ್ಷ ಭಾಷಣದಲ್ಲಿ ಹುಟ್ಟು ಹಾಕಿದುದು ಒಂದು ಚಾರಿತ್ರಿಕ ದಾಖಲೆಯಾಗಿದೆ. “ಆಧುನಿಕ ಕನ್ನಡ ಕಾವ್ಯವೂ ತನ್ನ ಪರಂಪರೆಯ ಸಿದ್ದಿಯನ್ನು ಮುಟ್ಟಿದಾಗ – ಮುಂದೇನೆಂಬ ಪ್ರಶ್ನೆ ಏಳುತ್ತದೆ. ಆ ಪ್ರಶ್ನೆಗೆ ಉತ್ತರ ಇದು, ನವ್ಯ ಕಾವ್ಯ” ಎಂದು ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ಅನಿರ್ವಾರ್ಯರಾಗಿರುವ ‘ನವ್ಯ ದೃಷ್ಟಿ’ಯನ್ನು ಪ್ರತಿಪಾದಿಸಿ, ಅಲ್ಲಿಂದ ೨೫ ವರ್ಷಗಳ ತನಾ ಈ ನವ್ಯ ಕಾವ್ಯದ ರೂಪು ರೇಖೆಗಳ ಪ್ರತಿಪಾದನೆಯನ್ನು ವಿಧಿ ವಿಧಾನಗಳನ್ನು ಕ್ರೂಡ್ಹೀಕರಿಸಿಕೊಂಡು ಬಂದಿರುವ ಕೃತಿ ‘ನವ್ಯತೆ’. ಈ ದೃಷ್ಟಿಯಿಂದ ‘ನವ್ಯತೆ’, ‘ನವ್ಯ ಕಾವ್ಯ’ದ ಒಂದು ಲಾಕ್ಷಣಿಕ ಗ್ರಂಥವಾಗಿ ಬೆಳೆದುಬಂದಿದೆ.
ಗೋಕಾಕರು ನವ್ಯ ಕಾವ್ಯದ ಸುಳಿವನ್ನು ಹುಟ್ಟು ಹಾಕುವಾಗ ಆಗಲೇ ಎರಡು ಜಾಗತಿಕ ಯುದ್ದಗಳು ಅವುಗಳ ಪರಿಣಾಮ, ಭಾರತೀಯ ಜೀವನದ ಸಂಕೀರ್ಣತೆ, ಪಾಶ್ಚಿಮಾತ್ಯ ಸಂಸ್ಕೃತಿ, ಸಾಹಿತ್ಯಗಳನ್ನು ಅರಗಿಸಿಕೊಳ್ಳುವಾಗಿನ ತೊಳಲಾಟ ಅವರ ಗಮನ ಸೆಳಿದಿತ್ತು. ಆ ಹೊತ್ತಿಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಮಾನವನ ದೃಷ್ಟಿ ಮಲಿನವಾದಂತೆಯೇ ಸಾಹಿತ್ಯ ಕ್ಷೇತ್ರದಲ್ಲಿಯೂ ಮಲಿನಗೊಂಡಿರುವುದನ್ನು ಗುರುತಿಸಿ , ಈ ಸಂದರ್ಭದಲ್ಲಿ ‘ಒಂದು ನವ ಮಾನವತಾದೃಷ್ಟಿ ಸಾಹಿತ್ಯದ ನವ್ಯ ಜೀವನದ ದೃಷ್ಟಿಯಾಗಬೇಕು. ಈ ಜೀವನದ ದೃಷ್ಟಿ ನವ್ಯ ಸಾಹಿತ್ಯದಲ್ಲಿ ಮೊಳೆತು ಸಕಲ ಸೃಷ್ಟಿಯನ್ನೇ ದಿವ್ಯವಾಗಿಸಬೇಕು ಎಂಬ ಬಯಕೆ ಗೋಕಾಕರದಾಗಿತ್ತು. ಆಧುನಿಕ ಸಾಹಿತ್ಯ (ರಮ್ಯ ನವೋದಯ) ಮಾರ್ಗ ಈ ದೃಷ್ಟಿಯನ್ನು ತಟ್ಟಲು ಅಸಹಾಯಕವಾಗಿದೆ. ಆದ್ದರಿಂದ ಸಹಜವಾಗಿಯೇ ‘ನವ್ಯ ಕಾವ್ಯ’ ಕನ್ನಡದಲ್ಲಿ ಅನಿವಾರ್ಯ ಎಂಬ ವಾದವನ್ನು ಮಂಡಿಸಿದರು.
ಇಂದಿನ ಸಂಕೀರ್ಣ ಸಮಾಜದ ಬದುಕಿಗೆ ತಕ್ಕಂತೆ ವೈಜ್ಞಾನಿಕ, ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಜಾಗತಿಕ ರಾಜಕಾರಣ, ವಿಶ್ವ ಬಾಂಧವ್ಯ – ಮೊದಲಾದ ಚಲನವಲನಗಳನ್ನು ‘ಕುಲ’ಗಳ ಸಮಾಜ ವ್ಯ್ವವಸ್ಥೆಯಿಂದ ಹಿಡಿದು ಮಾರ್ಕ್ಸ್ ವಾದದ ತನಕ ಎಲ್ಲದರ ಪರಿಚಯವಾಗಿ ವಿಶ್ವ ಚದುರಂಗದಾಟ ಮನಸ್ಸನ್ನು ಸೆಳೆದಿರಬೇಕು. ಪ್ರಾಚೀನ, ಅವಾರ್ಚೀನ ದರ್ಶನ ಸಂಗ್ರಹಗಳು ನಮ್ಮದಾಗಬೇಕು. ಪ್ರಜಾಪ್ರಭುತ್ವ, ಸಮಾಜವಾದ, ಮಾರ್ಕ್ಸ್ ವಾದ, ಸರ್ವಾಧಿಕಾರತ್ವ , ನಿರಂಕುಶ ಸಮಾಜವಾದ ಇವೈದು ಆಧುನಿಕ ಸಮಾಜದ ದರ್ಶನಗಳು. ಸತ್ಯ, ಸೌಂದರ್ಯ, ಪ್ರೇಮ, ಕಲ್ಯಾಣ, ಮಂಗಳ – ಈ ಐದು ಆದರ್ಶಗಳು ವ್ಯಕ್ತಿಯ ಜೀವನದ ಐದು ಸೂತ್ರಗಳಾಗಬೇಕೆಂದು, ಇವು ನವ್ಯಕಾವ್ಯದ ದ್ರವ್ಯವಾಗಬೇಕೆಂದು ಕರೆಯಿತ್ತರು. ‘ಸಾಹಿತ್ಯವು ಬರೀ ಸತ್ಯ ಇಲ್ಲವೇ ಸೌಂದರ್ಯಕ್ಕೆ ಅಂಟಿಕೊಂಡು ನಿಲ್ಲದೆ ಮೇಲೆ ಹೇಳಿದ ಸಮ್ಯಕ್ತ್ವವನ್ನು ಚಿತ್ರಿಸಬೇಕಾಗಿದೆ. ಐದು ಅಮೃತ ತತ್ವಗಳ ಸಮೀಕರಣವಾಗಬೇಕಾಗಿದೆ . ಈ ಸಮೀಕರಣವೇ ನವ್ಯ ಸಾಹಿತ್ಯದ ಸೂತ್ರವಾಗಬೇಕಾಗಿದೆ ಎಂದು ಹೇಳಿದರು.
ಈ ರೀತಿಯ ಸಾಹಿತ್ಯದ ನವ್ಯ ಜೀವನದೃಷ್ಟಿ ಸಹಜವಾಗಿಯೇ ಆಗಿದ್ದು ಸಾಹಿತ್ಯ ಕ್ರಮದಿಂದ ಭಿನ್ನವಾದ ತತ್ವ, ದೃಷ್ಟಿ, ವಸ್ತು ಹೊಸ ಪ್ರಜ್ಞೆಗಳನ್ನೊಳಗೊಂಡ ಹೊಸ ಸಾಹಿತ್ಯವನ್ನು ನಿರೀಕ್ಷಿಸುವಂತೆ ಈ ಮಾತುಗಳು ಕಾಣುತ್ತವೆ. ಆದರೆ ಹೀಗೆ ನವ್ಯಕಾವ್ಯದ ಹೊಲವನ್ನು ಹುಟ್ಟು ಹಾಕಿದ ಗೋಕಾಕರೇ “ವಾಸ್ತವಿಕ ಇಲ್ಲವೇ ಅವಾಸ್ತವಿಕ ಪ್ರಜ್ಞೆಯು ‘ನವ್ಯ’ವೆಂದು ನಾವು ಗೆರೆ ಎಳೆಯಲಾರೆವು. ಪ್ರಜ್ಞೆಯು ಪರಂಪರಾನುಗತಿಕವಾದುದು. ಈ ನವ್ಯ ಇಲ್ಲದೆ ನವೀನ ಪ್ರಜ್ಞೆ ಬರೀ ನವ್ಯ ಕಾವ್ಯದಲ್ಲಿಯಷ್ಟೇ ಏಕೆ, ಆಧುನಿಕ (ರಮ್ಯ,ನವೋದಯ) ಕಾವ್ಯದಲೂ ವ್ಯಕ್ತವಾಗಬಹುದು. ಬಹಳವಾಗಿ ನಾವಿಷ್ಟು ಹೇಳಬಲ್ಲೆವು. ಪರಂಪರಾನುಗತಿಕ ಪ್ರಜ್ಞೆಗಿಂತ ನವೀನ ಪ್ರಜ್ಞೆಯೇ ನವ್ಯಕಾವ್ಯದಲ್ಲಿ ವಾಡಿಕೆಯಾಗಬಲ್ಲದು. ಇಂದಿನ ಪ್ರಜ್ಞೆ ಹೊಸತು ನಿಜ. ಆದರೆ ಅದು ಬರೀ ನವ್ಯಕಾವ್ಯದಲ್ಲೇ ಮೂಡಬೇಕಾಗಿಲ್ಲ” ಎಂದು ಸರ್ವಗ್ನನಲ್ಲೂ ಮತ್ತಿತರ ಪ್ರಾಚಿನ ಸಾಹಿತಿಗಳೂ ಆಯಾ ಕಾಲಕ್ಕೆ ತಕ್ಕ ನವ್ಯತೆಯನ್ನು ಕಾಣಬಹುದೆಂದು ಹೇಳಿರುವುದು ಮೇಲಿನ ಅವರ ನವ್ಯಕಾವ್ಯದ ತಾತ್ವಿಕ ತಳಹದಿಯನ್ನೇ ಅಲ್ಲಾಡಿಸುವಂತಹುದು. ಕೊನೆಗೆ ‘ಸಮನ್ವಯ’ದ ಘೋಷಣೆಯ ೧೫ನೇ ವಿಭಾಗದಲ್ಲಿ “ನವ್ಯ ಸಾಹಿತ್ಯ ನವೋದಯ ಸಾಹಿತ್ಯದ ಒಂದು ಅವಸ್ಥೆ ಮಾತ್ರ; ತನಗೆ ತಾನೇ ಪ್ರತ್ಯೇಕೆ ಮಾರ್ಗವಲ್ಲ. ಉದ್ದೀಪನ – ಪ್ರೇರಣೆಗಳ ದೃಷ್ಟಿಯಿಂದಲೂ ಇದು ಸಮರ್ಥನೀಯ” ಎಂದು ಹೇಳಿರುವುದಂತೂ ಗೋಕಾಕರು ‘ನವ್ಯಕಾವ್ಯ’ಕ್ಕೆ ಕರೆಕೊಡುವ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಏಳುತ್ತದೆ. ಆದ್ದರಿಂದಲೇ ಏನೋ ಗೋಕಾಕರು ‘ನವ್ಯಕಾವ್ಯ’ ಎಂದರೆ ಅದು ಕೇವಲ ‘ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯವೆಂಬರ್ಥದಲ್ಲಿ ಉಪಯೋಗಿಸಿದ್ದೇನೆ…..
“ಶೈಲಿ ಮತ್ತು ವಾಕ್ಸರಣಿಯಲ್ಲಿ ಆಧುನಿಕವಾಗಿದುದ್ದರ ಕಡೆಗೆ ಹೆಚ್ಚು ಸಹಾನುಭೂತಿಯುಳ್ಳ ವಿಶಿಷ್ಟವಾದ ವೈಚಾರಿಕ ವಿಧಾನವೇ ನವ್ಯ” ಎಂದು ವ್ಯಾಖ್ಯಾನಿಸಿ ನವ್ಯ ಕಾವ್ಯದ ದೃಷ್ಟಿಯನ್ನು ಇಷ್ಟಮಟ್ಟಿಗೆ ಮಾತ್ರ ಇಳಿಸಿ ಬಿಟ್ಟಿದ್ದಾರೆ(reduced) ಎನ್ನಿಸುತ್ತದೆ.
ಇನ್ನು ಗೋಕಾಕರು ಹೇಳುವ ಇಂದಿನ ಸಾಮಾಜಿಕ ಸಂಕೀರ್ಣತೆಯ ಬಗ್ಗೆ ಒಂದು ಮಾತು ಹೇಳಬಹುದು. ಸಾಮಾಜಿಕ ಸಂಕೀರ್ಣತೆ ಎಂಬುದು ಕೇವಲ ಇಂಡಿಯನ್ ಕಾಲದ ಲೇಖಕರು ಮಾತ್ರ ಎದುರಿಸಬೇಕಾಗಿರುವ ಸಮಸ್ಯೆ ಇಲ್ಲ. ಎಲ್ಲಾ ಕಾಲದಲ್ಲಿಯೂ ಲೇಖಕರು ಇದನ್ನು ಶಕ್ತಿಗೆ ತಕ್ಕಂತೆ ಎದುರಿಸುತ್ತಲೇ ಬಂದಿದ್ದಾರೆ. ಉದಾಹರಣೆಗೆ ಜೈನನಾದ ಪಂಪ ಜೈನ ಪರಂಪರೆಯ ವಸ್ತುವನ್ನು ಬಿಟ್ಟು ವೈದಿಕ ಪರಂಪರೆಯ ಭಾರತದ ಕಥಾ ವಸ್ತುವನ್ನು ಆಯ್ದುಕೊಳ್ಳುವಾಗಲೀ ಆಟ ವೈದಿಕ ಮತಾನುಯಾಯಿ ರಾಜ ಅರಿಕೇಸರಿಯ ಅಸ್ಥಾನದಲ್ಲಿದ್ದುದಾಗಲೀ ಕಥಾ ನಾಯಕನನ್ನು ಅರಿಕೇಸರಿಗೆ ಸಮೀಕರಿಸಿಕೊಂಡು ರಾಜ ಭಕ್ತಿಯಿಂದ ಬಾಗಬೇಕಾಗಿ ಬಂದದ್ದಾಗಲೀ ಆ ಕಾಲದ ಒಬ್ಬ ಸೃಜನಶೀಲ ವ್ಯಕ್ತಿ ಎದುರಿಸಬೇಕಾದ ಸಂಕೀರ್ಣಗಳಲ್ಲವೇ? ಆದ್ದರಿಂದ ಸಂಕೀರ್ಣತೆ ಎಂಬುದು ಕೇವಲ ಸ್ವಾತಂತ್ರೋತ್ತರ ಭಾರತದ ಬರಹಗಾರನ ಸಮಸ್ಯೆ ಮಾತ್ರ ಅಲ್ಲ, ಎಲ್ಲಾ ಕಾಲದಲ್ಲೂ ತನ್ನದೇ ಆದ ವಿಶಿಷ್ಟ ಸಂಕೀರ್ಣತೆಗಳನ್ನು ಬರಹಗಾರ ಎದುರಿಸಿಕೊಂಡೇ ಬಂದಿರುತ್ತಾನಲ್ಲವೇ? ಒಂದೊಂದು ಕಾಲದ ಸಂಕೀರ್ಣತೆಯೂ ಒಂದೊಂದು ತರನದ್ದಿರಬಹುದೇ ವಿನಃ ಸಂಕೀರ್ಣತೆಯನ್ನು ಎದುರಿಸದೇ ಕವಿ ಕಾವ್ಯವನ್ನು ರಚಿಸಲಾರ. ಅಂದಮೇಲೆ ಇಂದಿನ ಲೇಖಕ ಮಾತ್ರ ಸಂಕೀರ್ಣತೆಯನ್ನು ಎದುರಿಸಬೇಕಾಗಿ ಬಂದಿದೆ ಎಂಬ ಗೋಕಾಕರ ವಾದ ಸಮಂಜಸವಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ.
‘ನವ್ಯ ಕಾವ್ಯವೆಂದರೆ ಅದು ಕೇವಲ ವಿಶೇಷ ತಂತ್ರ ವಿಧಾನಗಳನ್ನು ಪಡೆದ ಕಾವ್ಯ’ವೆಂದರ್ಥದಲ್ಲಿ ಗೋಕಾಕರು ಉಪಯೋಗಿಸಿರುವುದು ಇನ್ನೊಂದು ರೀತಿಯ ಸಂಶಯಕ್ಕೆ ಎಡೆಮಾಡಿಕೊಡುತ್ತದೆ, ಏಕೆಂದರೆ ಕಾವ್ಯದ ರೂಪ ಬದಲಾವಣೆಯಾಗುವುದು ಕವಿಯ ತಾತ್ವಿಕ ಚಿಂತನೆ, ಕಾವ್ಯದ ವಸ್ತು ದೃಷ್ಟಿಕೋನ ಇವುಗಳನ್ನು ಅವಲಂಭಿಸುರುತ್ತದೆ. ಇವು ಹೊಸತಾದಾಗ ಮಾತ್ರ ಅದಕ್ಕೆ ವಿಶಿಷ್ಟ ರೀತಿಯ ತಂತ್ರ ವಿಧಾನವನ್ನು ಕಾವ್ಯದ ದ್ರವ್ಯವೇ ಹುಡುಕಿಕೊಳ್ಳಲು ಪ್ರಯತ್ನಿಸುತ್ತದೆ. ಆಗ ವಿಶೇಷ ತಂತ್ರಕ್ಕೆ ಬೆಲೆ ಇರುತ್ತದೆ. ಇಲ್ಲದಿದ್ದರೆ ಈ ‘ವಿಶೇಷ ತಂತ್ರ’ಕ್ಕೆ ಯಾವ ಬೆಲೆಯೂ ಬರುವುದಿಲ್ಲ. ಅದು ಕೇವಲ ರೂಪದೊಡನೆ ಆಟವಾಡಿದಂತಾಗುತ್ತದಲ್ಲವೇ? ಈ ರೀತಿಯ ಹೇಳಿಕೆಯಿಂದ ಗೋಕಾಕರು ಹೇಳುವ ಕಾವ್ಯ ಪ್ರಜ್ಞೆ, ದ್ರವ್ಯ, ಇವೆಲ್ಲಕ್ಕೂ ವಿರೋಧವಾದ ಧೋರಣೆಯೂ ಆಗಿ ಕಂಡು ಬಂದಾಗುತ್ತದೆ ಎನ್ನಿಸುತ್ತದೆ.
ಈ ಕೆಲವು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಗೋಕಾಕರು ಕರೆ ಕೊಟ್ಟ ನವ್ಯಕಾವ್ಯದ ರೀತಿ ಮತ್ತು ನವೋದಯ ಮತ್ತು ನವ್ಯಕಾವ್ಯಕ್ಕೆ ಇರುವ ವ್ಯತ್ಯಾಸಗಳ ಬಗೆಗೆ ಚರ್ಚಿಸಬಹುದು.
ನವ್ಯತೆಯ ಲಕ್ಷಣಗಳು
ಗೋಕಾಕರ ಪ್ರಕಾರ ;ನವ್ಯತೆಯು ಬರೀ ಕಾಲಮಾನ – ಪರಿಸ್ಥಿತಿಗಳಿಂದ ಬಂದ ಮಾರ್ಪಾಟಲ್ಲ. ಅದು ಕಾವ್ಯದ ವಿಧಾನ. ರೀತಿ ಇಲ್ಲವೇ ಸೂಕ್ಷ್ಮ ಶರೀರದಲ್ಲಾಗುವ ಮಾರ್ಪಾಟು. ಕಾವ್ಯ ಆತ್ಮ ಯಾವಾಗಲೂ ಒಂದೇ, ದರ್ಶನ ಇಲ್ಲವೇ ಕಾಣ್ಕೆಯೇ ಈ ಆತ್ಮ. ಅದನ್ನು ಒಡಮೂಡಿಸುವಾಗ ಕವಿಯು ಬಗೆಬಗೆಯ ಕಾವ್ಯ ಸಾಮಗ್ರಿಯನ್ನು ಉಪಯೋಗಿಸುತ್ತಾನೆ.
ನವ್ಯಕಾವ್ಯದಲ್ಲಿ(೧)ಬಳಕೆಯ ಮಾತು (೨)ಛಂದಸ್ಸಿನಲ್ಲಿಯ ನವೀನ ಪ್ರಯೋಗ (೩) ಪ್ರತಿಮಾ ಪ್ರಧಾನತೆ (೪) ವಾಸ್ತವಿಕ ಚಿತ್ರದೃಷ್ಟಿ (5)ಪಾರಿಭಾಷಿಕ ಶೈಲಿ (6) ವಸ್ತುವಿನ ಆಯ್ಕೆಯಲ್ಲಿ ಸ್ವಾತಂತ್ರ್ಯ (೭) ಬುದ್ದಿ ಪ್ರಧಾನತೆ (೮) ವ್ಯಕ್ತತೀತ ಮೌಲ್ಯಗಳೇ ಪ್ರಧಾನತೆ ಇರುತ್ತದೆಂದು ಹೇಳಿದ್ದಾರೆ.
ಇವುಗಳಲ್ಲಿ ಮೊದಲು ಐದು ಲಕ್ಷಣಗಳಲ್ಲಿ ಆಧುನಿಕ ಕಾವ್ಯವು ಆಸ್ಥೆ ವಹಿಸಿದ್ದನ್ನು ಗೋಕಾಕರು ಗುರುತಿಸುತ್ತಾರೆ. ಆದರೆ ‘ನವ್ಯ ಪ್ರಜ್ಞೆ’ ಬೆಳೆಯುವುದು ಮಾತ್ರ ಇವುಗಳೆಲ್ಲದರ “ಸಮಯಯೋಚಿತ ಪ್ರಜ್ಞೆ” ಮಾತ್ರ ಎಂದು ಹೇಳಿ, ಆಧುನಿಕ ಕಾವ್ಯದಲ್ಲೂ ಸಮಕಾಲಿನತೆಯನ್ನು ತೋರಿಸಿದ್ದಾರೆ. ಆದ್ದರಿಂದ ‘ನವ್ಯತೆ’ ಆಧುನಿಕ ಕಾವ್ಯ ಮಾರ್ಗದ ಒಂದು ಅವಸ್ಥಾಂತರ ಮಾತ್ರ ಆಗುತ್ತದೆ ಎಂದು ಹೇಳಬಹುದೇ ವಿನಃ ಇವೆಲ್ಲಾ ಲಕ್ಷಣಗಳು ನವ್ಯಕಾವ್ಯಕ್ಕೆ ಮಾತ್ರ ವಿಶಿಷ್ಟವಾದವು ಎಂದು ಹೇಳಲಾಗುವುದಿಲ್ಲ.
ನವೋದಯ ಮತ್ತು ನವ್ಯದ ವ್ಯತ್ಯಾಸಗಳು
ಗೋಕಾಕರ ದೃಷ್ಟಿಯಲ್ಲಿ ನವ್ಯಕಾವ್ಯ ನವೋದಯ ಕಾವ್ಯಕ್ಕಿಂತ ಹೇಗೆ ಭಿನ್ನ ಎಂಬುದನ್ನು ಈ ರೀತಿ ಸಂಗ್ರಹಿಸಬಹುದು.
(೧)ರೋಮ್ಯಾಂಟಿಕ್ ಕವಿಗಳು ತಮ್ಮ ಅನುಭವವನ್ನು ಹೆಚ್ಚು ವ್ಯಕ್ತಿನಿಷ್ಥವಾಗಿ, ವರ್ಣಕವಾಗಿ, ಭಾವಮಯವಾಗಿ ಸಾಧಿಸುತ್ತಾರೆ. ನವ್ಯ ಕವಿ ಇದನ್ನು ಹೆಚ್ಚು ನಾಟ್ಯಾತ್ಮಕವಾಗಿ, ವಸ್ತುಕವಾಗಿ, ಬುದ್ದಿ ಪ್ರಧಾನವಾಗಿ ಸಾಧಿಸುತ್ತಾನೆ.
(೨)ಎರಡು ಮಾರ್ಗಗಳಲ್ಲಿಯೂ ಅಪೂರ್ಣತೆಯುಂಟು, ಎರಡು ಮಾರ್ಗಗಳಲ್ಲಿಯೂ ಮಹೋನ್ನತಿ ಸಾಧ್ಯ.
(೩)ರೋಮ್ಯಾಂಟಿಕ್ ಕವಿಗೆ ವರ್ಣಕತೆ ಹೆಚ್ಚು ಪ್ರಿಯವಾದರೆ ನವ್ಯ ಕವಿ ವಸ್ತುಕತೆಗೆ ಹೆಚ್ಚಾಗಿ ಒಲಿಯುತ್ತಾರೆ.
(೪)ನವ್ಯ ಕವಿಗೆ ಯುಗಮಾನದ ಪ್ರಜ್ಞೆಯನ್ನು ಕುರಿತು ಮಿತಿಮೀರಿದ ಅಭಿಮಾನವಿರುತ್ತದೆ. ಸಾರ್ವಕಾಲಿಕ ಮೌಲ್ಯಗಳು ಅವನನ್ನು ಹೆಚ್ಚಾಗಿ ಆಕರ್ಷಿಸಿರುವ ಸಂಭವವಿದೆ. ಇದೇ ಕಾರಣದ ಮೂಲಕ ನವ್ಯ ಕವಿಯು ಪ್ರತಿಮಾ ದೃಷ್ಟಿ ರೋಮ್ಯಾಂಟಿಕ್ ಸೃಷ್ಟಿಗಿಂತ ಬೇರೆಯಾಗಿರುತ್ತದೆ.
(೫)ಅಂತಃಸ್ಪುರಣ ಕಾವ್ಯದ ಜೀವಾಳ ರೋಮ್ಯಾಂಟಿಕ್ ನ ಕಾವ್ಯದಲ್ಲಿ ಭಾವನಾವೇಶದಿಂದ ಇದು ಮುಚ್ಚಿ ಹೋಗಬಹುದು. ನವ್ಯಕವಿಯ ಬುದ್ಧಿ ಹೆಚ್ಚು ಚುರುಕಾಗಿರುತ್ತದೆ. ಅವನ ಅಂತಃಸ್ಪುರಣ ಅವನಲ್ಲಿಯ ಬೌದ್ಹಿಕ ವ್ಯಾಪಾರದ ಅತಿರೇಖದ ಮೂಲಕ ಸ್ಪುಟವಾಗದೇ ಹೋಗಬಹುದು.
(೬) ಭಾಷಾ ಪ್ರಯೋಗ ಹಾಗೂ ನಾದಗ್ರಹಣ ವಿಷಯದಲ್ಲಿಯೂ ಸಹ ಅವರ ದಾರಿಗಳು ಟಿಸಿಲೊಡದಿವೆ. ಭಾಷೆ ರೋಮ್ಯಾಂಟಿಗನಿಗೆ ಪ್ರಿಯತಮೆಯ ಅಂತ:ಪುರವಾಗಿದ್ದರೆ,ನವ್ಯಕವಿಗೆ ಅದು ಕುಸ್ತಿಯ ಕಣವಾಗಿರಬಹುದು.
(೭) ತಾಳ ಮತ್ತು ಲಯ: ರೋಮ್ಯಾಂಟಿಕ್ ಕವಿಯ ಸೂಕ್ಷ್ಮ ತಾಳ ಲಯಗಳು ಅವನು ತುಳಿಯುವ ರಹದಾರಿಯಲ್ಲಿ ಅಲ್ಲಲ್ಲಿ ಅರಳುತ್ತದೆ. ನವ್ಯ ಕವಿ ತಾನು ಗುರುತಿಸಿದ ಸೂಕ್ಷ್ಮಲಯಗಳ ಛಾನ್ದಸಿಕ ದೇಹವನ್ನು ತನ್ನ ಅನುಭವಕ್ಕೆ ಕೊಡಲು ಹವಣಿಸುತ್ತಾನೆ.
(೮)ರಚನಾಕೌಶಲ್ಯದಿಂದ ನವ್ಯಕವಿ ಮೂರ್ತಿಶಿಲ್ಪದ ಮಾದರಿ ಒಲಿದಿದ್ದರೆ, ರೋಮ್ಯಾಂಟಿಕ್ ಕವಿ ಚಿತ್ರ ಶಿಲ್ಪದ ವಿಧಾನವನ್ನು ಮೆಚ್ಚಿದ್ದಾನೆ.
ಈ ರೀತಿಯ ಭಿನ್ನತೆಗಳನ್ನು ಗೋಕಾಕರು ಸೂಚಿಸ್ದಾಗ ಈ ಕೆಳಗಿನ ಪ್ರಶ್ನೆಗಳು ಏಳುವುದು ಸಹಜ.
(೧)ಯಾವುದೇ ಕಾವ್ಯದಲ್ಲೂ ‘ವರ್ಣಕತೆ’ ಅಥವಾ ‘ವಸ್ತುಕತೆ’ ಎಮಬ್ ವಿಭಾಗ ಮಾಡುವುದು ಸರಿಯೇ? ಎಲ್ಲಾ ಉತ್ತಮ ಕಾವ್ಯದಲ್ಲೂ ಇವೆಲ್ಲದರ ಹದನಾದ ಮಿಳಿತವೇ ಉತ್ಕ್ರುಷ್ಟವಲ್ಲವೇ?
(೨)ಸಾರ್ವಕಾಲಿಕ ಮೌಲ್ಯವಿರುವುದರಿಂದಲೇ ಅಲ್ಲವೇ ಶತಮಾನಗಳಿಂದ ಕೃತಿಗಳು ಉಳಿದು ಬಂದಿರುವುದು? ಇದು ನವ್ಯಕ್ಕೆ ಹೇಗೆ ಪ್ರತ್ಯೇಕವಾಗಿದೆ?
(೩)ಕಾವ್ಯದಲ್ಲಿ ‘ಭಾವ ಇಷ್ಟು’,’ಬುದ್ಧಿ ಇಷ್ಟು’ ಎಂದು ಬೇರ್ಪಡಿಸಿ ತೋರಿಸಲಾಗುವುದೇ?
(೪)ತಾನು ಸೃಷ್ಟಿಸಿದ ಕವನದ ಆಶಯಕ್ಕೆ ಕಾರ್ಯಕಾರಿ ಸಂಬಂಧವನ್ನು ಕಲ್ಪಿಸುವುದರಲ್ಲಿ ಪ್ರತಿಯೊಬ್ಬ ಶಕ್ತಿಯುತ ಕವಿಗೂ ಭಾಷೆ ಸವಾಲನ್ನು ಎಸೆಯುವುದಿಲ್ಲವೇ? ಇಲ್ಲದಿದ್ದರೆ ಕವಿ ಭಾಷೆಯನ್ನು ಕಾವ್ಯವಾಗಿ ಮಾಡಲು, ಹಿಗ್ಗಿಸಿಕೊಳ್ಳಲು ಯಾವ ಕಾಲದಲ್ಲಾದರೂ ಪ್ರಯತ್ನಿಸುವುದಿಲ್ಲವೇ? ಇದೆ ಪ್ರಶ್ನೆಯನ್ನು ‘ತಾಳ ಲಯ’ಗಳಿಗೂ ಹಾಕಬಹುದಲ್ಲವೇ?
(೫) ಮತ್ತು ಕೊನೆಯದಾಗಿ ಈ ಎಲ್ಲಾ ಪ್ರಶ್ನೆಗಳನ್ನೂ ಯಾವುದೇ ಕಾಲದ ಉತ್ತಮವಲ್ಲದ ಕವಿ ಮತ್ತು ಉತ್ತಮ ಕವಿಗಳಿಗೆ ಹಾಕಬಹುದಲ್ಲದೆ ನವ್ಯ ಮತ್ತು ರೋಮಂಟಿಗರಿಗೆ ಮಾತ್ರ ಹಾಕಿಕೊಳ್ಳಬೇಕೇ?
ಈ ಎಲ್ಲಾ ಹಿನ್ನೆಲೆಗಳಿಂದ ನೋಡಿದಾಗ “ಗೋಕಾಕರ ಕಾವ್ಯ ಮೀಮಾಂಸೆ ತಪ್ಪೆಂದು ಹೇಳಲಾಗದಿದ್ದರೂ ಅದು ನವ್ಯ ಕಾವ್ಯದ ರೀತಿ ಹೇಗಾಗುತ್ತದೆಂಬುದು ಎಷ್ಟು ಯೋಚಿಸಿದರು ಬಗಹರಿಯಲಾರದು. ವಿಶಾಲದ ದರ್ಶನದಲ್ಲಿಯೇ ನವ್ಯತೆ ಇರುತ್ತಿದ್ದರೆ ನಮ್ಮ ಮೊದಲ ತಲೆಮಾರಿನ ಕವಿಗಳ ಕಾವ್ಯ ನವ್ಯ ಏಕಲ್ಲ” ಎಂಬ ಕೀರ್ತಿನಾಥ ಕುರ್ತುಕೋಟಿಯವರ ಅಭಿಪ್ರಾಯ ಸಮಂಜಸವೇ ಆಗಿದೆ.
“ಕಾವ್ಯದ ರೂಪ ಮತ್ತು ಭಾಷೆಯ ಮಟ್ಟಿಗೆ ಅವರು ನವ್ಯತೆ ತಂದರು, ಕಾವ್ಯಧೋರಣಗೆ ಸಮಬಂಧಿಸಿದಂತೆ ನವೋದಯ ಮಾರ್ಗದೊಂದಿಗೆ ಮೂಲಭೂತ ಜಗಳ ಇವರಿಗೆ ಇರಲಿಲ್ಲ. ಆದ್ದರಿಂದ ಅವರ ನವ್ಯತೆ ಪ್ರಜ್ಞೆಯಾಗಿ ಮೂಡದೆ ಪ್ರತಿಜ್ಞೆಯಾಗಿ ಬಂದಿತು” ಎಂಬ ಜಿ.ಹೆಚ್.ನಾಯಕರ ಹೇಳಿಕೆಗೂ “ಅವರು ಕಲ್ಪಿಸಿಕೊಂಡ ನವ್ಯಕಾವ್ಯ ನವೋದಯ ಕಾವ್ಯಕ್ಕಿಂತ ಭಿನ್ನ ಮನೋಧರ್ಮ್ಮದ್ದಲ್ಲ, ಅದರ ವಿಸ್ತರಣ ಮಾತ್ರ” ಎಂಬ ಎಲ್.ಎಸ್.ಶೇಷಗಿರಿರಾವ್ ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡಬೇಕಾಗಿದೆ.

ಕೀರ್ತಿನಾಥ ಕುರ್ತುಕೋಟಿ(೧೯೭೫) ನವ್ಯಕಾವ್ಯ ಪ್ರಯೋಗ ಎರಡನೇ ಆವೃತಿ ಪುಟ ೪೩
ಜಿ.ಹೆಚ್.ನಾಯಕ(೧೯೭೩) ಸಮಕಾಲೀನ ಪುಟ ೯೧
ಎಲ್.ಎಸ್.ಶೇಷಗಿರಿರಾವ್(೧೯೭೩) ಹೊಸಗನ್ನಡ ಸಾಹಿತ್ಯ (ಸಾಮಾನ್ಯನಿಗೆ ಕಾಣದ ಸಾಹಿತ್ಯ ಚರಿತ್ರೆ) ಬೆಂಗಳೂರು ವಿ.ವಿ.ಬೆಂಗಳೂರು.

ಕಥೆಗಳಲ್ಲಿ ತಂತ್ರ ಮತ್ತು ಅಭಿವ್ಯಕ್ತಿ

ಕಥೆಗಳಲ್ಲಿ ತಂತ್ರ ಮತ್ತು ಅಭಿವ್ಯಕ್ತಿ

ಪುಸ್ತಕ: ಆಲೆಮನೆ

ಒಂದರ್ಥದಲ್ಲಿ ಪ್ರತಿಯೊಂದು ಕ್ರಿಯಾತ್ಮಕ ಬರಹವೂ ಒಂದು ಸಮಾಜ. ಸಂಸ್ಕೃತಿ ಮತ್ತು ಚರಿತ್ರೆಯೋಡನೆ, ಒಟ್ಟಿನಲ್ಲಿ ಜೀವದೊಡನೆ ಸೂಕ್ಷ್ಮವಾಗಿ ನಡೆಸುವ ಸಂವಾದವಾಗುವುದರ ಜೊತೆಗೆ ವ್ಯಾಖ್ಯಾನವೂ ಆಗಿರುತ್ತದೆ. ಕ್ರಿಯಾತ್ಮಕ ಬರಹಗಾರ ಸಮಾಜವನ್ನು ಭಿನ್ನವಾಗಿ ಗ್ರಹಿಸಿ ಅದನ್ನು ಪ್ರಸ್ತುತಪಡಿಸುವುದಕ್ಕಾಗಿ, ಓದುಗರೊಡನೆ ಸಂವಹನ ನಡೆಸುವುದಕ್ಕಾಗಿ ವಿಭಿನ್ನವಾಗಿ ಭಾಷೆಯನ್ನೂ ಬಳಸುತ್ತಾನೆ. ಏಕೆಂದರೆ ಸಾಹಿತ್ಯಕ್ಕೆ ಭಾಷೆಯೇ ದ್ರವ್ಯ. ಕಥೆಗಾರ ತಾನು ಅಂದುಕೊಂಡ ಪರಿಣಾಮವನ್ನು ಒಡ ಮೂಡಿಸಲು, ಈವರೆಗೂ ಓದುಗನ ಅನುಭವಕ್ಕೆ ಬಾರದಿರುವ ರೀತಿಯಲ್ಲಿ ಹೇಳಲು ಪ್ರಯತ್ನಿಸುತ್ತಾನೆ. ಹೀಗೆ ಹೇಳುವಾಗ ಸಾಮಾನ್ಯ ಭಾಷೆ ಸಾಕಾಗದಿದ್ದಾಗ ಮೇಲ್ನೋಟಕ್ಕೆ ಅಸಂಬದ್ದಿವಾಗಿ ಕಾನುವನ್ತೆಯೂ ಚಿತ್ರಿಸುತಾನೆ. ಸಾಮಾನ್ಯ ಕ್ರಮವನ್ನು ಬಿಟ್ಟು ವಿಶಿಷ್ಟ ಕ್ರಮವನ್ನು ಅನುಸರಿಸುತ್ತಾನೆ. ಹೀಗೆ ತಾನು ನಿರೀಕ್ಷಿಸಿದ ಪರಿಣಾಮವನ್ನು ಉಂಟು ಮಾಡಲು ಬಳಸುವ ವಿಧಾನವನ್ನು ತಂತ್ರ ಎಂದು ಕರೆಯಬಹುದು.

ಹಾಗೆ ನೋಡಿದರೆ ತಂತ್ರ, ಸಂವಿಧಾನ, ಸಂಕೇತ, ಪ್ರತಿಮೆ ಇತ್ಯಾದಿ ಪರಿಕಲ್ಪನೆಗಳು ನಮ್ಮ ಸಾಹಿತ್ಯದ ಸಂದರ್ಭದಲ್ಲಿ ಹೆಚ್ಹು ಬಳಕೆಗೆ ಬಂದವು. ಈ ಅಂಶಗಳು ಅದೆಷ್ಟರ ಮಟ್ಟಿಗೆ ಕ್ರಿಯಾತ್ಮಕ ಬರಹಗಳ ಸಂವಾದವನ್ನು ತೆಕ್ಕೆಗೆ ತೆಗೆದುಕೊಂಡುಬಿಟ್ಟಿತೆಂದರೆ ಮಾಸ್ತಿ, ಆನಂದ ಮುಂತಾದ ಕಥೆಗಾರರನ್ನೇ ಸಾಂಸ್ಕೃತಿಕ ಪ್ರಜ್ಞೆಯಿಂದ ದೂರ ಮಾಡಿಬಿಟ್ಟಿತು. ಈ ಸಮಯದಲ್ಲಿ ವಿಮರ್ಶಕರೊಬ್ಬರು ಮಾಸ್ತಿಯವರನ್ನು ಸಂದರ್ಶಿಸಿ ಅವರ ಕಥೆಗಳ ಬಗ್ಗೆ ತಂತ್ರದ ಬಗ್ಗೆ ಕೇಳಿದಾಗ “ತಂತ್ರ ಮಂತ್ರಗಳನ್ನು ಉಪಯೋಗಿಸಲು ನಾನೇನು ಮಲೆಯಾಳಿ ಮಾಂತ್ರಿಕನೆ” ಎಂದು ಉತ್ತರಿಸಿದ್ದು ಮಾರ್ಮಿಕವಾಗಿತ್ತು.

ಈ ಅಂಶವನ್ನು ಹೇಳಹೊರಟಿದ್ದೇಕೆಂದರೆ, ಬೇಸಗರಹಳ್ಳಿಯವರೂ ಬರವಣಿಗೆ ಪ್ರಾರಂಭಿಸಿದ್ದು ನವ್ಯ ಸಾಹಿತ್ಯ ತನ್ನ ಶೃಂಗ ಸ್ತಿತಿಯನ್ನು ಮುಟ್ಟಿದಾಗ. ಆದರೂ ಯಾವ ರೀತಿಯ ಬಾಹ್ಯ ತಂತ್ರಗಳಿಗೂ ಒಳಗಾಗದೆ ಜೀವನ ದ್ರವ್ಯವನ್ನೇ ಗಟ್ಟಿಯಾಗಿ ಆತುಕೊಂಡಿದ್ದು ಬಹಳ ಮುಖ್ಯ. ಏಕೆಂದರೆ ಅನೇಕ ವೇಳೆ ತಂತ್ರಗಳು ಎಷ್ಟೇ ಚೆನ್ನಾಗಿದ್ದರೂ ಒಮ್ಮ ಓದುಗ ಆ ತಂತ್ರವನ್ನು ಭೇದಿಸಿಬಿಟ್ಟರೆ – ಒಗತನು ಬಿಡಿಸಿ ಬಿಟ್ಟಂತೆ – ಸಂತೋಷ ಸಿಗಬಹುದು. ಇಂತಹ ತಾಂತ್ರಿಕತೆ ಉತ್ತಮ ಮಟ್ಟದ್ದಾದರೂ, ಜೀವ ಸೆಲೆಯೇ ಇಲ್ಲದೆ, ಜೀವನ ದ್ರವ್ಯ , ಕಂಡ ಕಾಣ್ಕೆ ತೆಳುವಾಗಿಬಿಡಬಹುದು. ಈ ಮಾದರಿಯ ಕಥೆಗಳು ಕನ್ನಡದಲ್ಲಿ ಬಂದವು. ಹೀಗೆಂದಾಕ್ಷಣ ಬೆಸಗರಹಳ್ಳಿಯವರ ಕಥೆಗಳಲ್ಲಿ ಸಂಕೇತ ಪ್ರತಿಮಗಳು ಇಲ್ಲವೆಂದೇ ಅಲ್ಲ. ‘ಒಂದು ಹುಡುಗನಿಗೆ ಬಿದ್ದ ಕನಸು’, ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’ ಇತ್ಯಾದಿ ಕಥೆಗಳಲ್ಲಿ ಸಂಕೇತಗಳು ಕಥೆಯ ಮಡಿಲಿನೊಳಗಡೆಯೇ  ಇದೆ. ‘ಬೇಲ’ ಕಥೆಯಲ್ಲಂತೂ ಈ ಸಂಕೇತಗಳು ಬಹಳ ಸೂಕ್ಷ್ಮವಾಗಿ, ಸಹಜವಾಗಿ ಒಡ ಮೂಡಿವೆ.

ಸಾಮಾಜಿಕ ಕಾಳಜಿ, ಜೆ.ಪಿ.ಯವರ ಸಮಗ್ರ ಹೋರಾಟದ ಪರಿಕಲ್ಪನೆ, ನವಿರಾದ ನಾಚ್ ವಾಲೀ ಹೆಣ್ಣಿನ ಸಾನ್ನಿಧ್ಯ, ಅವಳ ಉನ್ನತ ಸಂಸ್ಕೃತಿ ಇವುಗಳು ಸಿಡುಬು ರೋಗ ನಿರ್ಮೂಲನೆಯ ಹಿನ್ನೆಲೆಯಲ್ಲಿ ಸಂಕೇತಗಳು ಎನ್ನಿಸಿಕೊಳ್ಳುವಷ್ಟರಲ್ಲೆ ಸಹಜ ನಿರೂಪಣೆಯಾಗಿ ತಿರುವು ಪಡೆಯುತ್ತಾ, ಇವೆಲ್ಲವೂ ಒಂದರೊಳಗೊಂದು ಮಿಳಿತವಾಗಿ, ಕಥಾನಕವು ಸಾಂಕೇತಿಕತೆ, ಪ್ರತಿಮ, ಪ್ರೀತಿ ಇವುಗಳು ಒಂದು ಇನ್ನೊಂದಾಗಿ ಹರಿದಾಡುತ್ತಾ, ಒಮ್ಮೊಮ್ಮೆ ಒಂದೇ ಎಲ್ಲವೂ ಆಗಿ, ಎಲ್ಲವೂ ಒಂದಾಗಿ ಮುಕ್ತಾಯಗೊಳ್ಳುವ ಸುಕೋಮಲ, ಸುಮಧುರ ಕಥೆಯಾಗಿ ಮೂಡಿ ಬಂದಿದೆ. “ಬೇಲ!” ಸಮಾಜದ ಎಲ್ಲಾ ರೀತಿಯ ಶೋಷಣೆ, ಪಿಡುಗು ಇವೆಲ್ಲ ಅಳಿದಾಗಲೇ ಸಮಗ್ರ ಕ್ರಾಂತಿ ಸಾಧ್ಯವೆಂದು ಹೆಚ್ಚು ಕಾತ್ಯಾತ್ಮಕವಾಗಿ ಸಾರುತ್ತದೆ. ಅಂದರೆ, ಸಾಮಾಜಿಕವಾಗಿ ಮಾತ್ರ ಕ್ರಾಂತಿಯಾದರೆ ಸಾಲದು, ಅದು ಸಾಂಸ್ಕೃತಿಕವಾಗಿಯೂ ರೋಗಗ್ರಸ್ತವಲ್ಲದೆಯೂ ಇರಬೇಕಾಗುತ್ತದೆ ಎಂಬುದನ್ನು ಸಿದ್ದವಾಗುತ್ತದೆ. ಅಲ್ಲದೆ, ಇಲ್ಲಿ ಸಂಪೂರ್ಣ ಕ್ರಾಂತಿಯನ್ನು ಕೇಂದ್ರವಾಗಿಟ್ಟುಕೊಂಡು ನೋಡಿದರೆ, ಬೇಲಳ ಪಾತ್ರ ಒಂದು ರೀತಿ ಕಂಡು ಬಂದರೆ, ಬೇಲಳೆ ಕೇಂದ್ರವಾದಾಗ ಆ ಸುಸಂಸ್ಕೃತ ಗ್ರಹಿಸುವ ರೀತಿ ಎಂಥದ್ದು ಎಂಬುದಕ್ಕೆ ಸಂಕೇತವಾಗುತ್ತದೆ. ಸಿಡುಬು ರೋಗ ಕೇಂದ್ರವಾದರೆ , ಕೇವಲ ‘ಬಾಹ್ಯ ಕುರೂಪ’ ಮಾತ್ರವನ್ನೇ ನಿರ್ಮೂಲನ ಮಾಡುವುದು ಕ್ರಾಂತಿಯಲ್ಲ. ‘ಆಂತರಿಕ ಕುರೂಪ’ವನ್ನು ನಿರ್ಮೂಲನ ಮಾಡಿಕೊಳ್ಳಬೇಕಾಗುವುದೂ ಅಗತ್ಯ ಎಂದು ತಿಳಿಸುತ್ತದೆ. ಈ ರೀತಿ ಈ ಕಥೆಯಲ್ಲಿ ಸಂಕೇತಗಳು ಒಂದರೊಳಗೊಂದು ಹದಗೊಂದು ಮಿಳಿತವಾಗಿಬಿಡುತ್ತವೆ. ಅಷ್ಟೇ ಅಲ್ಲ, ಇವು ಯಾವುದೂ ಸಕೆತವಲ್ಲ ಎಂದು ಸಲೀಸಾಗಿ ಓದಿಕೊಂಡರೂ ಅದರ ಮೂಲದ್ರವ್ಯ ದಕ್ಕದೇ ಇರುವುದಿಲ್ಲ. ಸಮಗ್ರ ಕ್ರಾಂತಿಯ ಅರ್ಥ ವಿಸ್ತಾರವಾಗುತ್ತದೆ.

ವಿಮರ್ಶಕರೊಬ್ಬರು ಈ ಕಥೆಯನ್ನು ಕೇವಲ ಬೆಲೆದಣ್ಣಿನ ಕಥೆಯ ಮಟ್ಟಕ್ಕೆ ಇಳಿಸಿ “ಓದಿ ತುಂಬಾ ಆನಂದಪಡುವ ವಾಚಕನಿಗೆ ಮೌಲ್ಯ ವಿವೇಚನೆ ಕಾಡುತ್ತದೆ. ನಾಯಕ ಬೇರೆ ಹೆಣ್ಣಿನೊಡನೆ ಕಳೆದ ಆತ್ಮೀಯ ಗಳಿಗೆಗಳನ್ನು ನೆನೆದು ಹೆಮ್ಮೆ ಪಡುವಂತೆ, ತನ್ನ ಹೆಂಡತಿ ಪರಪುರುಷನ ಸಹವಾಸದಲ್ಲಿ ಸುಖ ಪಡೆದರೆ ಅದನ್ನು ಭರಿಸುವ ಶಕ್ತಿ ಅವನಿಗಿದೆಯೇ? ಹೆಣ್ಣಿಗೊಂದು ನೀತಿ, ಗಂಡಿಗೊಂದು ನೀತಿ ತಾರತಮ್ಯವಲ್ಲದೆ? ಸಮಾನತಾ ಭಾವದಿಂದ ಪ್ರೇರಿತವಾಗುವ ಈ ಪ್ರಶ್ನೆಗಳನ್ನು ಎದುರಿಸುವ ತಾತ್ವಿಕತೆ ಈ ಕತೆಯಲ್ಲಿಲ್ಲವಾದ್ದರಿಂದ ಅದು ಎಷ್ಟೇ ಮನೋಹರವಾಗಿದ್ದರೂ ಕಳಪೆಯಾಗುತ್ತದೆ” ಎನ್ನುವುದು ಅವರು ಸಾಹಿತ್ಯವನ್ನು ಓದುವ ಬಡತನದ ರೀತಿಯನ್ನು ತೋರಿಸುತ್ತದೆ. ಒಟ್ಟಿನ ಪ್ರಬಂಧ ದ್ವನಿಯನ್ನು ಗ್ರಹಿಸದೆ ಮೂಡಿದ ‘ಹೇಳಿಕೆ’ಯಾಗುತ್ತದೆ.

ಅಂತೆಯೇ ‘ಚೆಲುವನ ಪರಂಗಿ ಗಿಡಗಳು’ ಸೂಕ್ಷಮತೆಯಿಂದ ಕೂಡಿದ ಬರವಣಿಗೆ, ಸ್ವಾಭಾವಿಕವಾಗಿ ಬೆಳೆದ ಕಥೆ. ಸಂಪೂರ್ಣ ಕಥೆಯೇ ಈ ನಾಡಿನ ಸಾತಂತ್ರೋತ್ತರ ಜನಗಳ ಪಾಡಿಗೆ ಸಂಕೇತವಾಗಿ ನಿಲ್ಲುತ್ತದೆ. ಕಥೆಯ ಕೇಂದ್ರ ಕಥೆಯಾಚೆಯಾಲಿ ಕಾಣಿಸಿಕೊಳ್ಳುತ್ತದೆ. ಚಲುವ ಮತ್ತು ಅವನ ಅಪ್ಪ ಮೂಗೂರ ಅಸಹಾಯಕರಂತೆ ಕಂಡುಬಂದರೂ ಸುಬ್ಬಣ್ಣನವರ ಒತ್ತಾಸೆಯಿಂದ ಎದೆಗುಂದದೆ ತಮ್ಮ ಸಾಮಾಜಿಕ, ಆರ್ಥಿಕ ದಬ್ಬಾಳಿಕೆಯೂ ಪ್ರತೀಕವಾದ ಗೋವಿಂದರಾಜುವನ್ನು ಬೇರೆ ರೀತಿಯಿಂದ ‘ಟೀಸ್’ ಮಾಡುವಂತೆ, ಆಚಲಮನಸ್ಸಿನವರಾಗಿ ಮತ್ತೊಮ್ಮೆ ಪರಂಗಿ ಗಿಡಗಳನ್ನು ನೆಡುವುದರ ಮೂಲಕ ತಮ್ಮ “ಬಡತನ ಕೋಪ”ವನ್ನು ಸೃಜನಾತ್ಮಕವಾಗಿ ಪರಿವರ್ತಿಸಿಕೊಂಡು, ದಬ್ಬಾಳಿಕೆಯನ್ನು ಎದುರಿಸಿ ನಿಲ್ಲುವ ಬೇರೆಯ ಪರಿಯನ್ನೇ ಕಂಡುಕೊಳ್ಳುತ್ತಾರೆ. ಇಲ್ಲಿ ಗಾಂಧೀವಾದ ಸಹಜವಾಗಿ ಮೂಡಿ ಬರುತ್ತದೆ. ಶೋಷಣೆ, ದಬ್ಬಾಳಿಕೆ ಇವುಗಳನ್ನು ಎದುರಿಸುವ ಬೇರೊಂದು ದಿಕ್ಕು ಇದೆ ಎಂದು ಸೂಚಿಸುತ್ತದೆ. ಇಲ್ಲಿ ದಬ್ಬಲಿಕೆಗಾಗುವ ಶಿಕ್ಷೆ ಬೇರೆ ಆಯಾಮವನ್ನು ಪಡೆಯುತ್ತದೆ.

ಇದೆ ರೀತಿಯಲ್ಲಿ ಬೆಸಗರಹಳ್ಳಿಯವರ ಕಥೆಗಳಲ್ಲಿ, ಮಂಗ. ಹಾವು, ಮಳೆ ಮುಂತಾದುವು ಬಹಳ ಸಹಜವಾಗಿ ನವಿರಾಗಿ ಕಥೆ ಹುಳುವ ತಂತ್ರವಾಗಿ ಬೆಳೆಯುತ್ತವೆ.

ಅಬಿವ್ಯಕ್ತಿಯ ದೃಷ್ಟಿಯಿಂದ ನೋಡಿದಾಗ ರಾಮಣ್ಣನವರ ಕಥೆಗಳನ್ನು ಸ್ಥೂಲವಾಗಿ ಮೂರು ರೀತಿಯ ಮಾದರಿಯೊಳಗೆ ಹಿಡಿಯಬಹುದು.

ಮೊದಲನೆಯದಾಗಿ ಮಹಾಭಾರತ ಮಾದರಿ:

ಈ ಮಾದರಿಯಲ್ಲಿ ಬರುವ ಕಥೆಗಳು ಒಂದೇ ಜಾತಿಯ, ಮನೆ ಅಥವಾ ಮನೆತನದವರಿಗೆ ಸಂಬಂಧಿಸಿದ ಕಥೆಯಾಗಿರುತ್ತವೆ. ಸುಗ್ಗಿ, ಮಳೆಗರೆಯಿತು ಬಾನು, ನೆಲದ ಉಸಿರು, ಸ್ವಾರ್ಥ ಇತ್ಯಾದಿ ಕಥೆಗಳು ಆಸ್ತಿಗಾಗಿ ತಂದೆ – ಮಗ, ಅಣ್ಣ – ತಮ ಅಥವಾ ತಂದೆ – ಮಗ ಅಣ್ಣ ತಮ್ಮರಂತೆ ಬದುಕುತ್ತಿದ್ದ ವ್ಯಕ್ತಿಗಳ ಪಾತ್ರದಲ್ಲಿ ಬರುವ ವೈಮನಸ್ಯಗಳು ಛಲ, ಶಕುನಿಯಂತಹ ಮಧ್ಯವರ್ತಿಗಳು ಇವರುಗಳಿಂದ ಆಗುವ ನಾಶ ಇತ್ಯಾದಿಗಳನ್ನು ರೂಪಕವಾಗಿ ಬಳಸಿಕೊಳ್ಳುತ್ತವೆ.

ಎರಡನೆಯದಾಗಿ ಸ್ಪ್ರುಶ್ಯ – ಅಸ್ಪೃಶ್ಯರ ನಡುವಿನ ಘರ್ಷಣೆಯ ಮಾದರಿ:

ಇಂಥಹ ಕಥೆಗಳಲ್ಲಿ ಮುಖ್ಯವಾಗಿ ಗೌಡರು ಮತ್ತು ಅಥವಾ ಬ್ರಾಹ್ಮಣರು ಹರಿಜನರೊಡನೆ ನಡೆಯುವ ಘರ್ಷಣೆಗಳಿವೆ. ಜೀತ, ಕಳೆ, ಅಭಿಮಾನ, ಘರ್ಜನೆ, ಹರಕೆಯ ಹಣ , ಕಕರನ ಯುಗಾದಿ, ಚಲುವನ ಪರಂಗಿ ಗಿಡಗಳು, ಈ ಎರಡನೆಯ ಮಾದರಿ ಕಥೆಗಳು. ಮೂರನೆಯದಾಗಿ ಬದಲಾಗುತ್ತಿರುವ ರಾಜಕೀಯ, ಸಾಮಾಜಿಕ, ಅಧಿಕಾರಶಾಹೀ ಹಿನ್ನೆಲೆಯಲ್ಲಿ ಪುನರ್ ಹೊಂದಾಣಿಕೆಗೆ ಒಳಗಾಗುತ್ತಿರುವ ಕಥೆಗಳು. ಇಲ್ಲಿ ಜಾತಿಯ ಹೊರತಾದ ದಬ್ಬಾಳಿಕೆಗಳು ನಡೆಯುತ್ತವೆ. ಮಾನವೀಯ ನೆಲೆಯನ್ನು ಕಂಡುಕೊಳ್ಳಲು ನಡೆಯುತ್ತಿರುವ ಅನುಸಂಧಾನದಂತೆ. ಮನುಷ್ಯನ ಸ್ವಾರ್ಥ ಅದರಿಂದಾಗುವ ಏಳು ಬೀಳುಗಳ ಕಡೆ ವಸ್ತು ವಾಲಿರುತ್ತದೆ. ಉದಾಹರಣೆಗೆ ತಾಯಿ, ಅಭಿಮಾನ, ಸಂತೆಯೊಳಗೊಂದು ಮನೆಯ ಮಾಡಿ ಕಥೆಗಳನ್ನು ಹೆಸರಿಸಬಹುದು. ಈ ಮಾದರಿಗಳ ಮೂಲಕ ಕಥೆಯ ಕರ್ಷಣೆಗೆ ಚಾಲನೆ ಸಿಗುತ್ತದೆ.

ಬೆಸಗರಹಳ್ಳಿಯವರು ತಮ ಎಲ್ಲಾ ಕಥೆಗಳಲ್ಲೂ ಬರುವ ಸಮಾಜ ಮತ್ತು ಅದರ ವಿವಿಧ ಶಕ್ತಿಗಳನ್ನು ಮುಖ್ಯವಾಗಿ ಜಾತಿಶಕ್ತಿ, ರಾಜಕೀಯ ಶಕ್ತಿ ಇವುಗಳನ್ನು ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡು ಅವುಗಳ ವಿವಿಧ ಮಜಲುಗಳನ್ನು ಶೋಧಿಸುತ್ತಾರೆ.

ಇವರ ಕಥೆಗಳಲ್ಲಿ ನಡೆಯುವ ಸಂವಾದ (discourse) ಈ ಜಾತಿ ಶಕ್ತಿ, ರಾಜಕೀಯ ಶಕ್ತಿಗಳು ಸ್ವಾತಂತ್ರೋತ್ತರ ಫೂಡಲ್ ವ್ಯವಸ್ಥೆಗೆ ಸೇರಿದಂಥವು. ಇವುಗಳಲ್ಲಿಯೂ ಎರಡು ಬಗೆಯನು ಕಾಣಬಹುದು. ಮೊದಲನೆಯದಾಗಿ ದಲಿತವರ್ಗದವರು ಮೇಲ್ ವರ್ಗದ ಶೋಷಣೆ, ದಬ್ಬಾಳಿಕೆ ಇವುಗಳನ್ನು ಗುರುತಿಸಿಕೊಂಡು, ಯಾವ ರೀತಿಯಲ್ಲಿ ಅವರನ್ನು ವಿರೋಧಿಸುವುದು ಎಂದು ತಿಳಿಯದೆ, ಒಳಗೊಳಗೆ ಕುದಿಯುತ್ತಿರುವ ಸ್ಥಿತಿ. ಎರಡನೆಯದಾಗಿ ದಲಿತರು ಎಚ್ಚೆತ್ತುಕೊಳ್ಳುವ ಸ್ಥಿತಿಯಲ್ಲಿ ಬದಲಾಗುತ್ತಿರುವ ವ್ಯವಸ್ಥೆಯನ್ನು ಗ್ರಹಿಸಿ ಪ್ರತಿಕ್ರಿಯಿಸುವ ರೀತಿ.

ಯಾವುದೇ ಸಮಾಜವೂ ಅದು ಧರ್ಮಕೇಂದ್ರಿತ ರಾಜಕೀಯ ಶಕ್ತಿಗೆ ಬದಲಾದ ರೀತಿಯ ಸಮಾಜದ ಶಕ್ತಿಗೆ ರಾಜನ ಆಳ್ವಿಕೆಯ ಏಕವ್ಯಕ್ತ ಶಕ್ತಿಗೆ, ಪ್ರಜಾಪ್ರಭುತ್ವ ಸಮಾಜವಾದಿ ಶಕ್ತಿಗೆ ಒಳಗಾಗಿರಬಹುದು. ಈ ಎಲ್ಲಾ ಶಕ್ತಿಗಳು ತಮ್ಮ ತಮ್ಮ ಪ್ರಜೆಗಳನ್ನು ತಮ್ಮದೇ ಆದ ರೀತಿಯ ಶಕ್ತಿ ನಿಯಂತ್ರಣಕ್ಕೆ ಒಳಪಡಿಸುತ್ತಲೇ ಇರುತ್ತವೆ. ಹೀಗೆ ನಿಯಂತ್ರಣಕ್ಕೆ ಒಳಪಡಿಸುವಾಗ ಬೇರೆ ಬೇರೆ ರೀತಿಯ ‘ಶಿಕ್ಷೆ’ಗೂ ಒಳಪಡಿಸುತ್ತಲೇ ಇರುತ್ತದೆ. ಈ ಶಿಕ್ಷೆಗಳು ಕೇವಲ ದೈಹಿಕ ಶಿಕ್ಷೆಯಾಗಿ ಮಾತ್ರ ಪ್ರಕಟವಾಗದೆ, ಮಾನಸಿಕ ಶಿಕ್ಷೆಗೂ ಗುರಿಪಡಿಸುತ್ತಿರುತ್ತವೆ. ಈ ಶಿಕ್ಷೆಗಾಗಿ ವಿವಧ ರೀತಿಯ disciplineಗಳನ್ನು ಕಾಪಾಡಿಕೊಳ್ಳಲು ಹೊಸ ಹೊಸ ಕಾಯಿದೆ, ಕಟ್ಟು ಕಟ್ಟಲೆಗಳನ್ನು ಸೃಷ್ಟಿಸುತ್ತಿರುತ್ತವೆ.

ಫ್ಯೂಡಲ್ ವ್ಯವಸ್ಥೆಗೆ ಸೇರಿದ ಶಿಕ್ಷೆಯಲ್ಲಿ ಪೋಲಿಸರಾಗಲೀ, ಸರ್ಕಾರವಾಗಲೀ ಜನರನ್ನು ನೇರವಾಗಿ ಶಿಕ್ಷೆಗೆ ಒಳಪಡಿಸದಿದ್ದರೂ ಧರ್ಮ, ಆಚರಣೆ(rituals) ಇವುಗಳ ಮೂಲಕ ಶಕ್ತಿ, ರಾಜಕೀಯ ಮತ್ತು discipline (ಕಟ್ಟುಪಾಡು) ಮೀರಿದವರಿಗೆ ಶಿಕ್ಷೆ ಒದಗಿಸುವ ಶಕ್ತಿಯನ್ನು ಪಡೆದಿರುತ್ತವೆ. ಪ್ರಜಾಪ್ರಭುತ್ವದಲ್ಲಿ ಪೊಲೀಸ್ ಮತ್ತು ನ್ಯಾಯಾಂಗಗಳನ್ನು ಧರ್ಮದ ಸ್ಥಾನವನ್ನು ಪಡೆದುಕೊಂಡಿರುತ್ತವೆ. ಎ ಶಕ್ತಿ ರಾಜಕೀಯದ ಜೊತೆ ಯಾವ ರಾಜಕೀಯದಲ್ಲೂ ಸೇರಿಕೊಳ್ಳುವ ಮತ್ತೊಂದು ಅಂಶ “ಲೈಂಗಿಕ ರಾಜಕೀಯ” (sexual politics).

‘ಹರಕೆಯ ಹಣ’ವು ದಲಿತರು ತಮ್ಮ ಸಾಮಾಜಿಕ ಕಾನೂನಿಗೆ, ಹಕ್ಕಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಂತೆಯೇ ಅವರ ಮಾತುಗಳು, ಆಲೋಚನೆಗಳು ಶಕ್ತಿ, ರಾಜಕೀಯದಲ್ಲಿ ಕರಗಿ ಹೋಗುತ್ತವೆ ಎಂಬುದನ್ನು ಪ್ರತಿಪಾದಿಸುತ್ತವೆ. ಇವರನ್ನೆಲ್ಲ ಸಮಾಜವನ್ನು ಹದ್ದುಬಸ್ತಿನಲ್ಲಿಡುವ ಸರಕಾರ, ರಾಜಕಾರಣಿಗಳು ಅವರ ಅಜ್ಞಾನ ವರ್ತಿಗಳಾಗಿರುವ ಪೊಲೀಸರು, ಸರಕಾರದ ಅಧಿಕಾರಿಗಳು ವರ್ತಿಸುವ ರೀತಿ ಈಗ ತಾನೇ ಮಾತಿಗೆ ತೆರೆದುಕೊಳ್ಳುತ್ತಿರುವ ಸಂವಾದ(discourse)ವನ್ನು ಹಿಚುಕುಹಾಕಿ ಶಕ್ತಿ ಹೀನಮಾಡಿ ನಗೆಪಾಟಲಿ ಮಾಡುವ ರೀತಿಯನ್ನು ಪ್ರತಿಬಿಂಬಿಸುತ್ತದೆ. ಜಾತಿ-ರಾಜಕೀಯ, ಶಕ್ತಿ-ರಾಜಕೀಯ, ಸರ್ಕಾರದ ಶಕ್ತಿ, ಇವೆಲ್ಲವೂ ಪುನರ್ ವ್ಯವಸ್ಥೆಗೊಳ್ಳುತ್ತಿರುವ ರೀತಿಯ ಮೇಲೆ ಬೆಳಕು ಚೆಲ್ಲುವ ಕಥೆ ‘ಗಾಂಧೀ ಸಂತಾನ’.

ಗೌಡರ ಕೇರಿಯ ದೇವರಿಗೆ ಹರಿಜನರು ತಮ್ಮಡಿಯಾಗುವ ತಲೆತಲಾಂತರದಿಂದ ಬಂದ ritualನಲ್ಲಿ ಆ ಊರಿನ ಗೌಡರು ಹರಿಜನರ ಹೆಣ್ಣು ಮಗಳ (sexual politics) ಲೈಂಗಿಕ ರಾಜಕೀಯತೆಯಂತೆ ರೂಪಾಂತರಗೊಳ್ಳುವುದನ್ನು ಕಾಣಬಹುದು. ಈ ಕಥೆ ಜೀವನ ಹೇಗೆ ಒಂದಕ್ಕೊಂದು ತಾಲೂಕು ಹಾಕಿಕೊಂಡಿದೆ ಎಂಬುದನ್ನು ಸಂಕೀರ್ಣವಾಗಿ ಹೇಳುತ್ತದೆ. ಮೆಣಸನ ಮಾತು, ವಾಗ್ವಾದವೆಲ್ಲ ಅವನನ್ನು ಹುಚ್ಚನೆಂದು ಪರಿಗಣಿಸುವಂತೆ ಮಾಡುತ್ತದೆ. ಮಾತಿಗೆ ಬೆಲೆ ಬರಬೇಕಾದರೆ ಎಷ್ಟೇ ಸತ್ಯವಿದ್ದರೂ ಸಮಾಜದಲ್ಲಿ ಸ್ಥಾನಮಾನವಿರಬೇಕು. ಇಲ್ಲದಿದ್ದರೆ ಅದಕ್ಕೆ ಪ್ರಖರವಾಗಿದ್ದರೂ ಸ್ಥಾನಮಾನವಿರಬೇಕು. ಇಲ್ಲದಿದರೆ ಅದಕ್ಕೆ ಪ್ರಖರವಾಗಿದ್ದರೂ ಸ್ಥಾನಮಾನವಿರುವವರ ಮುಂದೆ ಕ್ಷುಲ್ಲಕವಾಗಿ ಕಾಣುತ್ತದೆ.

‘ದೇವರ ಹೂವು’ ಎಂಬ ಕಥೆಯಲ್ಲಿ ಪರಂಪರಾಗತವಾದ ಫ್ಯುಡಲಿಸಂ ಶಕ್ತಿ ರಾಜಕೀಯ ಕೆಲಸ ಮಾಡುವ ರೀತಿ ಬೇರೆಯಿದೆ. ಇಲ್ಲಿ ಕಳವು ಮಾಡಿದವರಿಗೆ ಅವರಿ ಫ್ಯೂಡಲ್ ವ್ಯವಸ್ಥೆಯ ಶಕ್ತಿ ರಾಜಕೀಯದ ಒಳಗೇ ಬರುವ ಜಾತಿಯವರಾದ್ದರಿಂದ ಇಲ್ಲಿ ದೈಹಿಕ ಶಿಕ್ಷೆ ಇಲ್ಲ. ಕೇವಲ ಮಾನಸಿಕ ಶಿಕ್ಷೆಗೆ ಒಳಗಾಗುತ್ತಾರೆ. ಪಶ್ಚಾತ್ತಾಪ ಪಡುವಂತೆ ಮಾಡುವುದೇ ಈ ಶಿಕ್ಷೆ. ಇದು ಅರಿಕೆಯ ಮೂಲಕ ದೇವರಿಗೆ ಇಂತಿಷ್ಟು ದಿನ ಪೂಜೆ ಮಾಡಲೇಬೇಕೆಂಬ ಶಿಕ್ಷೆ, ಇಲ್ಲಿಯ ವೀರಶೈವ ಮತ್ತು ಗೌಡರ ಜಾತಿಗಳಿಗೆ ಸೇರಿದ ರುದ್ರಮ್ಮ , ಚೆನ್ನಕ್ಕರಿಗೆ ದೊರಕುವ ಶಿಕ್ಷೆ.

ಅದೇ ‘ಜೀತ’ ಕಥೆಯಲ್ಲಿ ಬರುವ ಗೌಡರಲ್ಲಿ ಜೀತಕ್ಕಿರುವ ಚಿಕ್ಕರಾಮ ಮತ್ತು ಪುಟ್ಟಸ್ವಾಮಿ ಎಂಬ ಅಣ್ಣತಮ್ಮಂದಿರಿಗೆ ಸಿಗುವ ಶಿಕ್ಷೆ ದೈಹಿಕವಾದದ್ದು. ‘ಗಾಂಧೀ ಸಂತಾನ’ದಲ್ಲಿ ಜಾತಿಶಕ್ತಿಗಳು ಒಂದು ಗೂಡಿ ದಲಿತ ಮೆಣಸನನ್ನು ಹೆಣವಾಗಿಸುತ್ತವೆ.

‘ಕಳೆ’ ಎಂಬ ಕಥೆಯಲ್ಲಿ ಫ್ಯೂಡಲ್ ವ್ಯವಸ್ಥೆಯ ಕೆತ್ತತನದೊಂದಿಗೆ ಯಾವುದೇ ವ್ಯವಸ್ಥೆಯಲ್ಲಿರುವ ಒಳ್ಳೆಯತನಗಳು ಪ್ರತಿಫಲನಗೊಂಡಿದೆ.

‘ಅಭಿಮಾನ’ ಕಥೆಯಲ್ಲಿ party ಶಕ್ತಿ, ರಾಜಕೆಯ ಕೆಲಸ ಮಾಡಿ ಊರಿನವರೆಲ್ಲ ಛಿದ್ರಗೊಳ್ಳುವಂತೆ ಮಾಡುತ್ತದೆ.

‘ತಾಯಿ’ಯಲ್ಲಿ ಜಮೀನಿನ ಬಗ್ಗೆ ಬಂದ ಹೊಸಕಾನೂನು ಹೊಸ ಸಮಸ್ಯೆಯನ್ನೇ ಸೃಷ್ಟಿಸುತ್ತದೆ.

ಎರಡು ವಿಭಿನ್ನ ಸಂಸ್ಕೃತಿಗಳು ಮುಖಾಮುಖಿಯಾದಾಗ ಅವುಗಳ ಕರ್ಷಣದಿಂದ ಮಹತ್ತಾಗಬಹುದಾಗಿದ್ದ ‘ಹರಕೆಯ ಹಣ’ದಲ್ಲಿ ದಲಿತ ಸಂಸ್ಕೃತಿ – ಭೂಮಾಲೀಕ ಸಂಸ್ಕೃತಿ ಸಾಂಸ್ಕೃತಿಕವಾಗಿ ವಿಶ್ಲೇಷಣೆಗೊಳ್ಳದೆ ಹಣ ಮತ್ತು ಲೈಂಗಿಕ ರಾಜಕೀಯ ಆಗಿ ಪರಿವರ್ತನೆಗೊಳ್ಳುತ್ತದೆ.

ಅಂತೆಯೇ ‘ಕಳೆ’ ಮತ್ತು ‘ಸ್ವಾರ್ಥ’ ಕಥೆಗಳಲ್ಲಿ ಶಂಕರಾಚಾರ್ಯರತತ್ವದ ಅನುಯಾಯಿಯಾಗಿ ಬರುವ ಪಾತ್ರಗಳು ಇದ್ದರೂ ಇಲ್ಲಿ ತಾತ್ವಿಕ(philosophical) ಕರ್ಷಣೆ ಸಾಧ್ಯವಿದ್ದರೂ ಕೇವಲ ಜಮೀನಿನ ಪಾಲಿಗಾಗಿ ಹೊರಾದಡಿಕೊಳ್ಳುವ ಕ್ಷುದ್ರ, ಲೌಕಿಕ ವ್ಯವಹಾರದಲ್ಲಿ ಶಕ್ತಿಯನ್ನು ಪೋಲು ಮಾಡಿಕೊಳ್ಳುವ ಕಥೆಗಳಾಗಿ ದಲಿತ ಹೆಣ್ಣಿನೊಡನೆ ಬೆರೆಯುವ ಕಥೆಯಾಗಷ್ಟೇ ಉಳಿದುಕೊಂಡು ಈ ಕಥೆಗಳು ಸೋತಿವೆ. ಸೈದ್ದಾಂತಿಕವಾಗಿ ಲೌಕಿಕ-ಪಾರಮಾರ್ಥಿಕಗಳ ನಡುವಿನ ಘರ್ಷಣೆಯಾಗಿ ಈ ಕಥೆಗಳು ಬೆಳೆಯುವ ಸಾಧ್ಯತೆ ಇದ್ದೂ ಕಥೆಗಾರ ವಸ್ತುವನ್ನು ನಿರ್ವಹಿಸುವ ರೀತಿಯಲ್ಲಿ ಸೋಲನ್ನುನುಭವಿಸಿದ.

ಇದಕ್ಕೆ ವಿರುದ್ದವಾಗಿಯೇ ಇಂತಹ ಎರಡು ಬೇರೆ ಬೇರೆ ಸಂಸ್ಕೃತಿಯ ಜಾತಿಯ ಹಿನ್ನೆಲೆಯ ಉನ್ನತ ಮನಸ್ಸಿನ ಎರಡು ಪಾತ್ರಗಳು ಮುಖಾಮುಖಿಯಾಗುವ ‘ಗಂಗಾ’ಕಥೆ ಇದನ್ನು ಬಹಳ ಸಮರ್ಥವಾಗಿ ದುಡಿಸಿಕೊಳ್ಳುತ್ತದೆ. ಮಾನವೀಯತೆಗೆ, ಸಿದ್ದಾಂತಕ್ಕೆ, ತಾತಿವ್ಕ ತಿರುವಿಗೆ ಇಲ್ಲಿ ಅವಕಾಶವಿದೆ. ಸಂಕೀರ್ಣವಾಗಿ ಮನಸ್ಸನ್ನು ಹಿಡಿಯಲು ಈ ಕಥೆ ಪ್ರಯತ್ನಿಸುತ್ತದೆ. ಒಬ್ಬ ಅಬ್ರಾಹ್ಮಣ ಮತ್ತೊಬ್ಬ ಬ್ರಾಹ್ಮಣ ಎರಡೂ ಮನಸ್ಸುಗಳು ಕೆಲಸ ಮಾಡುವ ರೀತಿ ಇಲ್ಲಿ ಅತ್ತ್ಯುತ್ತಮವಾಗಿ ಪ್ರತಿಫಲನಗೊಂಡಿದೆ. ಆಗ ತಾನೇ ಒದೆಯುತ್ತಿರುವ ಹೆಣ್ಣು ಕುಡಿಯೊಂದನ್ನು ಮಾನಭಂಗಮಾಡಿದ ವ್ಯಕ್ತಿಗಳಿಗೆ ಎಂಥ ಶಿಕ್ಷೆ ನಿರೀಕ್ಷಿಸುತ್ತೀರಾ ಎಂದು ಕೇಳಿದಾಗ:

“ಹಾಗೆಯೇ ಗಂಗಾಳನ್ನು ಮಾನಭಂಗ ಮಾಡಿ ಕೊಲೆ ಮಾಡಿದ ಪಾಪಿಗಳಿಗೆ ರೌರವ ನರಕ ಕೊಡು ಅಂತ ದೇವರಲ್ಲಿ” ನನ್ನ ವಾಕ್ಯ ಮುಗಿಯುವುದಕ್ಕೆ ಮುಂಚೆಯೇ “ಇಲ್ಲ, ಖಂಡಿತ ಇಲ್ಲ, ಗಂಗಾಳ ಸಾವಿಗೆ ಕಾರಣರಾದವರಿಗೆ ಅದನ್ನು ಮುಚ್ಚಿ ಹಾಕಿದವರಿಗೆ ಯಾವ ಶಿಕ್ಷೆಯನ್ನು ಕೊಡೆಂದು ದೇವರನ್ನು ಆಗ್ರಹಿಸುವುದಿಲ್ಲ. ಬದಲು ಆ ಪಾಪ ಮಾಡಿದವರನ್ನು ಕ್ಷಮಿಸು ಎಂದು ಬೇಡುತ್ತೇನೆ” ಎಮಬ್ ಮಾನವೀಯತೆಯನ್ನು ಮೆರೆಯುವ ಪಾತ್ರಗಳೂ ಸೃಷ್ಟಿಯಾಗಿವೆ. ಇದೆ ರೀತಿ ‘ಮಾನಭಂಗ’ ಕಥೆಯೂ ಸಂಕೀರ್ಣತೆಯಿಂದ ಕೂಡಿದೆ.

ಯಾವುದೇ ದುಷ್ಟ ರಾಜಕೀಯ ಶಕ್ತಿ ತನ್ನ ಕರಾಳ ಛಾಯೆಯನ್ನು ತನ್ನ ಪ್ರಜೆಗಳ ಮೇಲೆ ಬೀರಿದಾಗ satire ಹುಟ್ಟಿಕೊಳ್ಳುತ್ತದೆಂದು ಕಾಣುತ್ತವೆ. ‘The Great Dictator’ ಹಿಟ್ಲರ್ ಅನ್ನು ಅತ್ಯಂತ satirical ಆಗಿ ನೋಡಿದಂತೆ ಅತ್ಯಂತ ಹಾಸ್ಯಾಸ್ಪದ ವ್ಯಕ್ತಿಯನ್ನಾಗಿ ರೂಪಿಸಿದಂತೆ ತುರ್ತು ಪರಿಸ್ಥಿತಿ ಕಾಲದಲ್ಲಿ ಬಂದ ರಾಮಣ್ಣನವರ |ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು” ಕಥೆ ಎಲ್ಲೂ ಸೆಂಟಿಮೆಂಟಲ್ ಆಗದೆ ಪ್ರಜಾಪ್ರಭುತ್ವವು ವಿಡಂಬನಾತ್ಮಕವಾಗಿ ಮೂಡಿಬಂದಿದೆ. ಹೊಸ ಭಾಷೆಯನ್ನೂ ಹೊಸ ಅಭಿವ್ಯಕ್ತಿಯ ವಿಧಾನಗಳನ್ನು ಕಂಡುಕೊಂಡಿದೆ. ‘ಗಾಂಧಿ’, ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು’, ‘ಮಾನಭಂಗ’ ಇವು ಈ ರೀತಿಯ ಕಥೆಗಳು.

ಉಯ್ಯಾಲೆ- ತಂತ್ರ ನಿರ್ವಹಣೆ

ಉಯ್ಯಾಲೆ- ತಂತ್ರ ನಿರ್ವಹಣೆ

ಪುಸ್ತಕ :ಚದುರಂಗ- ವ್ಯಕ್ತಿ ,ಅಭಿವ್ಯಕ್ತಿ

ಯಾವುದೇ ಒಂದು ಕೃತಿ ಮೈದಾಳುವುದು ಓದುಗ ಕೃತಿಯೊಡನೆ ಸಂವಾದ ನಡೆಸಲು ಪಾರಂಭಿಸಿದಾಗ ಮಾತ್ರ. ಕೃತಿಕಾರ ತನ್ನ ಕೃತಿ ರಚನೆಯೆ ಸಂದರ್ಭದಲ್ಲಿ ತನ್ನ ಸಮಾಜ ಇದುವರೆವಿಗೂ ಕಂಡಿರದ ಹೊಸ ಅನುಭವವನ್ನು ಭಾಷೆಯು ಮೂಲಕ ಹಿಡಿದುಕೊಡಲು ಯತ್ನಿಸುತ್ತಾ ನೆ. ಇದುವರೆವಿಗೂ ಭಾಷೆಯು ಮೂಲಕ ಕಂಡರಿಯದ ಅನುಭವವನ್ನೂ ತನ್ನ ಸಮಾಜ ಸಂಸ್ಕೃತಿಗೆ ಅಂದರೆ ‘ಸಂಭವನೀಯ ಓದುಗನಿಗೆ ‘ ಕೊಡಲು ಕೃತಿಕಾರ ಪ್ರಯತ್ನಿಸುತ್ತಾನೆ. ಕೃತಿಕಾರ ಕಂಡ ಹೊಸಕಾಣ್ಕೆ , ಕೃತಿಯ ಮೂಲಕವಾದುದರಿಂದ -ಅಂದರೆ, ಭಾಷೆಯ ಮೂಲಕವಾದುದರಿಂದ – ಈ ಕಾಣ್ಕೆಯನ್ನು ಭಾಷೆಯಲ್ಲಿಯೂ ತುಂಬಿಕೊಡಲು ಯತ್ನಿಸುತ್ತಾನೆ. ಆದ್ದರಿಂದ ಭಾಷೆಯು ಯಾವಾಗಲು ಬರಹಗಾರನಿಗೆ ಸವಾಲಾಗಿಯೇ ಉಳಿಯುತ್ತದೆ. ಒಂದು ಹೊಸ ಕೃತಿಯನ್ನು ರಚಿಸುವಾಗ ಲೇಖಕ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಸ್ಥಾಪಿತವಾಗಿರುವ ಕೆಲವು ನಿಯಮಗಳನ್ನು ಮುರಿಯುತ್ತಾನೆ. ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ವಿಷಯ ವಸ್ತುಗಳನ್ನು ಕೂಡಿಸಾಡುತ್ತಾನೆ. ಹೊಸ ರೀತಿಯಲ್ಲಿ ಜೋಡಿಸಲು ಪ್ರಯತ್ನಿಸುತ್ತಾನೆ. ಕೃತಿಗೆ ಹೊಸ ಬಂಧ ಕೊಡುತ್ತಾನೆ. ಹೀಗೆ ಹೊಸ ಕೃತಿ ಸೃಷ್ಟಿಯಾಗುವುದೆಂದರೆ ಹೊಸ ದಿಗಂತದ ನಿರಂತರ ಹುಡುಕಾಟವಾಗುತ್ತದೆ.

ಅಂತೆಯೇ ಒಂದು ಕೃತಿಯೊಡನೆ ಓದುಗ ಸಂವಾದ ನಡೆಸುವಾಗ ಆ ಕೃತಿ ತಂದುಕೊಡುವ ಹೊಸ ಅನುಭವ, ಹೊಸ ಲೋಕ ‘ದೃಷ್ಟಿ’ಯನ್ನು ಪಡೆದುಕೊಳ್ಳುವುದೇ ಆಗಿರುತ್ತದೆ. ಕೃತಿಕಾರ ಒಂದು ಕಡೆಯಿಂದ ಕೃತಿಯನ್ನು ಕಟ್ಟಿಕೊಂಡು (encode) ಬಂದರೆ ಓದುಗ ಕೃತಿಯನ್ನು ಓದುವುದರ ಮೂಲಕ ಬಿಚ್ಚಿಕೊಂಡು (decode) ಹೋಗಲು ಪ್ರಯತ್ನಿಸುತ್ತಾನೆ. ಕೃತಿಕಾರ ಕೃತಿಯನ್ನು ಕಟ್ಟಿಕೊಂಡು ಹೋಗುವಾಗ ‘ವ್ಯಕ್ತಿನಿಷ್ಟ’ವಾಗಿದ್ದು ಓದುಗ ಅದನ್ನು ಬಿಚ್ಚಿಕೊಂಡು ಹೋಗುವುದರ ಮೂಲಕ ಆ ಕೃತಿ ವಸ್ತುನಿಷ್ಟವಾಗುತ್ತಾ ಬರುತ್ತದೆ, ಸಾರ್ವತ್ರಿಕವಾಗುತ್ತಿರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಇಡೀ ಕೃತಿಯೇ ಆಳದಲ್ಲಿ ಒಂದು ಹೊಸ ಅನುಭವ ವನ್ನು ಹೇಳುವ ತಂತ್ರವಾಗಿ ಮಾರ್ಪಡುತ್ತದೆ. ಉಳಿದೆಲ್ಲ ತಂತ್ರಗಳೂ ಮೇಲ್ಮೈ ಲಕ್ಷಣಗಳಾಗಿ ಕೆಲಸ ಮಾಡುತ್ತಿರುತ್ತವೆ.

ಒಂದು ಕೃತಿಯ ಸ್ಥಾನ  ಕೃತಿಯನ್ನು ಓದು ಸಮಾಜ, ಸಂಸ್ಕೃತಿ ಅದಕ್ಕೆ  ಇರುವ ಸಾಹಿತ್ಯಕ ಚರಿತ್ರೆಯ ಹಿನ್ನೆಲೆ, ಕೃತಿ ಮೂಡಿಸಿದ ಕಾಣ್ಕೆ ಇವುಗಳ ಮೂಲಕ ನಿರ್ಧಾರಿತವಾಗುತ್ತದೆ.

ಮೇಲಿನ ಕೆಲವು ಮಾತುಗಳನ್ನು ಗಮನದಲ್ಲಿಟ್ಟುಕೊಂಡು ‘ಉಯ್ಯಾಲೆ ‘ಯ ತಂತ್ರ ನಿರ್ವಹಣೆಯನ್ನು ಈ ಲೇಖನದಲ್ಲಿ ಗಮನಿಸಲಾಗಿದೆ. ಈ ವಿಶ್ಲೇಷಣೆಯ ಉದ್ದೇಶ ಕೇವಲ ಕೃತಿಯಲ್ಲಿ ಇರುವ ರಚನೆಯನ್ನು ಮಾತ್ರ ಬಿಡಿಸಿ ತೋರಿಸುವುದಿಲ್ಲ. ಏಕೆಂದರೆ ಪ್ರತಿಯೊಂದು ‘ವಸ್ತು’ವಿನಲ್ಲೂ ರಚನೆ ಒಂದಿಲ್ಲೊಂದು ರೀತಿಯಲ್ಲಿ ಇದ್ದೇ ಇರುತ್ತದೆ. ರಚನೆಯನ್ನು ತೋರಿಸಿಕೊಡುವುದರ ಜೊತೆಗೇ ಈ ರಚನೆ ಕಲಾಕೃತಿಯಲ್ಲಿ ಮೂಡಿದಾಗ ಅದು ಉಂಟುಮಾಡುವ ಕರ್ಷಣೆ ಮತ್ತು ಈ ಕರ್ಷಣೆಯಿಂದ ಕೃತಿ ಚಾಲನೆ ಪಡೆಯುವ ರೀತಿ ಮುಖ್ಯ ಎಂದು ಪರಿಗಣಿಸಲಾಗಿದೆ.

ಉಯಾಲೆ ಕಾದಂಬರಿಯ ಬಂಧ (structure ) ವಸ್ತು , ಪಾತ್ರ, ಚಿತ್ರಣ ಕಾದಂಬರಿಯಲ್ಲಿ ಬಳಸಿಕೊಂಡಿರುವ ಕಾಲ ಉಯ್ಯಾಲೆಯ ಸಂಕೇತ ಇವೆಲ್ಲವೂ ಕಾದಂಬರಿಯ ಕೇಂದ್ರ ಪ್ರಜ್ಞೆಯ ಕಡೆಗೆ ಯಾವ ರೀತಿಯಲ್ಲಿ ದುಡಿಯುತ್ತವೆ ಎಂಬದನ್ನು ಗಮನದಲ್ಲಿಟ್ಟುಕೊಂಡು ಕಾದಂಬರಿಯ ತಂತ್ರ ನಿರ್ವಹಣೆಯ ಬಗ್ಗೆ ವಿಶ್ಲೇ ಷಣೆ ಮಾಡುವುದು ಈ ಲೇಖನದ ಉದ್ದೇಶ. ಹೀಗೆ ಮಾಡುವುದರ ಮೂಲಕ ಈ ಕಾದಂಬರಿ ಪಡೆಯುವ ಯಶಸ್ಸನ್ನು ಚರ್ಚೆಗೆ ಒಳಪಡಿಸುವುದು ಈ ಲೇಖನದ ಹಂಬಲ.

ಉಯ್ಯಾಲೆ ಕಾದಂಬರಿಯ ಪ್ರಮುಖ ಆಶಯವನ್ನು ಈ ವಾಕ್ಯಗಳು ಪ್ರತಿನಿಧಿಸುತ್ತವೆ:

‘ರಾಧೆಯ ಜೀವನವೇ ಒಂದು ಉಯ್ಯಾಲೆ……. ಇಡೀ ಸ್ತ್ರೀವರ್ಗವೇ ಒಂದು ಉಯ್ಯಾಲೆ…… ರಾಧೆಯೇ ಉಯಾಲೆ…….. ಅವಳ ಮನಸ್ಸು – ಅತ್ತ – ಇತ್ತ-ಎರಡು ದಂಡೆ : ಉಯ್ಯಾಲೆಯ ತೂಗಾಟದ ಎರಡು ದಂಡೆ. ಒಂದು ದಂಡೆಯಲ್ಲಿ ವೈವಾಹಿಕ ಜೀವನದ ಮಡಿವಂತಿಕೆ, ಗೌರವ, ಸನ್ಮಾನಿತ ಪ್ರತಿಷ್ಮೆ ; ಇನ್ನೊಂದರಲ್ಲಿ ವಿವಾಹದ ಹೊರಗೆ ಕಣ್ಣು ಮಿಟುಕಿಸುವ ಆಕರ್ಷಣೆ-ಪ್ರೇಮ. ಒಂದರಲ್ಲಿ ವೈವಾಹಿಕ ಪ್ರೇಮದ ಆದರ್ಶ ಜೋಡಿ, ರಾಮ -ಸೀತೆ. ಇನ್ನೊಂದರಲ್ಲಿ ಅವಿವಾಹಿತ ಅನುರಾಗದ ಅಮರ ಸಂಕೇತ :ರಾಧಾ-ಕೃಷ್ಣ . ಒಂದು ಪರಂಪರೆಯೊಡನೆ ಹೊಂದಾಣಿಕೆ , ಇನ್ನೊಂದು ಪರಂಪರೆಯೊಡನೆ ಎದ್ದ ದಂಗೆ “(ಪುಟ 287)*

ಹೀಗೆ ಕಾದಂಬರಿ ಎರಡು ವೈರುಧ್ಯಗಳ ಅತಿಯ ನಡುವೆ ತೂಗಾಡುವ ನಾಯಕಿಯ ತೊಳಲಾಟವನ್ನು ಚಿತ್ರಿಸುತ್ತದೆ. ಈ ತೊಳಲಾಟದ ಆಶಯವನ್ನು ಹೊಂದಿರುವ ಕಾದಂಬರಿಯ ತಂತ್ರ ನಿರ್ವಹಣೆ ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿದೆ. ಇದು ಕಾದಂಬರಿಯ ಮೂಲ ದ್ರವ್ಯಗಳಾದ ವಸ್ತು, ಪಾತ್ರ, ಚಿತ್ರಣ, ಕಾದಂಬರಿಯ ಕಾಲ ಮತ್ತು ‘ಉಯ್ಯಾಲೆ ‘ಯ ಸಂಕೇತ ಈ ಎಲ್ಲ ಮಟ್ಟಗಳಲ್ಲಿಯೂ ನಡೆಯುವುದನ್ನು ಗಮನಿಸಬಹುದು. ವರಿದುಧ್ಯದ ತುತ್ತ ತುಟಿಗಳಾಗಿ ಚಿತ್ರಿತವಾದ ಈ ಅಂಶಗಳು ಈ ಕಾದಂಬರಿಯ ಆಶಯದ ಬಗ್ಗೆ ದುಡಿಯುತ್ತವೆ. ಈ ವೈರುಧ್ಯ ಗಳ ನಡುವೆ ನಡೆಯುವ ತೊಳಲಾಟ ‘ ಉಯ್ಯಾಲೆ’ಯಾಗುತ್ತದೆ. ಆದ್ದರಿಂದ ಈ  ನಾಲ್ಕು ವಾಕ್ಯಗಳಂತೆ ಪರಸ್ಪರ ವೈರುಧ್ಯಗಳ ಮಾಲೆಯಾಗಿ ಕಾದಂಬರಿಯ ಉದ್ದಕ್ಕೂ ಕಂಡುಬರುತ್ತವೆ.

ವಸ್ತುವಿನಲ್ಲಿ ವೈರುಧ್ಯ : ಮದುವೆ ಇಲ್ಲದ ಪ್ರೀತಿ-ಪ್ರೀತಿ ಇಲ್ಲದ ಮದುವೆ

ಉಯ್ಯಾಲೆ ಕಾದಂಬರಿಯ ಮುಖ್ಯ ವಸ್ತು ‘ಮದುವೆಯಿಲ್ಲದ ಪ್ರೀತಿ—ಪ್ರೀತಿಯಿಲ್ಲದ ಮದುವೆ’ಯ ಬಗ್ಗೆಯಾದ್ದರಿಂದ ಇದು ಈ ಕಾದಂಬರಿಯ ಪ್ರಮುಖ ಪರಿಕಲ್ಪನೆಯಾಗುತ್ತದೆ. ಈ ಎರಡೂ ರೀತಿಯ ಪ್ರೀತಿಗಳನ್ನು ಮುಖಾಮುಖಿಯಾಗಿಸಿಕೊಂಡು ಆ ಮೂಲಕ ಒಂದು ಕಾಲ-ದೇಶ-ಸಮಾಜದ ಚೌಕಟ್ಟಿನೊಳಗೇಳುವೆ ಘರ್ಷಣೆಯನು ಉಯ್ಯಾಲೆ ಚಿತ್ರಿಸುತ್ತದೆ.

ರಾಧೆ ಕಾಲೇಜಿನಲ್ಲಿ ಕಲಿಯುವಾಗ ಟೆನ್ಸಿಸ್ ಆಟಗಾರ, ಸಹಪಾಠಿ ನಾರಾಯಣನನ್ನ ಮನಸಾರೆ ಪ್ರೀತಿಸುತ್ತಾಳೆ. ನಾರಾಯಣನೂ ಇವಳನ್ನು ಪ್ರೀತಿಸುತ್ತಾನೆ. ಆದರೆ ನಾರಾಯಣ ಆಗಲೇ ಮದುವೆಯಾಗಿರುವ ಕಾರಣಕ್ಕಾಗಿ ರಾಧೆ ಆವವನ್ನು ಮದುವೆಯಾಗಲು ಸಾಧ್ಯವಾಗುವುದಿಲ್ಲ.

ರಾಧೆ ಸವಾಜದ ಕಟ್ಟುಕಟ್ಟಳೆ ಗನುಸಾರವಾಗಿ, ಕೆಲವು ಒತ್ತಡಗಳಿಗಾಗಿ ಆಗಲೇ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡ ಶೇಷಗಿರಿರಾಯನನ್ನು ಮದುವೆಯಾಗುತ್ತಾಳೆ. ಆದರೆ ಶೇಷಗಿರಿರಾಯನಿಂದ ರಾಧೆಗೆ ಯಾವ ಪ್ರೀತಿಯೂ ದಕ್ಕುವುದಿಲ್ಲ.

ರಾಧೆ ಮದುವೆಯಾದ ನಂತರ ಶೇಷಗಿರಿರಾಯನ ಸ್ನೇಹಿತ ಮತ್ತು ಒಂದು ಕಾಲಕ್ಕೆ ಸಹಪಾಠಿಯಾಗಿದ್ದ ಕೃಷ್ಟೇಗೌಡ ತಾನು ನಿಲ್ಲಿಸಿದ ಓದನ್ನು ಮುಂದುವರೆಸಲು ಇವರ ಮನೆಯಲ್ಲೇ ನಿಲ್ಲುತ್ತಾನೆ. ಈ ಮದುವೆಯಾಗಿರದ ಕೃಷ್ಟೇಗೌಡ ರಾಧೆಯ ಮನಸ್ಸನ್ನು ತನ್ನ ನಡವಳಿಕೆಯಿಂದ, ರೂಪಿನಿಂದ ಆಕರ್ಷಿಸುತ್ತಾನೆ. ಈ ಸಂದರ್ಭದಲ್ಲಿ ರಾಧೆ ಮತ್ತೊಮ್ಮೆ ‘ಮದುವೆಯಿಲ್ಲದ ಪ್ರೀತಿ’ಗೆ ಒಳಗಾಗುತ್ತಾಳೆ. ಹೀಗೆ ‘ಮಾಡುವೆ ಇಲ್ಲದ ಪ್ರೀತಿ- ಪ್ರೀತಿ ಇಲ್ಲದ ಮದುವೆ’ಗಳ ವೈರುಧ್ಯದ ನಡುವೆ ನಡೆಯುವ ಮಾನಸಿಕ ಸಂಘರ್ಷ ಅಥವಾ ಹೊಯ್ದಾಟ ಕಥೆಯ ಮುಖ್ಯ ವಸ್ತುವಾಗುತ್ತದೆ.

ಸಾತಂತ್ರ -ಸ್ವೇಚಾಚಾರ

ರಾಧೆ ನಾರಾಯಣನೊಡನೆ ಪ್ರೀತಿಯನ್ನು ಬೆಳೆಸಿಕೊಂಡಾಗ ಕಾಲೇಜಿನ ಹುಡುಗ ಹುಡುಗಿಯರಿಗೆ, ಅವಳ ಭಾವನಿಗೆ, ಕೊನೆಗೆ ತಾಯಿಗೂ ಅವಳ ಪ್ರೀತಿ ಸ್ವೇಚ್ಛ್ರಚಾರವಾಗಿ ಕಂಡುಬರುತ್ತದೆ. ಅಂತೆಯೇ ಕೃಷ್ಣೇಗೌಡನ ತಾಯಿ ಮತ್ತು ತಂಗಿಯರಿಗೆ ಸ್ವೇಚ್ಛಾಚಾರದಂತೆ ಕಂಡುಬರುತ್ತದೆ .

ರಾಧೆಯ ಮದುವೆಗೆ ಮುನ್ನ ಬರುವ ಪಾತ್ರವಾದ ಆಂಗ್ಲೋ-ಇಂಡಿಯನ್ ಯುವತಿ ಸ್ವೇಚ್ಚಾಚಾರಕ್ಕೆ ನಿದರ್ಶನವಾದರೆ, ಅವಳ ಮದುವೆಯ ನಂತರ ಬರುವ ಕನಕನ ಪಾತ್ರ ಸ್ವೇಚಾಚಾರದ ಪ್ರೀತಿಗೆ ಉದಾಹರಣೆಯಾಗಿ ನಿಲ್ಲುತ್ತದೆ. “ಕನಕ ತನ್ನ ಮಾತೆಂದು ವಿವೇಕದ ನುಡಿಯನ್ನು ಮರೆತವಳು, ಹೈಸ್ಕೂಲಿನ ಗಡಿ ದಾಟುವಷ್ಟರಲ್ಲಿ ಕನಕ ಸಾಕಷ್ಟ ಹೆಸರು ಸಂಪಾದನೆ ಮಾಡಿದ್ದಳು. ಇಂಟರ್ ವಿಡಿಯೆಟ್ ಕಾಲೇಜಿನಲ್ಲಂತೂ ಅವಳು ಯಾರಿಗೋ ಗರ್ಭಧಾರಣೆ ಮಾಡಿ ಅದನ್ನು ನಿವಾರಿಸಿಕೊಂಡಿದ್ದಳು”.

ಆದರೆ ರಾಧೆಯ ಪ್ರೀತಿ ಅಂತಹುದಲ್ಲ. “ಪರಸ್ತ್ರೀಯರನ್ನು ಇನ್ನಿಬ್ಬರು ಮಾನಿನಿಯರೆದುರು ಸರಸವಾಡುತ್ತ ಮುಟುವುದೆಂದರೇನು ?… .ಹೀಗೆ ಮಾನ ಬಿಟ್ಟು ನಡೆಯಬೇಕೆ ?” (ಪುಟ 4.8) ಈ ರೀತಿಯ ಮನೋಭಾವಕ್ಕೆ ರಾಧೆ ಬೆಚ್ಚುತಾಳೆ? ಉಸಿರು ಕಟ್ಟಿದಂತೆ ಚಡಪಡಿಸುತಾಳೆ.

ರಾಧೆಗೆ ಪ್ರೀತಿಯ ವಿಷಯದಲ್ಲಿ ತನ್ನದೇ ಆದ ಒಂದು ಪರಿಕಲ್ಪನೆ ಇರುತ್ತದೆ. “ವಿವಾಹದಲ್ಲಿ ಮುಕ್ತಾಯವಾಗದ ಪ್ರೇಮ” ರಾಧೆಗೆ ಇಷ್ಟವಿಲ್ಲ (ಪುಟ 30), “… ಸ್ತ್ರೀಪುರುಷರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ವರಿಸುವುದರಲ್ಲಿ ಎಂತಹ ಸುಖವಿದೆ – ಪರಸ್ಪರರಲ್ಲಿ ಅನ್ಯೋನ್ಯತೆ ಬೆಳೆದು ದಾಂಪತ್ಯವನ್ನೂ ಸಾಮರಸ್ಯ ಸಾಧಿಸುತ್ತದೆ. ಬಾಳು ಹಸನಾಗುತ್ತದೆ. ಮದುವೆ ಎಂಬ ಸಂಬಂಧ ಸಾರ್ಥಕ್ಯ ಪಡೆಯುತ್ತದೆ.” (ಪುಟ 38) ಎಂಬುದು ರಾಧೆಯು ಪ್ರೀತಿಯು ಪರಿಕಲ್ಪನೆಯಾಗುತ್ತದೆ. ಹೀಗೆ ಸ್ವತಂತ್ರವಾದ ಪ್ರೀತಿಯ ಕಲ್ಪನೆಯನ್ನು ಕಾರ್ಯಗತಗೊಳಿಸುವದಕ್ಕೆ ನಡೆಸುವ ಹೋರಾಟ, ತೊಳಲಾಟ, ರಾಧೆಯ ಪ್ರೀತಿಯ ಬಗ್ಗೆ ಬೆಳೆಸಿಕೊಂಡಿರುವ ಅದನ್ನು ಕಾಪಾಡಿಕೊಳ್ಳಲು ಪಡುವ ಪಾಡು ಉಯ್ಯಾಲೆಯಾಗಿ ತೂಗುತ್ತಿರುತ್ತದೆ.

ರೂಪ-ಕುರೂಪ : ಶಿಖರ -ಪ್ರಪಾತ

ರಾಧೆ ಒಬ್ಬ ಸುಂದರ ಯುವತಿಯಾಗಿದ್ದೂ, ತನ್ನ ಕಲ್ಪನೆಯ ಪ್ರೀತಿಯನ್ನು ಪಡೆಯುವುದಕ್ಕೆ ಒದ್ದಾಡುವುದನ್ನು ಈ ಕಾದಂಬರಿಯಲ್ಲಿ ಕಾಣುತ್ತೇವೆ. ಇದಕ್ಕೆ ಉದಾಹರಣೆಯಾಗಿ ಕಾದಂಬರಿ ತೆರೆದುಕೊಳ್ಳುವುದೇ ಈ ಚಿತ್ರವನ್ನು ಮನಗಾಣಿಸುವ ವಾಕ್ಯಗಳಲ್ಲಿ :

“ಮೇಲೆ ಮೇಲೆ ಎತ್ತರ ಎತ್ತರ ಏರಿದಂತೆ ನಮ್ಮ ಪತನವೂ ಅಷ್ಟೇ ದೂರ ಮತ್ತು ಮಹತ್ತರವಾಗುತ್ತದೆ. ಕೇವಲ ನೆಲದ ಮೇಲೆ ನಿಂತವರು ಅಥವಾ ಒಂದೆರಡು ಮೆಟ್ಟಿಲು ಹತ್ತಿದವರು ಕೆಳಗುರುಳಿದರೆ ಅವರಿಗೆ ಬೀಳುವ ಪೆಟ್ಟು ಅಂತಹ ಮಹತ್ವದ್ದೇನೂ ಅಲ್ಲ. ಆದರೆ ಎತ್ತರದಿಂದ ಬಿದ್ದವರು ಮಾತ್ರ ಮೇಲೇಳುವುದೇ ಕಷ್ಟ…ಸುಂದರಿಯರಿಗೆ ವಿಶೇಷ ಆಕರ್ಷಣೆಯನ್ನಿತ್ತು ಅವರನ್ನು ಜೀವನದ ಏಣಿಯ ಮೇಲಿರಿಸಿದ್ದಾನೆ ದೇವರು. ಆ ಎತ್ತರದಿಂದ ಉರುಳಿಬಿದ್ದರೆ ಹಿಂದಿರುಗಲಾಗದ ಸಂಕಟದ ಪ್ರಪಾತಕ್ಕೆ ಅವರು ಹೋಗಬೇಕು. ಆದರೆ ಕುರೂಪಿಗಳು ಮಾತ್ರ ಈ ಪ್ರಮಾಣದಲ್ಲಿ ಅಪಘಾತಕ್ಕೀಡಾಗುವುದು ಅಪರೂಪ.” (ಪುಟ 1)

ಆಂಗ್ಲೋ ಇಂಡಿಯನ್ ಹುಡುಗಿಯಾಗಲೀ, ಸ್ವಲ್ಪ ಬಣ ಕಪ್ಪಾದ ಸ್ಥೂಲ ಕಾಯದ ಸುಂದರಾ೦ಬಾಳ್ ಆಗಲೀ, ಕಾಲೇಜಿನ ಚೆಲ್ಲು ಹುಡುಗಿ ಕನಕ ಆಗಲಿ – ಪ್ರೇಮದ ಪ್ರಪಾತದಲ್ಲಿ ಬಿದ್ದರೂ ಅಂತಹ ಗಹನವಾದ ವಿಷಯವಲ್ಲ ಎಂಬುದನ್ನು ಚಿತ್ರಿಸುತಾ, ಸುಂದರಿ ರಾಧೆಯ ತೊಳಲಾಟವನ್ನು ಕಾದಂಬರಿಕಾರರು ಕೃತಿಯಲ್ಲಿ ಹೆಚ್ಚಿಸುತಾರೆ.

ಉತ್ಸಾಹ, ಸಂಭ್ರಮ-ಶೋಕ, ಸಂಕಟ

ರಾಧೆಯು ತಂದೆ ಸಂಪ್ರದಾಯಬದ್ದವಾಗಿ ಮದುವೆಗೆ ಗೊತ್ತುಮಾಡಿದ ಗಂಡಿನ ಬಗ್ಗೆ ರಾಧೆ ಉತ್ಸಾಹ ವ್ಯಕ್ತಪಡಿಸುತಾಳೆ. ಆದರೆ ಮದುವೆಮನೆಯಲ್ಲಿ ರಾಧೆಯ ತಂದೆಯ ಅನಿರೀಕ್ಷಿತ ಸಾವಿನಿಂದ ಉತಾಹ, ಸಂಭ್ರಮಗಳನ್ನು ಕಳೆದುಕೊಂಡು ಸ್ಮಶಾಣಸದೃಶವಾಗಿ ಪರಿಣಮಿಸುತ್ತದೆ.

ರಾಧೆ ನಾರಾಯಣನೊಡನೆ ಟೆನ್ಸಿಸ್ ಆಟದಲ್ಲಿ ಸಿಕ್ಕ ಸಾಹಚರ್ಯೆಯಿಂದ ಪುರುಷಾಧರದ ಸ್ಪರ್ಶದ ಸವಿಯನ್ನು ಪ್ರಥಮಬಾರಿಗೆ ಪಡೆದು ಪುನಃ ಉತ್ಸಾಹ ಸಂಭ್ರಮಗಳನ್ನು ಪಡೆಯುತ್ತಾಳೆ. ಅವನ ಮದುವೆಯಾಗಿದೆ ಎಂದು ತಿಳಿದ ಬಳಿಕ “ರಾಧೆಯ ಹೃದಯ ಶರಾಘಾತದಂತೆ ಗಡಗಡ ನಡುಗುತ್ತದೆ. ಅವಳ ಮನಸ್ಸಿನಲ್ಲಿ ಶಾಂತಿ ಉಳಿಯುವುದಿಲ್ಲ”.

ಶೇಷಗಿರಿರಾಯನನ್ನು ಮದುವೆಯಾದ ಮೇಲೆ ರಾಧೆಯು ಉತ್ಸಾಹ ಮತ್ತೆ ಕುಂಠಿತವಾಗುತ್ತದೆ. “ಪತಿಗಾಗಿ ಅರಳಿದ ಪುಷ್ಪ’ ಪತಿಗೇ ಬೇಡವಾಗಿ ಮುದುಡಿಕೊಂಡು ಸಂಕಟವನ್ನು ಅನುಭವಿಸುತ್ತದೆ.

ಕೃಷ್ಣೇಗೌಡನ ಸ್ನೇಹವಾದ ಮೇಲೆ ಅವಳಲ್ಲಿ ಮತ್ತೊಮ್ಮೆ ಉತ್ಸಾಹ ಸಂಭ್ರಮಗಳು ತುಂಬಿಕೊಳ್ಳುತ್ತವೆ. ಆದರೆ ಅದನ್ನು ಪಡೆಯಲು ಬರುವ ಅಡ್ಡಿ ಆತಂಕಗಳು ಶೋಕವಾಗಿ, ಸಂಕಟವಾಗಿ ಮಾರ್ಪಡುತ್ತವೆ . ಹೀಗೆ ಉತಾಹ, ಸಂಭ್ರಮ,ಶೋಕ, ಸಂಕಟಗಳ ಉಯ್ಯಾಲೆಯಲ್ಲಿ ರಾಧೆ ದೇಕುತಾಳೆ.

ಮುಗ್ದತೆ -ಅರಿವು

ಮುಗ್ದತೆ ಮತ್ತು ಅರಿವಿನಲ್ಲಿ ಬೆಳೆಯುವ ಪ್ರೇಮಗಳ ನಡುವೆ ರಾಧೆ ತೊಳಲಾಡುತ್ತಾಳೆ. ಅಪ್ಪ ಗೊತ್ತು ಮಾಡಿದ ಗಂಡನನ್ನು ಮುಗ್ದವಾಗಿಯೇ ಒಪ್ಪಿಕೊಳ್ಳುತ್ತಾಳೆ. ಸಹಪಾಠಿ ನಾರಾಯಣನನ್ನು ಮುಗ್ದವಾಗಿಯೇ ಪ್ರೀತಿಸಿರುತ್ತಾಳೆ. (“ಆತನಿಗಾಗಲೇ ವಿವಾಹವಾಗಿದೆ ಎನ್ನುವ ಮಾತು ದಿಟವಾಗಿದ್ದರೆ ತನ್ನಂತಹ ಮುಗ್ಧಳಾದ … ಕಪಟವರಿಯದ ತರಳೆಯನ್ನು ಮೋಸಗೊಳಿಸುವುದು ಮಹಾ ಅಪರಾಧ.” ಪುಟ 40).

ಶೇಷಗಿರಿರಾಯನನ್ನು ಮದುವೆಯಾದಾಗ ಅವಳ ಮುಗ್ದತೆ ಮಾಯವಾಗುತ್ತದೆ. “ತನ್ನ ಸೌಂದರ್ಯ ತನ್ನ ಪತಿಗಾಗಿ, ತನ್ನ ಪತಿಗೆಂದೇ ಅರಳಿದ ಪುಷ್ಪ. ಉಳಿದ ಗಂಡಸರು ಅದನ್ನು ಮೆಚ್ಚಿದರೆಷ್ಟು ಬಿಟ್ಟರೆಷ್ಟು ?” (ಪುಟ ೬) ಎಂಬ ಅರಿವಿರುತ್ತದೆ

ಈ ಅರಿವಿದಸ್ಸೂ, ಕೃಷ್ಟೆಗೌಡನನ್ನು ಪ್ರೀತಿಸುವಾಗ, ಅದು ಮುಗ್ದವಾಗದೆ, ತಾನೊಬ್ಬ ವಿವಾಹಿತಳು, ಮಗುವಿನ ತಾಯಿ, ಎಂಬ ತಿಳಿವಿದ್ದೂ ಪ್ರೀತಿಯ ಆಕರ್ಷಣೆಗೆ ಒಳಗಾಗುತ್ತಾಳೆ.

ಸಂಪ್ರದಾಯ-ಹೊಸ ಮೌಲ್ಯ

ರಾಧೆ ಒಂದು ಸಂಪ್ರದಾಯಸ್ಥ ಮನೆತನದಿಂದ ಬಂದ ಹುಡುಗಿ. ಅವಳು ಸಂಪ್ರದಾಯಬದ್ದವಾಗಿಯೇ ತನ್ನ ಉಳಿದ ಅಕ್ಕಂದಿರಂತೆ ಮದುವೆಯಾಗಿ ಗಂಡನ ಮನೆಯಲ್ಲಿ ಜೀವನಸಾಗಿಸಿಕೊಂಡು ಹೋಗಬೇಕೆಂಬುದೇ ಅವಳ ತಂದೆ, ತಾಯಿ ಅಕ್ಕಂದಿರು ಮತ್ತೆ ನೆಂಟರ ಆಸೆ. ಹೆಣುಮಕ್ಕಳು ಕಾಲೇಜು ವೆುಟ್ಟಿಲು ಹತ್ತುವುದೇ ಸಂಪ್ರದಾಯವನ್ನು ಮುರಿದಂತೆ. ಜನ ಏನಾದರೊಂದು ಆಡಿಬಿಡುತಾರೆ. ಇನ್ನು ಓದುವುದು ಬೇಡ ಎಂದು ರಾಧೆಯು ತಾಯಿ. ಆದರೆ ರಾಧೆ ಗಂಡಸಿನ ಸಮಕ್ಕೂ ಟೆನ್ನಿಸ್ ಆಡುತ್ತಾಳೆ,ಓದುತ್ತಾಳೆ. ಮಾಡುವೆ ಎಂಬ ಸಂಪ್ರದಾಯಬದ್ಧವಾದ ಸಂಸ್ಥೆಯ ಬಗ್ಗೆ ಸಿಡಿದೇಳಬೇಕು. ಮದುವೆ, ಗಂಡು-ಹೆಣ್ಣಿನ ಪರಸ್ಪರ ಅರಿವಿನ ಕೂಟವಾಗಬೇಕೆಂಬುದೇ ರಾಧೆಯ ಆಶಯ. ಅದಕ್ಕಾಗಿ ಮದುವೆಯಾದ ಗಂಡನನ್ನ ಬಿಡಲು ರಾಧೆಯ ಮನಸ್ಸು ನಿರ್ಧರಿಸುತ್ತದೆ. ಪ್ರೀತಿಯ ಹೊಸ ಮೌಲ್ಯದ ಬಗ್ಗೆ ಹುಡುಕಾಟದ ಪ್ರತೀಕವಾಗಿ ರಾಧೆ ತೊಳಲಾಡುತ್ತಾಳೆ.

ಬ್ರಾಹ್ಮಣ-ಶೂದ್ರ

ರಾಧೆ ಪುತು ಕೃಷ್ಟೇಗೌಡರ ಪ್ರೀತಿಯು ಸಂದರ್ಭದಲ್ಲಿ ಜಾತಿ ಅಡ್ಡ ಬರುವದಿಲ್ಲ. ಕೃಷ್ಣೇಗೌಡ ರಾಧೆಗೆ ಮೊದಲ ಪರಿಚಯದಲ್ಲೇ “ಥೇಟ್ ಬ್ರಹ್ಮಣನಂತೆ” ಕಾಣುತ್ತಾನೆ. ಅದೇ ರೀತಿ ಕೃಷ್ಟೇಗೌಡನಿಗೂ ಸಹ ರಾಧೆ “ಬ್ರಾಹ್ಮಣರು ಒಕ್ಕಲಿಗನಾದ ತನ್ನನ್ನು ಶೂದ್ರನೆಂದು ಕನಿಷ್ಠವಾಗಿ ಕಾಣುತ್ತಾರೆ. ಈಕೆ ಬ್ರಾಹ್ಮಣ ಕುಲದಲ್ಲಿ ಜನಿಸಿದವಳು. ಹಾಗಿದ್ದುವು ಭೇದ ತೋರಿಸದೆ” ಇರುವಂತೆ ಕಾಣುತ್ತಾಳೆ. ಆದರೆ ಕಾದಂಬರಿಯಲ್ಲಿ ರಾಧೇ ಈ ರೀತಿ ವರ್ತಿಸುವುದು ಕೃಷ್ಣೇಗೌಡನ ಜೊತೆ ಮಾತ್ತ್ರ. “ಶೇಷಗಿರಿರಾಯನ ಇತರ ಕಾಲೇಜಿನ ಬ್ರಾಹ್ಮಣೇತರ ಮಿತ್ರರ ಎಂಜಲೆಲೆ ಎತ್ತುವ ತಂಟೆಗೆ ಹೋಗುವುದಿಲ್ಲ” (ಪುಟ ೮೭)

ಪಾತ್ರಗಳ ಚಿತ್ರಣದಲ್ಲಿ ವೈರುಧ್ಯ : ರಾಧೇ-ಶೇಷಗಿರಿರಾಯ

ರಾಧೇ ಅನುಪಮ ಸುಂದರಿಯಾದರೆ ಶೇಷಗಿರಿರಾಯ ಅಷ್ಟು ಸುರೂಪಿಯಲ್ಲದಿದ್ದರೂ ಕುರೂಪಿನವನಲ್ಲ. ಆದರೆ ಅವನ ಹಣೆಯ ಮೇಲೆ ಎಡಭಾಗದಲ್ಲಿದ್ದ ಮೂರು ಕಾಸಿನಗಲದ ಸುಟ್ಟ ಗುರುತಿನ ಕಲೆ ಅವನ ಮುಖವನನ್ನು ಸ್ವಲ್ಪ ಮಟ್ಟಿಗೆ ವಿಕಾರಗೊಳಿಸಿತ್ತು. ಅವನು ಕೋಪಾವಿಷ್ಟನಾದಾಗ ಇಲ್ಲವೆ ದುಃಖಭಾರದಿಂದ ಪರಿತಪಿಸಿದಾಗ ಶೇಷಗಿರಿರಾಯನ ಹಣೆಯ ಮೇಲಿನ ಸುಟ್ಟ ಗಾಯದ ಗುರುತು ಇನ್ನೂ ಅಗಲವಾಗಿ ಇನ್ನೂ ವಿಕಾರವಾಗಿ ಕಾಣುತ್ತಿತ್ತು, ರಾಧೆಯು ದೃಷ್ಟಿಗೆ.

ರಾಧೆ ಮದುವೆಗೆ ಮುನ್ನ ತಾನು ಪ್ರೀತಿಸಿದವನ ಪ್ರೀತಿಯಿಂದ ವಂಚಿತಳಾದರೆ ಶೇಷಗಿರಿರಾಯು ಆಗಲೆ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡಿದ್ದವನು. ಶೇಷಗಿರಿಗೆ ಸಿನೆಮಾ ನಾಟಕಗಳೆಂದರೆ ತಲೆ ಚಿಟ್ಟು. ಅವು ಆಧುನಿಕ ಯುಗದ ಪಾಪ ಕೂಪಗಳೆಂದು ಅವನ ಕಲ್ಪನೆ. ರಾಧೆಗಾದರೋ ಸಿನೆಮಾ ನಾಟಕಗಳೆಂದರೆ ಪಾಣ. ಶೇಷಗಿರಿರಾಯ ಎಂದೂ ರಾಧೆಯ ಅಲಂಕಾರದಲ್ಲಿ ಆಸ್ಥೆ ವಹಿಸಿದವನಲ್ಲ. “ಅಂತೂ. ಆ ದಂಪತಿಗಳನ್ನು ನೋಡಿದ ಯಾರಿಗಾದರೂ ಪ್ರಥಮ ಪರಿಚಯದಲ್ಲೆ -ರಾಧೆ ಶೇಷಗಿರಿರಾಯ ಪರಸ್ಪರ ವಿರುದ್ಧ ಗುಣವುಳ್ಳವರು, ಇವರ ಜೊತೆ ಸರಿಯಲ್ಲ ಎಂದು ಹೇಳಿಬಿಡುವಂತಿತ್ತು. ಅವರ ಸಂಸಾರದ ಜೋಡಿಗೆ ಅವೆರಡು ಇಜ್ಯೋಡಿ ಎತ್ತು ಗಳನ್ನು ಕುರುಡು ದೈವ ಕಾಣದೆ ಕಟ್ಟಿದೆ ಎನಿಸುವಂತಿತ್ತು .” (ಪುಟ 54)

ರಾಧೆ-ನಾರಾಯಣ

ನಾರಾಯಣ ರಾಧೆಯು ಹೃದಯವನ್ನೂ ತನ್ನ ‘ಸಭ್ಯ’ತನದಿಂದ ಗೆದ್ದಿದ್ದ. ಅವಳ ಹೃದಯದಲ್ಲಿ ಅವನ ಬಗ್ಗೆ ಕೃತಜ್ಞತೆ ತುಂಬಿ ಬಂದಿತ್ತು. ಅವಳಿಗೆ ನಾರಾಯಣನನ್ನು ನೋಯಿಸುವ ಮನಸ್ಸಿರಲಿಲ್ಲ. ನಾರಾಯಣನಿಗೆ ಅಸಂತುಷ್ಟಿಯಾದರೆ ರಾಧೆಗೆ ತೀವ್ರ ಯಾತನೆಯಾಗುತ್ತಿತ್ತು. ನಾರಾಯಣನ ಮೂಖದಲ್ಲಿ ನಗು ಬೆಳಗುವುದನ್ನು ಕಾಣಲು ಅವಳ ಹೃದಯ ಆಶಿಸುತ್ತಿತ್ತು. ಅವರ ಜೋಡಿ ಹೇಗಿತ್ತೆಂದರೆ ಅವರು “ಮಿಶ್ರಿತ ಜೋಡಿಗಳ ಟೆನ್ನಿಸ್ ” ಆಟದಲ್ಲಿನ ವಿವರಣೆಯಲ್ಲಿ ಬರುವ ಭಾಷೆಯನ್ನೇ ನೋಡಬಹುದು. “ನಾರಾಯಣನೂ ರಾಧೆಯ ಆಟವನ್ನು ಅನುಸರಿಸಿ ಕೌಶಲದಿಂದ ಆಡಿದ್ದನು. “ಅವರಿಬ್ಬರ ಆಟದ ರೀತಿಯೂ ಅಷ್ಟೆ. ಸಮಪ೯ಕವಾಗಿ ಹೊಂದಿಕೊಂಡು ಅವರಿಗೆ ಜಯಗಳಿಸಿಕೊಡುವುದರಲ್ಲಿ ತುಂಬ ನೆರವಾಗಿತ್ತು”.  “ಒಳೆಯ ಜೊತೆ ಎತ್ತುಗಳಂತೆ ಅವರು ಒಬ್ಬರನೊಬ್ಬರು ಅರ್ಥಮಾಡಿಕೊಂಡು ಆಡಿದ್ದರು”. ಪ್ರೇಕ್ಷಕರಾಗಿ ನೋಡುತ್ತಿದ್ದ ಕಾಲೇಜಿನ ಇತರ ಆಟಗಾರ ಮಿತ್ರರು “ಕಂಗ್ರಾಚ್ಯುಲೇಷನ್ಸ್ ನಿಮ್ಮಿಬ್ಬರದೂ ಒಳ್ಳೇ ಜೋಡಿ” ಎಂದು ಹೊಗಳಿದರು. (ಪುಟ 27) ಹೀಗೆ ಕಾಣಿಸಿಕೊಂಡ ನಾರಾಯಣ ‘ಕಪಟವನ್ನರಿಯದ ತರಲೆ, ಮುಗ್ದೆಯಾದ ರಾಧೆ’ಗೆ ವಂಚನೆ ಕ್ಷತ್ರಿಮ ಸಂಧಾನ ಮಾಡಿ ಮೋಸ ಗೊಳಿಸುತ್ತಾನೆ.

ರಾಧೆ-ಕ್ಕಷ್ಟೇಗೌಡ

ಕೃಷ್ಣೇಗೌಡ ‘ಮೈ ತೆಳುವಾಗಿದ್ದರೂ ಅವನ ನಿಲುವು ನೇರವಾಗಿ ಶಕ್ತಿ ಸೂಚಕವಾಗಿತ್ತು’.  “ತುಟಿಗಳಲ್ಲಿ ಸದಾ ಹುಸಿನಗು ಆಡುತ್ತಿದ್ದ ಅವನ ಮುಖ ಯಾವ ಹೆಣ್ಮನವನ್ನಾದರೂ ಒಂದು ನೋಟದಲ್ಲಿಯೇ ಆಕರ್ಷಿಸಿಬಿಡುವಂತಿತ್ತು” ಥೇಟ್ ಬ್ರಾಹ್ಮಣನಂತೆಯೇ ಇದ್ದ ಇವನ ಗುಣವನ್ನೂ ನೋಡಿ ರಾಧೆ “ಎಂತಹ ಸುಗುಣಿ ಈತ” ಎಂದು ಚಕಿತಳಾಗುತ್ತಾಳೆ. ನಾರಾಯಣನೆಂಬ ವಿವಾಹಿತ ತರುಣ ಇವಳೊಡನೆ ಕ್ರುತಿಮದಿಂದ ನಡೆದುಕೊಂಡ ರೀತಿಗೂ ಕೃಷ್ಟೇಗೌಡನ ಘನವರ್ತನೆಗೂ ಅಂತರವನ್ನು ಕಾಣುತ್ತಾಳೆ. ಶೇಷಗಿರಿಗಿಂತ ಕೃಷ್ಟೇಗೌಡನಿಗೆ ರಾಧೆಯು ವ್ಯಕ್ತಿತ್ವದಲ್ಲಿ ಆಸಕ್ತಿ ಕೇಂದ್ರಿಕೃತವಾಗಿತ್ತು. ರಾಧೆಯ ಒಂದೊಂದು ನುಡಿಯಲ್ಲೂ ಕೃಷ್ಟೇಗೌಡನನ್ನೂ ಮುಗ್ದ ಗೊಳಿಸುತ್ತಿತ್ತು.

ಪತಿ ಶೇಷಗಿರಿರಾಯನಲ್ಲಿ ದೊರೆಯದ ಸರಸ ಮಾತುಕತೆ ಕೃಷ್ಟೇಗೌಡನಲ್ಲಿ ದೊರೆಯುತ್ತಿದ್ದರಿಂದ ಅವನೊಡನೆ ಸಂಭಾಷಿಸುವ ಸದಾವಕಾಶಕ್ಕಾಗಿ ಯಾವಾಗಲೂ ಅವಳು ಕಾತರಗೊಂಡು ನಿರೀಕ್ಷಿಸುತ್ತಿದ್ದಳು. ಕೃಷ್ಟೇಗೌಡ ರಾಧೆಯ ದೃಷ್ಟಿಗೆ ಸಹೃದಯ. “ತಾನು ಕಷ್ಟಪಡುತ್ತಾಳೆಂದು ಪರಕೀಯನಾದ ಈತನಿಗೆಷ್ಟು ಮರುಕ ? ಅದೇ ತನ್ನ ಪತಿ ಎನಿಸಿಕೊಂಡ ಪ್ರಭೃತಿಯು ವರ್ತನೆಯಲ್ಲಿ ಅದೆಷ್ಟು ಕಾಠಿಣ್ಯ” ಎಂದು ಕೊಳ್ಳುತ್ತಾಳೆ ರಾಧೆ.

ಹೀಗೆ ರಾಧೆಯ ಪ್ರೇಮ ಜೀವನದಲ್ಲಿ ಬರುವ ಮೂವರು ಪುರುಷರನ್ನು ಕಥೆಗಾರ ಪಾತ್ರ ಚಿತ್ರಣದಲ್ಲಿ ಮುಖಾಮುಖಿಯಾಗಿಸಿ, ರಾಧೆಯು ಪ್ರೇಮ ಜೀವನದ ತೂಗುಯ್ಯಾಲೆಯಾಡಿಸುತ್ತಾರೆ. ನಾರಾಯಣ ತೂಗುಯ್ಯಾಲೆಯ ಒಂದು ದಂಡೆಯಾದರೆ, ಕೃಷ್ಟೇಗೌಡ ಮತ್ತೊಂದು ದಂಡೆಯಾಗುತ್ತಾನೆ. ಇವೆರಡು ದಂಡೆಗಳ ಮಧ್ಯದಲ್ಲಿ ಗಂಡ ಶೇಷಗಿರಿರಾಯ ಪ್ರೇಮದ ಪರಿಯನ್ನು ಅರಿಯಲು ಮೀಟು ಗೋಲಾಗಿ ನಿಲ್ಲುತ್ತಾನೆ.

ರಾಧೆ-ಪ್ರಭಾವತಿ

ರಾಧೆಯ ಮಗಳು ಪ್ರಭಾವತಿ ರಾಧೆಯು ಮನಸ್ಸಿನ ಉಯ್ಯಾಲೆಯನ್ನು ತಡೆದು ನಿಲ್ಲಿಸುವ ಸಾಧನೆ (ರಾಧೆಯು ತೂಗುಯ್ಯಾಲೆಯಲ್ಲಿ ಕುಳಿತುಕೊಂಡು ತೂಗಿ ಕೊಳ್ಳುತ್ತಿದಾಗ ಬಂದ ಪ್ರಭಾವತಿ, ರಾಧೆ ತನ್ನ ಪಾದಗಳನ್ನು ನೆಲದ ಮೇಲೆ ಊರಿ ತೂಗುವ ಉಯ್ಯಾಲೆಯನ್ನು ತಡೆದು ನಿಲ್ಲಿಸುವಂತೆ ಮಾಡುತ್ತಾಳೆ. (ಪುಟ ) ಅಂತೆಯೇ ಕ್ಷಣಕಾಲವಾದರೂ ಪ್ರಭಾವತಿ ರಾಧೆಯ ಪುನದ ಉಯ್ಯಾಲೆಯನ್ನು ನಿಲ್ಲಿಸುವ ಸಾಧನವಾಗಿರುತ್ತಾಳೆ. ಪ್ರಭಾವತಿ ತಾಯಿಯಂತೆ ದ್ವಂದ್ವಚಿತ್ತಳಾಗದೆ ಬೆಳೆಯುವ ಸೂಚನೆ ಕೊಡುವ ಪಾತ್ರ. ಈ ಪುಟ್ಟ ಹುಡುಗಿಗೆ ಸ್ವಾಭಾವಿಕವಾಗಿ ಬಂದಂಥ ಗುಣವೆಂದರೆ ಯಾವುದೇ ಹಾಡಿಗೆ ಸ್ವೇಚ್ಛೆಯಾಗಿ,  ಯಾವುದೋ ಚಿತ್ತಾಕರ್ಷಕ ಪ್ರೇರಣೆಗೆ ಮಣಿದು ಕುಣಿಯುವ ಗುಣ. ಏಕೆಂದರೆ ಯಾವ ನಾಟಾಚಾರ್ಯನೂ ಶೇಷಗಿರಿರಾಯನ ಗೃಹವನ್ನು ಹೊಕ್ಕದಿಲ್ಲ. ಇಲ್ಲ, ಅವಳನ್ನು ಶಿಕ್ಷಣಕಾಗಿ ಯಾವ ನಾಟ್ಯಪಟುವಿನ ಬಳಿಗೂ ಕಳುಹಿದ್ದಿಲ್ಲ. ಆದರೂ ಪ್ರಭೆ ಯಾವ ಪ್ರೇಕ್ಷಕನೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ನರ್ತಿಸುತ್ತಿದ್ದಳು. (ಪುಟ. 149). ಹೀಗೆ ಸ್ವಾಭಾವಿಕವಾಗಿ ತನ್ನಿಚ್ಛೆಯಂತೆ ಯಾವ ಹೊಯ್ದಾಟವೂ ಇಲ್ಲದೆ ತಾಯಿ ರಾಧೆಗಿಂತ ಭಿನ್ನವಾಗಿ ಬೆಳೆಯಬೇಕಾದ ಪಾತ್ರ ಅಕಾಲಮೃತ್ಯುವಿಗೆ ತುತಾಗುತ್ತದೆ.

ಕಾಲದ ವೈರುಧ್ಯ

ಒಂದು ಕೃತಿಯಲ್ಲಿ ಬರುವ ಕಾಲವನ್ನು ನಾಲ್ಕ ವಿಭಾಗಗಳಾಗಿ ವಿಂಗಡಿಸಿಕೊಳ್ಳಬಹುದು : (1) ಕೃತಿ ರಚನೆಯ ಕಾಲ, (2) ನಿರೂಪಕನ ಕಾಲ, (3) ಪಾತ್ರದ ಕಾಲ, (4) ಭಾಷಾಕಾಲ. ಇವು ಪಠ್ಯದ ಜೊತೆ ನಡೆಸುವ ಸಂವಾದಕ್ಕೆ ಪೂರಕವಾಗಿ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳನ್ನು ದೊರಕಿಸಿಕೊಟ್ಟ ಕೃತಿಯ ಜೊತೆ ಓದುಗ ಇನ್ನಷ್ಟು ಆಳವಾಗಿ ಅರ್ಥಪೂರ್ಣವಾಗಿ ಸಂವಾದ ನಡೆಸಲು ಸಹಕಾರಿಯಾಗುತ್ತದೆ.

ಕೃತಿಕಾರ ‘ಉಯ್ಯಾಲೆ’ಯನ್ನು 1960ರಲ್ಲಿ ರಚಿಸಿದರೂ ನಿರೂಪಕನ ಕಾಲ (ಈ ಕಾದಂಬರಿಯಲ್ಲಿ ನಿರೂಪಕನ ಕಾಲ(ರಾಧೆ) ಇಬ್ಬರೂ ಒಬ್ಬರೇ ಆದ್ದರಿಂದ) ಪಾತ್ರದ ಕಾಲ ಕಾದಂಬರಿಯು ಒಂದು ಭಾಗದಲ್ಲಿ ಬರುವ ವಿವರಣೆಯಿಂದ ಎರಡನೆ ಮಹಾಯುದ್ಧದ ಕಾಲ ಎಂದು ತಿಳಿಯಬಹುದು. “ಅಷ್ಟರಲ್ಲಿ ಖಾಕಿ ಬಟ್ಟೆ ಧರಿಸಿದ ಪೊಲೀಸ್ ಇನ್ಸ್ಪೆಕ್ಟರನೊಬ್ಬ ದರ್ಪದಿಂದ ಬಂದು ರಾಧೆಯು ಪಕ್ಕದಲ್ಲಿ ಕುಳಿತು ಬಿಟ್ಟ. ಯುದ್ಧದ ದಿನಗಳಲ್ಲವೇ ? ಸೈನಿಕರಂತೆ ಪೋಷಾಕು ಧರಿಸಿದ ಪೊಲೀಸರಿಗೂ ಕೋಡು ಮೂಡಿದ್ದ ಕಾಲ ಅದು. ತಾತ್ಕಾಲಿಕವಾಗಿ ನಮ್ಮ ದೇಶದಲ್ಲಿ ಬಿಡಾರಬಿಟ್ಟ ಅಮೆರಿಕನ್ ಮತ್ತು ಬ್ರಿಟಿಷ್ ಸೈನಿಕರ ದುರ್ಗುಣಗಳನ್ನೆಲ್ಲಾ ನಮ್ಮ ಪೊಲೀಸಿನವರೂ ಸ್ವಲ್ಪ ಸ್ವಲ್ಪ ಕಲಿಯುತ್ತಿದ್ದರು.” (ಪುಟ 125)

ಪಾತ್ರದ ಕಾಲ: ವರ್ತಮಾನ – ಭೂತಗಳು ಮತ್ತು ವರ್ತಮಾನ – ಭವಿಷ್ಯತ್

ವರ್ತಮಾನ ಮತ್ತು ಭೂತಗಳ ನಡುವೆ ನಡೆಯುವ ಸಂಘರ್ಷ ಉಯ್ಯಾಲೆಯಾಗಿ ಪಾತ್ರದ ಕಾಲ ಕಾದಂಬರಿಯ ಒಂದನೇ ಭಾಗದಿಂದ ನಾಲ್ಕನೇ ಭಾಗದವೆರೆಗೆ ಚಿತ್ರಿತವಾಗಿದೆ. ಇಲ್ಲಿಯವರೆಗೆ ರಾಧೆಯು ಶೇಷಗಿರಿರಾಯನನ್ನು ಮದುವೆಯಾಗಿ ಅವಳಿಗೊಂದು ಎರಡು ವರ್ಷದ ಮಗುವಾಗಿ ,ಕೃಷ್ಣೇಗೌಡನ ಪರಿಚಯವಾಗುವವರೆಗಿನ ಕಾಲ. ರಾಧೆಯ ದೇಹವು ಉಯ್ಯಾಲೆಯ ಮೇಲೆ ಕುಳಿತು ಉಯ್ಯಾಲೆ ಮೀಟುತ್ತಾ ಅವಳ ಇಂದಿನ ಸ್ಥಿತಿ ಮತ್ತು ಹಿಂದಿನ ಸ್ಥಿತಿಯ ವೈರುಧ್ಯದ ಉಯ್ಯಾಲೆಯಾಡುತ್ತಿರುವುದನ್ನು ಸೂಚಿಸುವುದರ ಮೂಲಕ ರಾಧೆಯ ವರ್ತಮಾನ ಮತ್ತು ಭೂತದ ಮನಸ್ಸಿನ ತೂಗಾಟವನ್ನು ಕಾದಂಬರಿಕಾರರು ಚಿತ್ರಿಸುತ್ತಾರೆ.

ರಾಧೆಯು ಕೃಷ್ಣೇಗೌಡನನ್ನು ಸಂಧಿಸಿದಾಗಿನಿಂದ ಅವಳ ಮನಸ್ಸು ಭೂತದ ಕಡೆಗೆ ಚಲಿಸದೆ ವರ್ತಮಾನದಲ್ಲಿ ಕೃಷ್ಟೇಗೌಡನನ್ನು ಪಡೆದು ಬದುಕನನ್ನು ನಿರೂಪಿಸಿಕೊಳ್ಳುವ ಭವಿಷ್ಯದ ಕಡೆಗೆ ತುಡಿಯುತ್ತ ನಿರಂತರವಾಗುತ್ತದೆ. ಕಥೆಗಾರರು ವರ್ತಮಾನ – ಭೂತ, ವರ್ತಮಾನ-ಭವಿಷ್ಯತ್ಗಳ ವೈರುಧ್ಯದ ಆಧಾರದ ಮೇಲೆ ಕಥಾ ನಾಯಕಿಯ ಮನಸ್ಸು ಉಯ್ಯಾಲೆಯಾಡುವುದನ್ನು ಚಿತ್ರಿಸಿರುವುದರ ಕಡೆ ಗಮನ ಹರಿಸಬಹುದು. ಹೀಗೆ ಉಯ್ಯಾಲೆ ಕಾಲದ ಹೊಯ್ದಾಟದ ಉಯ್ಯಾಲೆಯಾಗಿ ಕಾದಂಬರಿಯ ಉದ್ದಕ್ಕೂ ತೂಗಾಡುತ್ತಿರುತ್ತದೆ.

ಆದರೆ, ಈ ಕಾದಂಬರಿಯಲ್ಲಿ ಬರುವ ಶೇಷಗಿರಿರಾಯನ ಗತ ಜೀವನವೇ ಆಗಲೀ, ಕೃಷ್ಣೇಗೌಡನ ಗತ ಜೀವನವೇ ಆಗಲೀ ಚಿತ್ರಣವಾಗಿರುವುದು ‘ಉಯ್ಯಾಲೆ’ಯ ಮೂಲಕ ಅಲ್ಲ. ಆದ್ದರಿಂದ ಕಾದಂಬರಿಕಾರರು ರಾಧೆಯ ಪಾತ್ರದ ಕಾಲದ ಮೂಲಕ ‘ಉಯ್ಯಾಲೆ’ಯನ್ನು ಧ್ವನಿಸುತ್ತಿರುವುದು ಹೆಚ್ಚು ಅರ್ಥವತ್ತಾಗುತ್ತದೆ.

ಭಾಷಾಕಾಲ

ರಾಧೆಯ ಮನಸ್ಸಿನ ಆಳದಲ್ಲಿರುವ ಉಯ್ಯಾಲೆಯನ್ನು ಚಿತ್ರಿಸಿರುವಾಗ ಆ ಮನಸ್ಸಿನ ಮೇಲ್ಮೈ ಲಕ್ಷಣವನ್ನು ಚಿತ್ರಿಸುವ ಭಾಷೆಯ ಕಾಲದ ಬಳಕೆಯೂ ಇಲ್ಲಿ  ಕಾದಂಬರಿಯ ಧ್ವನಿಯ ಕಡೆಗೆ ತುಡಿಯುವುದನ್ನೂ ಗಮನಿಸಬಹುದು.

ರಾಧೆಯು ವರ್ತಮಾನದಿಂದ ಗತಕಾಲಕ್ಕೆ ಹೋಗುತ್ತಿರುವುದೆಲ್ಲವೂ ಭೂತಕಾಲ ಪ್ರತ್ಯಯದಿಂದ ವ್ಯಕ್ತವಾಗುವ ವಾಕ್ಯಗಳಾಗಿವೆ.

ರಾಧೆಯು ಕೃಷ್ಟೇಗೌಡನ ಬಗ್ಗೆ ಯೋಚಿಸುವಾಗ ನಡೆಯುವ ಹೋರಾಟ ವರ್ತಮಾನ ಕಾಲದಲ್ಲಿ ಸೂಚಿತವಾಗಿದೆ. ಆದರೆ ರಾಧೆಯ ಈ ಉಯ್ಯಾಲೆಯಾಟ ನಿರಂತರವಾಗಿ ಸಾಗತ್ತದೆ ಎಂದು ಸೂಚಿಸುವಾಗ (ಕಾದಂಬರಿಯ ಕೊನೆಯಲ್ಲಿ) ನಿರಂತರ ಕಾಲು ಸೂಚಿ ಪ್ರತ್ಯಯದಿಂದ ಕೊನೆಗೊಂಡಿದೆ. (ಇವುಗಳ ಉದಾಹರಣೆಯನ್ನು ‘ಉಯ್ಯಾಲೆ’ಯ ‘ಸಂಕೇತ’ದ ಭಾಗದಲ್ಲಿ ದಪ್ಪ ಅಕ್ಷರಗಳಲ್ಲಿ ಕೊಟ್ಟಿರುವ ಪದಗಳನ್ನು ಗಮನಿಸಿದರೆ ಗೊತಾಗುತ್ತದೆ.

ಹೀಗೆ ವರ್ತಮಾನ-ಭೂತ, ವರ್ತಮಾನ-ಭವಿಷ್ಮತ್ ಗಳ ವೈರುಧ್ಯವನ್ನು ಕಾದಂಬರಿಕಾರ ಕಾದಂಬರಿಯ ಕೇಂದ್ರಪ್ರಜ್ಞೆಯಾದ ಹೊಯ್ದಾಟವನ್ನು ಸೂಚಿಸುವ ಕಡೆಗೆ ಧ್ವನಿಪೂರ್ಣವಾಗಿ ಬಳಸಿಕೊಂಡಿರುವುದು ಕಂಡುಬರುತ್ತದೆ.

‘ಉಯ್ಯಾಲೆ’ ಕಾದಂಬರಿಯಲ್ಲಿ ಪಡೆದುಕೊಳ್ಳುವ ಸಂಕೇತಾರ್ಥಗಳು

೧. ಉಯ್ಯಾಲೆ ಕೇವಲ ಉಯ್ಯಾಲೆಯಾಗಿ:

“ಅವಳ ಉಂಗುಷ್ಥ ನೆಲವನ್ನು ಮೃದುವಾಗಿ ಮೀಟಿತು. ಅದರ ಮಿಡಿತಕ್ಕೆ ಉಯ್ಯಾಲೆ ಮೆಲ್ಲನೆ ತೂಗಲಾರಂಭಿಸಿತು” (ಪುಟ ೭)

“ರಾಧೆಯು ಉಯ್ಯಾಲೆಯಾ ಮೇಲೆ ಕುಳಿತು ಯೋಚಿಸುತ್ತಿದ್ದಳು” (ಪುಟ ೧೨)

“ತೂಗುಯ್ಯಾಲೆ ತಡೆದು ತಡೆದು ನಿಧಾನವಾಗಿ ತೂಗುತ್ತಿತ್ತು”(ಪುಟ ೧೪)

೨. ಉಯ್ಯಾಲೆ ಗತಕಾಲಕ್ಕೆ ಹೋಗುವುದರ ಸಂಕೇತವಾಗಿ:

“ಉಯ್ಯಾಲೆ ಮೃದುವಾಗಿ ತೂಗುತ್ತಲೇ ಇತ್ತು. ರಾಧೆಯ ಚಿತ್ತ ಗತಕಾಲಕ್ಕೆ ಸರಿದು ಯೋಚಿಸಲಾರಂಭಿಸಿತು” (ಪುಟ ೭)

“ರಾಧೆ ಬಲಗಾಲಿನ ಉಂಗುಷ್ಹದಿಂದ ಬಿರುಸಾಗಿ ನೆಲವನ್ನೊಮ್ಮೆ ಮೀಟಿದಳು…. ಅದರ ವೇಗಕ್ಕೆ ಅವಳ ಮನಸ್ಸು ವಿವಾಹ ಪೂರ್ವದ ಸುಖದ ದಿನಗಳನ್ನು ಸಂಕಟದಿಂದ ಸ್ಮರಿಸತೊಡಗಿತು” (ಪುಟ ೯)

“ರಾಧೆ ಉಯ್ಯಾಲೆಯಲ್ಲಿ ಕುಳಿತು ತಾಯಿ ಅಂದು ಮಾಡಿದ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದಳು”(ಪುಟ ೧೭)

“ಹಿಂದಿನ ಕಥೆಯನ್ನೆಲ್ಲ ಉಯ್ಯಾಲೆಯಲ್ಲೇ ಕುಳಿತು ರಾಧೆ ಚಿಂತಿಸುತ್ತಿದ್ದಳು” (ಪುಟ ೪೩)

“ಉಯ್ಯಾಲೆಯಲ್ಲಿ ಕುಳಿತ ರಾಧೆಗೆ ನಡೆದು ಹೋದ ಮದುವೆಯ ನೆನಪು ಕಹಿ ಔಷಧ ಕುಡಿದಂತಾಗಿತ್ತು” (ಪುಟ ೫೨)

(ಇಲ್ಲಿಯವರೆಗೂ ಪ್ರಯೋಗಿಸಿರುವ ಕಾಲ ಭೂತಕಾಲ ಪ್ರತ್ಯಯದಿಂದ ಕೂಡಿದೆ)

“ರಾಧೆ ಅಡುಗೆಕೋಣೆಯಿಂದ ಬಂದು ಹಜಾರದ ತೂಗುವ ಮಂಚದ ಮೇಲೆ ಕುಳಿತು ಉಂಗುಷ್ಟದಿಂದ ನೆಲವನ್ನು ಮೀಟಿದಳು. ಉಯ್ಯಾಲೆ ಮೆಲ್ಲನೆ ತೂಗಲಾರಂಭಿಸಿತು”(ವರ್ತಮಾನ)

“—ಕಣ್ಣೀರು ಸುರಿಯುತ್ತಲೇ ಇತ್ತು. ಉಯ್ಯಾಲೆ ತೂಗುತ್ತಲೇ ಇತ್ತು”(ನಿರಂತರ ಕಾಲ ಸೂಚಕ)

೩. ಉಯ್ಯಾಲೆ ತೂಗುತಕ್ಕಡಿಯಾಗಿ ಬದಲಾಗುವುದು:

ಉಯ್ಯಾಲೆಯ ಮೇಲೆ ಕಾದಂಬರಿಯ ಉದ್ದಕ್ಕೂ ಕುಳಿತುಕೊಳ್ಳುವ ವ್ಯಕ್ತಿ ರಾಧೆ. ಆದರೆ ಒಮ್ಮೆ ಮಾತ್ರ ಕುಳಿತುಕೊಳ್ಳುವ ವ್ಯಕ್ತಿಗಳು ಶೇಷಗಿರಿರಾಯ ಮತ್ತು ಕೃಷ್ಣೇಗೌಡ – ಜೊತೆಯಾಗಿ”ಸ್ನೇಹಿತರಿಬ್ಬರೂ ಹಜಾರಕ್ಕೆ ಬಂದು ಉಯ್ಯಾಲೆಯಾ ಮೇಲೆ ಕುಳಿತರು. ರಾಧೆ ಕೆಲ ನಿಮಿಷಗಳಲ್ಲಿ ತಟ್ಟೆಯಲ್ಲಿ ವೀಲ್ಯವಿಟ್ಟು ತಂದಳು. ಅದನ್ನವಳಿಂದ ತೆಗೆದುಕೊಂಡು ಶೇಷಗಿರಿ ತಮ್ಮಿಬ್ಬರ ನಡುವೆ ಮಣೆಯ ಮೇಲೆ ಇರಿಸಿದ. ರಾಧೆ ಯಾರನ್ನೂ ನಿರ್ದಿಷ್ಟವಾಗಿ ಉದ್ದೇಶಿಸದೆ ಹೇಳಿದಳು:

“ಅಬ್ಬಾ, ಇಷ್ಟು ದಿವಸಕ್ಕೆ ಈವತ್ತೇ ಇವರು ಉಯ್ಯಾಲೆಯಲ್ಲಿ ಕೂತಿರೋದು, ಉಯ್ಯಾಲೆ ಇಲ್ಲಿರುವುದೇ ಮರೆತುಹೋದಂತಿತ್ತು, ಇವರಿಗೆ. ಹೋಗಲಿ ಸ್ನೇಹಿತರ ಜೊತೆಯಲ್ಲಾದರೂ ಕುಲಿತರಲ್ಲ – ಅಷ್ಟೇ ಸಂತೋಷ”.

ಹೀಗೆ ಹೇಳುವ ಕ್ಷಣದಿಂದ ರಾಧೆ ಶೇಷಗಿರಿರಾಯನನ್ನೂ , ಕೃಷ್ಣೇಗೌಡನನ್ನೂ ತೂಗಿ ನೋಡಲು ಪ್ರಾರಂಭಿಸುತ್ತಾಳೆ.

೪. ರಾಧೆಯ ‘ಉಯ್ಯಾಲೆ’ ಕೃಷ್ಣೇಗೌಡನಿಗೆ ವರ್ಗಾವಣೆಯಗುವುದು:

ಮೇಲಿನ ಘಟನೆ ನಡೆದ ನಂತರವೇ, ಅಂದರೆ, ಕೃಷ್ಣೇಗೌಡ ಉಯ್ಯಾಲೆಯಾ ಮೇಲೆ ಕುಳಿತ ನಂತರ ಮಾತ್ರ ಕೃಷ್ಣೇಗೌಡನ ಮನಸ್ಸು ರಾಧೆಯ ಮನಸ್ಸಿನಂತೆ ಚಂಚಲವಾಗತೊಡಗುತ್ತದೆ. ಅಲ್ಲಿಯವರೆಗೂ ಅವನು ಕಾದಂಬರಿಯಲ್ಲಿ ಚಂಚಲಚಿತ್ತನಾಗಿ ಚಿತ್ರಿತನಾಗಿಲ್ಲ. ಈ ಘಟನೆಯಾದ ಮಾರನೆ ದಿನದಿಂದಲೇ ಕೃಷ್ಣೇಗೌಡನ ಮನಸ್ಸು “ಸ್ತ್ರೀ ರೂಪು ಎಂತಹ ಉಗ್ರ ತಪಸ್ವಿಯನ್ನಾದರೂ ತನ್ನ ಸೆಲೆಯಲ್ಲಿ ಸಿಕ್ಕಿಸಿಕೊಂಡು ನಿರಾಯಾಸವಾಗಿ ತೂಗುಯ್ಯಾಲೆಯಾಡಿಸುವಂತಿತ್ತು” ಎಂದು ಅಂದುಕೊಳ್ಳುತ್ತದೆ. ಇಲ್ಲಿಂದ ಮುಂದೆ ರಾಧೆಯಿಂದ ಆಕರ್ಷಿತ – ವಿಕರ್ಷಿತಗೊಳ್ಳುವ ಉಯ್ಯಾಲೆಯಾಗಿ ಕೃಷ್ಣೇಗೌಡನ ಮನಸ್ಸು ರಾಧೆಯನ್ನು ಮಾಡುವೆ ಮಾಡಿಕೊಳ್ಳುವುದೇ. ಸನ್ಯಾಸ ತೆಗೆದುಕೊಳ್ಳುವುದೇ ಎನ್ನುವವರೆಗೂ ಹೊಯ್ದಾಡುತ್ತದೆ.

  1. ಉಯ್ಯಾಲೆ ಅಸ್ತವ್ಯಸ್ತ ಮನಸ್ಸಿನ ಸಂಕೇತವಾಗುವುದು:

ರಾಧೆಯ ಮಗಳು ಪ್ರಭಾವತಿ ಸತ್ತ ಮೇಲೆ ಕೃಷ್ಣೇಗೌಡನ ಕಡೆಗೆ ಮನಸ್ಸು ಸಂಪೂರ್ಣವಾಲಿದಾಗ, ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗದಾಗ ಖಾಯಿಲೆ ಬಂದಾಗ ರಾಧೆಯ ಅಸ್ತವ್ಯಸ್ತ ಮನಸ್ಸಿನ ಸಂಕೇತವಾಗಿ ಉಯ್ಯಾಲೆ ಮಾರ್ಪಡುತ್ತದೆ.

  1. ಉಯ್ಯಾಲೆಯ ಚಲನೆ ಭಾವದ ಚಲನೆಯ ಸಂಕೇತವಾಗುವುದು:

ಕುದುರೆ ಗಾಡಿಯಲ್ಲಿ, ರೈಲಿನಲ್ಲಿ ಪ್ರಯಾಣ ಮಾಡುವಾಗ (ಕೃಷ್ಣೇಗೌಡನ ಜೊತೆ) ರಾಧೆಯ ಮನಸ್ಸು ತೂಗುಯ್ಯಾಲೆಯಾದುವುದರ ಸಂಕೇತವಾಗುತ್ತದೆ.(ಪುಟ ೧೨೭)

೭. ಉಯ್ಯಾಲೆ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ನಿರ್ಧಾರಗಳ ನಡುವೆ ‘ತೂಗುಯ್ಯಾಲೆ’ಯಾಗುವುದು:

ಕೃಷ್ಣೇಗೌಡನ ಸಂಗದ ಹೋಗಿ ಬದುಕುವುದೇ ಅಥವಾ ಬಿಡುವುದೇ ಎಂಬ ನಿರ್ಧಾರ ತೆಗೆದುಕೊಳ್ಳುವಾಗ ಇತ್ಯಾತ್ಮಕ ಮತ್ತು ನೇತ್ಯಾತ್ಮಕ ನಡುವಿನ ತೂಗುಯ್ಯಾಲೆಯಾಗುತ್ತದೆ.

“ಪರಪುರುಷನಾದ ಕೃಷ್ಣೇಗೌಡನ ಬಗೆಗೆ ತನ್ನಲ್ಲಿ ಅನುರಾಗ ಉದಯಿಸಿದಂತಿದೆ. ಆದರೆ ಸಮಾಜದ ಘೋರ ಸರಪಳಿಗಳಿಂದ ಬಂಧಿತಳಾದ ತನಗೆ ಇದನ್ನೊಪ್ಪುವುದೂ ಶಕ್ಯವಿಲ್ಲ. ಸಂಪ್ರದಾಯದ ಕರಾಳಮೇಘ ಈ ಪ್ರಣಯಾರುಣವನ್ನು ಯಶಸ್ವಿಯಾಗಿ ಕವಿದು ಮರೆಮಾಡಬಲ್ಲದು”(ಪುಟ ೧೪೧)

“ಸಂಸಾರ – ಇಷ್ಟ ಬಂದಾಗ ಕಳಚಿ ಇಡುವ, ಬೇಕಾದಾಗ ಕೈಗೆ ತೊಡುವ ಅಂದದ ಬಳೆಯಲ್ಲ, ಅದು ಜನ್ಮಜನ್ಮಾಂತರದ ವೈಶಿಷ್ಟ್ಯಪೂರ್ಣ ಸಂಬಂಧ. ಅದರಲ್ಲಿ ಎಷ್ಟೇ ಒಡಕಿದ್ದರೂ, ಅದರ ಬೆಚ್ಚಗಿನ ಆಶ್ರಯದಲ್ಲಿ ಹೇಗೋ ಕಾಲ ಹಾಕುವುದು ಶ್ರೇಯಸ್ಸು”(ಪುಟ ೨೫೦)

“ತಟ್ಟನೆ ಇನ್ನೊಂದು ವಿಚಾರ ಸುಳಿಯಿತು.

ಹೌದ ಕೃಷ್ಣೇಗೌಡನನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆಯೇ?…ಹೇಗೆ ಹೇಳಲಿ?- ನನ್ನ ಚೇತನದಲ್ಲಿಯೇ ತನಗರಿವಿಲ್ಲದೆ ಅನೇಕ ವಿಷಯಗಳು ಸುಪ್ತವಾಗಿದ್ದು ಆಗಾಗ ಹೊರಗಿಣುಕಿ ನನ್ನನ್ನು ಸೋಜಿಗಗೊಳಿಸುತ್ತವೆ. ಹೀಗಿರುವಾಗ ಆತನನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳುವುದು ಹೇಗೆ? ಅಂದರೆ – ಒಂದು ಪಕ್ಷ ಅವನ ಜೊತೆಗೆ ನಾನು ಹೊರಟುಬಿಟ್ಟರೆ ನನಗೆ ಒಳ್ಳೆಯದೇ ಆಗುತ್ತದೆಂದು ಯಾವ ಭರವಸೆ ಇದೆ”(ಪುಟ ೨೮೪)

“ಏನಾದರೂ ಆಗಲಿ – ಎಷ್ಟು ಕಷ್ಟವಾದರೂ ಬರಲಿ – ಪ್ರೀತಿ ದೊಡ್ಡದು – ಆತನ ಜೊತೆಗೆ ಹೊರಟುಹೋಗಿ ಪ್ರತ್ಯೇಕವಾಗಿ ಬೇರೆ ಒಂದು ಮನೆ ಮಾಡಿಕೊಳ್ಳುವುದು.. ಹಾಗೆನಿಸಿದೊಡನೆಯೇ ಕೃಷ್ಣನ ರೂಮಿನತ್ತ ಗಕ್ಕನೆ ತಿರುಗಿದಳು. ಉಯ್ಯಾಲೆಯಲ್ಲಿ ಕುಳಿತಂತೆಯೇ….

ಆಗ ಮೂರು ತಿಂಗಳ ಗರ್ಭ – ತನ್ನ ಪತಿಯ ಪ್ರತಿರೂಪ”(ಪುಟ ೨೮೫)

ಕಾದಂಬರಿಯಲ್ಲಿ ಮೊದಲ ನೋಟಕ್ಕೆ ಎದ್ದು ಕಾಣುವ ಗುಣವೆಂದರೆ ಪಾತ್ರಗಳು ತಾವಾಗಿಯೇ ಬೆಳೆದು ಓದುಗನ ಮನಸ್ಸಿನಲ್ಲಿ ಒಂದು ನಿರ್ಣಯ ಮೂಡುವ ವೇಳೆಯಲ್ಲಿ ಬರಹಗಾರ ಹೊರಗಿನಿಂದ ಬಂದು ಪಾತ್ರಗಳ ಮೇಲೆ ತನ್ನ ಅನಿಸಿಕೆಗಳನ್ನು ಹೇರಿ ಹೋಗುವುದು. ಕಾದಂಬರಿಕಾರನ ಈ ಕ್ರಿಯೆ ಓದುಗರು ಮೂಡಿಸಿಕೊಳ್ಳಬಹುದಾದ ಚಿತ್ರಣವನ್ನು ಮೊಟಕುಗೊಳಿಸಿಬಿಡುತ್ತದೆ. ಉದಾಹರಣೆಗೆ–ರಾಧೆ ಮತ್ತು ಶೇಷಗಿರಿರಾಯರ ಪಾತ್ರ ಚಿತ್ರಣಗಳು ಓದುಗನ ಮನಸ್ಸಿನಲ್ಲಿ ಮೂಡುತ್ತಿರುವ ವೇಳೆಯಲ್ಲೇ ಲೇಖಕ ಪ್ರವೇಶವಾಗುವುದನ್ನು ಈ ಸಾಲುಗಳು ಸೂಚಿಸುತ್ತವೆ. “ಅಂತಲೂ ಈ ದಂಪತಿಗಳನ್ನು ನೋಡಿದ ಯಾರಾದರೂ ಪ್ರಥಮ ಪರಿಚಯದಲ್ಲೇ ರಾಧೆ – ಶೇಷಗಿರಿರಾಯ ಇಬ್ಬರೂ ಪರಸ್ಪರ ವಿರುದ್ಧ ಗುಣವುಳ್ಳವರು. ಇವರ ಜೊತೆ ಸರಿಯಲ್ಲ ಎಂದು ಹೇಳಿಬಿಡುವಂತಿತ್ತು. ಅವರ ಸಂಸಾರದ ಗಾಡಿಗೆ ಅವೆರಡು ಇಜ್ಜೋಡಿ ಎತ್ತುಗಳನ್ನು ಕುರುಡು ದೈವ ಕಾಣದೆ ಕಟ್ಟಿರಬೇಕು, ಎನಿಸುವಂತಿತು.” (ಪುಟ 54) ಇದರಿಂದ ಲೇಖಕರೇ ಪಾತ್ರ ಬೆಳವಣಿಗೆಯನ್ನು ‘ಟೈಪ್’ ಮಾಡಿ ತಮ್ಮ ತೀರ್ಮಾನವನ್ನು ಸೂತ್ರ ರೂಪದಲ್ಲಿ ಕೊಟ್ಟುಬಿಡುತ್ತಾರೆ. ಈ ರೀತಿ ಲೇಖಕರು ಹೊರಗಿನಿಂದ ಆಗಮಿಸಿ “ಉಯ್ಯಾಲೆ” ಸಂಕೇತವನ್ನು ಆಗಾಗ್ಗೆ ಓದುಗರಿಗೆ ಜ್ಞಾಪಿಸಿ ಕೊಡುತ್ತಾರೆ.

ಕಾದಂಬರಿಯ ಪಾತ್ರ ತನಗೆ ತಾನೇ ಸಾಭಾವಿಕವಾಗಿ ಬೆಳೆದುಕೊಂಡು ಹೋಗುವಾಗ ಅವು ಲೇಖಕನಿಗೆ ಅನೇಕ ರೀತಿಯ ಸವಾಲುಗಳನ್ನು ಒಡ್ಡುತ್ತವೆ. ಲೇಖಕನನ್ನು ಕಾಡಿಸುತ್ತವೆ. ಉಯ್ಯಾಲೆ ಕಾದಂಬರಿಯಲ್ಲಿ ಕಾದಂಬರಿಕಾರರಿಗೆ ಸವಾಲೊಡ್ಡಬೇಕಾದ ಸಮಸ್ಯೆಗಳು ಮತು ಪಾತ್ರಗಳು ಬಂದಾಗ ಲೇಖಕರು ಅವುಗಳನ್ನು ಸುಲಭದಲ್ಲಿ ನಿವಾರಿಸಿಕೊಂಡುಬಿಡುತ್ತಾರೆ. ಅಂದರೆ ಕಾದಂಬರಿಯ ಬೆಳವಣಿಗೆಯನ್ನು ಲೇಖಕರೇ ತಮ್ಮ ಹಿತಕ್ಕೆ ತೆಗೆದುಕೊಂಡುಬಿಡುತ್ತಾರೆ. ಉದಾಹರಣೆಗೆ ನಿಜವಾಗಿಯೂ ಸವಾಲೊಡ್ಡಬೇಕಾಗಿದ್ದ, ರಾಧೆಯಂತೆ ತೊಳಲಾಟವಿಲ್ಲದ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಬೆಳೆಯುವ ಸೂಚನೆಗಳನ್ನು ಬಲವಾಗಿ ಹೊಂದಿದ್ದ ರಾಧೆಯ ಮಗಳು-ಪ್ರಭಾವತಿಯನ್ನು-ಅಕಾಲಮರಣಕ್ಕೆ ತುತ್ತಾಗಿಸುವುದು.

ಈ ಪಾತ್ರವನ್ನಂತೂ ಕಥೆಗಾರರು ಬೇಂದ್ರೆಯವರ ‘ಕುಣಿಯೋಣು ಬಾರ? ಕವನದ ಸಹಾಯದಿಂದ ಅನ್ಯಪಠ್ಯ (intertextuals) ಸಾಂದರ್ಭಿಕತೆಯನ್ನು ಸೃಷ್ಟಿಸಿ ಬಹಳ ಚೆನ್ನಾಗಿ ಬೆಳೆಸಿರುತ್ತಾರೆ. ಆದರೆ ಈ ಪಾತ್ರ ಇನ್ನೂ ಬೆಳೆದಿದ್ದರೆ ಲೇಖಕರಿಗೆ ನಿಜವಾದ ಸವಾಲನ್ನೊಡುತ್ತಿತು. ಈ ಪಾತ್ರವನ್ನೂ ಸಾಯಿಸಿಬಿಡುವುದರಿಂದ ಲೇಖಕರು ಬಹಳ ಸಲೀಸಾಗಿ ಸವಾಲನ್ನು ನಿವಾರಿಸಿಕೊಂಡುಬಿಡುತ್ತಾರೆ. ಏಕೆಂದರೆ ಕಾದಂಬರಿಕಾರರು ಉಯ್ಯಾಲೆ” ಸಂಕೇತವನ್ನು ಕಾದಂಬರಿಯ ಕೊನೆಯವರೆಗೂ ಬಳಸಿಕೊಳ್ಳಬೇಕಾಗಿದೆ. ಮತ್ತು ಅದು ನಿರಂತರ ಎಂಬ ಸೂಚನೆಯನ್ನು ಕೊಡಬೇಕಾಗಿದೆ. ಈ ಪಾತ್ರ ನಿವಾರಣೆಗೆ ಇನ್ನೂ ಒಂದು ಕಾರಣ ಈ ರೀತಿ ಇದೆ. ಅದು, ರಾಧೆ ಕೃಷ್ಣೇಗೌಡರ ಪ್ರೀತಿಯ ಉತ್ಕಟತೆಗೆ ಮಗಳು ಅಡ್ಡ ಬರದಂತೆ ನೋಡಿಕೊಳ್ಳುವುದು ಲೇಖಕರ ಆಶಯವಾದಂತಿದೆ.

ಕಾದಂಬರಿಯ ಕೊನೆಯಲ್ಲಿ ಕೃಷ್ಟೇಗೌಡನ ಜೊತೆಯಲ್ಲಿ ಹೋಗಿಬಿಡಬೇಕೆ-ಬೇಡವೆ ಎಂಬ ಇತ್ಯಾತ್ಮಕ ಮತ್ತು ನೇತಾತ್ಮಕ ಹೊಯ್ದಾಟಗಳ ನಡುವೆ ಇದ್ದಾಗ ಮತ್ತೆ ರಾಧೆ ಶೇಷಗಿರಿರಾಯನಿಂದ ಎರಡು ತಿಂಗಳ ಗರ್ಭವತಿಯನ್ನಾಗಿಸಿಬಿಡುತ್ತಾರೆ. ಹೆಣ್ಣುಗಂಡಿನ ಪ್ರೀತಿಯ ಸಮಸ್ಯೆ ಸಾರ್ವಕಾಲಿಕ ಎಂಬುದನ್ನು ಸೂಚಿಸಲು ಬಹುಬೇಗ ಸುಲಭದಲ್ಲಿ ಈ ಸಮಸ್ಯೆಯನ್ನು ಪುನಃ ಆಹ್ವಾನಿಸಿಬಿಡುತ್ತಾರೆ. ‘ಉಯ್ಯಾಲೆ’ಯನ್ನೇ ಸಂಕೇತವಾಗಿ ನಿಲ್ಲಿಸಿಬಿಡುತಾರೆ. ಆದ್ದರಿಂದ ಈ ಕೃತಿಯಲ್ಲಿ ‘ಸಂಕೇತ’ವನ್ನು ಆಳವಾಗಿ ನೋಡಿದಾಗ ಒಂದು ತಂತ್ರವಾಗಿಯೇ ಉಳಿದುಬಿಡುತ್ತದೆ. ಕಾದಂಬರಿಯು ಬೆಳೆಯದೆ ಪ್ರಾರಂಭದಲ್ಲಿ ಯಾವ ರೀತಿ ಇರುತ್ತದೆಯೋ ಕೊನೆಯಲ್ಲೂ ಅದೇ ಜಾಗದಲ್ಲಿ ಉಳಿದುಬಿಡುತ್ತದೆ. “ಪ್ರೀತಿ ಇಲ್ಲದ ಮದುವೆ—ಮದುವೆ ಇಲ್ಲದ ಪ್ರೀತಿಯ” ಸಮಸ್ಯೆಯುಳ್ಳ ಟಾಲ್ಸಾಯ್ ಅವರ ‘ಅನ್ನಾಕರನೀನ’ (ಇದಕ್ಕೆ ಇನ್ನೂ ಬೇರೆ ಬೇರೆ ಆಯಾಮಗಳಿವೆ) ಕಾದಂಬರಿಯಲ್ಲಿ ಅನ್ನಾ ಮದುವೆಯ ನಂತರ ಪ್ರೀತಿಗೆ ಒಳಗಾಗಿ ಎದುರಿಸುವ ಸಮಸ್ಯೆ (ಇಲ್ಲಿಯಂತೆ ಗಂಡ-ಮಕ್ಕಳಿದ್ದು ) ಕೊನೆಗೆ ಸಾರ್ವತ್ರಿಕವಾಗುತ್ತ ಸಂಕೇತವೂ ಆಗುತ್ತಾ ಉತ್ತಮವಾಗಿ ಬೆಳೆಯುವುದನ್ನು ಗಮನಿಸಬಹುದು. ಉಯ್ಯಾಲೆ ಕಾದಂಬರಿಯಲ್ಲಿ ಸಂಕೇತವೇ ದೈತ್ಯವಾಗಿ ಬೆಳೆದು ಕಾದಂಬರಿಯ ಬೆಳವಣಿಗೆಯನ್ನು ತನ್ನ ಕಬಂಧಬಾಹುಗಳಿಂದ ಅದುಮಿ ಹಿಡಿದು ಕುಂಠಿತಗೊಳಿಸಿಯೂ ಬಿಡಬಹುದು ಎಂಬುದನ್ನು ಗಮನಿಸಬಹುದು.

ಇದಕ್ಕೆ ವಿರುದ್ಧವಾಗಿ ಇದೇ ಕಾದಂಬರಿಯಲ್ಲಿ ಲೇಖಕರು ಕೊಡುವ ಒಂದು ಪ್ರತಿಮೆ ಬೆಳೆಯುವ ರೀತಿಯನ್ನು ಗಮನಿಸಬಹುದು. “ಶೇಷಗಿರಿರಾಯ ಅಷ್ಟೇನೂ ಎತ್ತರವಿಲ್ಲದಿದ್ದರೂ, ದೃಢಕಾಯ, ಅಂತಹ ಸುರೂಪವೇನಲ್ಲದಿದ್ದರೂ ಕುರೂಪಿಯೇನಲ್ಲ, ಆದರೆ ಅವನ ಹಣೆಯಮೇಲೆ ಎಡಭಾಗದಲ್ಲಿದ್ದ ಮೂರುಕಾಸಿನಗಲದ ಸುಟ್ಟಗುರುತಿನ ಕಲೆ ಅವನ ಮುಖವನ್ನು ಸ್ವಲ್ಪಮಟ್ಟಿಗೆ ವಿಕಾರಗೊಳಿಸಿತ್ತು. ಅವನು ಕೋಪಾವಿಷ್ಟನಾದಾಗ ಇಲ್ಲವೆ ದುಃಖಭಾರದಿಂದ ಪರಿತಪಿಸಿದಾಗ ಶೇಷಗಿರಿರಾಯನ ಹಣೆಯ ಮೇಲಿನ ಸುಟ್ಟ ಗಾಯದ ಗುರುತು ಇನ್ನೂ ಅಗಲವಾಗಿ ಇನ್ನೂ ವಿಕಾರ ವಾಗಿ ಕಾಣುತ್ತಿತು-ರಾಧೆಯು ದೃಷ್ಟಿಗೆ.”

ಶೇಷಗಿರಿರಾಯನ “ಮೂರು ಕಾಸಿನಗಲದ ಸುಟ್ಟ ಗುರುತಿನ ಕಲೆ” ರಾಧೆ ಯೊಡನೆ, ಕೃಷ್ಟೇಗೌಡನೊಡನೆ, ಮಗಳು ಪ್ರಭಾವತಿಯೊಡನೆ ಪ್ರತಿಕ್ರಿಯಿಸುವಾಗಲೆಲ್ಲ ಹೇಗಾಗುತ್ತಿರಬಹುದೆಂದು ಓದುಗನಿಗೆ ಅನ್ನಿಸುತ್ತಲೇ ಶೇಷಗಿರಿರಾಯನ ಪಾತ್ರ ಹೆಚ್ಚುವರಿ ಪಡೆಯುವುದರಲ್ಲಿ, ಓದುಗನ ಗಮನ ಸೆಳೆಯುವುದರಲ್ಲಿ ಯಶಸ್ವಿಯಾದಂತೆ, ಈ ಕಾದಂಬರಿಯಲ್ಲಿ ಬರುವ ಸಂಕೇತ ಒಮ್ಮೆ ಒಗಟು ಬಿಡಿಸಿ ಓದುಗನಿಗೆ ಅರ್ಥವಾದಾಕ್ಷಣ ಮಾಯವಾಗಿ ಬಿಡುತ್ತದೆ ಎನಿಸುತ್ತದೆ. ಇಲ್ಲಿ ಒಂದು ಪ್ರತಿಮೆ ಪಡೆಯುವ ವೈಶಾಲ್ಯತೆಯನ್ನು, ಶಕ್ತಿಯನ್ನು ಕಾದಂಬರಿಯ ಸಂಕೇತ ಪಡೆಯುವುದರಲ್ಲಿ ಸೋಲುತ್ತದೆಯಲ್ಲವೇ?

ಕಾದಂಬರಿಯೊಳಗೆ ಲೇಖಕರಿಗೆ ಅಡ್ಡಬರಬೇಕಾಗಿದ್ದ ಮತ್ತೊಂದು ಸಮಸ್ಯೆ ಜಾತಿಪದ್ದತಿಯದು, ಇದನ್ನು ಕೂಡ ಲೇಖಕರು ಸುಲಭವಾಗಿ ಪರಿಹರಿಸಿಕೊಂಡುಬಿಟ್ಟಿದ್ದಾರೆ. ರಾಧೇ ಒಬ್ಬ ಶೂದ್ರನನ್ನು ತನ್ನೊಳಗೆ ಬರಮಾಡಿಕೊಳ್ಳುವ ಮೊದಲು ಆ ಪಾತ್ರ ಎಷ್ಟರಮಟ್ಟಿಗೆ ತಯಾರಿ ಮಾಡಿಕೊಂಡಿದೆ ಎಂಬುದು ಕಾದಂಬರಿಯಲ್ಲಿ ಇಲ್ಲ. ಕೃಷ್ಣೇಗೌಡನ ಪರಿಚಯವಾಗುವುದಕ್ಕೆ ಮುಂಚೆ ಶೂದ್ರರ ಬಗ್ಗೆ ರಾಧೆಗಿದ್ದ ಪ್ರಜ್ಞೆ ಕಾದಂಬರಿಯಲ್ಲಿ ಕಾಣುತ್ತದೆ. “ಶೇಷಗಿರಿರಾಯನ ಇತರ ಕಾಲೇಜಿನ ಬ್ರಾಹ್ಮಣೇತರ ಮಿತ್ರರ ಎಂಜಲೆಲೆ ಎತ್ತುವ ತಂಟೆಗೇ ಹೋಗುವುದಿಲ್ಲ .” (ಪುಟ ೮೫) ಎಂದು ಲೇಖಕರೇ ಕಾದಂಬರಿಯಲ್ಲಿ ಬಂದು ಹೇಳಿಬಿಡುತ್ತಾರೆ. ಕೃಷ್ಣೇಗೌಡನನ್ನು ಕಂಡಕೂಡಲೇ ಅವಳ ಭಾವ “ಥೇಟ್ ಬ್ರಾಹ್ಮಣನಂತೆಯೇ ಕಾಣುತ್ತಿರುವನಲ್ಲ” (ಪುಟ 84) ಎಂಬುದು. ಈ ಎರಡೂ ಅನಿಸಿಕೆಗಳು ಕಾದಂಬರಿಯಲ್ಲಿ ಪಕ್ಕಪಕ್ಕದಲ್ಲೇ ಬರುತ್ತವೆ. ಇದೇ ರೀತಿ ರಾಧೆ ಕೃಷ್ಟೇಗೌಡನ ಮನಸ್ಸಿನಲ್ಲಿಯೂ ಜಾತಿಯ ಭೇದಭಾವವಿಲ್ಲ ಎಂಬುದನ್ನು ತಕ್ಷಣ ಮೂಡಿಸುವುದರಲ್ಲಿ ಯಶಸ್ವಿಯಾಗಿ ಬಿಡುತ್ತಾಳೆ. “ಬ್ರಾಹ್ಮಣರು ಒಕ್ಕಲಿಗನಾದ ತನ್ನನ್ನು ಶೂದ್ರನೆಂದು ಕನಿಷ್ಟವಾಗಿ ಕಾಣುತ್ತಾರೆ. ಈಕೆ ಬ್ರಾಹ್ಮಣ ಕುಲದಲ್ಲಿ ಜನಿಸಿದವಳು. ಹಾಗಿದ್ದೂ ಭೇದ ತೋರಿಸದೆ ತನ್ನ ಎಂಜಲೆಲೆ ಎತ್ತುವಳಲ್ಲ.” (ಪುಟ 84)

ಅಂತೆಯೇ ರಾಧೆ ಕೃಷ್ಟೇಗೌಡನ ಮನೆಗೆ (ಶ್ರೀರಂಗಪಟ್ಟಣದಲ್ಲಿ) ಹೋದಾಗ ಬಹಳ ಸಲೀಸಾಗಿ ಅವರ ಮನೆಯಲ್ಲಿ ಒಂದಾಗಿಬಿಡುತ್ತಾಳೆ, ಎರಡನೇ ಬಾರಿ ಹೋದಾಗ ತಿರಸ್ಕೃತಳಾಗುವುದು (ಕೃಪ್ಲೇಗೌಡನ ತಾಯಿ ಮತ್ತು ತಂಗಿಯಿಂದ) ಬ್ರಾಹ್ಮಣ ಹೆಣ್ಣಾಗಿ ಅಲ್ಲ, ಕೃಷ್ಟೇಗೌಡನನ್ನು ಮರುಳು ಮಾಡಿದ ಹೆಣ್ಣಾಗಿ. ಇವೆಲ್ಲ ನಡೆಯುವುದು ಸ್ವಾತಂತ್ರಾಪೂರ್ವ ಸಮಾಜದಲ್ಲಿ ಎಂಬುದನ್ನು ಗಮನದಲ್ಲಿಡಬೇಕಾಗಿದೆ.

ಮೇಲೆ ಚರ್ಚಿಸಲಾದ ಅಂಶಗಳನ್ನು ಗಮನದಲ್ಲಿರಿಸಿಕೊಂಡರೆ ಪ್ರಗತಿಶೀಲ ಪಂಥದ ಬರಹಗಾರರ ಗುಣ ಈ ಕಾದಂಬರಿಯಲ್ಲೂ ಎದು ಕಾಣುತ್ತದೆ. ಅದೆಂದರೆ ಕೃತಿಕಾರ ಪಾತ್ರಗಳ ಜಗತ್ತನ್ನು ಹೊಕ್ಕು ಅವುಗಳ ಜೀವನವನ್ನು ಕಾಣದೆ ಅವುಗಳನ್ನೂ ಕೃತಿಕಾರನ ಜಗತ್ತಿನಿಂದ ಹೊರಗೆ ನಿಂತು ಕಾಣುವುದು ಮತ್ತು ಮೇಲೆ ಚರ್ಚಿಸಿದ ಕಡೆಗಳಲ್ಲಿ ಅನುಭವದ ಸರಳೀಕರಣವೂ ಆಗಿಬಿಟ್ಟಿದೆ ಎನ್ನುವದು.

ಈ ಅಂಶಗಳನ್ನೊಳಗೊಂಡಿದ್ದೂ ಈ ಕಾದಂಬರಿ ಪ್ರಗತಿಶೀಲ ಬರಹಗಾರರ ಕೃತಿಗಳಿಗಿಂತ ಭಿನ್ನವಾಗಿದೆ ಎಂದು ಅನ್ನಿಸದೆ ಇರುವುದಿಲ್ಲ. ಪ್ರಗತಿಶೀಲರ ಕೃತಿಯಲ್ಲಾಗಿದ್ದರೆ ಇಲ್ಲಿಯ ಪಾತ್ರಗಳು ಸಂಪೂರ್ಣ ‘ಟೈಪ್’ ಆಗಿ ಬಂದುಬಿಡಬಹುದಾಗಿತ್ತು. ರಾಧೆಯು ಯಾವ ಅಡೆತಡೆ, ತೊಳಲಾಟಗಳು ಇಲ್ಲದೆ ಕೃಷ್ಣೇಗೌಡನ ಜೊತೆ ಓಡಿ ಹೋಗಿಬಿಡಬಹುದಾಗಿತ್ತು. ಆದರೆ ಚದುರಂಗರ ಕೈಯಲ್ಲಿ ರಾಧೆಯ ಪಾತ್ರ ಹೆಚ್ಚು ಸೂಕ್ಷ್ಮವಾಗಿಯೇ ಚಿತ್ರಿತವಾಗಿದೆ , ತೊಳಲಾಟವಾಗಿಯೇ ಉಳಿದುಕೊಂಡಿದೆ.

ನವ್ಯ ಸಾಹಿತ್ಯದ ಪ್ರಮುಖ ಧೋರಣೆಯಾದ ‘ವ್ಯಕ್ತಿ ಮುಖ್ಯ’ ಚಿತ್ರಣ ಈ ಕಾದಂಬರಿಯ ಉದ್ದಕ್ಕೂ ಕೆಲಸ ಮಾಡುತ್ತದೆ. ಪ್ರಶ್ನೆಗೆ ಪರಿಹಾರ ಒದಗಿಸಿ ಬಿಡದೆ ಪ್ರಶ್ನೆಯನ್ನು ತನ್ನ ಎಲ್ಲ ಕ್ಲಿಷ್ಟತೆಯ ಆಯಾಮಗಳಲ್ಲಿಯೂ ತೂಗಿನೋಡುವ ಗುಣ ಈ ಕಾದಂಬರಿಯಲ್ಲಿದೆ. 1960ರ ವರೆಗೆ ಬಂದಿದ್ದ ನವ್ಯ ಕಾವ್ಯ ಮತ್ತು ನವ್ಯದ ಸಣ್ಣಕಥೆಗಳಲ್ಲಿ ಪ್ರಯೋಗಿಸಲ್ಪಟ್ಟಂತಹ ಸಂಕೇತ ಪ್ರಾಧಾನ್ಯತೆಯನ್ನು ಕಾದಂಬರಿಗೆ, ಪ್ರಾಯಶಃ ಮೊದಲಿಗೆ ಅಳವಡಿಸಿದ್ದು , ಉಯ್ಯಾಲೆಯ ಕೆಲವು ಪ್ರಮುಖ ಗುಣಗಳಾದಂತೆಯೇ ನವ್ಯ ಕಾದಂಬರಿಯ ಪ್ರಕಾರಕ್ಕೆ ಓದುಗರನ್ನು ಬರಮಾಡಿಕೊಳ್ಳುವ , ಸಿದ್ದಪಡಿಸುವ ಕೆಲಸವನ್ನು ಮಾಡುತ್ತದೆ. ಇದನ್ನು ಈಕಾದಂಬರಿಯ ವಿಶ್ಲೇಷಣೆ ಸಿದ್ಧಪಡಿಸುತ್ತದೆ ಎಂದುಕೊಂಡಿದ್ದೇನೆ. ಏಕೆಂದರೆ ಉಯ್ಯಾಲೆಯ ಸಂಕೇತದ ಮೂಲಕ ಕಾದಂಬರಿಕಾರರ ಪ್ರಜ್ಞೆ ವಿವಿಧ ಸ್ತರಗಳಲ್ಲಿ ಕೆಲಸಮಾಡುವುದನ್ನು ಗಮನಿಸಬಹುದು.

ಈ ವಿಷಯದಲ್ಲಿ ಚದುರಂಗರು ಆ ಕಾಲಕ್ಕೆ ಕಾದಂಬರಿ ಓದುಗರಿಗಿದ್ದ ಅಭಿರುಚಿಗಿಂತ ಭಿನ್ನವಾದ ಅಭಿರುಚಿಯನನ್ನು ಬೆಳೆಸಿಕೊಳ್ಳುವಂತೆ ,ಆಗಲೇ ಕಾದಂಬರಿಯಲ್ಲಿ ಸ್ಥಾಪಿತವಾದ ಕೆಲವು ನಿಶ್ಚಿತ ಧೋರಣೆ ಮತ್ತು ಅನಿಸಿಕೆಗಳನ್ನು ಕಲಕಿರುವುದರಲ್ಲಿ ಅನುವಾನವಿಲ್ಲ ಮತ್ತು ಮುಂದೆ ಹುಟ್ಟಿದ ಸಾಂಕೇತಿಕ ನವ್ಯ ಕಾದಂಬರಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುವಲ್ಲಿ ಒಂದು ಭೂಮಿಕೆ ಸೃಷ್ಟಿಸಿರುವ ಪ್ರಮುಖ ‘ಮೈನರ್’ ಬರಹಗಾರರಾಗಿ ಕಾಣುತ್ತಾರೆ.

ಕುವೆಂಪು ಅವರ ವೈಚಾರಿಕತೆ

ಕುವೆಂಪು ಅವರ ವೈಚಾರಿಕತೆ

ಪುಸ್ತಕ: ಕುವೆಂಪು ಅವರ ವೈಚಾರಿಕತೆ : ಕೆಲವು ಟಿಪ್ಪಣಿಗಳು

“Science is even more changeable than theology”

“Galileo said that the earth moves and that the sun is fixed. The inquistion said that the earth is fixed and the sun moves and newtonian astronomers adopting an absolute theory of space, said that both the sun and the earth move. But now we say that any one of these three statements are equally true, provided that you haved fixed your sense of ’rest’ and ‘motion’ in the way required by the statement adopted”.

  • Whitehead, “Religion and Science”, page 227, Cambridge University Press(1946)

ಹೀಗೆ ವಿಜ್ಞಾನ, ಧರ್ಮ ಇವುಗಳನ್ನು ತಮ್ಮ ಚಲನೆಯಲ್ಲಿ ಹಿಡಿಯುವ ಪ್ರಕ್ರಿಯೆಯೇ ವೈಚಾರಿಕತೆ ಎನಿಸುತ್ತದೆ. ಕಾಲಕಾಲಕ್ಕೆ ಈ ಪರಿಕಲ್ಪನೆಗಳು ರೂಪಾಂತರ ಹೊಂದುತ್ತಿರುತ್ತವೆ. ಸ್ಥಳಗಳನ್ನು, ಕೇಂದ್ರಗಳನ್ನು ಬದಲಾಯಿಸುತ್ತಿರುತ್ತವೆ. ಇವೆಲ್ಲವೂ ಒಂದು ಮನಃಸ್ಥಿತಿ ಒಂದರ್ಥದಲ್ಲಿ ವಿಜ್ಞಾನ ಮತ್ತು ಧರ್ಮಗಳು ಪರಿಕಲ್ಪನೆಗಳು ತಮ್ಮ ಚಲನ ಸ್ಥಿತಿಯಲ್ಲಿ ಯಾವುದೋ ಸ್ಥರದಲ್ಲಿ ಸಂಧಿಸುತ್ತವೆ. ಕುವೆಂಪುರಂಥ ಮಹಾಚೇತನ ಈ ಗ್ರಹಿಕೆಯತ್ತ ಚಲಿಸುತ್ತಿರುತ್ತದೆ.

‘ಧರ್ಮ ಎನ್ನುವುದು ಇಂಗ್ಲೀಷ್ ನ ‘religion’ ಎಂಬ ಸಂವಾದಿ ಅಲ್ಲ. ಪ್ರಾಣಿಧರ್ಮ, ಮನುಷ್ಯಧರ್ಮ, ವ್ಯಾಪಾರ ಧರ್ಮ, ಪ್ರಕೃತಿ ಧರ್ಮ ಈ ರೀತಿ ನಾನಾ ಅರ್ಥಗಳಲ್ಲಿ ‘ಧರ್ಮ’ದ ಪರಿಕಲ್ಪನೆಗಳು’ ನಾನಾ ಸ್ತರಗಳಲ್ಲಿ ಪ್ರಯೋಗಿಸಲ್ಪಡುತ್ತದೆ. ಕುವೆಂಪು ಸಾಹಿತ್ಯದಲ್ಲಿ ಅವರ ಧಾರ್ಮಿಕತೆ ಈ ಎಲ್ಲಾ ಸ್ಥರಗಳಲ್ಲೂ ನಿಕಷಕ್ಕೆ ಒಡ್ಡಿಕೊಳ್ಳುತ್ತದೆ.

ವೈಚಾರಿಕತೆ ಆನ್ನುವುದು ಒಂದು ವಿಷಯವನ್ನು ಕಾರಣ-ಪರಿಣಾಮಗಳ ಎಲ್ಲಾ ತಾರ್ಕಿಕ ಆಯಾಮಗಳಲ್ಲಿ ಪರಿವೀಕ್ಷಣೆ ಮಾಡುವುದು ಎಂಬ ಅರ್ಥದಲ್ಲಿ ಪ್ರಯೋಗಿಸಲ್ಪಡುತ್ತಿರುವ ಪರಿಕಲ್ಪನೆಯಾಗಿದೆ. ವೈಚಾರಿಕತೆಗೂ ಒಂದೇ ಮಗ್ಗುಲಿಲ್ಲ. ವೈಚಾರಿಕರು ಈ ಪರಿಕಲ್ಪನೆಯನ್ನು ತಮ್ಮ ಅನುಭವದ ಹಿನೆಲೆಯಲ್ಲಿ, ಪೂರ್ವಸೂರಿಗಳ ಆಲೋಚನಾ ಪದ್ದತಿಯಲ್ಲಿ ಹೊಸ ಅನುಭವದ ಹಿನ್ನೆಲೆಯಲ್ಲಿ ಒರೆಗೆ ಹಚ್ಚಿ ಮಂಡಿಸುವರು. ಈ ಮಂಡನೆ ಸಹ ಅವರವರ ಲೋಕದೃಷ್ಟಿಯನ್ನು ಅವಲಂಬಿಸಿರುತ್ತದೆ.

ವಿಜ್ಞಾನದಲ್ಲಿ ಬರುವ ವೈಚಾರಿಕತೆ, ಸಾಹಿತ್ಯದಲ್ಲಿ ಬರುವ ವೈಚಾರಿಕತೆ, ಕ್ರಿಯಾವಿಧಿಗಳಲ್ಲಿ (rituals) ಬರುವ ವೈಚಾರಿಕತೆ, ಧಾರ್ಮಿಕ ವೈಚಾರಿಕತೆ – ಇವು ಭಿನ್ನ ಭಿನ್ನ ದೃಷ್ಟಿಯಿಂದ ಮೈದಾಳುವ ವೈಚಾರಿಕತೆಗಳು, ಅಂತೆಯೇ ಸಾಮಾಜಿಕ ವಿಷಯಗಳಲ್ಲಿ ಬರುವ ವೈಚಾರಿಕತೆಯ ನೆಲೆಯೇ ಬೇರೆ, ಆದರೆ ಇವುಗಳು ಪರಸ್ಪರ ಪ್ರಭಾವಕ್ಕೆ ಒಳಗಾಗುತ್ತಾ ಹೋಗುತ್ತವೆ. ಕುವೆಂಪುರವರ ಸಾಹಿತ್ಯಕ ಸಂದರ್ಭದಲ್ಲಿ ಬರುವ ವೈಚಾರಿಕತೆಯನ್ನು ಈ ಎಲ್ಲಾ ಆಯಾಮಗಳಲಿ ಗಮನಿಸುವುದು ಈ ಲೇಖನದ ಉದ್ದೇಶವಾಗಿದೆ.

ಕುವೆಂಪುರವರು ಕವನ-ಮಹಾಕಾವ್ಯ-ಖಂಡಕಾವ್ಯ-ನಾಟಕಗಳು ಮತ್ತು ಲೇಖನಗಳನ್ನು ಓದಿದಾಗ, ಈ ವೈಚಾರಿಕತೆಗಳು ಮೈದಾಳುವ ಮೂರ್ತರೂಪಗಳನ್ನು ಗಮನಿಸಿದಾಗ ಕುವೆಂಪುರವರು ರಾಷ್ತ್ರೀಯವಾದ ಹಿನ್ನೆಲೆಯಲ್ಲಿ ತಮ್ಮ ಆಲೋಚನಾ ಕ್ರಮವನ್ನು ಹೆಚ್ಚಿನ ಮಟ್ಟದಲ್ಲಿ ಬಳಸಿ ಬೆಳೆಸಿದ್ದಾರೆ ಎನಿಸುತ್ತದೆ. ಮೇಲ್ಮಟ್ಟದಲ್ಲಿ ಕುವೆಂಪು ಅವರ ರಾಷ್ಟ್ರೀಯವಾದವು ದ್ವಂದ್ವದಿಂದ ಕೂಡಿದೆ ಎನಿಸಿದರೂ ರಾಷ್ಟ್ರೀಯತೆ ಮತ್ತು ಪ್ರಾಂತೀಯತೆಯ ಅವರ ಪರಿಕಲ್ಪನೆಗಳು ಒಂದಕ್ಕೊಂದು ಹಿರಿದು – ಕಿರಿದುಗಳ ವೈರುಧ್ಯದಲ್ಲಿ ಇಲ್ಲ. ರಾಷ್ಟ್ರೀಯತೆಯೆಂಬುದು ಒಂದು ಭಾವ ಸೃಷ್ಟಿ, ಪ್ರಾಂತೀಯತೆ ಎಂಬುದು ಕಣ್ಣಿಗೆ ಕಾಣುವ ಬದುಕಿನ ಸೃಷ್ಟಿ. ಇದೆ ವಾಸ್ತವ ದೃಷ್ಟಿ. ಆದ್ದರಿಂದಲೇ

ಭಾರತ ಜನನಿಯ ತನುಜಾತೆ

ಜಯಹೇ ಕರ್ನಾಟಕ ಮಾತೆ

ಕನ್ನಡದಂಥ ನಿಜರೂಪದ ಪ್ರಾಂತೀಯ ಭಾಷೆ ತನ್ನೆಲ್ಲ ಆಯಾಮಗಳಲ್ಲಿ ಬೆಳೆದು ನಿಲ್ಲುವುದು ಇತರ ಪ್ರಾಂತೀಯ ಭಾಷೆಗಳೂ ಸಹಮತದಲ್ಲಿದ್ದು ತಮ್ಮ ಉನ್ನತಿಯನ್ನು ಸಾಧಿಸಿದಾಗ ಮಾತ್ರ. ಈ ಬಹುಮುಖತೆಯ ಭಾರತದಲ್ಲಿ ಆದಿಕಾಲದಿಂದಲೂ ಬೆಳೆಸಿಕೊಂಡು ಬಂದ ಪರಿಕಲ್ಪನೆ. ಆದ್ದರಿಂದ ಅವರು ಇಡೀ ದೇಶಕ್ಕೆ ಏಕಭಾಷೆ, ಏಕ ಮತ, ಏಕ ದೃಷ್ಟಿಯನ್ನು ರಾಷ್ಟ್ರೀಯತೆಯ ಹಿನ್ನೆಲೆಯಲ್ಲಿ ತಿರಸ್ಕರಿಸುತ್ತಾರೆ. ಆದ್ದರಿಂದ ಕುವೆಂಪು ಹೆಚ್ಚು ಪ್ರಜಾಸತ್ತಾತ್ಮಕ ನಿಲುವು ತಳೆಯುತ್ತಾರೆ. ಇದು ಪ್ರತಿಯೊಬ್ಬ ವಚನಕಾರನು ತನ್ನ ವಚನದ ಕೊನೆಯಲ್ಲಿ ತನ್ನ ಇಷ್ಟದೇವರನ್ನು ಸ್ಮರಿಸಿದಂತೆ. ಇದು ಪ್ರತಿಯೊಬ್ಬನ ಒಳಗಿ ಪ್ರಜಾಸತ್ತಾತ್ಮಕತೆಯನ್ನೂ, ಅನನ್ಯತೆಯನ್ನೂ ಗುರುತಿಸುವ ವಿಧಾನ. ಭಾರತ ಆಗಿರುವುದು ಏಕತೆಯಿಂದಲ್ಲ, ಅನೆಕತೆಯಿಂದ ಮಾತ್ರ ಅದು ಸಾಧ್ಯ ಎಂಬ ನಿಲುವಿನಿಂದ, ಅದಕ್ಕೆ ಅವರು

ಬಾರಮ್ಮ ದೇವಿ | ಓ ತಾಯಿ ಭಾರತಿಯೇ, ನಿನ್ನ ಮಗಳನ್ನು ಹರಸಿ |

ಹಾಡು ಓಂ, ಶಾಂತಿಯೇ | ನಿನ್ನ ಋಷಿ ಜನ ಬರಲಿ | ನಿನ್ನ ಕವಿಜನ ಬರಲಿ | ನಿನ್ನಖಿಲ ಶ್ರೀ

ವಿಭೂತಿಗಳೆಲ್ಲರೈತರಲಿ | ಕನ್ನಡಾಂಬೆಯ ಹರಸಿ ಹಾರೈಸಲಿ

ಎಂದೂ, ‘ಭಾರತಾಂಬೆಯ, ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’ ಎಂದು ಪ್ರಾರ್ಥಿಸುವುದು. ಆದದ್ದರಿಂದ ಭಾರತಾಂಬೆ ಮತ್ತು ಕನ್ನದಾಮ್ಬೆಯರು ವೈರುಧ್ಯದಲ್ಲಿಲ್ಲ. ವೈರುಧ್ಯಗಳು ಪರಸ್ಪರ ಆಕರ್ಷಿಸಿ ಮುನ್ನಡೆವ ಪ್ರಕ್ರಿಯೆಯಲ್ಲಿ ಇರುವರು.

ಮತ್ತೊಂದೆಡೆ ಕುವೆಂಪುರವರು ವೈಚಾರಿಕತೆ ಗಾಂಧೀಜಿಯವರ ವೈಚಾರಿಕತೆಯನ್ನು ಹೋಲುತ್ತದೆ. ಬಡವರ, ಹೆಂಗಸರ, ದಲಿತರ ಬಗ್ಗೆ ಅಂದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಅಂಚಿಗೆ ದೂಡಲ್ಪಟ್ಟ ದುರ್ಬಲರನ್ನು ಮಾನಸಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕೆಂಬುದು ಗಾಂಧೀಜಿಯ ಆಶಯ. ಕುವೆಂಪುರವರೂ ಈ ವಿಷಯಕ್ಕೆ ಆದ್ಯತೆಯನ್ನು ತಮ್ಮ ಕ್ರಿಯಾಶೀಲ ಬರವಣಿಗೆಯಲ್ಲೂ ಕೊಡುತ್ತಾರೆ.

ಪರಂಪರಾಗತವಾಗಿ, ನೇತ್ಯಾತ್ಮಕವಾಗಿ ಸೃಷ್ಟಿಯಾದ ಕೈಕೆ, ಮಂಥರೆ, ಶಬರಿ ಮುಂತಾದ ಪಾತ್ರಗಳು ಧನಾತ್ಮಕವಾಗಿ ಚಿತ್ರಿಸಲ್ಪಟ್ಟಿದೆ. ಅವರ ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ, ಶಬರಿಯಂತೂ ‘ವಿಶ್ವಮಾತೆ’ಯಾಗಿ ಕಾಣುತ್ತಾಳೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯಲ್ಲಿ ಒಳ್ಳೆಯತನ ಹೇಗೆ ಸಹಜವೋ ಅವನಲ್ಲೇ ಕೆಟ್ಟತನವೂ ಸಹಜವಾಗಿರುತ್ತದೆ. ಹಾಗಾಗಿ ಈ ಪ್ರಕೃತಿದತ್ತವಾದುದನ್ನು ಸಂಸ್ಕೃತಿ ಪರವಾಗಿಸಿಕೊಳ್ಳುವ ಪ್ರಕ್ರಿಯೆಯಾಗಿ ರಾಮ-ರಾವಣರ ಪಾತ್ರ ಸೃಷ್ಟಿಯಾಗಿದೆ:

ಕೋಲಾಹಲದ ರುಚಿಯ ಮೋಹಕ್ಕೆ

ಮರುಳಾದ ಮಾನವರ್ ರಾವಣ ಕೊಲೆಗಾಗಿ

ರಾಮಾನಂ ಕೊಂಡಾಡಿದೊಡೆ ಕವಿಗುಮಾ ಭ್ರಾಂತಿ

ತಾನೇಕೆ? ಮಣಿಯುವೆನು ರಾಮನಡಿದಾವರೆಗೆ

ದಶಶಿರನ ವಧೆಗಾಗಿ ಆಲ್ತು!

ಹೀಗೆ ಅವಿದ್ಯೆಯಿಂದ ವಿದ್ಯೆಯೆಡೆಗೆ ತುಡಿಯುವ ಎರಡು ಜೀವಗಳಾಗಿ ಕುವೆಂಪು ರಾಮ-ರಾವಣರನ್ನು ನೋಡಿದ್ದಾರೆ. ವಿದ್ಯೆ-ಅವಿದ್ಯೆಯ ಪ್ರಕ್ರಿಯೆಗಳಾಗಿ ಈ ಪಾತ್ರಗಳು ಬಂದಿವೆ. ತಮ್ಮ ಪ್ರಮುಖ ಕೃತಿಗಳಲ್ಲೆಲ್ಲ ಕುವೆಂಪು ಹೀಗೆ ವೈರುಧ್ಯಗಳನ್ನು ಮುಖಾಮುಖಿಗೊಳಿಸದೆ ಎರಡರ ಸಹಯೋಗದ ಪ್ರಕ್ರಿಯೆಯಲ್ಲಿ ಮಂಥನಗೊಳ್ಳುವ ಮತ್ತು ಅದರಿಂದ ಉಂಟಾಗುವ ಅಮೃತ-ವಿಷಗಳನ್ನು ಸೋಸಿ ಸೇವಿಸುವ ಪರಿಯನ್ನು ಕಟ್ಟಿ ತೋರಿಸುತ್ತಾರೆ. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಲು ಈ ಉದಾಹರಣೆಯನ್ನು ನೋಡೋಣ. ಜಿಂಕೆಯ ಮೈಯಿಂದ ಮಾರೀಚ ರಾಕ್ಷಸನ ಕಳೇಬರ ಬಯಲಿಗೆ ಬಿದ್ದದ್ದನು ಕವಿ ಈ ರೀತಿ ವರ್ಣಿಸುತ್ತಾರೆ:

ಶಾಶ್ವತನರಿಯಲೈ ನಶ್ವರದ ಹೃದಯವಂ

ಭೇದಿಸುವ ಕವಿಯ ದರ್ಶನದಂತೆ

ಮಿಥ್ಯೆ ಬಿರಿಯಲೈ ಸತ್ಯಂ ಪ್ರತ್ಯಕ್ಷಮಪ್ಪಂತೆವೋಲ್!

ಅಂತೆಯೇ ಸ್ಮಶಾನ ಕುರುಕ್ಷೇತ್ರಂ ದುರ್ಯೋಧನ ‘ಕೌರವ ಕೃಷ್ಣ’ನಾಗುತ್ತಾನೆ. ವಾಲ್ಮೀಕಿಯ ಭಾಗ್ಯದಲ್ಲಿ ರಾಮನಿಂದ ಪರಿತ್ಯಕ್ತೆಯಾದ, ಅಭಾಗ್ಯೆಯಾದ ಸೀತೆ ವಾಲ್ಮೀಕೀಯ ಕಾವ್ಯದ ನಾಯಕಿಯಾಗಿ ಒದಗಿ ಬರುವ ಸೌಭಾಗ್ಯ ಬರುತ್ತದೆ. ಶೂದ್ರತಪಸ್ವಿಯಲ್ಲಿ ಬರುವ ಧಾರ್ಮಿಕ ವಿಚಾರಶೀಲತೆಯೂ ಇಂಥ ಒಂದು ಉದಾಹರಣೆ. ಇಲ್ಲಿ ಬ್ರಾಹ್ಮಣ –ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉಧ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಔನತ್ಯ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ.

ಸ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ ದ್ವಾಪರ ಮತ್ತು ಕಲಿಗಾಲಗಳು ಸಂಧಿಸುವ ರೀತಿ ಅತ್ಯಂತ ಮಾರ್ಮಿಕವಾಗಿ ಗ್ರಹಿಸಲ್ಪಟ್ಟಿದೆ. ದ್ವಾಪರ “ಈ ಯುಗದ ಸಂಸ್ಕೃತಿಯ ಚಲ್ವಿಕೆಯೆಲ್ಲ ತುತ್ತತುದಿಯನ್ನು ಸಂಧಿಸಿ ಅಳಿದು ಹೋಯ್ತೆ” ಎಂದಾಗ ಕಲಿ, “ಲೀಲೆಯೆಂಬುವುದೆಲ್ಲಿ ಮೂಡುವುದು ಮುಳುಗುವುದರಲ್ಲಿಹುದು , ಅದಕೇಕೆ ಮರುಗುವುದು ? ಸಾವಿನಲ್ಲಿ ಹೊಸಬಾಳು ಪುದುಗಿಹುದು, ನಾಶದಲ್ಲಿ ನವದೃಷ್ಟಿ ಪವಡಸಿದೆ” ಎಂದು ಹೇಳುತ್ತಾನೆ. ಇದೇ ನಾಟಕದಲ್ಲಿ ಸತ್ಯ ಎಂದರೇನು ಎಂಬ ಪರಿಕಲ್ಪನೆಯ ವ್ಯಾಖ್ಯಾನ ಬಹಳ ಮುಖ್ಯವಾದುದು. ಕೃಷ್ಣ ಹೇಳುತ್ತಾನೆ “ಕನಸೊಡೆದ ಮೇಲೆ ಅದರೊಳೇನಿಹುದು ಕೌರವ ಕೃಷ್ಣ ! ಅದೆಲ್ಲಂ ಸವಿ ಸುಳ್ಳುನಿಂ ಕೆತ್ತಿರುವ ಪುಸಿ ಸೊನ್ನೆಯಲ್ತೆ” ಅಂದರೆ ಸತ್ಯ ಎಂಬುದೂ ಒಂದು ಭ್ರಮೆ. ಸತ್ಯವೆಂಬುದು ನಿಂತಿ ನೋಡುವ ಭೂಮಿಕೆಯ ಮೇಲೆ ನಿಂತಿದೆ. ಸತ್ಯಕ್ಕೆ ಒಂದು ಮುಖವಿಲ್ಲ, ನಾನಾ ಮುಖಗಳಿವೆ ಎಂಬುದು ಕುವೆಂಪುರವರ ಗ್ರಹಿಕೆ.

ಇದೇ ರೀತಿ ಕುವೆಂಪು ಅಂಚಿಗೆ ತಳ್ಳಲ್ಪಟ್ಟವರ ಮೌನಕ್ಕೆ ಮಾತಿನ ರೂಪು ಕೊಟ್ಟಿದ್ದಾರೆ ಬೆರಳ್ಗೆ ಕೊರಳ್  ನಾಟಕದಲ್ಲಿ. ಇಲ್ಲಿ ಏಕಲವ್ಯ ಆಳುವವರ ಯಾವ ಕ್ರಮಕ್ಕೂ ಅಳವಡದ ಕಾಡಾಡಿ. ಅವನು “ಆ ಅರಸುಮಕ್ಕಳ ಕೂಳ್ಗೆ ಆಳಾಗಿ, ಬಾಳ್ ಗೋಣನೊಡ್ದುತಿರ್ಪಿರಿ ನರಕ ನಕ್ರದ ಬಾಯ್ಗೆ” ಎಂದು ಗುರು ದ್ರೋಣರಿಗೆ ಹೇಳುವ ರೀತಿಯಲ್ಲಿ ಇಲ್ಲಿ ಗಮನಿಸಿ.

ಮೇಲೆ ನೋಡಿದ ಈ ಕೃತಿಗಳಲ್ಲಿ ಹೆಚ್ಚಿನವು ಪರಂಪರಾಗತವಾಗಿ ಬಂದ ತಮ್ಮ ನಮ್ಮ ಪೌರಾಣಿಕ ಹಿನ್ನೆಲೆಯ ವಸ್ತುಗಳಲ್ಲಿಯೇ ಕುವೆಂಪು ಒಂದು ರೀತಿಯ ಸಾಮಾಜಿಕ ನ್ಯಾಯವನ್ನು ಕಟ್ಟಿಕೊಡುವ ಅವನ್ನು ವೈರುಧ್ಯಗಳನ್ನು ಪ್ರಕ್ರಿಯೆಯಲ್ಲಿ ನೋಡುವ ಮೂಲಕ ತಮ್ಮ ವೈಚಾರಿಕತೆಯನ್ನು ಮೆರೆದಿದ್ದಾರೆ.ಇಲ್ಲಿ ಮಾನವೀಯತೆಗೆ ಮಾತ್ರ ಬೆಲೆಯಿದೆ.

ಕುವೆಂಪುರವರು ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಸೃಷ್ಟಿಯ ಸಮಷ್ತಿಪ್ರಜ್ಞೆಯ ಸಾಮೂಹಿಕ ವಿಕಾಸದ ಮರ್ಮವನ್ನು ಸೂಚಿಸುವುದಕ್ಕಾಗಿ ರಚಿಸಿದ್ದಾರೆ ಈ ಕೃತಿ

ಇತಿಹಾಸಮಲ್ತು; ಬರಿ ಕಥೆಯಲ್ತು ; ಕಥೆ ತಾಂ

ನಿಮಿತ್ತ ಮಾತ್ರಂ , ಆತ್ಮಕೆ ಶರೀರೋದೊಲಂತೆ .

ಮೆಯ್ವೆತ್ತುದಿಲ್ಲಿ ರಾಮನ ಕಥೆಯ ಪಂಜರದಿ

ರಾಮ್ರೂಪದ ಪರಾತ್ಪರನ್ ಪುರುಷೋತ್ತಮನ

ಲೋಕಲೀಲಾ ದರ್ಶನಂ….

ಈ ಲೋಕಲೀಲಾ ದರ್ಶನವೇ, ಕಾಲದ ಹರಿವನ್ನು ಒಂದು ಕ್ಷಣ ತನ್ನ ಪ್ರಕ್ರಿಯೆಯಲ್ಲಿ ಹಿಡಿಯುವ ಕುವೆಂಪು ಅವರ ಪ್ರಯತ್ನ. ಅಲ್ಲದೆ, ಇಲ್ಲಿ ತ್ರಿಕಾಲಗಳು ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಭೂತ, ಭವಿಷ್ಯತ್ಗಳು ವರ್ತಮಾನವಾಗಿ ಕಂಡುಬರುವುದು ಪುನರ್ಜನ್ಮದ ಪರಿಕಲ್ಪನೆಯ ಹಿಂದಿರುವ ದಾರ್ಶನಿಕತೆಯ ಸಂಕೇತವಾಗಿದೆ. ಮಹಾಮಹಿಮನು ಮತ್ತೊಮ್ಮೆ ಈ ಭೂಮಿಯಲ್ಲಿ ಹುಟ್ಟಿ ಬರುವುದು ಮನುಷ್ಯನಾಗಿಯೇ. ಧನಾತ್ಮಕ ಮತ್ತು ಋಣಾತ್ಮಕ ನೆಲೆಗಳನ್ನು ಮೈಗೂಡಿಸಿಕೊಂಡ ಮನುಷ್ಯ ಋಣಾತ್ಮಕತೆಯನ್ನು ಕಳೆದುಕೊಂಡು ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿ ರೂಪಿಸಿಕೊಳ್ಳುವುದೇ ಕುವೆಂಪು ಅವರ ಅವತಾರದ ಕಲ್ಪನೆ. ಆದ್ದರಿಂದ ಸೀತೆ ರಾಮನನ್ನು ಕೇವಲ ಆಕಸ್ಮಿಕವಾಗಿ ಕಂಡರೂ – ಆಕೆ ರಾಮನನ್ನೂ ನಿಜವಾಗಿ ನೋಡುವ ಮೊದಲೇ – ತನ್ನ ಪ್ರಜ್ಞೆಯಲ್ಲಿ ರಾಮನನ್ನು ದರ್ಶನ ಮಾಡಿರುತ್ತಾಳೆ.

ಪ್ರಜ್ಞೆ ನಿದ್ರಿಸಿರೆ,

ನಿಸಂಜ್ಞಳಾದೆನಗೆ ಕಣಸಾದುದಾ ದರ್ಶನದಿ

ಮೈದೊರ್ದುದೀ ಸರ್ವ ಲೋಕ ರಮಣೀಯತಾ

ನೀಲಮೇಘ ಶ್ಯಾಮಮೂರ್ತಿ

ಲೈಂಗಿಕ ವೈಚಾರಿಕತೆ ಮತ್ತು ದಾರ್ಶನಿಕ- ಧಾರ್ಮಿಕ ವೈಚಾರಿಕತೆಗಳು ಅವರ ಕೃತಿಗಳಲ್ಲಿ ಅಲ್ಲಲ್ಲಿ ಬಂದರೂ ಅದರ ಸ್ಪಷ್ಟರೂಪದ ವ್ಯಾಖ್ಯಾನ ಕಾಣುವುದು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ. ಲೈಂಗಿಕತೆ ಅಥವಾ ಹೆಣ್ಣು-ಗಂಡಿನ ಸಂಬಂಧಗಳು ಕನ್ನಡದ ಯಾವುದೇ ಕಾದಂಬರಿಯಲ್ಲೂ ಇಷ್ಟೊಂದು ಮಗ್ಗುಲುಗಳಲ್ಲಿ ವ್ಯಾಖ್ಯಾನವಾಗಿಲ್ಲ. ಕಾಮವು ಪ್ರಕೃತಿದತ್ತವಾದುದು. ಅದನ್ನ ಸಂಸ್ಕರಿಸಿಕೊಳ್ಳುವುದು ಪ್ರತಿಯೊಂದು ಸಮಾಜದ ಸಾಂಸ್ಕೃತಿಕ ಜವಾಬ್ದಾರಿ. ಮೂಲತಃ ಮನುಷ್ಯ ಪ್ರಕೃತಿಯನ್ನು ಸಂಸ್ಕ್ರುತಿಯನ್ನಾಗಿಸಿಕೊಳ್ಳುವ ಪ್ರಯತ್ನಗಳೇ ಈ ಕಾದಂಬರಿಯ ತುಂಬಾ ವಿವಿಧ ರೀತಿಯ ಕಾಮವಿನ್ಯಾಸಗಳಾಗಿ ಮೂಡಿರುವುದು. ಮುಟ್ಟದವರಾದ ತಮ್ಮ ಜೀತದಾಳುಗಳೇ ಆಗಿದ್ದರೂ ತಿಮ್ಮಪ್ಪ ಹೆಗ್ಗಡೆಯ ವಿಚಾರಾಲ್ಲಿ ಯಾವ ಜಾತಿ ಮಾತ್ರ ಸಂಪ್ರದಾಯದ ಕಟ್ಟೂ ನಡೆಯುವುದಿಲ್ಲ. ನಾಗತ್ತೆಯ ಲೈಂಗಿಕ ವಿಕ್ಷಿಪ್ತತೆ – ತನ್ನ ವಿಧವೆಯಾದ ಸೊಸೆ ನಾಗಕ್ಕನನ್ನು ಲೈಂಗಿಕತೆಗೆ ಇಳಿಸಲು ಬಳಸುವ ವಾಮ ಮಾರ್ಗ, ಪುಟ್ಟಣ ಅತ್ತೆ ಕಾಡಿ ಮುಂಡೆ ಬಸುರಾದದ್ದು, ವೆಂಕಟ್ಟಣನ ಸಂಸ್ಕೃತಿಯ ಅಭಾವ, ಅವನ ಪಶುಸದ್ರುಶ ಲೈಂಗಿಕತೆ, ಸೂಕ್ಷ್ಮಪ್ರಕೃತಿಯ ಚಿನ್ನಮ್ಮನ ಸ್ಫುರದ್ರೂಪಿ ತಾಯಿಯ ಎಳೆಯಹರೆಯದ ಸಾವಿನ ಹಿಂದಿನ ಕಥೆ, ಚೀಂಕ್ರ ಬಸುರಿ ಹೆಂಡತಿಯನ್ನೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಸಾಯಿಸಿದ್ದು, ಮುಕುಂದಯ್ಯನ ಅಣ್ಣ-ಮಹಾಭಾರತ ರಾಮಾಯಣಗಳನ್ನು ತಿಳಿದಿದ್ದವನೂ – ಒಮ್ಮೆ ನಾಗಕ್ಕನನ್ನು ಸೀರುಡಿಕೆ ಮಾಡಿಕೊಳ್ಳ ಬಯಸಿದ್ದು , ದೇವಯ್ಯ – ಕಾವೇರಿ – ಜ್ಯೋತಿರ್ಮಣಿಯವರ ಸಂಬಂಧಗಳು , ಶಿವ-ಶಿವಾನಿಯಂತೆ ಕಾಣುವ ಐತಾ-ಪೀಂಚಲು , ಇತ್ಯಾದಿ. ಅಂತೆಯೇ ಮಂಜುಭಟ್ಟರ ಸೊಸೆಯನ್ನು ಬಿಟ್ಟು ಅವರ ಮಗ, ಕಿತ್ತ ಐತಾಳ ಹೆಂಡತಿಯನ್ನು ಇಟ್ಟುಕೊಂಡಿದ್ದು, ಗೌಡರ ಜೀತದಾಳುಗಳು ಅವರ ಕಣ್ಣು ತಪ್ಪಿಸಿ ಬೇರೆ ತೋಟದ ಜೀತದಾಳುಗಳನ್ನು ಮದುವೆಯಾಗುವುದರಲ್ಲಿ – ಪ್ರೀತಿಸಲೂ ಆಗದಿರುವುದು ಇತ್ಯಾದಿಗಳಲ್ಲಿ ಲೈಂಗಿಕತೆಯ ವಿವಿಧ ಸ್ತರಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ನಿಯಂತ್ರಣಗಳಿಗೆ ಒಳಪಟ್ಟು ಬಹಳ ಸೂಕ್ಷ್ಮವಾಗಿ ಚಿತ್ರಿತವಾಗಿದೆ. ಒಂದು ಮಟ್ಟದಲ್ಲಿ ಕೆಳಜಾತಿಯ, ಕೆಳವರ್ಗದ ಲೈಂಗಿಕತೆಯು ಜಮೀನ್ದಾರರ ಬಲಾಬಲಕ್ಕೆ ಅಧೀನವಾಗಿರುತ್ತದೆ. ಅವರ ಒಪ್ಪಿಗೆ ಇಲ್ಲದೆ ಕೆಳವರ್ಗದ ಜನರು ಮದುವೆಯಾಗುವುದಿರಲಿ, ಪ್ರೀತಿಸುವುದೂ ಸಾಧ್ಯವಿಲ್ಲ. ತಿಮ್ಮಿ ಮತ್ತು ಗುತ್ತಿ ಓಡಿ ಹೋದಾಗ ತಿಮ್ಮಿಯ ಅಣ್ಣ ಸಣ್ಣಬೀರನನ್ನು ಕಂಬಕ್ಕೆ ಕಟ್ಟಿ ಹೊಡೆದು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಜಮೀನ್ದಾರಿಕೆಯ ಬಲವು ಲೈಂಗಿಕತೆಯ ಸ್ಥಲವನ್ನು ಸೃಷ್ಟಿಸಿಕೊಳ್ಳಲು ಪಡುವ ಪ್ರಯತ್ನ ಸಣ್ಣ ಬೀರನ ಅವ್ವನ ಪ್ರಾಕೃತಿಕ  ಸ್ಥೈರ್ಯದ ಎದುರು ಕುಸಿದು ಬೀಳುವುದು ಕಂಡುಬರುತ್ತದೆ. ಆದರೆ ಇವೆಲ್ಲಕ್ಕೂ ಸಂವಾದಿಯಾಗಿ ಕಂಡುಬರುವ ಚಿನ್ನಮ್ಮ ಮತ್ತು ಮುಕುಂದಯ್ಯನ ಪ್ರೇಮವು ಮೇಲೆ ಹೇಳಿದ ಎಲ್ಲ ರೀತಿಯ ಕಾಮಕ್ಕೆ ತದ್ವಿರುದ್ದವಾಗಿದ್ದು – ಒಂದು ಆದರ್ಶವಾಗಿ ನಿಲ್ಲುತ್ತದೆ.

ಮುಖ್ಯವಾಗಿ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ಪ್ರಮುಖ ತೊಡಕೆಂದರೆ ಪುನರ್ಜನ್ಮದ ಪ್ರಶ್ನೆ, ಇದು realistic ಬರವಣಿಗೆಗೆ ತದ್ವಿರುದ್ಧವಾದ, ವಿಚಾರವಾದಕ್ಕೆ ಸವಾಲೆಂಬಂತೆ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಈ ಕಾದಂಬರಿಯನ್ನು ಮಾನವ ಕೇಂದ್ರಿತ ಕಾದಂಬರಿಯಾಗಿ ನೋಡಿದಾಗಷ್ಟೆ ಈ ಸಮಸ್ಯೆ ಉದ್ಭವಿಸುತ್ತದೆ, ಪುನರ್ಜನ್ಮದ ಪರಿಕಲ್ಪನೆ ಅವೈಚಾರಿಕವೆನಿಸುತ್ತದೆ. ಆದರೆ ಇಡೀ ವಿಶ್ವ ಮತ್ತು ಅನಂತಕಾಲವನ್ನು ಕೇಂದ್ರವಾಗಿರಿಸಿಕೊಂಡು ನೋಡಿದಾಗ ಪುನರ್ಜನ್ಮದ – ಸ್ಮೃತಿಯ – ಅಸ್ಮ್ರುತಿಯ ಮತ್ತು ವಿಸ್ಮೃತಿಯ ವಿವಿಧ ಮಗ್ಗಲುಗಳು: ಪರಕಾಯಪ್ರವೇಶ – ಬೇರೊಬ್ಬರ ಮನಃಪ್ರವೇಶ – ಇತ್ಯಾದಿಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಅನಂತಕಾಲ ಅಂದರೆ ಭೂತ – ವರ್ತಮಾನ – ಭವಿಷ್ಯತ್ತನ್ನ ಒಳಗೊಂಡ ಒಂದು Mythical time ಸೃಷ್ಟಿಯಾಗುವುದನ್ನ ಕಥಿಸುವುದು ಕಾದಂಬರಿಯ ವೈಶಿಷ್ಟವಾಗಿದೆ. ಕಥನವನ್ನು ಕಾಲ ಮತ್ತು ದೇಶಗಳನ್ನು ಮೀರುವ ಕ್ರಿಯೆಯಾಗಿ ಪರಿಗಣಿಸಿದಾಗ ಮಾತ್ರ ಕುವೆಂಪರವರ ಪುನರ್ಜನ್ಮ ಮತ್ತು ಪರಕಾಯ ಪ್ರವೇಶಗಳ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಹಾಗೆ ನೋಡಿದರೆ ಈ ಕಾದಂಬರಿ ಕುವೆಂಪುರವರು ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಎಂಬ ವಿಶ್ವಮಾನವ ಗೀತೆಗೆ ಬರೆದ ಬಹು ದೀರ್ಘ ವ್ಯಾಖ್ಯಾನವಾಗಿದೆ. ದಾರ್ಶನಿಕ ವೈಚಾರಿಕತೆ ಕುವೆಂಪರವರಿಗೆ ಮುಖ್ಯವಾದುದು. ಇದಕ್ಕಾಗಿಯೇ ಅವರು ಕ್ರಿಯಾವಿಧಿ ಶಾಸ್ತ್ರದಿಂದ ದಾರ್ಶನಿಕತೆಯನ್ನು ಬಿಡಿಸಿ ಸ್ವಚ್ಛಗೊಳಿಸುತ್ತಾರೆ. ಆದರಿಂದ ಅವರಿಗೆ :

ಯಾರೂ ಮುಖ್ಯರಲ್ಲ ಅಮುಖ್ಯರೂ ಅಲ್ಲ,

ಯಾವುದೂ ಯಃಕಷ್ಚಿತವಲ್ಲ

ಯಾವುದಕ್ಕೂ ಮೊದಲಿಲ್ಲ

ಯಾವುದಕ್ಕೂ ತುದಿಯಿಲ್ಲ

ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ

ಕೊನೆ ಮುಟ್ಟುವುದೂ ಇಲ್ಲ,

ಕೊನೆ ಮುಟ್ಟುವುದೂ ಇಲ್ಲ,

ಎಲ್ಲಕ್ಕೂ ಇದೆ ಅರ್ಥ

ಯಾವುದೂ ಅಲ್ಲ ವ್ಯರ್ಥ

ನೀರೆಲ್ಲ ಊ ತೀರ್ಥ.